ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…

“ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…”
‌”ನನಗೆ ಮತ್ತೊಮ್ಮೆ ಹುಟ್ಟಿಬರುವ ಇಚ್ಛೆ ಬಿಲ್ಕುಲ್ ಇಲ್ಲ, ಆದರೆ ಅದು ಅನಿವಾರ್ಯ ಅಂತಾದರೆ ಮತ್ತಾವ ಜನ್ಮದಲ್ಲೂ ನಾನು ಲತಾ ಮಂಗೇಶ್ಕರ್ ಆಗಿ ಅಂತೂ ಹುಟ್ಟ ಬಯಸುವದಿಲ್ಲ, ಅವಳ ಕಷ್ಟಗಳು ಅವಳಿಗೊಬ್ಬಳಿಗೇ ಗೊತ್ತು.” ಇದು ಮುಂದಿನ ಜನ್ಮದಲ್ಲಿ ಏನಾಗ ಬಯಸುತ್ತೀರಿ”-ಎಂಬ ಪ್ರಶ್ನೆಗೆ ಸಂಗೀತದ ದಂತಕತೆ ಎನಿಸಿದ ಲತಾ ಮಂಗೇಶ್ಕರ್ ಅವರು ಕೊಟ್ಟ ಉತ್ತರ.
‌‌‌ ಯಾರನ್ನು
ಇಡೀಭಾರತವಾಸಿಗಳು ತಮ್ಮ ಹೃದಯ ಸಿಂಹಾಸನದಲ್ಲಿಟ್ಟು ಪೂಜಿಸುತ್ತಾರೋ, ಯಾರ ದರ್ಶನಕ್ಕಾಗಿ ಹಗಲು- ರಾತ್ರಿ ಜನ ಕಾಯಲುಸಿದ್ಧರಿದ್ದರೋ,ಯಾರ ಧ್ವನಿ ಜನರ ಮನದಾಳದ ಸಂತಸ,ದುಃಖ,ಕಾತರ,ಪ್ರತೀಕ್ಷೆ, ವಿರಹ, ಕನಸು, ಮುಂತಾದವುಗಳ ಪ್ರತಿಧ್ವನಿಯೇ ಆಗಿತ್ತೋ,ಅವರದೇ ಕಥೆ ಹೀಗಿದ್ದರೆ ನಮ್ಮಂಥವರ ಪಾಡೇನು? “ಇಷ್ಟೇಕೆ ಮುಗುಳ್ನಗುತ್ತಿದ್ದೀಯಾ? ಯಾವ ದುಃಖವನ್ನು ನಿನಗೆ ಮರೆಮಾಚಬೇಕಾಗಿದೆ” ಎಂಬ ಜಗಜಿತ್ ಸಿಂಗ್ ಅವರ ಗಜಲ್ ನ ಅರ್ಥವಾಗಲೀ, ” ಅತ್ತಾರ ಅತ್ತು ಬಿಡು, ನಕ್ಯಾಕ ಮರಸತೀ ದುಃಖ?” – ಎಂಬ ಬೇಂದ್ರೇ ಅಜ್ಜನ ಸಾಲುಗಳಾಗಲೀ ನೆನಪಾಗುವದು
ಇಂಥವೇ ಕಾರಣಕ್ಕೆ. ಪ್ರತಿಸಲವೂ ಮುಖ ಮನಸ್ಸಿನ‌ ಕನ್ನಡಿ ಯಾಗಬೇಕಿಲ್ಲ.
‌‌‌‌‌‌ Things are not what they seem to be – ಎಂಬುದು ತ್ರಿಕಾಲ ಸತ್ಯ. ಮುಟ್ಟಿದ ಕೂಡಲೇ ಮನವೊಂದು ನಿಚ್ಚಳವಾಗಿ ತೆರೆದು ನಿಲ್ಲುವ ಯಾವುದೇ magic wand ಮನುಷ್ಯನ ಬಳಿ ಇಲ್ಲ. ಅಂತೆಯೇ ಜಗತ್ತಿನ ಯಾವುದು ಜೀವನವನ್ನು ಜೇನಾಗಿಸೀತು ಹೇಳುವದು ತುಂಬ ಕಷ್ಟ.ಭಿಕ್ಷೆ ಬೇಡಿ ಸಿಕ್ಕದ್ದು ತಿಂದು ರಸ್ತೆ ಪಕ್ಕ ಮಲಗುವವರಲ್ಲಿದ್ದಷ್ಟೂ ಮಾನಸಿಕ ನೆಮ್ಮದಿ ಬಹು ಮಹಡಿಗಳ ಸುಪ್ಪತ್ತಿಗೆಯ ಮೇಲೆ ಮಲಗಿದವರಿಗೆ ಇರಲಿಕ್ಕಿಲ್ಲ.
ಕಳಿಂಗ ಯುದ್ಧ ಗೆದ್ದಮೇಲೂ ಸಾಮ್ರಾಟ್ ಅಶೋಕ ತನ್ನದೆನ್ನುವ ಎಲ್ಲವನ್ನೂ ತೊರೆದು ಬೌದ್ಧ ಸನ್ಯಾಸಿಯಾದದ್ದು, ಪಕ್ಕದ ಸುಂದರ ಹೆಂಡತಿ/ ಮುದ್ದು ಮಗು ಕೂಡ ಸಿದ್ಧಾರ್ಥನನ್ನು ನಡುರಾತ್ರಿ ಮನೆ ಬಿಡದಂತೆ ತಡೆಯಲು ಶಕ್ಯವಾಗದಿದ್ದದು,ಬ್ರಿಟಿಶ್ ಅರಸೊತ್ತಿಗೆಯನ್ನೇ ಧಿಕ್ಕರಿಸಿ ಬಂದ ಡಯಾನಾ,ಅಪಾರ ಕೋಟಿ ಸಂಪತ್ತಿನ ಒಡೆಯನಾಗಿದ್ದೂ ತನಗೆ ಸಿಗದ ನೆಮ್ಮದಿಯನ್ನು ನದಿಗೆ ಧುಮಕಿ ನೀರಿನಾಳದಲ್ಲಿ ಹುಡುಕಿದ ಕೆಫೆ ಕಾಫಿ ಡೇ ದ ಮಾಲಿಕ ಸಿದ್ಧಾರ್ಥ/ಹಣ,ರೂಪ,
ಪ್ರತಿಭೆಗಳಿಂದ ಎಲ್ಲರ ಮನ ಗೆದ್ದೂ ಸ್ವಂತಕ್ಕೆ ಒಂದು ತನ್ನದೆಂದೆನಿಸಿದ ಬದುಕು ಕಟ್ಟಿಕೊಳ್ಳಲೂ ಸಾಧ್ಯವಾಗದ ಚಿತ್ರನಟಿ ರೇಖಾ- ಹೀಗೊಂದು ಎಂದಿಗೂ ಮುಗಿಯದ ಪಟ್ಟಿಯೇ ಇದೆ.
‌ ಆದರೂ ಹಣ, ಕೀರ್ತಿ, ಹೆಸರು, ಅಧಿಕಾರ ಕ್ಕಾಗಿ ಪ್ರತಿನಿತ್ಯ ನಡೆಯುವ ದೊಂಬರಾಟ ವಿಚಿತ್ರವೆನಿಸುತ್ತದೆ.ಮಹಾಭಾರತದ ‘ಮಾಯಾ ಕೊಳದ ಪ್ರಸಂಗ’ ದಲ್ಲಿ ಯಕ್ಷ ಯುಧಿಷ್ಟಿರನಿಗೆ ಕೇಳಿದ ಪ್ರಶ್ನೆ,” ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯ ಕರವಾದ ಸಂಗತಿ ಯಾವುದು?” – ಎಂಬುದಕ್ಕೆ ಧರ್ಮರಾಯ ಕೊಟ್ಟ ಉತ್ತರ,” ಜಗತ್ತಿನಲ್ಲಿ ಪ್ರತಿನಿತ್ಯ/ಪ್ರತಿಗಳಿಗೆ ಸಾವಿನ ಮೆರವಣಿಗೆ ನಡೆಯುತ್ತಲೇ ಇರುವದನ್ನು ಕಂಡೂ, ಮನುಷ್ಯ ತಾನೊಬ್ಬನೇ ಅಮರ, ತನಗೆ ಸಾವು ಎಂಬುದೇಯಿಲ್ಲ ಎಂಬಂತೆ ನಡೆದುಕೊಳ್ಳುವ ರೀತಿ ಅತಿ ಆಶ್ಚರ್ಯಕರ”- ಎಂದು ಉತ್ತರಿಸಿದ್ದು ಎಲ್ಲರಿಗೂ ಗೊತ್ತು.ಈ ಅಪ್ರಿಯ ಸತ್ಯವನ್ನು ಪ್ರತಿಕ್ಷಣ ನೋಡುತ್ತಲೇ ಇದ್ದೇವೆ,ಇತ್ತೀಚೆಗಂತೂ ತುಂಬಾ ತುಂಬಾ ಹೆಚ್ಚಾಗಿಯೇ…
Leave a Reply