ಹಬ್ಬಗಳು ನಡೆದು ಬಂದ ದಾರಿ

ಹಬ್ಬಗಳು ನಡೆದು ಬಂದ ದಾರಿ

ಹೆಂಗಿತ್ತು ಹೆಂಗಾತು ಗೊತ್ತಾ…?

ಆದಿ ಕಾಂಡ
ಒಂದು ಕಾಲವಿತ್ತು… ದೀಪಾವಳಿ ಹಬ್ಬದ ತಯಾರಿ ಪಕ್ಷಮಾಸ ಮುಗಿಯುತ್ತಲೇ ಸಣ್ಣದಾಗಿ ಶುರುವಾಗುತ್ತಿತ್ತು. ಶಾವಿಗೆ ಚಕ್ಕಲಿ ಅನಾರಸದ ಹಿಟ್ಟು ಮಾಡಿಟ್ಟುಕೊಳ್ಳುವುದು, ಬಟ್ಟೆ ಖರೀದಿಸಿ ಹೊಲಿಯಲು ಕೊಡುವುದು ಎಲ್ಲರೂ ಪರಸ್ಪರರ ಮನೆಗೆ ಹೋಗಿ ಹಬ್ಬದ ಕೆಲಸಗಳಲ್ಲಿ ಕೈಗೂಡಿಸುವುದು, ಬಂಧು ಬಾಂಧವರಿಗೆ ಮುಂಚಿತ ಆಹ್ವಾನ ಕೊಡುವುದು ಏನೆಲ್ಲಾ ಯೋಜನೆಗಳು ವಾರ ಮೊದಲೇ ಉಂಡಿ, ಚಕ್ಕಲಿ ಅನಾರಸ ಅವಲಕ್ಕಿ ಚೂಡಾ, ಶೇಂಗಾ ಉಂಡಿ ಬೇಸನ್ ಲಾಡುಗಳ ದಾಸ್ತಾನು. ದೊಡ್ಡ ದೊಡ್ಡ ಡಬ್ಬಿಗಳಲ್ಲಿ ಸಂಗ್ರಹವಾಗುತ್ತಿದ್ದವು. ನೀರು ತುಂಬುವ ದಿನವಂತೂ ತಾಮ್ರ ಹಿತ್ತಾಳೆ ಹಂಡೆಗಳು ಇದೀಗ ಅಂಗಡಿಯಿಂದ ಬಂದಂತೆ ಥಳಥಳಿಸುತ್ತಿದ್ದವು… ರಸ್ತೆಯಲ್ಲಿ ಕೂಗುತ್ತ ಎಲ್ಲರ ಮನೆಗೂ ಉಚಿತವಾಗಿ ಹಂಚುವವರಿಂದ ಮಹಾಲಿಂಗ ಬಳ್ಳಿಗಳನ್ನು ಪಡೆದು ಅವುಗಳನ್ನು ಕಂಠಾಭರಣವಾಗಿಸಿ ಅರಿಶಿನ-ಕುಂಕುಮ, ಚಂದ ಚಂದದ ಬಣ್ಣದ ರಂಗೋಲಿ ಬಿಡಿಸಿ ಪೂಜಿಸಿ ಸಕ್ಕರೆ ಹೋಳಿಗೆ, ಚಿತ್ರಾನ್ನ, ಸೇವಿಗೆ ಪಾಯಸ ,ಕರಿದ ಹಪ್ಪಳ- ಸಂಡಿಗೆಯ ಅಡಿಗೆ ರಾತ್ರಿ ಊಟಕ್ಕೆ ಮರುದಿನ ನಾಲ್ಕಕ್ಕೇನೇ ಎಲ್ಲರ ಮನೆ ದೀಪಗಳು ಹತ್ತಲು ಪ್ರಾರಂಭ. ನಿದ್ದೆಯಲ್ಲಿ ಮುಳುಗಾಡುವ ಮಕ್ಕಳನ್ನು ರಮಿಸಿ ಎಬ್ಬಿಸಿ, ‘ಎದ್ದೆ ಎದ್ದೆ’ ಎನ್ನುತ್ತಲೇ ಮಗ್ಗಲು ಬದಲಾಯಿಸುವ ಸೋಮಾರಿಗಳಿಗೆ ಬಾಯಿ ಮಾಡಿ ಆರತಿಯ ಸಿದ್ಧತೆ ಶುರುವಾಗುತ್ತಿತ್ತು… ಅದು ಅವರವರ ಮನೆಯ ದಾದರೆ ಆದಂತಲ್ಲ. ಪಕ್ಕದ ಎಲ್ಲ ಮನೆಗಳಿಗೂ ತಪ್ಪದೇ ಭೇಟಿ ನೀಡುವುದು ಕಡ್ಡಾಯ. ಎಣ್ಣೆ ಶಾಸ್ತ್ರ ಬಿಸಿ ನೀರಿನ ಸ್ನಾನವಾಯಿತೋ ಯಾವುದಾದರೂ ಗುಡಿಗೆ ಭೇಟಿ ಕೆಲವರಂತೂ ನಸುಕಿನಲ್ಲಿಯೇ ಗುಡಿಗೆ ಹೋಗಿ ಅರ್ಚಕರಿಂದ ದೇವರಿಗೆ ಎಣ್ಣೆ ಶಾಸ್ತ್ರ ಮಾಡಿ ಉಳಿದ ಶೇಷ ಎಣ್ಣೆ ಯಿಂದಲೇ ಅಭ್ಯಂಗ ಸ್ನಾನ. ನಂತರ ಫಲಾಹಾರ. ಬಂಧುಗಳ ಮನೆಗೆ ಭೇಟಿ.. ಪರಸ್ಪರ ಶುಭಾಶಯಗಳ ಉಡುಗೊರೆಗಳ ವಿನಿಮಯ ಹೀಗೆ ಮುಗಿಯಲಾರದ ಕಾರ್ಯಕ್ರಮಗಳು.. ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆ ಪಾಡ್ಯದಂದು ಬಲಿಪೂಜೆ ಬಿದಿಗೆಯಂದು ಸಹೋದರರಿಗೆ ಔತಣ ತದಿಗೆಯಂದು ಸಹೋದರಿಯರಿಗೆ ಆತಿಥ್ಯ… ಹೀಗೆ ಒಂದು ವಾರದ ಸಮೀಪ ಕಾರ್ಯಕ್ರಮಗಳ ಉದ್ದನೆಯ ಪಟ್ಟಿ ವರ್ಷವಿಡೀ ಬೇಕಾದದ್ದು ಮಾಡಲಿ, ದೀಪಾವಳಿಯ ಕಾರ್ಯಕ್ರಮಕ್ಕೆ ಭಂಗ ಬರುವಂತಿಲ್ಲ… ಎಲ್ಲರ ಮನೆಯಲ್ಲಿಯ ಹಿರಿಯರ ಆಡಳಿತ ಆಗ. ಮನಸ್ಸಿದ್ದರೆ ಪೂರ್ಣ ಆನಂದದಿಂದ ಒಪ್ಪದಿದ್ದರೆ ಅಸಮ್ಮತಿಯಿದ್ದರೂ ತೋರಗೊಡದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ‘ಯಮಶಾಸನ’ ಎಂದೇ ಪರಿಗಣಿಸಲ್ಪಡುತ್ತಿತ್ತು.

ಮದ್ಯ ಕಾಂಡ
ಒಂದು ಇಪ್ಪತ್ತು ಇಪ್ಪತೈದು ವರ್ಷಗಳ ಕಾಲಾನಂತರ ಅಷ್ಟಿಷ್ಟು ಸ್ಪಷ್ಟ ಬದಲಾವಣೆಗಳಾಗತೊಡಗಿ ವ್ಯತ್ಯಾಸ ದೊಡ್ಡದಾಗಿಯೇ ಗೋಚರಿಸತೊಡಗಿತು. ಶೈಕ್ಷಣಿಕ ರಂಗದಲ್ಲಾದ ಬದಲಾವಣೆಯಿಂದಾಗಿ ವೃತ್ತಿಪರ ಕೋರ್ಸುಗಳನ್ನು ಮಾಡಿದವರು ದೂರ ದೂರದ ರಾಜ್ಯಗಳಿಗೆ ಹೋಗುವುದು ಹೆಚ್ಚಾಗಿ ಕುಟುಂಬದ ಗಾತ್ರ ಕ್ರಮೇಣ ಇಳಿಮುಖವಾಗುತ್ತಿದ್ದಂತೆಯೇ ಆಚಾರ-ವಿಚಾರಗಳಲ್ಲೂ ಕ್ಷಿಪ್ರ ಬದಲಾವಣೆ ಅನಿವಾರ್ಯವೇನೋ ಎಂಬ ಸ್ಥಿತಿಯನ್ನು ಜನ ಒಪ್ಪಿಕೊಳ್ಳುತ್ತಲೇ ಬೇಕಾಯಿತು. ಹಂತದಲ್ಲಿ ಸಮೀಪದ ಬಂಧುಗಳಷ್ಟೇ ಕಲೆತು ಅತಿ ದೊಡ್ಡದಲ್ಲದ ಪ್ರಮಾಣದಲ್ಲಾದರೂ ಒಂದೆಡೆ ಸೇರಿ ಒಂದೆರಡು ದಿನಗಳಿಗೆ ಹಬ್ಬ ಸೀಮಿತಗೊಳಿಸುವುದು, ತಿಂಡಿ-ತಿನಿಸುಗಳನ್ನು ಕೊಂಡು ತಂದು ಕೆಲಸ ಮುಗಿಸುವುದು, ಅನಿವಾರ್ಯ ದಿನಗಳಿಗಷ್ಟೇ ಹಾಜರಿ ಹಾಕುವುದು, ಎಂಬಂಥ ಬದಲಾವಣೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಸಮ್ಮತಿಸಲೇಬೇಕಾಯಿತು…

ತತ್ಕಾಲ ಕಾಂಡ
1985 ರಿಂದ ಈಚೆಗೆ ಸುಮಾರು 35 ವರ್ಷಗಳಿಂದ ಆದ ಸಾಫ್ಟ್ವೇರ್ ಕ್ರಾಂತಿಯಿಂದ ಜಗತ್ತು ಗ್ಲೋಬಲ್ ವಿಲೇಜ್ ಆಗಿ ಪರಿವರ್ತನೆ ಕಂಡಿದೆ.ಡಾಕ್ಟರ್, ಇಂಜಿನಿಯರ್ ಆಗದಿದ್ದರೆ ಶಿಕ್ಷಣವೇ ಅಲ್ಲ ಎಂಬ ಸ್ಥಿತಿಗೆ ಬಂದು ನಿಂತಿದೆ. ಉಳಿದವರನ್ನು ಸರಿಗಟ್ಟಲು, ಕೆಲವೊಮ್ಮೆ ಹಿಂದೆ ಹಾಕಲು ನಡೆಯುವ Rat race ವಿವೇಚನೆಯಿಲ್ಲದೇ ಸೇರಿಕೊಂಡ ಕಾರಣದಿಂದ ಹಣ, ಅಂತಸ್ತು, ಅಧಿಕಾರಿಗಳ ಅಬ್ಬರದಲ್ಲಿ ಹಬ್ಬ-ಹರಿದಿನಗಳಿಗೆ ಸಮಯ ಆಸಕ್ತಿಯ ತೀವ್ರ ಕೊರತೆಯಿದೆ… ಈಗಂತೂ ಮನೆಗೆ ಕನಿಷ್ಠ ಇಬ್ಬರಾದರೂ ವಿದೇಶಗಳಲ್ಲಿ ನೆಲೆಸಿ, ತಾಯ್ನೆಲಕ್ಕೆ ದೂರವಿದ್ದ ಕಾರಣದಿಂದಾಗಿ ಕೌಟುಂಬಿಕ ನೆಲೆಯಲ್ಲಿ ಹಬ್ಬ-ಹರಿದಿನಗಳ ಆಚರಣೆ ಕ್ಷೀಣವಾಗುತ್ತಿದೆ… ವೇಗದ ಆತುರದ ಒತ್ತಡದ ಬದುಕಿನ ಪರಿಣಾಮಗಳಾದ ರಕ್ತದೊತ್ತಡ ಮಧುಮೇಹ ಹೃದಯ ತೊಂದರೆಗಳಿಂದಾಗಿ ಊಟ ತಿಂಡಿಗಳಲ್ಲಿ ಒಂದು ರೀತಿಯ ಭಯದ ಗೊಂದಲದ, ಅಸಮ್ಮತಿಯ ಪ್ರವೃತ್ತಿ ಬೆಳೆದು ಎಲ್ಲದಕ್ಕೂ ಹಿಂಜರಿಯುವ ಧೋರಣೆ ಕಾಣುತ್ತಿದೆ. ಕೆಲವೆಡೆ ಇದ್ದಲ್ಲಿಯೇ ತಮ್ಮತಮ್ಮಲ್ಲಿ ಗುಂಪುಗಳನ್ನು ಕಟ್ಟಿಕೊಂಡು ಹಬ್ಬಗಳ ಆಚರಣೆ ಮಾಡುತ್ತಿದ್ದರೂ ಮೊದಲಿನ ಸಮಗ್ರ ಖದರು ಹಬ್ಬಗಳಿಗಿಲ್ಲ.. ವಯಸ್ಕರಲ್ಲೂ ಸಹ ಮಾನಸಿಕ, ದೈಹಿಕ ತೊಂದರೆಗಳಿಂದಾಗಿ ಮನಸ್ಸಿದ್ದರೂ ಮಾಡಲಾಗದ ಅಸಹಾಯಕತೆ.. ಈ ಕಾರಣಗಳಿಂದ ನಿರುತ್ತೇಜಕ, ನಿರಸ ಅನಿವಾರ್ಯವೆಂಬ ಮಟ್ಟಿಗೆ ಹಬ್ಬದಾಚರಣೆಗಳಾಗುವುದನ್ನು ನಾವೆಲ್ಲ ನೋಡಬೇಕಾಗಿದೆ…
“ಕಾಲಾಯ ತಸ್ಮೈ ನಮಃ”

Leave a Reply