ಮೈಸೂರು ಕಟ್ಟಿದ ತಾತಯ್ಯರ ಸ್ಮರಣೆ

ಮೈಸೂರು ಕಟ್ಟಿದ ತಾತಯ್ಯರ ಸ್ಮರಣೆ
ಸೆಪ್ಟೆಂಬರ್ 5, ಶ್ರೀ ತಾತಯ್ಯ ನವರ ಜನ್ಮದಿನ. ಸೆಪ್ಟೆಂಬರ್ 11ರ ಭಾನುವಾರ ಸಂಜೆ 4ಕ್ಕೆ ಮೈಸೂರಿನ ಶಾರದಾವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆಯುವ ಜನ್ಮದಿನಾಚರಣೆ ಕಾರ್ಯ ಕ್ರಮದಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು ತಾತಯ್ಯನವರ ಕುರಿತ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಿದ್ದಾರೆ. ತನ್ನಿಮಿತ್ತ ಈ ಲೇಖನ.
ಪ್ರತಿಯೊಂದು ದೇಶ, ರಾಜ್ಯ, ನಗರ ಸಮಾಜಗಳ ಇತಿಹಾಸದಲ್ಲಿ ಅದನ್ನು ಕಟ್ಟಿ ಬೆಳೆಸಿದ ಮಹನೀಯರ ಪರಿಶ್ರಮ, ಕಳಕಳಿ, ತ್ಯಾಗ ಬಲಿದಾನಗಳ ಪಾತ್ರ ಮಹತ್ತರವಾದುದು. ಆದರಿಂದು ಸಮಾಜದ ಪರಿಕಲ್ಪನೆಯನ್ನೇ ಮೆರೆತು ನಮ್ಮ ಸುತ್ತ ಸ್ವಾರ್ಥದ ಗೋಡೆಗಳನ್ನು ಕಟ್ಟಿಕೊಂಡಿರುವ ನಮಗೆ ಆ ಮಹನೀಯರ ಬದುಕು, ಆದರ್ಶಗಳ ನೆನಪೇ ಇಲ್ಲದಿರುವುದ ದುರಂತ. ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ ಶಿಕ್ಷಣಕಾಶಿ ಎಂಬ ಪ್ರಖ್ಯಾತಿಗೆ ಪತ್ರವಾಗಿದ್ದ ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು. ಮೈಸೂರಿನ ಪ್ರತ್ರಿಕೋದ್ಯಮ ಪಿತಾಮಹರಾಗಿ, ರಾಜಗುರು-ರಾಜ ನೀತಿಜ್ಞರಾಗಿ, ಆದರ್ಶ ಅಧ್ಯಾಪಕರಾಗಿ, ಸಾಮಾಜಿಕ ಕಾರ್ಯ ಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ, ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ, ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ. ಅದಕ್ಕಾಗಿಯೇ ಮೈಸೂರಿನ ನಾಗರಿಕರು ಅವರನ್ನು ತಾತಯ್ಯನೆಂದು, ದೃದ್ಧಪಿತಾಮಹ, ದಯಾಸಾಗರ ಎಂದು ಕರೆದು ಗೌರವಿಸಿದ್ದು.
ಅವರ ಬದುಕನ್ನು ವಿವರಿಸುವುದೆಂದರೆ ಅದು ಒಂದೆರಡು ಶತಮಾನದ ಮೈಸೂರಿನ ಇತಿಹಾಸ ಬರೆಯುವಷ್ಟೇ ಸಾಹಸದ ಕೆಲಸ. 1844 ರಲ್ಲಿ ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಜನಿಸಿದ ವೆಂಕಟಕೃಷ್ಣಯ್ಯ ಬಾಲ್ಯದಿಂದಲೇ ಬಡತನವನ್ನು ಬಳುವಳಿಯಾಗಿ ಪಡೆದಿದ್ದರು. ಸಾಂಸಾರಿಕ ಜೀವನದಲ್ಲಿ ಆರಂಭದಿಂದಲೇ ಬಡತನ, ಸಂಕಟಗಳ ಸರಮಾಲೆ ಅವರನ್ನು ಕಾಡಿಸಿದವು. ಜನರ ಸಂಕಷ್ಟಗಳಿಗೆ ಅವರ ನಿರಕ್ಷರತೆಯೇ ಕಾರಣವೆಂಬುದನ್ನು ತಾರುಣ್ಯದಲ್ಲಿಯೇ ಕಂಡು ಕೊಂಡ ವೆಂಕಟಕೃಷ್ಣಯ್ಯರಯ ಶಾಲೆಗಳನ್ನು ಸ್ಥಾಪಿಸುವುದುರ ಮೂಲಕ ಅಂದಿನ ಮೈಸೂರು ನಗರದಲ್ಲಿ ವಿದ್ಯಾಪ್ರಸಾರದ ಚಳವಳಿಯನ್ನೇ ಕೈಗೊಂಡರು. ಇಂದಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾದ ಮರಿಮಲ್ಲಪ್ಪ ಶಾಲೆ, ಮಹಾರಾಣಿ ಕಾಲೇಜ್, ಸದ್ವಿದ್ಯಾ ಪಾಠಶಾಲೆ ಇವೆಲ್ಲಾ ತಾತಯ್ಯನವರ ಕೈಗೂಸುಗಳು. ಸ್ವತಃ 35 ವರ್ಷ ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನದ ಬೆಳಕು ನೀಡಿದರು. ದಿಕ್ಕಿಲ್ಲದ ವಿದ್ಯಾರ್ಥಿಗಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು. ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು. ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು. ಅಶಕ್ರ ಪ್ರಾಣಿಗಳಿಗಾಗಿ ಪಿಂಜರಾಪೋಲನ್ನು ಸ್ಥಾಪಿಸಲು ನೆರವಾದರು. ಮೈಸೂರು ಪತ್ರಿಕೋದ್ಯಮ ಪಿತಾಮಹರಾಗಿ ಸಾಧ್ವಿ, ಉದಯ ಚಿಂತಾಮಣಿ. ವಿದ್ಯಾದಾಯಿನಿ, ವೃತ್ತಾಂತ ಚಿಂತಾಮಣಿ, ಹಿತಭೋದಿನಿ, ಸಂಪದಭ್ಯುದಯ ಮುಂತಾದ ಕನ್ನಡ ಪತ್ರಿಕೆಗಳನ್ನೂ Wealth of Mysore, Mysore Patriot, The Civil And Social Journaj, Nature Cure ಮುಂತಾದ ಆಂಗ್ಲ ಪತ್ರಿಕೆಗಳನ್ನೂ ಆರಂಬಿಸಿ ಜನಜಾಗೃತಿ ಉಂಟುಮಾಡಿದರು. ಪ್ರಜಾಪ್ರತಿನಿಧಿ ಸಭೆ, ನ್ಯಾಯ ವಿಧಾಯಕ ಸಭೆ, ಪೌರಸಭೆ ಮತ್ತು ಎಕನಾಮಿಕ್ ಕಾನ್ಫರೆನ್ಸ್ ಗಳಲಿ ಸದಸ್ಯರಾಗಿ ಪ್ರಜೆಗಳ ಪ್ರತಿನಿಧಿಯಾಗಿ ವಿರೋಧಪಕ್ಷವಾಗಿ ಜನಪರವಾಗಿ ದುಡಿದರು.
ವೆಂಕಟಕೃಷ್ಣಯ್ಯನವರನ್ನು 1922ರಲ್ಲಿ ದಾವಣಗೆರೆಯಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿ ಗೌರವ ಅರ್ಪಿಸಲಾಯಿತು.
ಬೊಂಬಾಯಿ ಸರ್ಕಾರಸಲ್ಲಿ ಚೀಪ್ ಇಂಜಿನೀಯರ್ ಆಗಿದ್ದ ವಿಶ್ವೇಶ್ವರಯ್ಯನವರ ಬುದ್ಧಿವಂತಿಕೆ, ಕಾರ್ಯದಕ್ಷತೆಗಳು ಅವರದೇ ನಾಡಾದ ಮೈಸೂರಿಗೇ ಲಭಿಸಬೇಕೆಂದು ಮಹಾರಾಜರಿಗೆ ಪತ್ರ ಬರೆದಿದ್ದನ್ನೂ ಸ್ಮರಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು, ವಿಶ್ವವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರರು, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು ಮುಂತಾದ ಮಹನೀಯರು ತಾತಯ್ಯನವರನ್ನು ಭೇಟಿಯಾಗಿ ಅವರ ಸಮಾಜಕಾರ್ಯಗಳನ್ನು ಪ್ರಶಂಶಿಸಿದ್ದಾರೆ. ಲ.ನ. ಶಾಸ್ತ್ರಿಯವರ ‘ಜಾಗೃತಿಯ ಹರಿಕಾರ ವೆಂಕಟಕೃಷ್ಣಯ್ಯ’ ಗ್ರಂಥದಲ್ಲಿ ತಾತಯ್ಯನವರ ಕುರಿತು ಅಮೂಲ್ಯ ವಿವರಗಳಿವೆ.

ಕೃಪೆ: ‘ಕನ್ನಡ ಸಂಪದ’

Leave a Reply