‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ, ಬಂಗಾಳದ ಕ್ರಾಂತಿಕಿಡಿ: ‘ಮಾಸ್ಟರ್ ದಾ’ ಸೂರ್ಯ ಸೇನ್

‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ, ಬಂಗಾಳದ ಕ್ರಾಂತಿಕಿಡಿ: ‘ಮಾಸ್ಟರ್ ದಾ’ ಸೂರ್ಯ ಸೇನ್

‘ಮಾಸ್ಟರ್ ದಾ’ ಸೂರ್ಯ ಸೇನ್ : ಬಂಗಾಳದ ಮತ್ತೊಬ್ಬ ಕ್ರಾಂತಿಕಿಡಿ, ಬ್ರಿಟಿಷರ ಎದೆ ನಡುಗಿಸಿದ’ ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ಯ ರೂವಾರಿ ಸೂರ್ಯ ಸೇನ್. ಜನರು, ಕ್ರಾಂತಿಕಾರಿ ಸಹವರ್ತಿಗಳು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಮಾಸ್ಟರ್ ದಾ. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ದೊಡ್ಡಮಟ್ಟದ ಹೋರಾಟವನ್ನು ರೂಪಿಸುವಲ್ಲಿ ಸೂರ್ಯ ಸೇನ್ ರ ಪಾತ್ರ ಪ್ರಮುಖವಾದದ್ದು. ಬಿಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಕುರಿತು ಅರಿತ ಸೇನ್ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿಯೆಡೆಗೆ ಆಕರ್ಷಿತರಾದರು. ೧೯೧೮ ರಲ್ಲಿ ಚಿತ್ತಗಾಂಗ್ ನಲ್ಲಿ ಶಿಕ್ಷಕನಾಗಿ ವೃತ್ತಿ ಆರಂಭಿಸಿದ ಸೇನ್ಆರಂಭದಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾಗಿದ್ದರು. ಆದರೆ ಅದು ಮಧ್ಯದಲ್ಲೇ ಸ್ಥಗಿತವಾದಾಗ ಬೇಸರಗೊಂಡ ಸೇನ್ ಭಾರತದ ಸ್ವಾತಂತ್ರ್ಯಕ್ಕೆ ಕ್ರಾಂತಿಮಾರ್ಗವೇ ಸರಿ ಎಂದು ನಿಶ್ಚಯಿಸಿದರು. ಕ್ರಾಂತಿಕಾರಿ ಸಂಘಟನೆ ಯುಗಾಂತರದ ಕಾರ್ಯಕರ್ತನಾಗಿ ಕ್ರಾಂತಿಕಾರ್ಯದಲ್ಲಿ ತೊಡಗಿಸಿಕೊಂಡ ಅವರು ಚಿತ್ತಗಾಂಗ್ ಜಿಲ್ಲೆಯಾದ್ಯಂತ ಕ್ರಾಂತಿ ಚಟುವಟಿಕೆ ಪಸರಿಸುವಲ್ಲಿ ಹಾಗೂ ಕ್ರಾಂತಿಕಾರಿಗಳ ಬಹುದೊಡ್ಡ ಯುವಪಡೆಯನ್ನು ಕಟ್ಟುವಲ್ಲಿ ಅವಿರತವಾಗಿ ದುಡಿದರು. ೧೯೩೦ರ ಹೊತ್ತಿಗೆ ಅವರ ಕ್ರಾಂತಿಪಡೆಯಲ್ಲಿ ದೇಶಕ್ಕಾಗಿ ಜೀವ ನೀಡಲಿಕ್ಕೆ ಸಿದ್ಧರಾದ ೭೫ಕ್ಕೂ ಹೆಚ್ಚು ತರುಣ ತರುಣಿಯರಿದ್ದರು. ಸೇನ್ ತಂಡದ ಗಣೇಶ್ ಘೋಷ್, ಅನಂತ ಸಿಂಹ, ನಿರ್ಮಲ್ ಸೇನ್, ಲೋಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಒಬ್ಬೊಬ್ಬರೂ ಕ್ರಾಂತಿಸಿಂಹಗಳೇ. ಸೂರ್ಯ ಸೇನ್ ಮತ್ತವರ ಕ್ರಾಂತಿಸೇನೆ ಗೆರಿಲ್ಲಾ ಯುದ್ಧದಲ್ಲಿ ಪರಿಣತವಾಗಿತ್ತು. ಬ್ರಿಟಿಷರನ್ನು ಬಗ್ಗುಬಡಿಯಲು ಅವರಿಗೆ ಅನುಕೂಲಕರವಾಗಿರುವ ಸಂಪರ್ಕ ಸಾಧನಗಳನ್ನೆಲ್ಲಾ ಕಡಿದುಹಾಕಬೇಕು ಎಂಬುದು ಅವರ ಮೊದಲ ಯೋಜನೆಯಾಗಿತ್ತು. ಆ ಹೊತ್ತಿಗಾಗಲೇ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಬಲಿದಾನ ದೇಶದ ಕ್ರಾಂತಿಕಾರಿಗಳಿಗೆ ಹೊಸ ಸ್ಪೂರ್ತಿ ನೀಡಿತ್ತು. ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವ ಕನಸನ್ನು ಉದ್ದೀಪನಗೊಳಿಸಿತ್ತು. ಸೂರ್ಯ ಸೇನ್ಅವರ ಕ್ರಾಂತಿಪಡೆ ಬ್ರಿಟಿಷರ ಮುಖ್ಯ ಆಯುಧ ಖಜಾನೆಯಾಗಿದ್ದ ಚಿತ್ತಗಾಂಗ್ ಶಸ್ತ್ರಾಗಾರವನ್ನು ಲೂಟಿ ಮಾಡುವ ಸಾಹಸಕ್ಕೆ ಕೈಹಾಕಿತು. ಅಂದು ಏಪ್ರಿಲ್ ೧೮, ೧೯೩೦. ಚಿತ್ತಗಾಂಗ್ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿದ ಕ್ರಾಂತಿಕಾರಿಗಳು ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲ ರೈಲ್ವೆ, ಟೆಲಿಗ್ರಾಫ್, ಟೆಲಿಫೋನ್ ನೆಲೆಗಳ ಮೇಲೆ ದಾಳಿಮಾಡಿ ಅವನ್ನು ನಿಷ್ಕ್ರಿಯಗೊಳಿಸಿ ಜಗತ್ತಿನ ಸಂಪರ್ಕವನ್ನೇ ತಪ್ಪಿಸಿದರು. ಸೂರ್ಯಸೇನರ ನೇತೃತ್ವದಲ್ಲಿ ಶಸ್ತ್ರಾಗಾರದ ಮುಂದೆ ಕ್ರಾಂತಿಕಾರಿಗಳೆಲ್ಲರೂ ಸೇರಿ ಅಲ್ಲೇ ಭಾರತದ ರಾಷ್ಟ್ರಧ್ವಜ ಹಾರಿಸಿ ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು. ಇನ್ನೂ ಮೀಸೆ ಸರಿಯಾಗಿ ಮೂಡದ ತರುಣರ ಪಡೆ ಬ್ರಿಟಿಷ್ ಶಸ್ತ್ರಾಗಾರವನ್ನೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಬ್ರಿಟಿಷರಿಗೆ ದೊಡ್ಡ ಮುಖಭಂಗವಾಯಿತು ಹಾಗೂ ಈ ಸುದ್ದಿ ಲಂಡನ್ನಿನವರೆಗೆ ಸದ್ದು ಮಾಡಿತು. ನಂತರ ಜಲಾಲಾಬಾದ್ ಬೆಟ್ಟಗಳಲ್ಲಿ ನಡೆದ ಬ್ರಿಟಿಷರ ಎದುರಿನ ಹೋರಾಟಗಳಲ್ಲಿ ಅನೇಕ ಕ್ರಾಂತಿಕಾರಿಗಳು ಪ್ರಾಣಾರ್ಪಣೆ ಮಾಡಿದರು. ಸೇನ್ ತಂಡದ ಪ್ರೀತಿಲತಾ ವಡ್ಡೆದಾರ್ ಯೂರೋಪಿಯನ್ ಕ್ಲಬ್ ಗೆ ದಾಳಿ ಮಾಡಿ ಮೃತ್ಯುವಶಳಾದಳು. ಸೂರ್ಯ ಸೇನ್ ಮಾರುವೇಷಗಳಲ್ಲಿ ಅಲೆದಾಡುತ್ತಾ ಕ್ರಾಂತಿ ಚಟುವಟಿಕೆ ಮುಂದುವರೆಸಿದ್ದರು. ಅವರಿಗಾಗಿ ಭಾರಿ ಹುಡುಕಾಟ ನಡೆದಿತ್ತು. ಬ್ರಿಟಿಷರು ನೀಡಿದ ದುಡ್ಡಿನ ಆಸೆಗೆ ಬಿದ್ದ ನೇತ್ರ ಸೇನ್ ಮಾಸ್ಟರ್ ದಾ ಅವರಸುಳಿವು ನೀಡಿ ಬಂಧನಕ್ಕೆ ಕಾರಣವಾದ. ಅವರನ್ನು ಗಲ್ಲಿಗೇರಿಸುವ ಮುನ್ನ ಸೂರ್ಯ ಸೇನರನ್ನು ಅಮಾನುಷವಾಗಿ ಹಿಂಸಿಸಲಾಯಿತು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನರ ಹಲ್ಲು ಗಳನ್ನು ಹ್ಯಾಮರ್ ನಿಂದ ಹೊಡೆದು, ಉಗುರುಗಳನ್ನು ಕಿತ್ತು, ಕೈಕಾಲುಗಳ ಕೀಲುಗಳನ್ನು ಮುರಿದು ಅತ್ಯಂತ ಪೈಶಾಚಿಕವಾಗಿ ಅವರನ್ನು ೧೨ ಜನವರಿ ೧೯೩೪ ರಂದು ಗಲ್ಲಿಗೇರಿಸಲಾಯಿತು. ಅವರು ಸತ್ತಮೇಲೂ ಸುಮ್ಮನಾಗದ ನೀಚ ಬ್ರಿಟಿಷರು ಅವರ ಶವವನ್ನು ಸಮುದ್ರಕ್ಕೆ ಎಸೆದು ಸೇಡುತೀರಿಸಿಕೊಂಡಿತು. ಸಾವಿಗೂ ಮುಂಚೆ, ಸೂರ್ಯ ಸೇನ್ ತನ್ನ ತಂಡದ ಯುವಕರಿಗೆ ಪತ್ರವೊಂದನ್ನು ಬರೆದಿದ್ದ. “ಸಾವು ನನ್ನನ್ನು ಆಲಂಗಿಸುತ್ತಿದೆ, ನಾನು ಅನಂತದೆಡೆಗೆ ಹೊರಟಿದ್ದೇನೆ. ಮಾತೃಭೂಮಿಗಾಗಿ ಪ್ರಾಣ ನೀಡುತ್ತಿರುವ ಈ ಸೌಭಾಗ್ಯದ ಸಂದರ್ಭದಲ್ಲಿ ನಾನು ನಿಮಗೆ ಕೊಡಬಹುದಾದ್ದು ‘ಸ್ವತಂತ್ರ ಭಾರತ’ ಕಾಣುವ ಬಂಗಾರದಂತಹ ಕನಸನ್ನು ಮಾತ್ರ. ಗುಲಾಮಿ ದಿನಗಳು ಕೊನೆಯಾಗುವ ಹೊತ್ತು ಹತ್ತಿರದಲ್ಲೇ ಇದೆ, ಅದೋ ಅಲ್ಲಿ ಸ್ವಾತಂತ್ರ್ಯದ ಬೆಳಕು ಕಾಣುತ್ತಿದೆ, ಹಿಂದಡಿಯಿಡದೆ ಮುನ್ನುಗ್ಗಿ , ಸ್ವತಂತ್ರ ಭಾರತದ ಕನಸು ನನಸಾಗಲಿ”. ಸೂರ್ಯ ಸೇನರ ಬಲಿದಾನ ಮುಂದೆ ಸ್ವಾತಂತ್ರ್ಯ ಸೂರ್ಯನ ಉದಯಕ್ಕೆ ನಾಂದಿ ಹಾಡಿತು. ಅವರು ಕಂಡ ಸ್ವಾತಂತ್ರ್ಯದ ಕನಸು ೧೩ ವರ್ಷಗಳ ನಂತರ ನನಸಾಯಿತು.

ಅನೇಕ ದೇಶಭಕ್ತರ ಕಥೆಗಳನ್ನು ಓದುವಾಗ ನಮಗೆ ಅಲ್ಲಿ ಎದ್ದು ಕಾಣುವುದು ವಿದ್ರೋಹ. ಯಾವುದೋ ಸಣ್ಣಪುಟ್ಟ ಆಮಿಷಗಳಿಗೆ ಬಲಿಯಾಗಿ ದ್ರೋಹ ಬಗೆಯುವ, ಜತೆಗೇ ಇದ್ದು ಬೆನ್ನಿಗೆ ಚೂರಿ ಹಾಕುವ ವಿದ್ರೋಹದ ಅಧ್ಯಾಯವನ್ನೂ ಕಾಣುತ್ತೇವೆ. ನೇತ್ರ ಸೇನ್ ಎಂಬ ಸಹವರ್ತಿ ಬ್ರಿಟಿಷರ ಹಣದ ಆಮಿಷದ ಒಳಗಾಗಿ ಮಾಸ್ಟರ್ ದಾ ಸೂರ್ಯಸೇನ್ ರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟು ದ್ರೋಹಬಗೆದುಬಿಟ್ಟ. ಈ ದ್ರೋಹಿ ನೇತ್ರ ಸೇನ್ ಬ್ರಿಟಿಷರಿಂದ ಇನಾಮು ಪಡೆಯುವ ಮುನ್ನವೇ ಸೂರ್ಯಸೇನರ ಸಹವರ್ತಿ ನೇತ್ರ ಸೇನನ ಹೆಂಡತಿಯೆದುರೇ ಆತನ ಕತ್ತು ಸೀಳಿ ಸೇಡುತೀರಿಸಿಕೊಂಡ. ದ್ರೋಹಿಗೆ ತಕ್ಕ ಶಿಕ್ಷೆಯಾಯಿತು. ಪೋಲೀಸರು ಕೊಲೆಗೈದವರು ಯಾರೆಂದು ನೇತ್ರಸೇನನ ಪತ್ನಿಯ ವಿಚಾರಣೆ ಆರಂಭಿಸಿದರು, ಆತನನ್ನು ಗುರುತಿಸಿ, ಸಾಕ್ಷ್ಯ ನೀಡಿ ಹಿಡಿಯಲು ಸಹಾಯ ಮಾಡಬೇಕೆಂದು ಕೋರಿದರು. ಇನ್ಯಾರಾದರೂ ತನ್ನ ಗಂಡನನ್ನು ಕೊಂದವರನ್ನು ಪೋಲೀಸರಿಗೆ ಹಿಡಿದುಕೊಡುತ್ತಿದ್ದರು. ಆದರೆ ನೇತ್ರ ಸೇನನ ಪತ್ನಿ ಆ ದೇಶಭಕ್ತನನ್ನು ಗುರುತಿಸಲು ಬಿಲ್ ಕುಲ್ ಒಪ್ಪಲಿಲ್ಲ. ವಿಚಾರಣೆಯಲ್ಲಿ ಆಕೆ ಹೇಳಿದ್ದು “ಗಂಡನನ್ನು ಕೊಂದವನನ್ನು ಕಣ್ಣಾರೆ ಕಂಡಿದ್ದೇನೆ. ನೀವೇನಾದರೂ ಶಿಕ್ಷೆ ಕೊಡಿ, ನಾನು ಆತನನ್ನು ಗುರುತಿಸಲಾರೆ. ನೇತ್ರಸೇನನಂತವನಿಗೆ ಪತ್ನಿಯಾಗಿದ್ದಕ್ಕೆ ದುಃಖವಿದೆ. ಆತ ಚಿತ್ತಗಾಂಗ್ ನ ಮನೆಮಗನಿಗೆ ದ್ರೋಹಮಾಡಿಬಿಟ್ಟ”. ಎಂಥಾ ಮಾತು!, ಎಂಥಾ ತ್ಯಾಗ!. ಬ್ರಿಟಿಷರಿಗೆ ಕೊನೆಗೂ ನೇತ್ರಸೇನನನ್ನು ಕೊಂದವನ ಹಿಡಿಯಲಾಗಲಿಲ್ಲ. ಈ ದೇಶದ ಪರಂಪರೆಯಲ್ಲಿ ಇಂತಹ ಅದೆಷ್ಟೋ ನಿಸ್ವಾರ್ಥ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ, ಧೀರೋದಾತ್ತ ಹೆಣ್ಣುಮಕ್ಕಳು ಬಂದುಹೋಗಿದ್ದಾರೆ. ಆ ಪರಂಪರೆಗೆ, ಅಂತಹ ವೀರವನಿತೆಯರಿಗೆ ನಮಿಸೋಣ. ಅವರಿಗೆ ಭಾವಪೂರ್ಣ, ಶ್ರದ್ಧೆ ನಮನಗಳನ್ನು ಅರ್ಪಿಸೋಣ.

Leave a Reply