ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು ಭಾಗ-೧   

ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು

ಕಥೆಗಳು ಹುಟ್ಟಲು ನಿಶ್ಚಿತ ಸಮಯ-ಸಂದರ್ಭ, ಸಂಭಾಷಣೆ, ವ್ಯವಧಾನಗಳು ಬೇಕಿಲ್ಲ.. ಮೌನದಲ್ಲೂ ನೂರಾರು ಕತೆಗಳು ಅರಳುತ್ತವೆ. ಮನುಷ್ಯನ ಭಾಷೆ, ಲಯ, ಭಾವನೆಗಳು, ಹೊಯ್ದಾಟ, ತುಡಿತ, ತುಮುಲಗಳಷ್ಟೇ ಕಥಾ ಚೌಕಟ್ಟಿಗೆ ಒಳಪಡದೆ, ಈ ಸೃಷ್ಟಿಯ ಚರಾಚರ ವಸ್ತುಗಳೆಲ್ಲವೂ ಕಥೆಗೆ ವಸ್ತುಗಳಾಗಬಲ್ಲವು. ಸಾಮಾಜಿಕ ಮೌಲ್ಯಗಳು, ಸುಧಾರಣೆ ಹಾಗೂ ಜೀವನಾನುಕಂಪದೊಂದಿಗೆ ಬೆಳೆದ ಕನ್ನಡ ಕಥಾ ಪರಂಪರೆ ವಿವಿಧ ಕಾಲಘಟ್ಟಗಳಲ್ಲಿ ಮನೋವಿಶ್ಲೇಷಣಾತ್ಮಕ, ಮಣ್ಣಿನ ವಾಸನೆ, ಗ್ರಾಮ್ಯ ಪರಿಸರ, ವಿಶಿಷ್ಟ ಭಾಷಾ ಪ್ರಯೋಗ, ಸಾಮಾಜಿಕ ಅಸಮಾನತೆ ಅನ್ಯಾಯದ ವಿರುದ್ಧ ಚಳವಳಿಯಾಗಿ, ತಾತ್ವಿಕ ನೆಲೆಗೆ ಮುಖಾಮುಖಿಯಾಗಿ, ಗೊಡ್ಡು ಸಂಪ್ರದಾಯಗಳಿಗೆ ಸವಾಲಾಗಿ, ಜನರ ಒಳತೋಟಿ, ವೈವಿಧ್ಯಮಯ ಬದುಕು, ಜಾಗತೀಕರಣ, ಉದಾರೀಕರಣ, ಖಾಸಗೀಕರಣ ವಿರುದ್ಧದ ಅಕ್ಷರ ರೂಪದ ಹೋರಾಟವಾಗಿ, ಮಾನವಪ್ರೇಮವನ್ನು ಎತ್ತಿ ಹಿಡಿಯುವ ಕನ್ನಡ ಸಣ್ಣಕಥಾಪರಂಪರೆಯು ತನ್ನದೇ ಆದ ವಿಶಿಷ್ಟ ಹಾಗೂ ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡು ಬೆಳೆದಿದೆ. ಸಣ್ಣಕತೆಗಳ ಈ ಸಾಹಿತ್ಯ ಓದುಗರಲ್ಲಿ ಆಸಕ್ತಿಯನ್ನು ಮೂಡಿಸಲು ಅವು ಬಿಂಬಿಸುವ ಬದುಕಿನ ಚಿತ್ರಣವೇ ಕಾರಣ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕದ ಮಧ್ಯೆಯೂ ಕಥಾ ಜಗತ್ತು ಸೊರಗಿಲ್ಲ. ಆಧುನಿಕ ಮಾಧ್ಯಮಗಳ ಬಳಕೆಯೊಂದಿಗೇ ಸಣ್ಣಕಥೆ ಹೊಸ ರೂಪದೊಂದಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಇರುವ ಕನ್ನಡ ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ವಿವಿಧ ಪತ್ರಿಕೆಗಳು, ಸಾಹಿತ್ಯಿಕ ಸಂಘ, ಸಂಸ್ಥೆ, ಕಥಾ ಪರಂಪರೆ ಸಾಗುತ್ತಿರುವ ಹೊಸ ದಿಕ್ಕಿಗೂ ಮುನ್ನುಡಿಯಾಗಿವೆ.

ವೇದಕಾಲದಲ್ಲಿ ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ‍್ಯವಿತ್ತು ಎಂದು ಹೇಳಿ ಮೈತ್ರಿ, ಗಾರ್ಗಿ ಮುಂತಾದ ಕೆಲವೇ ಕೆಲವು ಬೆರಳೆಣಿಕೆಯಷ್ಟು ಹೆಸರುಗಳನ್ನು ಸೂಚಿಸುವರಾದರೂ ನಂತರದ ಯುಗದಲ್ಲಿ ಪುರುಷ ಮೇಲು, ಮಹಿಳೆ ಕೀಳು ಎಂಬ, ಅವಳು ಅವನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದವಳು. ಅವಳಿಗೇಕೆ ಶಿಕ್ಷಣ? ಅವಳು ಕೇವಲ ಭೋಗದ ವಸ್ತುವಾಗಿ ಬದುಕಬೇಕೆಂಬ ಧಾರ್ಷ್ಟ್ರದ ನಡೆವಳಿಕೆ ಪುರುಷಲೋಕದಲ್ಲಿ ಕಂಡುಬಂದಿತು. ಹೀಗಾಗಿ ಸ್ತ್ರೀ ಸಾಹಿತ್ಯರಚನೆಯಲ್ಲಿ ಹಿಂದೆ ಬಿದ್ದಳು. ಅವಳು ಶಿಕ್ಷಣದಿಂದ ಅದರ ಮೂಲಕವಾದ ಅಭಿವ್ಯಕ್ತಿ ಸ್ವಾತಂತ್ರ‍್ಯದಿಂದ ವಂಚಿತಳಾದಳು.

ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಲ್ಲಿ ೨೦ನೆಯ ಶತಮಾನದ ವರೆಗೂ ಮಹಿಳೆಯರು ರಚಿಸಿದ ಮಹಿಳಾ ಸಾಹಿತ್ಯದಲ್ಲಿ ವಿಶೇಷವಾದದ್ದೇನೂ ಕಂಡುಬರಲಿಲ್ಲ. ಶಿಕ್ಷಣವಂಚಿತಳಾದ ಸ್ತ್ರೀ ಪುರುಷ ಪ್ರಧಾನ ಜಗತ್ತಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳಿಂದ ವಂಚಿತಳಾದಳು. ಕನ್ನಡ ಸಾಹಿತ್ಯಚರಿತ್ರೆಯನ್ನು ಗಮನಿಸಿದಲ್ಲಿ ೨೦ನೆಯ ಶತಮಾನದ ವರೆಗೂ ಯಾವುದೇ ಮಹಿಳೆ ತನ್ನ ಮನದ ತುಮುಲಗಳನ್ನು ಸಾಹಿತ್ಯದ ಮೂಲಕ ಹಂಚಿ ಕೊಂಡಿರುವ ಉದಾಹರಣೆಯಿಲ್ಲ. ಹದಿಬದೆಯ ಧರ್ಮದ ಸಂಚಿಯ ಹೊನ್ನಮ್ಮನೇ ಇರಲಿ, ಹೆಳವನಕಟ್ಟೆಯ ಗಿರಿಯಮ್ಮನೇ ಇರಲಿ, ಜಾನಪದ ಲೋಕದ ಗರತಿಯರೇ ಇರಲಿ, ಎಲ್ಲರೂ ಬರೆದಿರುವುದು ಕೇವಲ ತ್ಯಾಗದ ಉಪದೇಶ, ದೇವತೆಯಾಗಿ ಪರಿವರ್ತಿತವಾಗುವ ಹೆಣ್ಣಿನ ವ್ಯಕ್ತಿತ್ವ ಇತ್ಯಾದಿಗಳ ಬಗ್ಗೆಯೇ. ಹೆಣ್ಣೂ ಗಂಡಿನಂತೆಯೇ ಮನುಷ್ಯಜೀವಿ. ಅವಳಿಗೂ ಭಾವನೆಗಳಿವೆ, ಬೇಕು ಬೇಡಗಳಿವೆ, ಇಷ್ಟಾನಿಷ್ಟಗಳಿವೆಯೆಂಬುದನ್ನು ಅರಿಯುವ, ಅರುಹುವ ಅವಕಾಶವನ್ನೇ ಕೊಡಲಿಲ್ಲ. ಸಮಯವನ್ನೂ ನೀಡಲಿಲ್ಲ.

ಸುಮಾರು ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಮಹಿಳಾ ವಚನಕಾರ್ತಿಯಾಗಿ ಅಕ್ಕಮಹಾದೇವಿ ಮಾತ್ರ ಸ್ತ್ರೀ ಜಗತ್ತಿನ ತಲ್ಲಣಗಳಿಗೆ ದ್ವನಿಯಾಗಿ ನಿಲ್ಲುತ್ತಾಳೆ. ಅಕ್ಕಮಹಾದೇವಿಯನ್ನು ಕಾಡಿದ ಒಂದು ಪ್ರಧಾನಾಂಶವೆಂದರೆ ಜೈವಿಕತೆಯ, ಭೋಗದ ನೆಲೆಯಲ್ಲಿ ಮನುಷ್ಯರನ್ನು ಗಂಡಾಗಿ, ಹೆಣ್ಣಾಗಿ ಕಾಣುವಿಕೆ. ಇದನ್ನು ಆಕೆ ಮನದ ಸೂತಕವೆಂದೇ ಹೇಳುತ್ತಾಳೆ. ಅಂದಿನ ಕಾಲಘಟ್ಟ ಹಾಗೂ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ನೋಡಿದಾಗ ಅಕ್ಕಮಹಾದೇವಿಯಿಂದ ಇಂಥ ವಿಭಿನ್ನ ಧ್ವನಿ ಹೊರಟಿರುವುದು ಗಮನಾರ್ಹ. ಹೆಣ್ಣನ್ನು ದೇಹವಾಗಿ ಕಾಣುತ್ತ ಅವಳ ವ್ಯಕ್ತಿತ್ವದ ಇತರ ಆಯಾಮಗಳನ್ನು ಅಲ್ಲಗಳೆಯುತ್ತ ಸಾಗಿದ್ದ ಚರಿತ್ರೆಗೆ ಅಕ್ಕನ ಬದುಕು ಒಂದು ಉತ್ತರವಾಗಿದೆ. ಹೆಣ್ಣು ದೇಹದೊಂದಿಗೆ ಹೆಣ್ಣಿನ ವ್ಯಕ್ತಿತ್ವವನ್ನು ಸಮೀಕರಿಸುವುದನ್ನು ಆಕೆ ವಿರೋಧಿಸುತ್ತಾಳೆ. ಆಕೆ ಹೆಣ್ತನಕ್ಕೆ ಲೋಕ ಹೊರಿಸಿದ ಮಿತಿಗಳನ್ನು ಮೀರುವ, ಮೀರಿದ್ದನ್ನು ಹೇಳುವ ಒಂದು ಪ್ರಯತ್ನವನ್ನು ಮಾಡುತ್ತಾಳೆ. ಇವೆಲ್ಲವುಗಳ ಜೊತೆಗೇ ಅದುವರೆಗಿನ ಸಮಾಜಕ್ಕೆ ಅಷ್ಟೇನೂ ಪರಿಚಿತವಲ್ಲದ ಸ್ತ್ರೀ ಬದುಕಿನ ಒಂದು ನೂತನ ಆಯಾಮವನ್ನು ಸ್ಥಾಪಿಸುವಲ್ಲಿ ಅಕ್ಕನ ಸತತ ಪ್ರಯತ್ನವಿದೆ. ಹೋರಾಟ ಸಾಧನೆಗಳಿವೆ.

ನಂತರದ ಸಂಚಿಯ ಹೊನ್ನಮ್ಮ ಪುರುಷಪ್ರಾಧಾನ್ಯತೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವ, ಪುರುಷನ ಸಂತೋಷಕ್ಕಾಗಿ ಹೆಣ್ಣು ದುಡಿಯಬೇಕು, ಅಂದರೇ ಕುಟುಂಬದಲ್ಲಿ ಶಾಂತಿ ನೆಮ್ಮದಿಗಳು ಸಿಗುತ್ತವೆಂಬ ಅಭಿಪ್ರಾಯವನ್ನು ಹೊಂದಿ ಹದಿಬದೆಯ ಧರ್ಮವನ್ನು ರಚಿಸಿದಳಾದರೂ ಆಕೆಯಲ್ಲಿಯೂ ಕೂಡ ಹೆಣ್ಣಿನ ಮೇಲಾಗುವ ಅನ್ಯಾಯಗಳಿಗೆ ವಿರುದ್ಧವಾಗಿ ಒಂದು ಸಣ್ಣ ಪ್ರತಿಭಟನೆಯ ಎಳೆಯನ್ನು ನಾವು ಆಕೆಯ ಕೆಲವು ನುಡಿಗಳಲ್ಲಿ ಕಾಣುತ್ತೇವೆ. ಉದಾಹರಣೆಗಾಗಿ, “ಕುವರನಾದೊಡೆ ಬಂದ ಗುಣವೇನದರಿಂದ.. ಕುವರಿಯಾದೊಡೆ ಕುಂದೇನು… ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು..” ಎಂಬ ಮೆಲುದನಿಯನ್ನು ಎತ್ತುತ್ತಾಳೆ.

ಜನಪದ ಗೀತೆಗಳ ರಚನೆಯ ಗರತಿಯರದೂ ಕೂಡ ಹೆಣ್ಣು ಪತಿಯ ಅನ್ಯಾಯಗಳಿಗೆ ಪ್ರತಿಯಾಗಿ ಕ್ಷಮಾಗುಣವನ್ನು ರೂಢಿಸಿಕೊಂಡು ಬಾಳಿದರೇ ಅವಳ ಬಾಳು ಹಸನು ಎಂಬ ಮಾತಿಗೇ ಹೆಚ್ಚಿನ ಒತ್ತು.

೧೯ನೆಯ ಶತಮಾನದ ಸಾಂಸ್ಕೃತಿಕ ವಾತಾವರಣದಲ್ಲಿ ಮತ್ತೆ ಸ್ತ್ರೀಪರ ಆಲೋಚನೆಗಳು ಕಾಣಿಸಿಕೊಳ್ಳತೊಡಗಿದವು. ಇದಕ್ಕೆ ಕಾರಣ ಮಹಿಳೆಗೆ ಅಕ್ಷರಲೋಕದ ಬಾಗಿಲು ತೆರೆದಿತ್ತು.. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಶಾಲಾಶಿಕ್ಷಣ ಪಡೆದ, ಸಾಹಿತ್ಯದಲ್ಲಿ ಒಂದಿಷ್ಟು ಆಸಕ್ತಿ ಹೊಂದಿದ ಸ್ತ್ರೀಯರು ಅಲ್ಲಲ್ಲಿ ಕಾಣಸಿಕ್ಕರೂ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವ ಧೈರ್ಯ ಮಾಡಿರಲಿಲ್ಲ. ಮಹಿಳೆಯರ ಪರವಾಗಿ ಪುರುಷರೇ ಬರೆಯಬೇಕಾದ ಸಂದರ್ಭ. ಆದರೆ ಮಹಿಳೆ ಹಾಗೂ ಪುರುಷರ ಜೀವನಾನುಭವಗಳು ವಿಭಿನ್ನ. ಪುರುಷನಿಗೆ ಮಾತೃತ್ವ, ಲೈಂಗಿಕತೆಯಂಥ ಸ್ತ್ರೀತ್ವದ ಅನುಭವಗಳ ಪರಿಚಯವಿರುವುದಿಲ್ಲ. ಅವನು ಬರೆಯುವುದು ಸ್ತ್ರೀಲೋಕದ ಅರಿವಿಲ್ಲದ ಸಾಹಿತ್ಯ. ಆಕೆಯ ಅಂತರಂಗದ ಖಾಸಗಿ ವಿಚಾರ, ಆಶೋತ್ತರ, ಮಹಿಳಾ ಅಭಿವ್ಯಕ್ತಿ ಇವು ಅವನಿಂದ ಬಹಳ ದೂರ. ಹೆಣ್ಣುತನಕ್ಕೆ ಅಂಟಿಸಿದ ಮಾದರಿಯ ಆತಂಕಗಳು ಬಹುಶಃ ಪುರುಷರನ್ನು ಕಾಡಿರಲಿಕ್ಕಿಲ್ಲವೇನೋ. ಇದೇ ಕಾರಣದಿಂದಾಗಿ ಆರಂಭಕಾಲದ ಮಹಿಳೆಯರು ತಮ್ಮ ಅನುಭವಗಳನ್ನು ನೇರವಾಗಿ ತೆರೆದುಕೊಂಡದ್ದು ತೀರಾ ಕಡಿಮೆಯೆನೋ. ತಮ್ಮ ಅಂತರಂಗದ ಆಳಕ್ಕಿಳಿದು ತಮ್ಮ ನಿಜವಾದ ಅನಿಸಿಕೆಗಳನ್ನು ಮುಟ್ಟಲು, ತೆರೆದಿಡಲು ಇದ್ದ ಹಿಂಜರಿಕೆ, ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದ ನೂರಾರು ಅನುಭವಗಳು ಅಭಿವ್ಯಕ್ತಗೊಳ್ಳಲು ಅವರಿಗೆ ಅದು ಸೂಕ್ತವಾದ ಸಮಯವೆನ್ನಿಸಿರಲಿಕ್ಕಿಲ್ಲವೇನೋ.

ಮುಂದೆ ೨೦ ನೆಯ ಶತಮಾನದಲ್ಲಿ ಮಹಿಳೆಗೆ ಶಿಕ್ಷಣದ ಜೊತೆಗೆ ಅಭಿವ್ಯಕ್ತಿಯ ಬಾಗಿಲೂ ತೆರೆಯಿತೆಂದು ಹೇಳಬಹುದು. ತಮ್ಮ ಬರಹದ ಧಾಟಿಯನ್ನು, ಧೋರಣೆಯನ್ನು ಬದಲಿಸಿಕೊಳ್ಳಲು ಮೊದಲ ಅವಕಾಶವೂ ದೊರೆಯಿತೆನ್ನಬಹುದು. ಆ ಕಾಲದಲ್ಲಿ ತಿರುಮಲಾಂಬಾ, ಸರಸ್ವತಿದೇವಿ ಗೌಡರ, ಶಾಂತಾಬಾಯಿ ನೀಲಗಾರ ಇವರು ಸಾಹಿತ್ಯ ರಚನೆಕಾರರಲ್ಲಿ ಪ್ರಮುಖರು. ಶಾಂತಾಬಾಯಿ ನೀಲಗಾರರು ಸದ್ಗುಣಿ ಕೃಷ್ಣಾಬಾಯಿ ಎಂಬ ಕಾದಂಬರಿಯನ್ನು ಬರೆದರು. ಅದು ಒಬ್ಬ ಉತ್ತಮ ಗೃಹಿಣಿಯಲ್ಲಿರಬೇಕಾದ ಗುಣಗಳನ್ನು ಪ್ರತಿನಿಧಿಸುವ ಕಾದಂಬರಿ. ಇವರು ೨೦ನೆಯ ಶತಮಾನದ ಮೊದಲ ಕಾದಂಬರಿಕಾರ್ತಿ. ಇದರಲ್ಲಿ ಸ್ತ್ರೀಗೆ ವಿದ್ಯೆಯ ಮಹತ್ವದ ಬಗ್ಗೆ ಹೇಳಿದ್ದರೂ ಅವಳು ಪುರುಷನಿಗೆ ವಿದ್ಯೆಯ ಮೂಲಕವಾಗಿ ಹೇಗೆ ಸಹಕಾರಿಯಾಗಬಲ್ಲಳೆಂಬುವದಕ್ಕೇ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ನಂತರ ತಿರುಮಲೆ ರಾಜಮ್ಮ, ಭಾರತಿ ಎಂಬ ಕಾವ್ಯನಾಮದಿಂದ ಅನೇಕ ನಾಟಕ, ವ್ಯಕ್ತಿಚಿತ್ರಗಳು, ರೂಪಕಗಳನ್ನು ಬರೆದರು. ಸಾಮಾಜಿಕ ವಾತಾವರಣ ಬದಲಾದಂತೆ ಸ್ತ್ರೀಯರು ತಮ್ಮ ಲೇಖನದ ಧಾಟಿಯನ್ನು ಬದಲಾಯಿಸಿಕೊಂಡರು. ಅದುವರೆಗೆ ಅಡಿಗೆಮನೆಯಿಂದ ಹೊರಬಾರದವರು ಈಗ ಸ್ವಾತಂತ್ರ‍್ಯ ಚಳುವಳಿಗಳಲ್ಲಿ ಸಕ್ರಿಯವಾಗಿ ಧುಮುಕಿದರು. ಸಮಾಜವೆಂದರೆ ಕೇವಲ ಪುರುಷನಲ್ಲ, ಸ್ತ್ರೀಯೂ ಆತನ ಹೆಗಲೆಣೆಯಾಗಿ ಬದುಕಬೇಕಾದಂಥ ಛಾತಿಯುಳ್ಳವಳು ಎಂಬ ಅರಿವು ಮೂಡತೊಡಗಿತು.  ಈಗ ತಮ್ಮ ಮನದ ತುಮುಲಗಳನ್ನು ಅಭಿವ್ಯಕ್ತಗೊಳಿಸಲು ಈಗ ಅವರು ಹಿಂದೆ ಮುಂದೆ ನೋಡಲಿಲ್ಲ. ನಂತರದ ಪಿಳಿಗೆಯವರು ಶ್ಯಾಮಲಾದೇವಿ. ಇವರ ನಂತರ ಕೊಡಗಿನ ಗೌರಮ್ಮ, ಗಿರಿಬಾಲೆ ಅಂದರೆ ಸರಸ್ವತಿದೇವಿ ರಾಜವಾಡೆ, ಎಚ್ ವಿ ಸಾವಿತ್ರಮ್ಮನವರು ಬರುತ್ತಾರೆ. ಗಿರಿಬಾಲೆ ಹೆಸರಿನಿಂದ ಬರೆದ ಸರಸ್ವತಿದೆವಿ ರಾಜವಾಡೆಯವರು, ಕ್ರೌರ್ಯ, ಸ್ವಾರ್ಥ, ಬಡತನ, ಡಾಂಭಿಕತೆ, ಮೌಢ್ಯಗಳನ್ನು ಕಟುವಾಗಿ ಖಂಡಿಸಿದವರು. ಅನ್ಯಾಯದ ವಿರುದ್ಧ ಬಂಡೇಳುವ ಗಟ್ಟಿತನವನ್ನು ನಾವಿಲ್ಲಿ ಕಾಣುತ್ತೇವೆ. ಮುಂದೆ ಶ್ಯಾಮಲಾದೇವಿ ಬೆಳಗಾಂವಕರರದು ಸಾಮಾಜಿಕ ಸಮಸ್ಯೆಗಳಿಗೆ ಕಲಾತ್ಮಕ ರೂಪವನ್ನೀಯುವ ಹವಣಿಕೆ. ಸಂಕಷ್ಟ ಪರಿಸ್ಥಿತಿಯಲ್ಲಿ ಪುರುಷರ ಪಲಾಯನವಾದ, ಸ್ವಾರ್ಥ, ಅವಿಶ್ವಾಸಗಳನ್ನು ಈ ಕೃತಿಗಳು ಗಮನಕ್ಕೆ ತಂದವು. ಹೆಣ್ಣಿನ ಮುಕ್ತಿಗೆ, ಸುಖಕ್ಕೆ ಗಂಡ-ಮನೆ-ಮಕ್ಕಳು ಮಾತ್ರವಲ್ಲ, ಅದರಿಂದಾಚೆಗೆ ಇನ್ನೂ ಒಂದು ವಿಶಾಲ ಜಗತ್ತಿದೆ ಎಂಬುದನ್ನು ಕಾತ್ಯಾಯಿನಿ ಎಂಬ ಲೇಖಕಿ ತಮ್ಮ ಒಂದೇ ಒಂದು ಕೃತಿಯಿಂದ ಹೇಳಿದರು. ನಂತರದಲ್ಲಿ ಶಾಂತಾದೇವಿ ಮಾಳವಾಡ, ಸರಸ್ವತಿದೇವಿ ಗೌಡರ, ಜಯದೇವಿತಾಯಿ ಲಿಗಾಡೆ, ಗೀತಾ ಕುಲಕರ್ಣಿ ಮುಂತಾದವರು ಸ್ತ್ರೀಯನ್ನು ಸಮಾನಭಾವದಿಂದ ಕಾಣಬೇಕೇ ಹೊರತು ಕನಿಕರದಿಂದಲ್ಲ ಎಂದು ಪ್ರತಿಪಾದಿಸಿ ಕಾದಂಬರಿ, ಕಥೆಗಳನ್ನು ಬರೆದರು. ಇದನ್ನು ಸಾಹಿತ್ಯಲೋಕದ ಒಂದು ಮೈಲಿಗಲ್ಲೆಂದೇ ಹೇಳಬಹುದು. ಬಡವರು ಮತ್ತು ಅಂಧವಿಶ್ವಾಸಿಗಳಿಂದ ತುಂಬಿದ ಸಮಾಜದಲ್ಲಿ ಬಡತನ ಮತ್ತು ಕುರೂಪಗಳನ್ನು ಮಾತ್ರ ತನ್ನ ಆಸ್ತಿಯಾಗಿ ಪಡೆದ ಓರ್ವ ಸ್ತ್ರೀಗೂ ತನ್ನ ಭ್ರಮೆಯ ಆಧಾರದ ಮೇಲೆ ದೈವವಾಗಿ ಬದಲಾಗಿ ಅನುಯಾಯಿಗಳನ್ನೂ ಹಣವನ್ನೂ ಸಂಪಾದಿಸಲು ಸಾಧ್ಯವಾಗುವ ಹಾಗೂ ಸಹಾನುಭೂತಿ ಮತ್ತು ಪರಿಹಾಸ್ಯಗಳೊಂದಿಗೆ ಈ ಸ್ಥಿತಿಯನ್ನು ನೋಡುವುದನ್ನು ಶಾಂತಾದೇವಿ ಕಣವಿಯವರ ಕಥೇಗಳಲ್ಲಿ ಕಾಣುತ್ತೇವೆ. ನಂತರದ ದಿನಗಳಲ್ಲಿ ಮಹಿಳಾ ಸಂವೇದನೆಯ ಅನೇಕ ಮಖಗಳು ತ್ರಿವೇಣಿ, ಎಂ ಕೆ ಇಂದಿರಾ ಮುಂತಾವದವರ ಮೂಲಕ ಸಮರ್ಥವಾಗಿ ಮುಖ್ಯವಾಹಿನಿಗೆ ಅನಾವರಣಗೊಂಡವು, ತ್ರಿವೇಣಿಯವರಂತೂ ಮಹಿಳೆಯ ಮನಸ್ಸನ್ನೇ ವಿಶ್ಲೇಷಿಸಿದರು, ತ್ರಿವೇಣಿಯವರು ಮನೋವೈಜ್ಞಾನಿಕ ಸಮಸ್ಯೆಗಳನ್ನು ತಮ್ಮ ಕಾದಂಬರಿಗಳಲ್ಲಿ ಚರ್ಚಿಸಿದರು. ಇದು ಕನ್ನಡ ಸಾಹಿತ್ಯದಲ್ಲಿ ಆದಂಥ ಬಹು ದೊಡ್ಡ ಬದಲಾವಣೆ. ಅಡುಗೆಮನೆಯ ಸಾಹಿತ್ಯ ಎಂದು ಅವಹೇಳನೆ ಮಾಡುತ್ತಿದ್ದವರ ಬಾಯಿ ಮುಚ್ಚಿತು. ಎಮ್. ಕೆ ಇಂದಿರಾರವರು ವೇಶ್ಯಾಸಮಸ್ಯೆಯ ಬಗ್ಗೆ ಬರೆದ ಗೆಜ್ಜೆಪೂಜೆ ಕಾದಂಬರಿ ಮಹಿಳಾ ಮನೋಲೋಕದಲ್ಲಿ ಒಂದು ವಿಪ್ಲವವನ್ನೇ ತಂದಿತು. ನಂತರದಲ್ಲಿ ಇವರದೇ ದಾರಿಯಲ್ಲಿ ಆದರೂ ಆಧುನಿಕತೆಯ ಪ್ರಭಾವವನ್ನು ಹೊತ್ತ ಕಾದಂಬರಿಕಾರ್ತಿಯರು ಎಚ್. ಜಿ. ರಾಧಾದೇವಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನ ರಾಮ್. ಇವರೆಲ್ಲರ ಕಾದಂಬರಿಗಳಲ್ಲಿ ಆಧುನಿಕ ಮನೋಭಾವ ಹೊಂದಿರುವ ಮಹಿಳೆಯರ ಸಮಸ್ಯೆಗಳು, ಮಹಿಳಾ ಸ್ವಾತಂತ್ರ‍್ಯದ ಮಹತ್ವ, ಸ್ವೇಚ್ಛೆಗೂ ಸ್ವಾತಂತ್ರ‍್ಯಕ್ಕೂ ಇರುವ ಅಂತರದ ಬಗ್ಗೆ ವಿವರಿಸಿದವು. ಮಹಿಳೆಗೆ ಆಧುನಿಕತೆಯ ಜೊತೆಗೇ ಸಹನೆಯ ಮನೋಭಾವ, ಅನುಸರಿಸಿಕೊಂಡು ಹೋಗುವ ಸ್ವಭಾವಗಳ ಮಹತ್ವವನ್ನು ಕೂಡ ಇವರೆಲ್ಲರ ಕಾದಂಬರಿಗಳು ವಿವರಿಸಿದವು. ಇತ್ತೀಚಿನ ದಿನಗಳಲ್ಲಿ ಹೀಗೆ ಮಹಿಳಾ ಸಾಹಿತ್ಯದ ಪರಂಪರೆಯನ್ನು ಮುರಿದು ಕಟ್ಟುವ ಪ್ರಯತ್ನಕ್ಕೆ ಮುಂದಾದ ಲೇಖಕಿಯರಲ್ಲಿ ಗೀತಾ ನಾಗಭೂಷಣ, ವೀಣಾ ಶಾಂತೇಶ್ವರ, ಬಿ ಟಿ ಲಲಿತಾ ನಾಯ್ಕ, ವೈದೇಹಿ, ಸಾರಾ ಅಬೂಬಕ್ಕರ್, ಸುಧಾ ಮೂರ್ತಿ, ನೇಮಿಚಂದ್ರ, ವೀಣಾ ಶಾಂತೇಶ್ವರ ಮುಂತಾದವರು ಅಗ್ರಗಣ್ಯರು. ಕಥೆ-ಕಾದಂಬರಿಗಳಲ್ಲಿ ಇತ್ತೀಚಿನ ಕಥಾನಾಯಕಿಯರು ಪುರುಷಪ್ರಧಾನ ವ್ಯವಸ್ಥೆಯೆದುರು ಸೋಲೊಪ್ಪಿಕೊಳ್ಳದೆ ಶೋಷಣೆಯನ್ನು ವಿರೋಧಿಸಿ ಹೊರಬರುವ ಹೊಸಪ್ರಯತ್ನಗಳನ್ನು ಮಾಡಿದರು. ಇದು ಮಹಿಳಾ ಕಥಾ ಸಾಹಿತ್ಯದ ಹೊಸ ತಿರುವು.

ಈ ಲೇಖಕಿಯರು ತಮ್ಮ ಕಥೆಗಳಲ್ಲಿ ನಾಯಕಿಯ  ಪಾತ್ರದ ಮೂಲಕ ಸಮಾಜದಲ್ಲಿ ಮನೆ ಮಾಡಿದ ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದರು. ಇದುವರೆಗೂ ಕೇವಲ ಮಧ್ಯಮ ವರ್ಗದ ಸಮಸ್ಯೆಗಳನ್ನು ಮಾತ್ರ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಳ್ಳುತ್ತಿದ್ದ ಲೇಖಕಿಯರು ಈಗ ಕೆಳವರ್ಗದ ಮಹಿಳೆಯರ ಸಮಸ್ಯೆಗಳಿಗೂ ಲೇಖನಿಯಾದರು, ಮುಂದಿನದು ಕರ‍್ಪೋರೇಟ್ ಜಗತ್ತಿನ ಅನಾವರಣ. ಅಲ್ಲಿಯ ಶೋಷಣೆಯನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದವರು ನೇಮಿಚಂದ್ರ, ಅಕ್ಷತಾ ಹುಂಚನಕಟ್ಟೆ ಮುಂತಾದವರು.

ಸಮಾಜದ ಸ್ವರೂಪವನ್ನು ವಿಮರ್ಶೆಗೆ ಒಳಪಡಿಸಿದ ಕನ್ನಡಕಥಾ ಸಾಹಿತ್ಯವು ಮಾನವನ ವಿಕಾಸ, ಕೌಟುಂಬಿಕ ಪಲ್ಲಟ, ಹೆಣ್ಣು ಗಂಡುಗಳ ಸಂಬಂಧ ಹಾಗೂ ಸಮಾಜದ ರಚನೆಯ ಹಿಂದಿನ ಮೌಲ್ಯಗಳನ್ನು ಪರಂಪರೆ ಎಂದು ನಂಬಿ ಕೊಂಡು ಬರುವ ಕಾಲಮಾನದಲ್ಲಿ ಹೆಣ್ಣಿನ ಸಂವೇದನೆಯನ್ನು ಪುರುಷ ಕೇಂದ್ರಿತ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಕಟ್ಟುವ ಕಾರ್ಯವನ್ನು ಬಹುತೇಕ ಕನ್ನಡದ ಕತೆಗಾರ್ತಿಯರು ಮಾಡಿದ್ದಾರೆ.

ಮುಂದುವರೆಯುತ್ತದೆ,,,,

Leave a Reply