ಕುಛ್ ತೋ ಲೋಗ ಕಹೇಂಗೆ… ಲೋಗೋಂಕಾ ಕಾಮ ಹೈ ಕೆಹನಾ..

ಕುಛ್ ತೋ ಲೋಗ ಕಹೇಂಗೆ… ಲೋಗೋಂಕಾ ಕಾಮ ಹೈ ಕೆಹನಾ..
ಒಬ್ಬ ವೃದ್ಧ ತನ್ನ ವಯಸ್ಸಾದ ಕುದುರೆಯನ್ನು ಸಂತೆಯಲ್ಲಿ ಮಾರಿ ಹೊಸದನ್ನು ತರುವ ವಿಚಾರದೊಂದಿಗೆ ಮಗನೊಂದಿಗೆ ಪಕ್ಕದೂರಿಗೆ ಹೊರಟಿದ್ದ. ಇಬ್ಬರೂ ಕುದುರೆಯನ್ನು ಹಿಡಿದುಕೊಂಡು ಅಕ್ಕಪಕ್ಕದಲ್ಲಿ ನಡೆಯುತ್ತಿದ್ದರು. ಸ್ವಲ್ಪ ದೂರ ಕ್ರಮಿಸಿದಾಗ ಒಬ್ಬ ದಾರಿಹೋಕ ಭೇಟಿಯಾದ, “ಏನಯ್ಯ ಇದು? ಇಷ್ಟು ಚಂದದ ಕುದುರೆ ಪಕ್ಕದಲ್ಲಿದ್ದೂ ನಡೆಯುವದಾ?”ಎಂದು ನಕ್ಕ… ತಂದೆ/ ಮಗನಿಗೆ ‘ಹೌದಲ್ಲ’ ಅನಿಸಿ ಮಗ ತಂದೆಯನ್ನು ಕುದುರೆಯ ಮೇಲೆ ಕೂಡಿಸಿ ತಾನು ನಡೆಯತೊಡಗಿದ… ಹತ್ತು ಹೆಜ್ಜೆ ಹೋಗಿರಬೇಕು…
ಇನ್ನೊಬ್ಬ ದಾರಿಬೋಕ ಭೇಟಿಯಾಗಿ, “ಛೇ ಏನನ್ಯಾಯ? ಮಗನನ್ನು ನಡೆಯಲು ಬಿಟ್ಟು ಅಪ್ಪ ಕುದುರೆಯೇರುವಷ್ಟು ಸ್ವಾರ್ಥವೇ? ಛೆ ಛೆ.. ಏನು ದಿನಗಳಪ್ಪ!!” ಎಂದದ್ದೇ ತಡ. ಸಂಭಾವಿತ ಮತ್ತದೇ ಉ ಮುಂದೆ ಮುಂದೆ ನಡೆದಾಗ ಮತ್ತೊಬ್ಬ, “ ಎಂಥ ನಿರ್ದಯಿಗಳಿವರು !! ಇದುವರೆಗೆ ಸೇವೆ ಸಲ್ಲಿಸಿದ ಮುದಿ ಕುದುರೆಯನ್ನೂ ಬಿಡುತ್ತಿಲ್ಲ ನಾನಾಗಿದ್ದರೆ ಹೆಗಲ ಮೇಲೆತ್ತಿಕೊಂಡು ಹೋಗುತ್ತಿದ್ದೆ. ಸ್ವಲ್ಪಾದರೂ ಕೃತಜ್ಞತೆ ಬೇಡವೆ?” ಎಂದು ಇವರಿಗೆ ಕೇಳುವಂತೆ ಜೋರಾಗಿಯೇ ಗೊಣಗಿದ. ಇದನ್ನು ಕೇಳಿದ ತಂದೆ ಮಗ ಒಂದು ದಪ್ಪ ಕೋಲನ್ನು ಕುದುರೆಯ ಕಟ್ಟಿದ ಕಾಳುಗಳ ಮಧ್ಯ ತೂರಿಸಿ ಇಬ್ಬರೂ ಹೆಗಲಮೇಲೆ ಹೊತ್ತು ನಡೆಯತೊಡಗಿದರು. ಸ್ವಲ್ಪು ದೂರದಲ್ಲಿ ನದಿಯ ಸೇತುವೆಯ ಮೇಲೆ ಸಾಗುತ್ತಿದ್ದಾಗ ಕುದುರೆ ತೊಂದರೆಯಿಂದ ಚಡಪಡಿಸಿ ಅವರಿಬ್ಬರ ಹೆಗಲಿನಿಂದ ಜಾರಿ ನೀರಿಗೆ ಬಿದ್ದು ಪ್ರವಾಹ ಸುಳಿಗುಂಟ ಹರಿದು ಹೋಯಿತು.
ಇದು ನಮಗೆ ಬಹಳ ದಿನಗಳ ಹಿಂದೆ ಕನ್ನಡ ಶಾಲೆಯ ಪಠ್ಯ ಪುಸ್ತಕದಲ್ಲಿಯ ಒಂದು ನೀತಿ ಕಥೆ. ಸ್ವಂತ ಬುದ್ಧಿ ಉಪಯೋಸಿಸದೇ ಯಾರೇನೆಂದರೆ ಹಾಗೆ ಮಾಡುತ್ತ ಹೋದರೆ ಆಗಬಹುದಾದ ಪರಿಣಾಮ.
ಈ ಜಗತ್ತಿನಲ್ಲಿ ‘ತಮ್ಮೊಬ್ಬರನ್ನು’ ಬಿಟ್ಟು ಉಳಿದವರು ಹೇಗಿದ್ದರೆ ಚನ್ನ ಎಂಬ “ಬೇಕು ಬೇಡ”ಗಳ ಪಟ್ಟಿ ಪ್ರತಿಯೊಬ್ಬರ ಬಳಿಯೂ ಇರುತ್ತದೆ ಎಂದು ಎಂದೋ ಹೇಳಿದ್ದಾರೆ. ಎಲ್ಲರೂ ಪುಕ್ಕಟೆಯಾಗಿ ಇನ್ನೊಬ್ಬರಿಗೆ ಉಪದೇಶಿಸುವವರೇ ತಮ್ಮ ವಿಚಾರಗಳನ್ನು ಕೇಳಲಿ/ಬಿಡಲಿ ಇನ್ನೊಬ್ಬರ ಮೇಲೆ ಹೇರುವವರೇ. ಹೋಗಲಿ ಎಂದು ಒಬ್ಬರ ಮಾತು ಕೇಳಿದರೋ, ಉಳಿದವರಿಗೆ ಅಸಹನೆ. ಇದನ್ನೇ ನಮ್ಮ ಮಲ್ಲಿಗೆ ಕವಿ ಕೆ. ಎಸ್.ನರಸಿಂಹಸ್ವಾಮಿಯವರು ತಮ್ಮ ‘ಇಕ್ಕಳ’ ಕವಿತೆಯಲ್ಲಿ ಎಲ್ಲರಿಗೂ ಸುಲಭವಾಗಿ ಮನದಟ್ಟಾಗುವಂತೆ ಬರೆದಿದ್ದಾರೆ. ಅವರ ಪ್ರಕಾರ ‘ಜನ ಮೆಚ್ಚುವ ವಸ್ತು ಈ ಜಗತ್ತಿನಲ್ಲಿಯೇ ಇಲ್ಲ. ಬೇಸಿಗೆಯಲ್ಲಿ ಸೆಖೆಗೆ ಬೈದರೆ ಚಳಿಗಾಲದಲ್ಲಿ ಕೇಳಿಬರುವ ಸೊಲ್ಲು. ಮನುಷ್ಯ ಒಳ್ಳೆಯವನಾದರೆ ಕೈಲಾಗದ ದರಿದ್ರ. ಸ್ವಲ್ಪು ಖಡಕ್ ಆಸಾಮಿಯಾ? ದುಷ್ಟತನದ ಆರೋಪ. ಹಣ ಬಳಸಿದೆಯಾ ದುಂದುಗಾರ. ಕೂಡಿಟ್ಟೆಯಾ ಜಿಪುಣ. ಮಾತನಾಡಿದರೆ ವಾಚಾಳಿ, ಬಾಯಿಬಡುಕ ಮಾತು ಕಟಿಮೆಯಿದ್ದು ಗಂಭಿರ ಸ್ವಭಾವವಾಗಿದ್ದರೆ ಸೊಕ್ಕಿನ ಮೂಟೆ ಎಲ್ಲದರಲ್ಲಿಯೂ ಹುರುಪಿನಿಂದ ನೀವಾಗಿಯೇ ಮುಂದುವರೆದು ತೊಡಗಿಕೊಂಡಿರೋ ಅಧಿಕ ಪ್ರಸಂಗಿ ಯಾರಾದರೂ ಏನಾದರೂ ಹೇಳಲಿ ಎಂದು ಕಾದರೆ ಕೈಲಾಗದ ಸೋಬೇರಿ…
ಈ ಕವಿತೆ ನಮ್ಮ ಕನ್ನಡಶಾಲೆಯಲ್ಲಿ ನಮಗೆ ಪಾಠವಾಗಿತ್ತು. ಅದಕ್ಕೆ ಅರವತ್ತಕ್ಕೂ ಮಿಕ್ಕಿ ವರ್ಷಗಳಾಗಿವೆ. ಇಂದಿಗೂ ಪ್ರಸ್ತುತವೇ ಇಂದಿಗೂ ಮಂದಿಗೆ ಹೆಸರಿಡುವ ಬೇರೆಯವರ ಖಾಸಗಿ ಬದುಕಿನಲ್ಲಿ ಮೂಗು ತೂರಿಸುವ ಚಾಳಿ ಹೋಗಿಲ್ಲ. ಪ್ರಮಾಣ, ರೀತಿ, ಕಾಲ ಸ್ವಲ್ಪು ಬದಲಾಗಿರಬಹುದು ಅಷ್ಟೇ… ಆದರೂ ಯಾರ ಬಗ್ಗೆಯಾದರೂ ಏನಾದರೂ ಒಂದು ಅಂದ ಮೇಲೆಯೇ ಉಂಡನ್ನ ಪಚನವಾಗುವದು ಎನ್ನುವಷ್ಟರ ಮಟ್ಟಿಗೆ ಸರ್ವ ವಿದಿತ. ಸಾರ್ವಕಾಲಿಕ.
ಈಗಿನ ಕಾಲದಲ್ಲಿ ಇದರ ವ್ಯಾಪ್ತಿ, ಸ್ವರೂಪ, ವ್ಯಕ್ತ ಪಡಿಸುವ ರೀತಿ ಬದಲಾಗಿರಬಹುದು. ನೇರವಾಗಿ ಇರದೇ ಫೇಸಬುಕ್ ಗಳಲ್ಲಿ ಅಭಿಪ್ರಾಯಗಳ/ ಅನಿಸಿಕೆಗಳ ರೂಪಗಳಲ್ಲಿ ಬರಬಹುದು. ಇಬ್ಬರು ವ್ಯಕ್ತಿಗಳು ಎಂದಾಗ ಎರಡು ಭಿನ್ನ ವ್ಯಕ್ತಿತ್ವಗಳು ಇರಲೇಬೇಕು. ಭಿನ್ನತೆಯೇ ಬದುಕಿನ ಸೌಂದರ್ಯ.ಎಲ್ಲ ಏಕರೂಪವಾಗಿದ್ದರೆ ಏಕತಾನದೇ ಕಾಡದೇ ಬಿಟ್ಟಿತೇ? ವೈವಿಧ್ಯತೆಯೇ ಬದುಕಿನ ಸಾರ ವಿಶೇಷ. ಉತ್ತಮವಾದುದನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಬೇಡವಾದುದನ್ನು ದೂರವಿಟ್ಟು ಸ್ವಂತಕ್ಕೆ ನೆಮ್ಮದಿಯ ಬದುಕು ಪಡೆಯುವದೇ ಜೀವನ.

Leave a Reply