ಮಧ್ಯರಾತ್ರಿ ಸೂರ್ಯನ ಕಂಡೆ

ಮಧ್ಯರಾತ್ರಿ ಸೂರ್ಯನ ಕಂಡೆ!

ಗೋಧೂಳಿ ಮುಸ್ಸಂಜೆಯ ಮಂದಕಾಂತಿಯ ಪ್ರಭೆಯನ್ನು ದಿನವಿಡೀ ದಣಿದ ನಮ್ಮ ದೇಹ ಮನಸ್ಸುಗಳಿಗಿತ್ತು ನಕ್ಕು ಒಂದು ಬೈ ಹೇಳಿ, ದಿಗಂತದ ಅಂಚಿನಲ್ಲಿ ಮರೆಯಾಗುವ ಸೂರ್ಯ ನಮಗೆ ಮರಳಿ ಮುಖದೋರುವ ಸಮಯ ಬಹುಶ: ಮಾರನೆಯ ಬೆಳಗಿನ ಆರು ಅಥವಾ ಅದರ ಹಿಂಚೆ ಮುಂಚೆ. ಅದುವರೆಗೆ ನಿಶೆ, ರಾತ್ರಿ ಮತ್ತು ನಿದ್ದೆ ಇವು ನಮ್ಮ ಸಂಗಾತಿಗಳು. ಆದರೆ ಜಗತ್ತಿನಲ್ಲಿ ಸಂಜೆಯಾದೊಡನೆ ಮುಳುಗಿ ಹೋಗಲು ‘ಒಲ್ಲೆ’ನೆನ್ನುವ ಸೂರ್ಯನಿರುವ ಜಾಗಗಳೂ ಉಂಟು. ರಾತ್ರಿಯ ಹನ್ನೆರಡು ಗಂಟೆ ಮೀರಿ ಹೋದರೂ, ತನ್ನ ಅನುದಿನದ ಅಸ್ತಂಗತೋನ್ಮುಖ ದಿನಚರಿಯನ್ನು ಅನಿರ್ದಿಷ್ಟವಾಗಿ ಮುಂದೂಡಿ, ಝಗಮಗಿಸಿ ಕಾಣುಗರ ಕಣ್ಮನಗಳಿಗೆ ಹಿಗ್ಗಿನ ಬುಗ್ಗೆಗಳೇಳಿಸಿ, ಬೆರಗಿನ ನೋಟ, ಕೌತುಕ, ವಿಸ್ಮಯಗಳ ಮೋಡಿಯಿತ್ತು ಕುಳಿತ ಸ್ಥಳದಿಂದ ಕದಲಲಾಗದಂತೆ ಕಟ್ಟಿ ಹಾಕುವ ಭಾಸ್ಕರನ ಉರಿಚೆಂಡಿನ ಉಪಸ್ಥಿತಿ ಉತ್ತರ ಭೂ ಗೋಳಾರ್ಧದ ಹಲವೆಡೆ ಉಂಟು. ಹೌದು, ಅವನು ಹೀಗೆ ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ,ರಶಿಯ,ನಾರ್ವೆ, ಕೆನಡಾ, ಸ್ವೀಡನ್ ಫಿನ್ಲೆಂಡ್, ಮತ್ತು ಐಸ್ಲೆಂಡ್ ಈ ದೇಶಗಳಲ್ಲಿ. ಇಂಥ ‘ಮಧ್ಯರಾತ್ರಿಯ ಸೂರ್ಯ’ ನನ್ನ ಕಣ್ಣಿಗೆ ಬಿದ್ದದ್ದು ಫಿನ್ಲೆಂಡ್ ನಲ್ಲಿ. ಈ ನಿಸರ್ಗವೈಚಿತ್ರ್ಯದ ಭೌಗೋಲಿಕ ಕಾರಣಗಳನ್ನು ನಾವು ಹೀಗೆ
ದಾಖಲಿಸಬಹುದು.
ಈ ಎಲ್ಲ ನಾಡುಗಳು ಉತ್ತರ ಧ್ರುವಕ್ಕೆ ಬಲು ಹತ್ತಿರದವಾಗಿವೆ. ಅಕ್ಷಾಂಶ ರೇಖಾಂಶಗಳ ಪರಿಧಿಯಲ್ಲಿ (ಫಿನ್ಲೆಂಡ್ ಗೆ ಸಂಬಂಧಿಸಿದಂತೆ) ಅಂದಾಜು 60 – 34 ‘ ಡಿಗ್ರಿಗಳಷ್ಟು, ನಮ್ಮ ಭೂಮಿ ತನ್ನ ಅಕ್ಷಕ್ಕೆ 23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧ್ರುವದಲ್ಲಿ ಸುಮಾರು ಜೂನ್ ಜುಲೈಗಳಲ್ಲಿ ಮತ್ತು ದಕ್ಷಿಣ ಧ್ರುವದಲ್ಲಿ ಡಿಸೆಂಬರ್ ಮತ್ತು ಅದರ ಹಿಂದು ಮುಂದಿನ ಹಲವು ತಿಂಗಳ ಸಮಯಗಳಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಗಳ ವರೆಗೂ ಕ್ಷಿತಿಜದಲ್ಲಿ ಪ್ರಜ್ವಲಿಸುತ್ತಲೇ ಇರುತ್ತಾನೆ. ಧ್ರುವ ಪ್ರದೇಶದಿಂದ ಆಯಾ ದೇಶ ಎಷ್ಟು ದೂರವಿದೆ, ಯಾವ ಅಕ್ಷಾಂಶ/ರೇಖಾಂಶಗಳ ಮೇಲಿದೆ ಎನ್ನುವುದು ಸೂರ್ಯನು ಹುಟ್ಟುವ, ಬೆಳಗುತ್ತಲೇ ಇರುವ ಮತ್ತು‌ ಅಲ್ಲಿ ರಾತ್ರಿ ಕಾಣಿಸಿಕೊಳ್ಳುವ ಸಮಯವನ್ನು ನಿರ್ಧರಿಸುತ್ತದೆ.
‘ಯೊಹಾನುಸ್’ ಎಂಬುದು ಫಿನ್ನಿಷ್ ಜನ ಬೇಸಿಗೆಯಲ್ಲಿ ಬಲು ಕಾತರದಿಂದ ಕಾಯುತ್ತಿರುವ ನಿಸರ್ಗ ಪರ್ವ. ಇದು ಮಧ್ಯರಾತ್ರಿ ಪ್ರಜ್ವಲಿಸುವ ಸೂರ್ಯನನ್ನು ಕಣ್ತುಂಬಿಕೊಳ್ಳುವ ದಿನವೂ ಹೌದು. ನಾವಿರುವ ಕುವೋಪಿಯೋ ನಗರದಲ್ಲಿ ಒಂದಿಡೀ ವಾರ ಸೂರ್ಯಾಸ್ತಮಾನ ಆಗುವ ಮಾತೇ ಇರಲಿಲ್ಲ. ಅನಂತರವೂ ದಿನದ ಇಪ್ಪತ್ತು ಇಪ್ಪತ್ತೆರಡು ಗಂಟೆಗಳ ಕಾಲ ಬೆಳಕು, ಒಂದೆರಡು ಗಂಟೆಯ ಮಬ್ಬು ಮಸಕು ಅಷ್ಟೇ. ಮತ್ತೆ ಬಲುಬೇಗ ಆಕಾಶದಲ್ಲಿ ಸೂರ್ಯನ ಉಪಸ್ಥಿತಿ. ಇಲ್ಲಿ ಈ ದಿನಗಳಲ್ಲಿ ರಾತ್ರಿಯನ್ನು ಕತ್ತಲಾಗಿಸಿಕೊಳ್ಳಬೇಕೆಂದರೆ ಕಿಟಕಿಗಳಿಗೆಲ್ಲ ದಟ್ಟ ಗಾಢ ವರ್ಣದ ಪರದೆಗಳನ್ನು ಹಾಕಿ ಮುಚ್ಚುವುದೊಂದೇ ದಾರಿ.
ಇಲ್ಲಿ ‘ಮಿಡ್ ಸಮ್ಮರ್ ಡೇ’ ಅಥವಾ ಮಧ್ಯರಾತ್ರಿಯಲ್ಲಿ ಸೂರ್ಯ ಬೆಳುಗುವುದನ್ನು ಹಬ್ಬವಾಗಿಸಿಕೊಂಡ ದಿನ ಯೋಹಾನುಸ್ ಜೂನ್ ತಿಂಗಳ 21 ಅಥವಾ 23 ರ ಸುಮಾರಿಗೆ ಬಂದಿಳಿಯುತ್ತೆ. ಪ್ರತಿ ಸೆಪ್ಟೆಂಬರ್, ಅಕ್ಟೊಬರ್ ನಲ್ಲಿ ಶುರುವಾಗುವ ಮೈ ಕೊರೆಯುವ ಚಳಿ, ಅದನ್ನು ಹಿಂಬಾಲಿಸಿ ಇಡೀ ನಾಡನ್ನೇ ಆವರಿಸುತ್ತಾ ಆರೆಂಟಡಿಯಷ್ಟು ಎತ್ತರಕ್ಕೆ ದಟ್ಟ ಬಿಳಿ ಹಿಮವನ್ನು ಹರಡುತ್ತದೆ. ತಾಪಮಾನ ಶೂನ್ಯದಿಂದ ಮೂವತ್ತು ನಲವತ್ತು ಡಿಗ್ರಿಗಳಷ್ಟು ಕೆಳಗಿಳಿದು, ಇಲ್ಲಿನ ಸಮಸ್ತವನ್ನೂ ಎಪ್ರಿಲ್- ಮೇ ಬರುವವರೆಗೆ ಶ್ವೇತವರ್ಣದ ಹೊದಿಕೆಯಲ್ಲಿ ಮುಚ್ಚಿ ಹಾಕಿಬಿಡುವ ಇನ್ನೂ ಕಠಿಣತಮ ಚಳಿಗಾಲಕ್ಕೆ ಬೇಸತ್ತ ಇಲ್ಲಿನವರು ‘ದಯಮಾಡಿಸು ಹಿಮವೇ ಇನ್ನು ಹೊರಟು ಹೋಗು’ ಅನ್ನುತ್ತ ಬಿಳ್ಕೊಟ್ಟು ಸುತ್ತಮುತ್ತಲ ಅರಣ್ಯವಿಡೀ ಅದೇ ಆಗ ಚಿಗುರಿದ ಚೆಂದೆಲರಿನ ಹಸಿರನ್ನು ಆಹ್ವಾನಿಸುತ್ತ ಅದರ ಸಂಕೇತವಾಗಿ ಅಚ್ಚುಕಟ್ಟಾಗಿ ಒಂದು ‘ಬಾನ್ ಫೈರ್’ ಬೆಂಕಿಯುರಿಸಿ ನದಿ ಯಾ ಸರೋವರದ ದಂಡೆಯಲ್ಲಿ ಮಧ್ಯರಾತ್ರಿಯಲ್ಲಿ ತನ್ನ ಪ್ರಭೆಯುಕ್ಕಿಸಿ ಹೊಳೆದು ನಗುವ ಸೂರ್ಯನ ಸೃಷ್ಟಿಯಾಟವನ್ನು ಬಗೆಬಗೆ ರಸದೂಟ, ಪೇಯ, ಪಾನೀಯಗಳೊಂದಿಗೆ ಸವಿಯುತ್ತಾರೆ.

ಅಲ್ಲಿನ ಪರಿಚಿತರೊಬ್ಬರು ನೀಡಿದ್ದ ಇಂಥದೊಂದು ಪಾರ್ಟಿಯ ಆಹ್ವಾನವನ್ನು ತಪ್ಪಿಸಿಕೊಳ್ಳಲಾಗಲಿಲ್ಲ ನಮಗೆ.

ಒಂದು ಸರೋವರದ ದಂಡೆಯಲ್ಲಿದ್ದ ಅವರ ಸಮ್ಮರ್ ಕಾಟೇಜಿನಲ್ಲಿ ನಡೆಸಿದ ಈ ‘ಯೊಹಾನುಸ್’ ಬೇಸಿಗೆ ಕೂಟಕ್ಕೆ ಹೋಗಿದ್ದೆವು. ಹಾಗೆ ಗುಲ್ಲು ಗಲಾಟೆ, ಸದ್ದು ಗದ್ದಲಗಳ ಗೌಜಿಯನ್ನು ಅಷ್ಟಾಗಿ ಬಯಸದ ಫಿನ್ನಿಷ್ ಜನರ ಈ ಶಾಂತಿಪ್ರಿಯ ನಮೂನೆ ಯಾರಿಗೂ ಇಷ್ಟವಾಗಬಹುದಾದ ಗುಣವೇ. ಇವರೇನೇ ಮಾಡಿದರೂ ಅದರಲ್ಲೊಂದು ಶಿಸ್ತು, ವ್ಯವಸ್ಥೆಯ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಸಂಜೆಯ ಆರಕ್ಕೆ ಶುರುವಿಟ್ಟುಕೊಂಡ ಸ್ನೇಹಕೂಟಕ್ಕೆ ನಡು ನಡುವೆ ವಿಶಿಷ್ಟ ಫಿನ್ನಿಷ್- ಅಂದ ಹಾಗೆ ಇವರು ತಮ್ಮ ನಾಡನ್ನು ಸುವೊಮಿ ಎಂದು ಕರೆಯುತ್ತಾರೆ. ಇವರ ಸಂಸ್ಕೃತಿ ಸುವೊಮಿ…ಭಾಷೆ ಎಷ್ಟೇ ವೈವಿಧ್ಯಪೂರಿತ ಪ್ರಾದೇಶಿಕ ಸೊಗಡಿನದ್ದಾಗಿರಲಿ ಅದು ಸುವೊಮಿಯೇ.

ತಮ್ಮ ಪದ್ಧತಿಯ ಅಡುಗೆ ಮಾಡಿದ್ದರೂ ಶಾಕಾಹಾರಿಗಳಾದ ನಮಗೆಂದೇ ವಿಶೇಷ ಮುತುವರ್ಜಿಯಲ್ಲಿ ಮಾಡಿಟ್ಟಿದ್ದ ಸುವೊಮಿ ಸಿಹಿಗಳಿದ್ದುವು, ‘ಲೆಪ್ಪ’ ಎಂಬ ಅವರ ವಿಶಿಷ್ಟ ಬ್ರೆಡ್ಡು, ಹಣ್ಣುಹಂಪಲು, ಬಗೆ ಬಗೆ ಚಿಪ್ಸ್, ಹಣ್ಣಿನ ಕೇಕ್ ಗಳು, ನಾನಾ ಬಗೆಯ ಜೂಸುಗಳು, ಬಾಸ್ಮತಿಯಕ್ಕಿಯ ಅನ್ನ ಮೊಸರು! ಒಟ್ಟಿನಲ್ಲಿ ಭೂರಿ ಭೋಜನ.
ಊಟದ ನಂತರ ‘ಕ್ರೂಕೆಟ್’ ಅನ್ನುವ ಆಟವಾಡಿದರು. ಇದರಲ್ಲಿ ನೆಲದಲ್ಲಿ ನೆಟ್ಟ ಹಲವೆಂಟು ತಂತಿಯ ಪುಟ್ಟ ಗೋಲ್ ಪಾಸ್ ಗಳಲ್ಲಿ ಚೆಂಡನ್ನು ಬ್ಯಾಟ್ ನಿಂದ ಉರುಳಿಸಿ ದಾಟಿಸಬೇಕು. ಎಲ್ಲಾ ಗೋಲ್ ಮೊದಲು ಪಾಸ್ ಮಾಡಿದವರು ವಿಜೇತರು!
ರಾತ್ರಿ ಮೋಡಗಳೇನಾದರೂ ಆವರಿಸಿದ್ದರೆ ಅವು ಅತ್ತ ಚಲಿಸಿ ಸೂರ್ಯ ಬೆಳಗುವುದನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ಅಲ್ಲೇ ದಂಡೆಯಲ್ಲಿ ಪೇರಿಸಿದ ಕಟ್ಟಿಗೆಯ ರಾಶಿ, ಒಣಗಿದೆಲೆ ಪುರುಳೆಗಳ ಸಂಗ್ರಹಕ್ಕೆ ಬೆಂಕಿ ಕೊಟ್ಟು ಜ್ವಾಲೆ ನಭೋ ಮುಖವಾಗಿ ಹೊಮ್ಮುತ್ತಿರುವಂತೆ ಸಾಂಪ್ರದಾಯಿಕ ನಮೂನೆಯ ಹಾಡುಗಳನ್ನು ಹಾಡಿದರು..ಅಲ್ಲೇ ಸುತ್ತುತ್ತ ಚಪ್ಪಾಳೆ ತಟ್ಟಿ ಬೆಂಕಿಯ ಕಾಂತಿಯಲ್ಲಿ ಹೊಳೆದ ಅವರ ಮುಖಗಳಲ್ಲಿ- ಅಂದು ಬೆಳಗಿನಿಂದ ಗಾಳಿ ಬೀಸುತ್ತ ತುಂಬಿಕೊಂಡಿದ್ದ ಒಂದಷ್ಟು ಚಳಿ ಅತ್ತ ಸರಿದು- ಬೇಸಿಗೆಯ ಸುಖದಾಯಕ ಬಿಸಿಲಿನ ಖುಷಿ ತುಂಬಿತು.

ಯಾಕೆ ಇವರು ಈ ನಿಸರ್ಗದ ಹಬ್ಬವನ್ನಾಚರಿಸುತ್ತಾರೆ? ಇದಕ್ಕೇನು ಹಿನ್ನೆಲೆ? ಅನ್ನುವ ನನ್ನ ಪ್ರಶ್ನೆಯನ್ನವರ ಎದುರಿಟ್ಟೆ. ಉತ್ತರಗಳು ಸ್ವಾರಸ್ಯಕರ. ಫಿನ್ಲೆಂಡ್ ನ ಎರಡು ಮೂರಾಂಶ ಭಾಗವಿಡೀ ಅರಣ್ಯವಿದೆ. ಅದುವೇ ಅವರ ಮುಖ್ಯ ಸಂಪನ್ಮೂಲ. ಅರಣ್ಯವನ್ನವರು ತಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತ ಅದು ಹಾಳಾಗದೆ ಉಳಿದು ಬೆಳೆದು ನಿಲ್ಲುವ ವ್ಯವಸ್ಥೆಯಲ್ಲಿ ಸದಾ ನಿರತರು.ನಮ್ಮಲ್ಲಿನ ಹಾಗೆ ಇಲ್ಲಿ ಎಲ್ಲೆಂದರಲ್ಲಿ, ಯಾರೇ ಆಗಲಿ ಮನಸ್ವೀ ಕಾಡು ಕಡಿದು ಹಾಕುವಂತಿಲ್ಲ. ಇಲ್ಲಿನ ಇನ್ನೊಂದು ವಿಶೇಷ ಅಂದರೆ ನಮ್ಮಲ್ಲಿನಂತೆ ಹೊಲ, ಗದ್ದೆ ಆಸ್ತಿಯಾಗದೆ ಇಂತಿಷ್ಟು ಎಕರೆ ಅರಣ್ಯವೇ ಇವರ ಮನೆತನದ ಪ್ರಾಪರ್ಟಿ ಆಗಿರುತ್ತದೆ. ಕೃಷಿ ಭೂಮಿಯೇ ಕಡಿಮೆ. pete land(ಪೀಟ್ ಲ್ಯಾಂಡ್) ಎನ್ನಿಸಿಕೊಳ್ಳುವ ಅತಿ ಫಲವತ್ತು ನೆಲ ಇದು, ಏನೇ ಬೆಳೆದರೂ ಸಮೃದ್ಧವಾಗಿ ಬೆಳೆಯುತ್ತೆ. (ಆದರೆ ಇಲ್ಲಿ ಕೆಲವೇ ಬಗೆಯ ಬೆಳೆ ತೆಗೆಯುವುದು ಮಾತ್ರ ಸಾಧ್ಯ. ಕಾರಣ ವರ್ಷದ ಆರೇಳು ತಿಂಗಳು ಈ ನಾಡು ಹಿಮದಲ್ಲಿ ಅಡಗಿಬಿಟ್ಟಿರುತ್ತದೆ). ಕೆಲವೇ ಬಗೆಯ ತರಕಾರಿಗಳು, ಮುಸುಕಿನ ಜೋಳ, ಗೋಧಿ, ಬಾರ್ಲಿ, ಓಟ್ಸ್ ಮತ್ತು ರಾಯ್, ರೇಪ್ ಸೀಡ್ ಹೀಗೆ ಕೆಲವನ್ನು ಬೆಳೆಯುತ್ತಾರೆ. ಬೇಸಿಗೆಯ ಕೆಲವು ತಿಂಗಳೇ ಒಂದಿಷ್ಟು ಕೃಷಿ.

ಹಿಂದಿನಿಂದಲೂ ರೈತಾಪಿ ಜನ ಹೊಲದ ಕಸ, ಕಳೆ, ಹೊತ್ತು, ಮರದ ಕಡಿದುರುಳಿದ ಕಟ್ಟಿಗೆಯ ಶೇಷಗಳನ್ನು ನಡುಬೇಸಿಗೆಯ ಒಂದು ದಿನ ರಾತ್ರಿ ಒಂದೆಡೆ ಒಟ್ಟಿ ಬೆಂಕಿ ಹಚ್ಚಿ ಅದೇ ಹೊತ್ತಿಗೆ ಸೂರ್ಯನೂ ಈ ಬೇಸಿಗೆಯಿಡೀ ಚೆನ್ನಾಗಿ ಬಿಸಿಲು ಕೊಡಲಿ, ನಮ್ಮ ಬೆಳೆ ಹೆಚ್ಚಲಿ ಎನ್ನುವ ಭಾವದ ಹಾಡುಗಳನ್ನು ಹಾಡುತ್ತ ನಡೆಸಿಕೊಂಡು ಬಂದಿರುವುದೇ ಈ ಯೋಹಾನುಸ್. ಹಿರಿಯರ ಹಬ್ಬಗಳೂ ಚಂದ, ಅವುಗಳ ಹಿಂದಿನ ಉದ್ದೇಶವೂ ಹಿರಿದು.

ಸರೋವರದ ದಂಡೆಯಲ್ಲಿ ಉರಿಸಿದ ಬಾನ್ ಫೈರ್ ಬೆಂಕಿ ಆಕಾಶ ಮುಟ್ಟುತ್ತಿದ್ದಂತೆ ಮಧ್ಯರಾತ್ರಿಯೂ ಆಗಿಯೇಬಿಟ್ಟು ನೀರಿನಂಚಿನಲ್ಲಿ ಝಗ ಮಗ ಹೊಳೆಯಲಾರಂಭಿಸಿದ ಸೂರ್ಯನ ವರ್ಣ ವೈಚಿತ್ರ್ಯ ವೈಭವ ಕಣ್ಮನಗಳನ್ನು ತುಂಬತೊಡಗಿತು.. ಸೃಷ್ಟಿ ಸ್ಥಿತಿಗಳ ಸಮೀಕರಣದ ಯೋಗ ಭಾಗವನ್ನು ತನ್ನ ಪ್ರಖರತೆಯ ಉನ್ಮೀಲನದಲ್ಲಿ ತುಂಬಿ ಚೆಲ್ಲುತ್ತಿದ್ದ ಸವಿತೃವಿನ ಆ ಕ್ಷಣದ ಅಸ್ತಿತ್ವ ನಮ್ಮ ಚಿತ್ತದಲ್ಲಿ ನೆಲೆಗೊಳ್ಳತೊಡಗಿತು… ರಾತ್ರಿಯ ಹನ್ನೆರಡನ್ನು ಗಡಿಯಾರ ಮೊಬೈಲುಗಳು ತೋರಿಸುತ್ತಿದ್ದಂತೆ ನಿರಂತರವಾಗಿ ಪೋಟೋ ವೀಡಿಯೊ ಹುರಿದುಂಬಿ ಕೆಲಸಕ್ಕಿಳಿದುವು. (ಈ ಫೋಟೋದಲ್ಲಿನ ಸಮಯ ಗಮನಿಸಿ)
ಸಾಲುತ್ತಿಲ್ಲವೇ..ಸಾಲುತ್ತಿಲ್ಲವೇ ಎಂದು ಮನಸ್ಸು ಚಡಪಡಿಸುತ್ತಲೇ ಕ್ಷಣಕ್ಷಣಕ್ಕೆ ಕದಲುವ ಸೂರ್ಯನ ಚೆಂಡಿನ ಪಥಚಲನವನ್ನು ಒಳಗೊಂಡು ದೃಷ್ಟಿಗೆ ಸೂಚನೆಯಿತ್ತಿತ್ತು.. ಹಗಲಿನ ಉಗ್ರತೆಯಿಲ್ಲ, ನೋಡಲಾಗದು ಎನ್ನುವ ಕಣ್ಣಿನ ಕೊರಗಿಲ್ಲ… ಶಾಂತ ಪ್ರಶಾಂತ ಆದರೂ ಝಗಝಗ!
ಅವನೆಂದರೆ ಅವನಲ್ಲವೇ ನಮ್ಮ ಈ ಭೂಮಿಯ ಜೀವದುಸಿರು? ಅವನಿದ್ದರೆ ನಮ್ಮ ದೇಹಪ್ರಾಣಗಳ ಅಸ್ತಿತ್ವಕ್ಕೆ ಅರ್ಥ, ಇಲ್ಲದಿದ್ದರಿನ್ನೇನು?!

ನಾವೆಲ್ಲ ದೋಣಿಯನ್ನೇರಿ ಸರೋವರದ ಸುತ್ತು ಹೊಡೆದು ಅವನ ಮೇಲಿನ ನೋಟವನ್ನತ್ತಿತ್ತ ಚಲಿಸದೆ ಕಳೆದ ಒಂದು ತಾಸು ಅರೆಗಳಿಗೆಯಂತೆ ಭಾಸವಾಗಿತ್ತು.
ಹಿಡಿ ಹಿಡಿ ಅವನನ್ನು ಮನದುಂಬಿಕೊಂಡು ಅಲ್ಲಿಂದ ಹೊರಟು ಬಂದು ನಾವು ಮನೆ ಸೇರಿದಾಗ ರಾತ್ರಿಯ ಒಂದೂವರೆ!
ಬಾನು ನಸುಬೆಳ್ಳಗೆ ಬೆಳಗಿಕೊಂಡೇ ಇತ್ತು! ಸೂರ್ಯ ಆಕಾಶದಲ್ಲೇ ನಗುತ್ತಿದ್ದ!
ನಾನು ಹಾಡುತ್ತಿದ್ದೆ,
“ತೇಜೋ ನಿಧಿ ಲೋಹ ಗೋಳ.. ಭಾಸ್ಕರ ಹೇ ಗಗನರಾಜ.. ದಿವ್ಯ ತುಝಾ ತೇಜಾನೇ ಝಗಮಗಲೇ ಗಗನ ಆಜ…”
ವಸಂತರಾವ್ ದೇಶಪಾಂಡೆಯವರ ಕಂಚಿನ ಕಂಠದ ಸೂರ್ಯಸ್ತುತಿಗಾನ.
(ತೇಜ:ಪುಂಜ ಲೋಹದ ಚೆಂಡಿನಂಥ ಭಾಸ್ಕರನೇ ನಿನ್ನ ದಿವ್ಯ ಹೊಳಪಿನಿಂದ ಆಗಸವಿಡೀ ಝಗಮಗಿಸುತ್ತಿದೆ!)
ಹೌದಲ್ಲವೇ!?

ಜಯಶ್ರೀ ದೇಶಪಾಂಡೆ

Leave a Reply