ಕಿರಾನಾ ಘರಾಣೆಯ ಮೋಡಿಗಾರ್ತಿ ಮಾಲಾಬಾಯಿ

ಕಿರಾನಾ ಘರಾಣೆಯ ಮೋಡಿಗಾರ್ತಿ ಮಾಲಾಬಾಯಿ

                 ಈ ಸೃಷ್ಟಿಯಲ್ಲಿ ಸಂಗೀತದ ಮೋಡಿಗೆ ಮನಸೋಲದ ಜೀವಿಯೇ ಇಲ್ಲ. ಸ್ವರಗಳ ಮಾಧುರ್ಯಕ್ಕೆ ಸಸ್ಯಗಳೂ ತಲೆದೂಗಿ ಸಮೃದ್ಧ ಫಲ ನೀಡುತ್ತವೆ ಎಂಬುದನ್ನು ವಿಜ್ಞಾನವೂ ಸಾರಿ ಹೇಳುತ್ತಿದೆ. ಸಂಗೀತ ವಿಜ್ಞಾನವೂ ಹೌದು, ಅಧ್ಯಾತ್ಮವೂ ಹೌದು, ಅವೆರಡರ ಪವಿತ್ರ ಸಂಗಮವೂ ಹೌದು. ಅಮ್ಮನ ಮಡಿಲಿನಲ್ಲಿ ಹಸುಗೂಸು ಜೋಗುಳ ಆಲಿಸಿ ನಲಿಯುವುದು ಎಷ್ಟು ಸತ್ಯವೋ, ಅಷ್ಟೇ ನಂದಗೋಕುಲದಲ್ಲಿ ಕೃಷ್ಣನ ವೇಣು ನಾದಕ್ಕೆ ಹಸುಗಳು ತಲೆದೂಗಿದ್ದು. ಇದನ್ನೆಲ್ಲ ಗಮನಿಸಿದಾಗ ಸಂಗೀತವಿಲ್ಲದ ಪ್ರಪಂಚವನ್ನು ಊಹಿಸಿಕೊಳ್ಳುವುದೇ ಕಷ್ಟ ಎನ್ನುತ್ತಾರೆ ಬಾಗಲಕೋಟೆಯ ಸಂಗೀತಗಾರ್ತಿ ಮಾಲಾಬಾಯಿ ಬೀಳಗಿ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾನಾ ಘರಾಣೆಯಲ್ಲಿ ಭರ್ತಿ ನಾಲ್ಕು ದಶಕಗಳವರೆಗೆ ಪಕ್ವವಾದ ಇವರ ಧ್ವನಿ ಹಳಬರಿಗೆಲ್ಲ ಚಿರಪರಿಚಿತ. ಇದೇ ತಿಂಗಳು (ಡಿಸೆಂಬರ್ 5) ಅರವತ್ತೆರಡು ವಸಂತಗಳನ್ನು ಪೂರೈಸುವ ಇವರು ಹಿಂದಿ, ಮರಾಠಿ, ಕನ್ನಡ ಚಿತ್ರಗಳಲ್ಲಿ ನಟಿ, ಗಾಯಕಿಯಾಗಿ ದೇಶಾದ್ಯಂತ ಹೆಸರು ಮಾಡಿದ ಅಮೀರಬಾಯಿ ಕರ್ನಾಟಕಿ ಮೊಮ್ಮಗಳೂ ಹೌದು. ಆಲಾಪಗಳ ಆನಂದದಲ್ಲಿ ವಿಶ್ರಾಂತ ಬದುಕು ನಡೆಸುತ್ತಿರುವ ಇವರ ಸಂಗೀತಮಯ ದಿನಗಳ ಇನ್ನಷ್ಟು ಮಗ್ಗಲುಗಳನ್ನು ತಿಳಿದುಕೊಳ್ಳುವ ಪ್ರಯತ್ನವೇ ಈ ಬರಹ.

*ಸಂಗೀತದಲ್ಲಿ ನಿಮಗೆ ಆಸಕ್ತಿ ಬೆಳೆಯಲು ಕಾರಣ ?
ಚಿತ್ರರಂಗದಲ್ಲಿ ನಟನೆ ಹಾಗೂ ಹಾಡಿನ ಮೂಲಕ ಹೆಸರು ಮಾಡಿದ ಅಮೀರಬಾಯಿ ಕರ್ನಾಟಕಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿದ ಗೌರಾಜಾನ್ ಬೀಳಗಿ, ಪ್ಯಾರಾಬಾಯಿ ಬೀಳಗಿ ಇವರು ನಮ್ಮ ಅಜ್ಜಿಯರು. ಮನೆಯಲ್ಲಿ ಸಂಗೀತ ಶಾರದೆ ಆರಾಧನೆ ನಿರಂತರ ನಡೆಯುತ್ತಿತ್ತು. ಇದರಿಂದ ಅಕ್ಷರ ಕಲಿಕೆ ಆರಂಭಿಸುವ ಮೊದಲೇ ನನ್ನಲ್ಲಿ ಮೊಳಕೆಯೊಡೆದದ್ದು ಸಂಗೀತ ಕಲಿಯಬೇಕೆಂಬ ಬಯಕೆ. ಆದರೆ ಮನೆಯಲ್ಲಿ ನನ್ನನ್ನು ಭರತನಾಟ್ಯ ಕಲಿಯುವಂತೆ ಹುರಿದುಂಬಿಸಿದರು. ಆದರೆ ಕೆಲವು ದಿನಗಳ ನಂತರ ಸಂಗೀತವನ್ನೇ ಕಲಿಯುವ ಹಠ ಹಿಡಿದಾಗ ಬಯಸಿದ ಹಳಿ ಮೇಲೆ ಬದುಕಿನ ರೈಲು ಹೊರಟಿತು.

*ಸ್ವರಯಾತ್ರೆ ಆರಂಭಿಸಿದಾಗ ಎದುರಾದ ಅಡೆತಡೆಗಳು ?
ಬಾಗಲಕೋಟೆಯ ರಂಗಾಚಾರ್ ಕಾಖಂಡಕಿ ಅವರ ಬಳಿ ನನ್ನ ಸಂಗೀತದ ಸರಿಗಮಪ ಆರಂಭವಾಯಿತು. ಆರನೇ ತರಗತಿವರೆಗೆ ಶಾಲೆಯನ್ನೂ ಓದಿದ ನಾನು ಹೆಚ್ಚಿನ ರಾಗಗಳನ್ನು ಕಲಿಯಬೇಕೆಂದು ಬಯಸಿದಾಗ ನಮ್ಮ ಗುರುಗಳು ಶ್ರೀನಿವಾಸಾಚಾರ್ ಕಾಖಂಡಕಿ (ಅವರ ಸಹೋದರ) ಅವರ ಬಳಿ ತೆರಳುವಂತೆ ಸೂಚಿಸಿದರು. ಅವರು ರಾಯಚೂರಿನಲ್ಲಿ ಇದ್ದರು. ಆಗ ನಮ್ಮ ತಂದೆ ತೀರಿದ್ದರಿಂದ ತಾಯಿ ರೋಶನಬಿ ನನ್ನನ್ನು ಅಲ್ಲಿಗೆ ಕರೆದೊಯ್ದರು. ಶ್ರೀನಿವಾಸಾಚಾರ್ ಮನೆ ಬಳಿ ಒಂದು ಖೋಲಿ ಬಾಡಿಗೆ ಹಿಡಿದು ಕಲಿಕೆ ಆರಂಭಿಸಿದಾಗ ನಮಗೆ ನೆರವಾದವರು ಸ್ವಾಮೀಜಿ (ಮಲ್ಲಯ್ಯಾಸ್ವಾಮಿ ಹಿರೇಮಠ). ಇವರು ನಮ್ಮ ಕುಟುಂಬಕ್ಕೆ ತುಂಬಾ ಬೇಕಾದವರು. ಊರಲ್ಲಿದ್ದ ನಮ್ಮ ಕೆಲವು ಮನೆಗಳನ್ನು ಬಾಡಿಗೆ ನೀಡಿ ಅದರಿಂದ ಬರುವ ಹಣವನ್ನು ತಂದು ನಮಗೆ ನೀಡುತ್ತಿದ್ದರು. ಅಷ್ಟರಲ್ಲೇ ಬದುಕು, ಸಂಗೀತ ಕಲಿಕೆ ಎಲ್ಲವೂ ನಡೆಯುತ್ತಿತ್ತು.

*ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನಿಮ್ಮ ಹೆಸರು ಮಾಲಾಬಾಯಿ ಹೇಗೆ ?
ಅದೊಂದು ದೊಡ್ಡ ಕಥೆ. ನನಗೆ ತಾಯಿ ಇಟ್ಟ ಹೆಸರು ಮಾಲನಬಿ. ಆದರೆ ನಮ್ಮ ಗುರುಗಳು ನನ್ನನ್ನು ಮಾಲಾಬಾಯಿ ಎಂದೇ ಕೂಗುತ್ತಿದ್ದರು. ಇದರಿಂದ ಮುಂದೆ ನಾನು ಸಂಗೀತ ಕಛೇರಿ ನೀಡಿದ ದೇಶದ ಎಲ್ಲ ಭಾಗದ ಜನರೂ ನನ್ನನ್ನು ಮಾಲಾಬಾಯಿ ಎಂದು ಗುರುಗಳಿಟ್ಟ ಹೆಸರಿನಿಂದಲೇ ಗುರುತಿಸಿದರು. ಗುರುಗಳು ನನ್ನನ್ನು ಹೀಗೆ ಕರೆದಿದ್ದರಿಂದ ನನ್ನ ಹೆಸರು ಅದೆಷ್ಟೋ ಕಡೆ ಸೌಹಾರ್ದಮಯ ವಾತಾವರಣ ಮೂಡಿಸಲು ಕಾರಣವಾಯಿತು. ಸುಪ್ರಸಿದ್ಧ ದೇವಾಲಯಗಳಲ್ಲಿ ಕಛೇರಿ ನಡೆಸುವ ಭಾಗ್ಯವೂ ದೊರಕಿದೆ. ಸಂಗೀತ ನನ್ನ ಬದುಕು ರೂಪಿಸುವ ಜತೆಗೆ ಸೌಹಾರ್ದದಿಂದ ಬದುಕುವ ಪಾಠವನ್ನೂ ಕಲಿಸಿತು.

*ನಿಮಗೆ ತುಂಬಾ ಇಷ್ಟವಾದ ರಾಗ ಯಾವುದು ? ಏಕೆ ?
ಮಾರವಾ ಮತ್ತು ಪೂರಿಯಾ ಧನಶ್ರೀ. ಈ ರಾಗಗಳನ್ನು ಕಲಿಯುವಾಗ ಗುರುಗಳ ನಿರೀಕ್ಷೆಯಂತೆ ನನಗೆ ಹಾಡಲು, ತಾನ್ ಹಾಕಲು ಸಾಧ್ಯವಾಗಲಿಲ್ಲ. `ಪಿಯಾ ಮೋರೆ ಆ..’ ಎಂಬ ಚೀಜನ್ನು ಗುರುಗಳು ಹಲವು ದಿನ ಕಲಿಸಿ ಗುರುಗಳು ನನ್ನನ್ನು ತಿದ್ದಿದರು. ಆದರೂ ಒಂದು ದಿನ ಗುರುಗಳು ನೀರು ತುಂಬುತ್ತಿದ್ದಾಗ ಈ ರಾಗ ಹಾಡಲು ಮುಂದಾಗಿ ಸ್ವರದಲ್ಲಿ ಸ್ವಲ್ಪ ಏರುಪೇರಾದಾಗ ಗುರುಗಳು ಕೈಯಲ್ಲಿದ್ದ ಖಾಲಿ ಕೊಡವನ್ನು ನನ್ನತ್ತ ಬೀಸಿದರು. ಅದು ನನ್ನ ತಲೆಗೆ ತಾಗಿ ನೋವಾಯಿತು. ಮರುದಿನ ಬಂದು ಆ ರಾಗವನ್ನು ಸ್ವಲ್ಪವೂ ತಪ್ಪದೆ ಹಾಡಿದೆ. ಆಗ ಗುರುಗಳ ಕಣ್ಣುಗಳು ಸಂತಸದಿಂದ ತೇವವಾದವು. ಅವರು ಹಿಂದಿನ ದಿನ ತೋರಿದ ಆಕ್ರೋಶದ ಹಿಂದೆ ನಾನು ಆ ರಾಗದಲ್ಲಿ ಪರಿಣತಿ ಹೊಂದಲಿ ಎಂಬ ಕಳಕಳಿ ಇತ್ತು. ಇಂದಿಗೂ ಆ ರಾಗ ಗುನಗುನಿಸುವಾಗ ಗುರುಗಳು ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತದೆ.

*ನೀವು ನೀಡಿದ ಸಂಗೀತ ಕಛೇರಿಗಳ ಅನುಭವ ?
ಆ ಕಾಲದಲ್ಲಿ ಗುರುಗಳು ಆದೇಶಿಸುವವರೆಗೆ ಕಛೇರಿ ನೀಡುವಂತಿರಲಿಲ್ಲ. ಆದರೂ ಅವರ ಆಜ್ಞೆಯಂತೆ ಧಾರವಾಡ ಆಕಾಶವಾಣಿಯಲ್ಲಿ ಮೊದಲ ಬಾರಿಗೆ ಒಂದೆರಡು ಗೀತೆಗಳಿಗೆ ಧ್ವನಿಯಾದಾಗ ನನಗಾಗ ಹದಿನೇಳರ ಯೌವನ. ಮುಂದೆ ನನ್ನ ಧ್ವನಿ ಕೇಳಿದ ಗಂಗೂಬಾಯಿ ಹಾನಗಲ್ ನನ್ನನ್ನು ಕುಂದಗೋಳದ ವೇದಿಕೆಗೆ ಪರಿಚಯಿಸಿದರು. ಅಲ್ಲಿ ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ, ಶ್ರೀಪತಿ ಪಾಡಿಗಾರ್, ರಾಮದತ್ತ ಪರ್ವತೀಕರ, ನಾದಯೋಗಿ ವೀಣಾನಾಥ ಮಹಾರಾಜರು, ಬದರಿನಾಥ ಅವರಂಥ ದಿಗ್ಗಜರು ನನ್ನ ಧ್ವನಿಗೆ `ವಾಹ್ ಕ್ಯಾ ಬಾತ್ ಹೈ’ ಎಂದದ್ದು ನನ್ನ ಪಾಲಿಗೆ ಆಶೀರ್ವಾದವಾಯಿತು. ಡಾ.ಬಾಲಮುರಳಿಕೃಷ್ಣ ಅವರ ಎದುರು ಹಾಡುವ ಅವಕಾಶವೂ ನನಗೆ ದೊರೆತಿದೆ. ಮುಂಬೈನಲ್ಲಿ ನನ್ನ ಗಾಯನ ಕೇಳಿದ ಪ್ರಭಾ ಅತ್ರೆ ಅವರು ನನಗೆ ಮತ್ತೊಂದು ಕಡೆ ಹಾಡಲು ಅವಕಾಶ ಕೊಡಿಸಿ ಪ್ರೋತ್ಸಾಹಿಸಿದ್ದು ಅವರ ದೊಡ್ಡಗುಣ.

*ಅಂದಹಾಗೆ ನಿಮ್ಮನ್ನರಸಿ ಬಂದ ಪ್ರಶಸ್ತಿಗಳು ?

1986ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಸಂಗೀತ ವಿಶಾರದ, 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತರು ಮುಂಬೈಯಲ್ಲಿ ನೀಡಿದ ಸ್ವರ್ಣ ಪದಕ, ಬೆಂಗಳೂರಿನ ಸಂಗೀತ ವಿದ್ವಾನ್ ಸಿ.ಹೊನ್ನಪ್ಪ ಭಾಗವತರ ನೀಡಿದ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ದೊರೆತಿವೆ. ಎಲ್ಲಕಿಂತ ಹೆಚ್ಚಾಗಿ ಕೇಳುಗರ ಸಂತೃಪ್ತಿ ನನ್ನ ಪಾಲಿಗೆ ದೊಡ್ಡ ಪ್ರಶಸ್ತಿ.

*ಸಂಗೀತ ಬದುಕಿನಲ್ಲಿ ಎಂದೂ ಮರೆಯದ ಅನುಭವ ?

ನಾನು ಗರ್ಭಿಣಿಯಾಗಿದ್ದಾಗ ಒಂದು ಕಾರ್ಯಕ್ರಮ ನೀಡುವುದಾಗಿ ಒಪ್ಪಿಕೊಂಡಿದ್ದೆ. ನಿಗದಿತ ದಿನಾಂಕಕ್ಕಿಂತ ಹನ್ನೆರಡು ದಿನ ಮೊದಲು ನಾನು ಮಗುವಿಗೆ ಜನ್ಮ ನೀಡಿದಾಗ ಮನದಲ್ಲಿ ಗೊಂದಲ ಶುರುವಾಯಿತು. ಕೊನೆಗೆ ಕಾರ್ ಬಾಡಿಗೆ ಪಡೆದು ಕಂದಮ್ಮನೊಂದಿಗೆ ತೆರಳಿ ತಲೆಗೆ ಸ್ಕಾರ್ಫ್ ಸುತ್ತಿಕೊಂಡು ಹಾಡಿದಾಗ ನಾನು ಹದಿಮೂರು ದಿನಗಳ ಬಾಣಂತಿಯಾಗಿದ್ದೆ. ತಾಯಿಯಾಗಿ ಮಗುವನ್ನು ನೋಡಿಕೊಳ್ಳಬೇಕು ಎಂಬ ಕರ್ತವ್ಯ ಒಂದುಕಡೆ, ನನ್ನ ತಾಯಿಯಾದ ಸಂಗೀತಕ್ಕೂ ಗೌರವ ನೀಡುವುದನ್ನು ಮರೆಯಬಾರದು ಎಂಬ ಮನೋಭಾವ ಇನ್ನೊಂದು ಕಡೆ. ಈ ದ್ವಂದ್ವಗಳ ನಡುವೆ ಎರಡನ್ನೂ ನಿಭಾಯಿಸಿದ ಸಂತಸ ನನಗಿದೆ. ಆದರೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾಗ ಲಂಡನ್ ನಲ್ಲಿ ಹಾಡುವ ಅವಕಾಶ ದೊರೆಯಿತು. ಪಾಸ್ ಪೋರ್ಟ್ ಕೂಡ ಆಗಿತ್ತು. ವೈದ್ಯರ ಸಲಹೆ ಮೇರೆಗೆ ಅದನ್ನು ತಿರಸ್ಕರಿಸಿದೆ.

ಯುವ ಸಂಗೀತಗಾರರಿಗೆ ನಿಮ್ಮ ಸಲಹೆ ?

ಸಂತೋಷ ಮತ್ತು ಸಂಗೀತ ಎರಡೂ `ಸಂ’ ಎಂಬ ಅಕ್ಷರದಿಂದ ಆರಂಭವಾಗುವ ಪದಗಳು. ಸಂಗೀತದಿಂದ ಸ್ವತಃ ಹಾಡುವವರಿಗೆ ಹಾಗೂ ಕೇಳುಗರಿಗೆ ಸಂತೋಷವಾಗಬೇಕು. ಅದಕ್ಕೆ ಕಠಿಣ ರಿಯಾಜ್ ಅಗತ್ಯ. ಸ್ಟಾರ್ ಆಗಬೇಕೆಂದು ಸಂಗೀತ ಕ್ಷೇತ್ರಕ್ಕೆ ಕಾಲಿಡುವ ಬದಲು ಸಂಗೀತ ಸರಸ್ವತಿ ಆರಾಧಕನಾಗುವೆ ಎಂಬ ಮನೋಭಾವದಿಂದ ಅಭ್ಯಾಸ ಆರಂಭಿಸಬೇಕು. ಕಲಿಕೆ ತಪಸ್ಸಾಗಬೇಕು. ಆ ತಪಸ್ಸು ವರ ನೀಡಬೇಕು. ಆ ವರ ಕೇಳುಗರ ಆನಂದ ಬಿಟ್ಟು ಬೇರೇನು ಆಗಬಾರದು. ಆಗ ಮಾತ್ರ ಕಲಾವಿದ ಎತ್ತರಕ್ಕೆ ಬೆಳೆಯಲು ಸಾಧ್ಯ.
—————-
                   -ಸಚಿನ್ ಕೆ.ದೇಸಾಯಿ, ಬಾಗಲಕೋಟ

1 Comment

  1. ಸಚಿನ್.ಕೆ.ದೇಸಾಯಿಯವರಿಗೆ ವಂದನೆಗಳು
    ಕಿರಾನಾ ಘರಾನಾದ ಈ ಸಂಗೀತಗಾರ್ತಿಯವರ ಬಗೆಗೆ ನನಗೆ ತಿಳೀದಿರಲೆ ಇಲ್ಲ ನೀವು ಮಾಡಿದ ಅವರ ಸಂದರ್ಶನ ಸಂತಸ ನೀಡಿತು.

Leave a Reply