ನಮ್ಮ ಮನೆ ಪೂರಾ ನಮ್ಮದಾಗಲಿ…

ನಮ್ಮ ಮನೆ ಪೂರಾ ನಮ್ಮದಾಗಲಿ…
ಬಹಳ ದಿನಗಳ ಹಿಂದೆ, ಮರಾಠಿ ಮೂಲದ ಕನ್ನಡ ಅನುವಾದ ,’ ನಮ್ಮ ಮನೆ ನಮ್ಮದೆಷ್ಟು ‘ ಲೇಖನವನ್ನು ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ್ದೆ. ಅಷ್ಟೊಂದು ಆಸೆಪಟ್ಟು, ದುಡಿದ ಹಣವನ್ನೆಲ್ಲ ವ್ಯಯಿಸಿ, ಕಟ್ಟಿಸಿದ ಮನೆಯಲ್ಲಿ ಒಬ್ಬ ಮನುಷ್ಯ ಎಷ್ಟು ಕಾಲ ಇರುತ್ತಾನೆ ಎಂಬುದರ ವಿಶ್ಲೇಷಣೆಯಿತ್ತು ಅದರಲ್ಲಿ. ಒಬ್ಬ ಮನುಷ್ಯ ಪೂರ್ಣವಾಗಿ ನೂರು ವರ್ಷ ಬದುಕಿದರೂ ಬದುಕಿನ ಹೋರಾಟ, ಬದುಕಿಗಾಗಿ ಸಂಪಾದನೆ, ಅನ್ನುತ್ತ ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರರ ವರೆಗೆ ಅಂದರೆ ಮೂರರ ಒಂದು ಭಾಗ (ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಂಟು ಗಂಟೆಗಳು) ಮನೆಯಿಂದ ಹೊರಗೆ ಇರುತ್ತಾನೆ.ಆಗ ಅವನ ಬದುಕಿನ ಮೂವತ್ಮೂರು ವರ್ಷಗಳು ಲೆಕ್ಕ ಕಳೆದುಕೊಳ್ಳುತ್ತವೆ. ರಾತ್ರಿ ಹತ್ತರಿಂದ ಬೆಳಗಿನ ಆರು ಗಂಟೆಯ ವರೆಗೆ ನಿದ್ರೆಯ ಸಮಯ…ನಿದ್ರೆಯೆಂದರೆ ತಾತ್ಕಾಲಿಕ ಸಾವು ಇದ್ದ ಹಾಗೆ…ಸಾವು ದೀರ್ಘ ನಿದ್ರೆ…ಅದಕ್ಕೇ ವರಕವಿ ಬೇಂದ್ರೆಯವರು :ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ” ಎಂದಿರಬೇಕು…ಆ ಸುಷುಪ್ತಿ ಸ್ಥಿತಿಯಲ್ಲಿ ಐಷಾರಾಮೀ ಮಹಲಿನಲ್ಲಿ ಮಲಗುವವನಿಗೂ, ಫುಟ್ಪಾತ ಮೇಲೆ ಮಲಗಿರುವವನಿಗೂ ವ್ಯತ್ಯಾಸವಿರುವದಿಲ್ಲ. ಹೊರಗಿನ ಅರಿವೇ ಇರುವದಿಲ್ಲ. ಅಲ್ಲಿಗೆ ಮತ್ತೆ ಮೂರರಲ್ಲಿ ಒಂದರಷ್ಟು ಅಂದರೆ ಮೂವತ್ಮೂರು ವರ್ಷಗಳು ನಮ್ಮವಲ್ಲ. ಇನ್ನು ಉಳಿದ ಮೂರರಲ್ಲಿ ಕೊನೆಯ ಭಾಗದಲ್ಲಿಯೂ ಎಲ್ಲ ಗಳಿಗೆಗಳೂ ನಮ್ಮವೇ ಆಗಿ ಮನೆಯಲ್ಲಿ ಕಾಲುಚಾಚಿ ನಿಶ್ಚಿಂತೆಯಾಗಿ ,ಮನೆಯವರೊಂದಿಗೆ ಕಳೆದ ದಿನಗಳಾಗಿ ನಮಗೆ ದಕ್ಕುತ್ತವೆ ಎಂಬ ಮಾತು ಸುಳ್ಳು. ನಮ್ಮ ಸ್ವಂತದ,ಇತರರ,ಅನಿವಾರ್ಯ ಕೆಲಸ , ಕಾರ್ಯಗಳಿಗಾಗಿಯೂ ಮನೆಯಿಂದ ದೂರವಿರುವ ಪ್ರಸಂಗಗಳು ಬರದಿರುತ್ತವೆಯೇ? ಅದರಲ್ಲಿ ಅಷ್ಟಿಷ್ಟು ಕಳೆದರೆ ನಮ್ಮವೆಂದು ಉಳಿದ ವರ್ಷಗಳೆಷ್ಟೆಂದು ನೋಡಿದರೆ ಬೆಚ್ಚಿ ಬೀಳಬಹುದು.
ಎಷ್ಟೋ ಮನೆಗಳಲ್ಲಿ ಮಾಲಿಕರಿಗಿಂತ ಆಳುಕಾಳುಗಳು, ಅವರು ಸಾಕಿದ ನಾಯಿ ,ಬೆಕ್ಕುಗಳೇ ಹೆಚ್ಚು ಆರಾಮವಾಗಿ ಇರುವದು ಕಾಣ ಬರುತ್ತದೆ ಎಂಬುದು ಲೇಖನದ ಉದ್ದೇಶವಾಗಿತ್ತು…
ಇದು ಸಧ್ಯದ soft ware ಜನಕ್ಕಂತೂ ನಿತ್ಯದ ಗೋಳು. ಮನೆ ಆಫೀಸಿಗಿಂತ ಬೆಂಗಳೂರಿನ ರಸ್ತೆಗಳ ಸಿಗ್ನಲ್ಗಳಲ್ಲೇ ಬದುಕು ಕಳೆದು ಹೋಗಿಬಿಡುತ್ತದೆ ಎಂದೆನಿಸಿದ್ದು ಕನಿಷ್ಟ ನೂರು ಸಲ.
‌‌‌ ವಿಶ್ವದಾದ್ಯಂತ ಕೊರೋನಾ ವೈರಸ್ ಎಬ್ಬಿಸಿದ ಬಿರುಗಾಳಿ ಏನೆಲ್ಲ ಅನಿಷ್ಟಗಳಿಗೆ ಜನರನ್ನು ಗುರಿಯಾಗಿಸಿದೆ. ನಿಜ. ಆದರೆ ಎಲ್ಲೋ ಕಳೆದುಕೊಂಡಿದ್ದ ಮನೆಯ ,ಮನೆಜನರೊಂದಿಗಿನ ಸಹವಾಸದ ಸುಖವನ್ನು ಅಪರೂಪಕ್ಕೆ ಮರಳಿಸಿದೆ. Every thing happens with a reason ಎಂಬುದೊಂದು ಮಾತಿದೆ. ನಾವು ಚಿಕ್ಕವರಿದ್ದಾಗ ಯಾವುದೋ ಹನುಮಪ್ಪನ ಮೂರ್ತಿಯೊಂದು ಬೆಳೆಯುತ್ತ ಹೋಯಿತು.
ಅದನ್ನು ತಡೆಯಲು ನೆತ್ತಿಗೆ ಹಾರಿ ಬಡೆಯಬೇಕಾಯಿತು ಎಂದು ಹೇಳುತ್ತಿದ್ದುದನ್ನು ಕೇಳಿದ್ದು ನೆನಪಿದೆ. ಅದು ಸುಳ್ಳೋ,ನಿಜವೋ ಜಿಜ್ಞಾಸೆ ಬಿಟ್ಟುಬಿಡೋಣ.ಆಧುನಿಕ ಮನುಷ್ಯನು ವಿಜ್ಞಾನದ ಸಹಾಯದಿಂದ ಪ್ರಕೃತಿಯ
ಮೇಲೆ ನಡೆಸಿದ, ಈಗಲೂ ನಡೆಸುತ್ತಿರುವ ಅತಿಯಾದ ಅತ್ಯಾಚಾರಕ್ಕೊಂದು ಪ್ರತಿಭಟನೆ ಈಗೀಗ ಅನೇಕ ರೂಪಗಳಲ್ಲಿ ವ್ಯಕ್ತವಾಗುತ್ತಿದೆ, ಹಲವಾರು ಪ್ರಕ್ರತಿ ವಿಕೋಪಗಳ ಮುಖಾಂತರ… ಕೊರೋನಾ ಅಂಥದೇ ಒಂದು ನಿಸರ್ಗದ ಪ್ರತಿರೋಧ…ಕಣ್ಣಿಗೆ ಕಾಣದ ವೈರಸ್ಸೊಂದು ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕೈಬೆರಳುಗಳಲ್ಲಿ ತನಗೆ ಬೇಕಾದಂತೆ ಕುಣಿಸುತ್ತಿದೆ. ಮನೆಬಿಟ್ಟು ಅಲ್ಲಾಡದಂತೆ ನಿಯಂತ್ರಿಸುತ್ತಿದೆ. ಸ್ವಲ್ಪು ಅವಿಧೇಯರಾದರೂ ಅಂಥವರ ಬಲಿ‌ ನಿರ್ದಯವಾಗಿ ನಡೆಯುತ್ತಿದೆ.
‌‌ಗೃಹಬಂಧನಕ್ಕೆ ಬೇಸತ್ತು ಮನೆಯಲ್ಲಿ ಕೈದು ಆಗಿ ಒದ್ದಾಡುತ್ತಿರುವವರು ಈ ಲೇಖನದ ಪೂರ್ವ ಭಾಗ ಓದಿ ನೋಡಿ ಮತ್ತೊಮ್ಮೆ. ಕಷ್ಟಪಟ್ಟು,ಸಾಲಮಾಡಿ,ಅನೇಕ ಕನಸುಗಳ ಹೊತ್ತು ಕಟ್ಟಿಸಿದ ಮನೆಗಳಲ್ಲಿ ಕಾಲುಚಾಚಿ ಹೊತ್ತು ಕಳೆವ ಸದವಕಾಶ ಮತ್ತೆ ಮತ್ತೆ ನಿಮಗೆ ಬರಲಾರದು ಎಂಬುದನ್ನು ಮನಗಂಡು, ಅಲಭ್ಯ ಲಾಭ ಎಂದು ತಿಳಿದು Enjoy ಸಿ..ನಮ್ಮ ಮನೆ ನಮ್ಮದೆಷ್ಟು ಅನ್ನದೇ,ನಮ್ಮ ಮನೆ ಪೂರಾ ನಮ್ಮದೇ.ಎನ್ನಿ..
Leave a Reply