ನೋಡು ಬಾ ನಮ್ಮೂರ…

ನೋಡು ಬಾ ನಮ್ಮೂರ…

  ಧಾರವಾಡವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರವು ಈ ಜಿಲ್ಲೆಯ ಕೇಂದ್ರಸ್ಥಳ. ಇಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು.ಕರ್ನಾಟ ಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ,
     ಇಲ್ಲಿ ನಾನು ಹೇಳಹೊರಟಿರುವುದು ಧಾರವಾಡದ ಬಗ್ಗೆ.  ಇದು ಅತಿ ತಂಪು ವಾತಾವರಣ ಹೊಂದಿರುವ ನಗರ, ಮಲೆನಾಡ ಸೆರಗೆಂದೇ ಪ್ರಸಿದ್ಧವಾದ ಇಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐಐಟಿ ಮುಂತಾದವುಗಳ ಆಗರ ಈ ನಮ್ಮ ಧಾರವಾಡ.       ಧಾರವಾಡ’ದ ಮೂಲ ಶಬ್ದ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಷ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ಇದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ.
       ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು ಎಂತಲೂ ಹೇಳುತ್ತಾರೆ.  ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನವು ಮಸುಕಾಗಿದೆ.  ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು.ಇನ್ನು ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೂ ಬಂದಿರಬಹುದು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು. ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ, ಳ, ಬ್ಬೆ, ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ.
      ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ಲಿನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು ಬನವಾಸಿಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.
       ಅನಂತರದ ಇತಿಹಾಸದ ಪ್ರಕಾರ ಕ್ರಿ.ಶ. ಏಳನೆಯ ಶತಮಾನದಲ್ಲಿ ಚಾಲುಕ್ಯರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮನಕಿಲ್ಲೆ- ಆ ಕಾಲದಲ್ಲಿಯೇ ಧಾರವಾಡಕ್ಕೆ ನಸರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡವು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆಯ ಪರವಾಗಿ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತನ್ನು ಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.     
    ಧಾರವಾಡದ ಭೌಗೋಲಿಕ ಮಾಹಿತಿಗೆ ಅನುಸಾರವಾಗಿ ಇದು 8 ಕಂದಾಯ ತಾಲೂಕುಗಳನ್ನು ಹೊಂದಿದೆ.
      1. ಧಾರವಾಡ ತಾಲೂಕು 2. ಅಳ್ನಾವರ ತಾಲೂಕು 3. ಹುಬ್ಬಳ್ಳಿ ಗ್ರಾಮೀಣ ತಾಲೂಕು 4. ಹುಬ್ಬಳ್ಳಿ ಶಹರ ತಾಲೂಕು 5. ಕುಂದಗೋಳ ತಾಲೂಕು 6. ನವಲಗುಂದ ತಾಲೂಕು 7. ಅಣ್ಣಿಗೇರಿ ತಾಲೂಕು 8. ಕಲಘಟಗಿ ತಾಲೂಕು.
ಧಾರವಾಡದ ಪ್ರಮುಖ ವ್ಯಕ್ತಿಗಳು
      ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳಲ್ಲಿ  ಲಿಂ. ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳೂ ಇದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.
ಧಾರವಾಡದ ಸುಪ್ರಸಿದ್ಧ ಸಂಗೀತಗಾರರು
       ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ. ಅವರಲ್ಲಿ ಪಂಡಿತ್ ಭೀಮಸೇನ ಜೋಶಿಯವರು, ಪಂಡಿತ್ ಮಲ್ಲಿಕಾರ್ಜುನ ಮನಸೂರರು, ಪಂಡಿತ್ ಬಸವರಾಜ ರಾಜಗುರು, ಸಂಗೀತಗಾತಿ ಗಂಗೂಬಾಯಿ ಹಾನಗಲ್ಲರವರು ಕುಮಾರಗಂಧರ್ವರು, ಇತ್ತೀಚಿನ ಸಂಗೀತಾ ಕಟ್ಟಿ, ಕೈವಲ್ಯ ಗುರವರು. ಮಾಧವ ಗುಡಿಯವರು, ಪ್ರಸಿದ್ಧ ಕೊಳಲು ವಾದಕ ಪ್ರವೀಣ ಗೋಡಖಿಂಡಿಯವರು, ಗೀತಾ ಜಾವಡೇಕರರು  ಇತ್ಯಾದಿ ಮಹಾನ್ ಸಾಧಕರು.
ಸುಪ್ರಸಿದ್ಧ ಸಾಹಿತಿಗಳು:
     ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಪಟ್ಟಿಯು ಬಹಳ ದೊಡ್ಡದು. ಧಾರವಾಡದ ಯಾವುದೇ ಬೀದಿಯಲ್ಲಿ ನಿಂತು ಕಲ್ಲೆಸೆದರೂ ಅದು ಹೋಗಿ ಒಬ್ಬ ಸಾಹಿತಿಯ ಮನೆಯ ಮಾಳಿಗೆಗೇ ಬೀಳುತ್ತದೆ ಎಂಬ ಮಾತೊಂದಿದೆ. ಅದು ನಿಜವೇ!
     ನೆಲದ ಮಣ್ಣಿನಲ್ಲಿ ಹುಲುಸಾದ ಬೆಳೆ ಬರುವ ಸಂಗತಿ ನಮಗೆ ಗೊತ್ತಿದ್ದ ಸಂಗತಿ. ಆದರೆ ಧಾರವಾಡದ ಮಣ್ಣಿನಲ್ಲಿ ಸಾಹಿತ್ಯದ ಹುಲೂಸಾದ ಬೆಳೆಯೇ ಇದೆ.
    ಆನಂದಕಂದರು ಇಲ್ಲಿಯ ಕೆರಿಕೆಳಗಿನ ಓಣಿಯವರು. ಇವರ ನಿಜ ನಾಮಧೇಯ ಬೆಟಗೇರಿ ಕೃಷ್ಣ ಶರ್ಮರು. ಜ್ಞಾನ ಪೀಠ ಪ್ರಶಸ್ತಿ ವಿಜೇತ ದ ರಾ ಬೇಂದ್ರೆಯವರು ನಮ್ಮ ಧಾರವಾಡದ ಸಾಧನಕೇರಿಯವರೇ. ಡಾ. ಆರ್ ಸಿ ಹಿರೇಮಠರವರು, ಎಮ್ ಎಸ್ ಸುಂಕಾಪುರರವರು, ಆಲೂರು ವೆಂಕಟರಾಯರು, ಉತ್ತಂಗಿ ಚೆನ್ನಪ್ಪನವರು, ಎಂ ಎಂ ಕಲಬುರ್ಗಿಯವರು, ಎನ್ ಕೆ ಕುಲಕರ್ಣಿ ಯವರು, ಬೃಹತ್ ಡಿಕ್ಶನರಿಗಳ ಕರ್ತೃ ಕಿಟ್ಟೆಲ್‍ರವರು, ಮತ್ತೊಬ್ಬ ಜ್ಞಾನ ಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್‍ರವರು, ಜಿ ಎಸ್ ಆಮೂರರವರು, ನಾಡೋಜ ಚೆನ್ನವೀರ ಕಣವಿಯವರು,ಪ್ರಸಿದ್ಧ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಇವರೆಲ್ಲ ಧಾರವಾಡದವರೇ. ಮಹಿಳಾ ಸಾಹಿತಿಗಳಲ್ಲಿ ಗೀತಾ ಕುಲಕರ್ಣಿಯವರು, ವೀಣಾ ಶಾಂತೇಶ್ವರರು, ಶಾಂತಾದೇವಿ ಮಾಳವಾಡರವರು, ಶಾಂತಾದೇವಿ ಕಣವಿಯವರು, ಶಾಂತಾ ಇಮ್ರಾಪುರರು, ಮಾಲತಿ ಪಟ್ಟಣಶೆಟ್ಟಿಯವರು. ಹೇಮಾ ಪಟ್ಟಣಶೆಟ್ಟಿಯವರು, ಸುನಂದಾ ಬೆಳಗಾಂವಕರರು ಕೂಡ ಧಾರವಾಡದವರೇ.
     ಸುಪ್ರಸಿದ್ಧ ಶಿಕ್ಷಣ ತಜ್ಞರಾದ ಪ್ರೊ. ಡಿ ಸಿ ಪಾವಟೆಯವರೂ ಕೂಡ ಧಾರವಾಡದವರೇ.
ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.
     ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ಸುರೇಶ ಹೆಬ್ಳೀಕರ್, ಲೀನಾ ಚಂದಾವರ್ಕರರು.   ‘ಕುಂಚ ಬ್ರಹ್ಮ’ ಹಾಲಭಾವಿಯವರು ಕೂಡ ಪ್ರಸಿದ್ಧ ಕಲಾವಿದರು.
      ಎಮ್.ಎಸ್.ಕೊಟ್ರೇಶ್ (ಕನ್ನಡ ರಂಗಭೂಮಿ), ಶ್ರೀಮತಿ. ನಾಗರತ್ನಮ್ಮ  ಹೊಸಮನಿ, ಯಶವಂತ ಸರದೇಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ) ಹಾಗೂ ಅವರ ಶ್ರೀಮತಿ ಮಾಲತಿ ಸರದೇಶಪಾಂಡೆ, ‍ಶ್ರೀಕೃಷ್ಣ ಸಂಪಗಾಂವಕರ (ಮುಂಬಯಿ ಕನ್ನಡ ರಂಗಭೂಮಿ), ಬಸವರಾಜ ಮನಸೂರ ಇವರು ಕೂಡ ಸುಪ್ರಸಿದ್ಧರು.
      ಧಾರವಾಡದ ಜನಸಂಖ್ಯೆಯು ೨೦೧೧ರ ಜನಗಣತಿಯಂತೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.
ಚಾರಿತ್ರಿಕ ಘಟನೆಗಳು
ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳಲ್ಲಿ ಥ್ಯಾಕರೆಯು  ಕಿತ್ತೂರು ಚೆನ್ನಮ್ಮನಿಂದ ಹತನಾಗಿ ಧಾರವಾಡದ ಬೆಳಗಾವಿ ರಸ್ತೆಯಲ್ಲಿ ಸಮಾಧಿಗೊಂಡದ್ದು ಸೇರಿದೆ. ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ್ ಆಗಿ, ಮೂವರು ಖಿಲಾಫತ್ ಚಳುವಳಿಗಾರರು ಮರಣ ಹೊಂದಿದ್ದರು. ಲೋಕಮಾನ್ಯ ಟಿಳಕರು 1914 ರಲ್ಲಿ ಸಾರ್ವಜನಿಕ ಭಾಷಣ ಮಾಡಿದ ಊರಿದು.     
     ರಾಜಕೀಯದ ಬಗ್ಗೆ ಹೇಳುವುದಾದರೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ. ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ), ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ), ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಜಗದೀಶ ಶೆಟ್ಟರ್), ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು: ಪ್ರಸಾದ ಅಬ್ಬಯ್ಯ), ಕಲಘಟಗಿ (ಇಂದಿನ ಶಾಸಕರು: ಸಿ. ಎಂ. ನಿಂಬಣ್ಣವರ), ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ), ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ)-
ವಿಧಾನ ಪರಿಷತ್ತ ಸದಸ್ಯರು:
      ಬಸವರಾಜ ಹೊರಟ್ಟಿ (ಶಿಕ್ಷಕರ ಕ್ಷೇತ್ರ), ಶ್ರೀನಿವಾಸ ಮಾನೆ (ಸ್ಥಳಿಯ ಸಂಸ್ಠೆ), ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ. ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ.
     ಇಷ್ಟೆಲ್ಲಾ ಹೇಳಿ ನಮ್ಮ ಊರಿನ ಪೇಡಾದ ಬಗ್ಗೆ ಹೇಳದಿದ್ದರೆ ಹೇಗೆ?  ಕರ್ನಾಟಕ ರಾಜ್ಯದಲ್ಲಿಯಷ್ಟೇ ಏಕೆ, ಇದು ಇಡಿಯ ಭಾರತದಲ್ಲಿಯೇ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಧಾರವಾಡದಲ್ಲಿ  ಸಾಕಷ್ಟು ಪೇಡಾ ಉತ್ಪಾದನೆಯ ಘಟಕಗಳಿದ್ದರೂ ಪ್ರಥಮ ದರ್ಜೆಯ  ಪೇಡೆಯು ಠಾಕೂರ್ ಪೇಡೆ.   ಈ ಸಿಹಿಯು ಸುಮಾರು ೧೭೫ ವರ್ಷಗಳಷ್ಟು ಹಿಂದಿನಿಂದ ಬಳಕೆಗೆ ಬಂದಿದೆ. ಇದಕ್ಕೆ ಒಂದು ಸುದೀರ್ಘ ಇತಿಹಾಸವಿದೆ. ಬೇರೆ ಪೇಡಾಗಳಿಗೆ ಹೋಲಿಸಿದರೆ ಇದು ತೀರ ಭಿನ್ನ. ಆದರೆ ತನ್ನದೇ ಆದ ವಿಶಿಷ್ಠ ರುಚಿ ಮತ್ತು ಗುಣಕ್ಕೆ ಹೆಸರು ಗಳಿಸಿದೆ. ಶತಮಾನಗಳ ಹಿಂದೆ ಉತ್ತರ ಭಾರತದ ಲಖನೌ ನಗರದಿಂದ ವಲಸೆ ಬಂದ ಠಾಕೂರ್ ಪರಿವಾರವು ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ ‘ಪೇಡಾ’ ತಯಾರಿಕೆಯನ್ನು ಧಾರವಾಡದಲ್ಲೂ ಮುಂದುವರೆಸಿದರು. ಮೊದಲು ‘ಠಾಕೂರ ಫೇಡ’ ಎಂದು ಹೇಳಿ ಮಾರುತ್ತಿದ್ದ ಸಿಹಿತಿನಿಸು, ಕಾಲಕ್ರಮೇಣದಲ್ಲಿ ‘ಧಾರವಾಡ್ ಪೇಡ’ ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಅತ್ಯುತ್ತಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದು ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಲಯದಲ್ಲೂ ಹೆಸರುಗಳಿಸಿದೆ.  ಈ ಪೇಡೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Leave a Reply