ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ
– ಡಾ ವಿ ಬಿ ಆರತೀ
ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವಂತಿ ವಿತ್ತಸ್ಯ
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ
ಹಣವನ್ನು ಭೋಗಿಸಬೇಕು ಅಥವಾ ದಾನ ಮಾಡಬೇಕು, ಇಲ್ಲದಿದ್ದರೆ ಅದು ನಾಶವಾಗುತ್ತದೆ ಎನ್ನುತ್ತದೆ ಸುಭಾಷಿತ. ಭಗವದ್ಗೀತೆ ದಾನ ಮಾಡದೆ ಭೋಗಿಸುವುದನ್ನು ಪಾಪವೆಂದೇ ಖಂಡಿಸುತ್ತದೆ- ‘ಭುಂಜತೇ ತೇ ತ್ವಘಂ ಪಾಪಂ ಯೇ ಪಚಂತ್ಯಾತ್ಮಕಾರಣಾತ್’ (ಏನನ್ನೂ ಹಂಚಿಕೊಳ್ಳದೇ ತಾನೇ ಭೋಗಿಸುವವನು ಪಾಪವನ್ನೇ ತಿನ್ನುತ್ತಾನೆ).

ನಮ್ಮ ಧರ್ಮ ಸಂಸ್ಕೃತಿ ನಿತ್ಯಜೀವನದಲ್ಲಿ ದಾನಕ್ಕೆ ಅಷ್ಟೊಂದು ಮಹತ್ವ! ದಾನವೆಂದರೆ ಮತ್ತೊಬ್ಬರಿಗೆ ಏನನ್ನೋ ಕೊಟ್ಟೆ ಎನ್ನುವ ಹೆಚ್ಚುಗಾರಿಕೆಯಲ್ಲ. ಅದು ನಮ್ಮ ಆತ್ಮಸಂಸ್ಕರಣಕ್ಕೆ ಸಾಧನ, ಸಮಾಜಕ್ಕೂ ಒಳಿತು. ಧರ್ಮಸಿಂಧು ಹೇಳುತ್ತದೆ- ‘ಸ್ವಸ್ವತ್ವ ನಿವೃತ್ತಿ ಪೂರ್ವಕಂ ಪರಸ್ವತ್ವಾಪಾದದಂ ದಾನಂ’ (ತನ್ನ ಮಮಕಾರವನ್ನು ಗೆಲ್ಲಲು ಹಾಗೂ ಪರರಿಗೆ ಅನುಕೂಲ ಉಂಟುಮಾಡಲು ಮಾಡುವ ಕ್ರಿಯೆಯೇ ದಾನ). ದಾನ ಕೊಡುವವನಿಗೆ ಅಷ್ಟರಮಟ್ಟಿಗೆ ಸ್ವಾರ್ಥ ತಗ್ಗುತ್ತದೆ. ಹಾಗೆ ಕೊಡುವಾಗ ಸಮಾಜದಲ್ಲಿ ಸಹಮಾನವರ ಅಗತ್ಯ, ಕಷ್ಟಗಳೇನು ಎನ್ನುವುದೂ ಅರ್ಥವಾಗುತ್ತ ಹೋಗುತ್ತದೆ. ಇಂತಹ ಉದಾರ ಮನುಷ್ಯರು ಹೆಚ್ಚಿದಾಗ ಸಮಾಜದಲ್ಲಿ ದೀನ ದುರ್ಬಲರಿಗೆ ಸಹಾಯವೊದಗುತ್ತದೆ. ಕಳ್ಳಸುಳ್ಳರು ಕಡಿಮೆಯಾದಾರು ಎಂದು ತಾತ್ಪರ್ಯ.

ನಾವು ದಾನ ಮಾಡುವುದು ಏನನ್ನು? ಸ್ವಂತದ್ದೇನನ್ನೂ ಅಲ್ಲ, ಇಲ್ಲಿಯದೇ ದ್ರವ್ಯಗಳನ್ನು! ಪುರಂದರದಾಸರು ಹಾಡುತ್ತಾರೆ- ”ಕೆರೆಯ ನೀರನು ಕೆರೆಗೆ ಚೆಲ್ಲಿವರವ ಪಡೆದವರಂತೆ ಕಾಣಿರೋ, ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ.” ನಾವು ತಾಯ್ತಂದೆ ಗುರುಪರಂಪರೆ ಬಂಧುಮಿತ್ರರು ಪಂಚಭೂತಗಳು ಪಶುಪಕ್ಷಿಪ್ರಾಣಿಗಳು ಪರಿಚಿತರು ಅಪರಿಚಿತರಿಂದ ಅದೆಷ್ಟೊ ಉಪಕಾರಗಳನ್ನು ಪಡೆದೇ ಬೆಳೆಯುತ್ತೇವೆ. ಕೆಲವನ್ನು ಹಿಂದಿರುಗಿಸಬಹುದೇನೋ, ಆದರೆ ಹಲವನ್ನು ಹಿಂದಿರುಗಿಸಲಾಗದು. ಹೀಗಾಗಿ ನಾವು ಸದಾ ಋುಣಬದ್ಧರು. ದಾನವು ನಮ್ಮ ಋುಣವನ್ನು ಹಗುರವಾಗಿಸುವ ಸಾಧನ.
ಪಡೆದ ದಾನವನ್ನು ದಾನಿಗೇ ಯಾವುದೋ ರೂಪದಲ್ಲಿ ಪ್ರತ್ಯರ್ಪಿಸಬೇಕು. ಆಗದಿದ್ದಲ್ಲಿ ಅದೇ ದಾನವನ್ನು ಮತ್ತೊಬ್ಬ ಸತ್ಪಾತ್ರರಿಗೆ ನೀಡಬೇಕು. ಈ ದಾನನಿಷ್ಠೆಯು ನಮ್ಮ ಆರ್ಷ ಜೀವನದಲ್ಲಿ ತುಂಬಿ ತುಳುಕುತ್ತದೆ. ಹಾಗಾಗಿಯೇ, ನಮ್ಮಲ್ಲಿ ದಾನವಿಲ್ಲದ ಪೂಜೆಯಾಗಲಿ ಹಬ್ಬವಾಗಲಿ ವ್ರತವಾಗಲಿ ಇಲ್ಲವೇ ಇಲ್ಲ. ಗೃಹಸ್ಥನಂತೂ ಪ್ರತಿದಿನವೂ ಒಂದಿಷ್ಟಾದರೂ ದಾನ ಮಾಡದೆ ಉಣ್ಣುವಂತಿಲ್ಲ ಎಂದೇ ಶಾಸ್ತ್ರವಿಧಿ. ಹಬ್ಬ ಹರಿದಿನ, ಮದುವೆ ಮುಂಜಿ ಗೃಹಪ್ರವೇಶಗಳಲ್ಲಂತೂ ಬಂಧುಮಿತ್ರರು ನೆರೆಕೆರೆಯವರಿಗೆ ಕರೆಕರೆದು ಅನ್ನ ವಸ್ತ್ರ ದಕ್ಷಿಣೆಗಳನ್ನು ಕೊಡುತ್ತೇವೆ. ಸಂಪ್ರದಾಯದಲ್ಲಿ ಭೂದಾನ, ಕನಕದಾನ, ಗೋದಾನ, ವಸ್ತ್ರದಾನ, ಅನ್ನದಾನ, ತೈಲದಾನ, ತುಪ್ಪದ ದಾನ, ಎಳ್ಳಿನ ದಾನ, ಬೆಳ್ಳಿಯ ದಾನ ಹಾಗೂ ಧಾನ್ಯದಾನವೆಂಬ ಹತ್ತು ಮುಖ್ಯ ದ್ರವ್ಯಗಳ ದಾನಗಳಿವೆ. ಇದಲ್ಲದೆ ಔಷಧ, ವಿದ್ಯೆ, ಉದ್ಯೋಗ, ಅಭಯ, ಆಶ್ರಯದಾನಗಳನ್ನೂ, ಸಾಂತ್ವನ ಕೊಡುವುದನ್ನೂ, ನೈತಿಕ ಬೆಂಬಲ ನೀಡುವುದನ್ನೂ ಕೈಂಕರ್ಯ ಮಾಡುವುದನ್ನೂ ದಾನಗಳೆಂದೇ ಪರಿಗಣಿಸಲಾಗುತ್ತದೆ. ಹಿಂದೆ ರಾಜರೂ, ಜಮೀನ್ದಾರರೂ ಭೂದಾನ, ಕನಕ, ಗೋವುಗಳ ಅಪಾರ ದಾನ ನೀಡಿದ ದಾನಶಾಸನಗಳೂ ವೃತ್ತಾಂತಗಳು ಬೇಕಾದಷ್ಟು ಸಿಗುತ್ತವೆ.

ಆಹ್ವಾನದ ಮೇರೆಗೆ ಬಂದ ಅಭ್ಯಾಗತರಿಗಷ್ಟೇ ಅಲ್ಲ, ಅನಿರೀಕ್ಷಿತವಾಗಿ ಬಂದಿಳಿಯುವ ಅತಿಥಿಗಳಿಗೂ ಉದಾರವಾಗಿ ಅನ್ನ ವಸತಿ ನೀಡಬೇಕೆನ್ನುವುದೇ ವ್ರತ. ಹಸಿದವರಿಗೆ ಅನ್ನವನ್ನೂ, ವಿದ್ಯಾರ್ಥಿಗಳಿಗೆ ಅಶನ ವಸನಗಳನ್ನೂ, ಅಸಹಾಯಕರಿಗೆ ಅಭಯ ನೀಡುತ್ತ ಬಾಳುವುದನ್ನು ಎಲ್ಲಶಾಸ್ತ್ರಗಳೂ ಮಹಾತ್ಮರೂ ಒತ್ತಿಹೇಳುತ್ತಾರೆ. ಸಂಸ್ಕೃತ ಹಾಗೂ ಕನ್ನಡ ಕಾವ್ಯಗಳಲ್ಲಿ ಪ್ರಾಚೀನ ಮಧ್ಯಯುಗಗಳ ಉತ್ಸವಗಳಲ್ಲಿದಾನದ ವರ್ಣನೆಗಳು ಭರ್ಜರಿಯಾಗಿವೆ- ಪಟ್ಟಾಭಿಷೇಕ, ಪುತ್ರೋತ್ಸವ, ವಿಜಯೋತ್ಸವ, ವಿವಾಹೋತ್ಸವಗಳಲ್ಲಿ ಅತಿಥಿ ಅಭ್ಯಾಗತರು ಉಂಡು, ದಾನ ಪಡೆದು ಸಂತೋಷವಾಗಿ ಹೋಗುವ ದೃಶ್ಯಗಳು ಹೇರಳ. ಅರಸಿ ಬಂದವರಿಗೆ ಕೈತುಂಬ ದಾನ ನೀಡಲೆಂದೇ ರಘುವಂಶದ ರಾಜರು ವಿತ್ತಸಂಚಯ ಮಾಡುತ್ತಿದ್ದರೆಂದು ಕಾಳಿದಾಸನು ಹೊಗಳುತ್ತಾನೆ- ತ್ಯಾಗಾಯ ಸಂಭೃತಾರ್ಥಾಃ (ರಘುವಂಶ ಕಾವ್ಯ). ಉದಾರದಾನಿಗಳಿಗೆ ‘ಕ್ಷಣದಾನಪ್ರಿಯ’, ‘ದಾನಚಿಂತಾಮಣಿ’, ‘ದಾನಶೂರ’ ಮುಂತಾದ ಬಿರುದುಗಳನ್ನು ಕಾಣುತ್ತೇವೆ.
ವೇದಕಾಲದಿಂದ ಇಂದಿನವರೆಗೂ ಅವಿಚ್ಛಿನ್ನವಾಗಿ ನಡೆದುಬಂದಿದೆ ದಾನಪದ್ಧತಿ. ಇಂದಿಗೂ ದೇಗುಲಗಳಿಗೆ, ಮಠಗಳಿಗೆ, ಅನ್ನಸಂತರ್ಪಣೆಗೆ, ಉತ್ಸವಗಳಿಗೆ, ಸಾರ್ವಜನಿಕ ವ್ಯವಸ್ಥೆಗೆ ಧನಸಹಾಯ ನೀಡುವ ಉದಾರಭಾವವು ಶ್ರೀಮಂತರಲ್ಲಷ್ಟೇ ಅಲ್ಲ, ಸಾಮಾನ್ಯರಲ್ಲೂ ಕಾಣಬರುತ್ತದೆ. ಬ್ರಹ್ಮಚಾರಿಗಳಿಗೆ ಕೃಷ್ಣಾಜಿನ ಕಮಂಡಲ ಜಪಮಾಲೆ ಧೋತರ ಮುಂತಾದ ಉಪಯುಕ್ತ ವಸ್ತುಗಳನ್ನೂ, ಮದುಮಗಳಿಗೆ ವಸ್ತ್ರ ಒಡವೆ ಮಂಗಳದ್ರವ್ಯಗಳನ್ನೂ, ಯತಿಗಳಿಗೆ ಫಲಗಳನ್ನೂ, ದಂಪತಿಗಳಿಗೆ ಅನ್ನವಸ್ತ್ರಗಳನ್ನೂ, ಬಸುರಿಗೆ ಭಕ್ಷ ್ಯಭೋಜ್ಯಗಳನ್ನೂ, ಗೌರೀಹಬ್ಬದಂದು ಮಗಳಿಗೆ ಬಾಗಿನವನ್ನೂ, ವರಮಹಾಲಕ್ಷ್ಮೀ ಹಬ್ಬದಂದು ಸೊಸೆಗೆ ಸೀರೆ ಒಡವೆಗಳನ್ನೂ, ಷಷ್ಠಿಗೆ ಬ್ರಹ್ಮಚಾರಿಗೆ ಅನ್ನವಸ್ತ್ರಗಳನ್ನೂ, ನವರಾತ್ರದಲ್ಲಿ ಸುಮಂಗಲಿಯರಿಗೂ ಪುಟ್ಟಕುಮಾರಿಯರಿಗೂ ಅನ್ನ ವಸ್ತ್ರ ಮಂಗಳದ್ರವ್ಯಗಳನ್ನೂ, ಕೋಸಂಬರಿ ಪಾನಕಗಳನ್ನೂ, ದೀಪಾವಳಿಯಂದು ಗೋಗ್ರಾಸವನ್ನೂ ದೀಪದಾನವನ್ನೂ, ಕೃಷ್ಣಾಷ್ಟಮಿ ಗಣೇಶ ಹಬ್ಬಗಳಂದು ನೆರೆಕೆರೆಯ ಮಕ್ಕಳಿಗೆ ಆರತಿ ಎತ್ತಿ ಭಕ್ಷ್ಯಗಳನ್ನೂ ನೀಡುವ ಸುಂದರ ಪದ್ಧತಿಗಳು ನಮ್ಮಲ್ಲಿ ಕಂಗೊಳಿಸುತ್ತವೆ. ರಾಮನವಮಿ ಬಂತೆಂದರೆ ಸಾಕು ಇಂದಿಗೂ ನಮ್ಮ ಬೀದಿಗಳಲ್ಲಿ ಕೊಡಗಟ್ಟಲೆ ತಂಪು ಮಜ್ಜಿಗೆ ಪಾನಕ ಕೋಸಂಬರಿ ಹಂಚುವ ಚಪ್ಪರಗಳು ಎದ್ದು ನಿಲ್ಲುತ್ತವೆ! ಯಾತ್ರೆಗೆ ಹೊರಡುವವರಿಗೆ ರವೆ ಉಂಡೆ, ಅವಲಕ್ಕಿ, ಹಣ್ಣುಗಳನ್ನು ಬುತ್ತಿ ಕಟ್ಟಿಕೊಡುವ ಸಂಪ್ರದಾಯವೂ ನಮ್ಮಲ್ಲಿದೆ. ಹಸುಳೆಯನ್ನು ಮೊದಲ ಸಲ ನೋಡುವಾಗ ಕೈಯಲ್ಲಿ ಸ್ವಲ್ಪ ದುಡ್ಡು ಇಟ್ಟೇ ನೋಡುವುದು ಪದ್ಧತಿ. ಹಬ್ಬಗಳಂದು ನೆಂಟರಿಷ್ಟರನ್ನು ಮನೆಗೇ ಆಹ್ವಾನಿಸಿ ಅನ್ನ ವಸ್ತ್ರದಕ್ಷಿಣೆಗಳಿಂದ ಆದರಿಸುತ್ತೇವೆ. ಸಾಮಾನ್ಯರಾದ ನಮ್ಮಲ್ಲೂ ಹೀಗೆ ಹಂಚಿಕೊಂಡು ಬದುಕುವ ಸಂಸ್ಕಾರವನ್ನು ಬಲಪಡಿಸಿದೆ ನಮ್ಮ ಧರ್ಮ. ಇಷ್ಟು ಸಾಲದೆಂಬಂತೆ ದಾನಕ್ಕಾಗಿಯೇ ಕೆಲವು ಹಬ್ಬಗಳಿವೆ- ಅನ್ನಕೂಟ, ಕಟ-ದಾನೋತ್ಸವ, ಗೋಪದ್ಮವ್ರತ, ಕಾರ್ತೀಕದಲ್ಲಿ ದೀಪದಾನ ಇತ್ಯಾದಿ!

‘ಅನ್ನದಾನಕ್ಕಿಂತ ಇನ್ನು ದಾನವಿಲ್ಲ’ ಎನ್ನಲಾಗುತ್ತದೆ. ಧರ್ಮಸ್ಥಳ, ಶೃಂಗೇರಿ, ಉಡುಪಿ, ಸಿದ್ಧಗಂಗಾ, ಹೊರನಾಡು, ತಿರುಪತಿ, ಅಮೃತಸರ ಹಾಗೂ ಹರಿದ್ವಾರ ಮುಂತಾದ ಅಸಂಖ್ಯ ತೀರ್ಥಕ್ಷೇತ್ರಗಳಲ್ಲಿ ವಿಶ್ವವೇ ಬೆರಗಾಗುವ ಪ್ರಮಾಣದಲ್ಲಿ ನಿತ್ಯಾನ್ನದಾನೋತ್ಸವಗಳು ಜರಗುತ್ತ ಬಂದಿವೆ. ಕುಲ ಲಿಂಗ ಭೇದಗಳಿಲ್ಲದೆ ಉಂಡು ಹೋದವರು ಪ್ರತಿಯಾಗಿ ದಕ್ಷಿಣೆ ಹಾಕಿದರೋ ಇಲ್ಲವೋ, ಮೆಚ್ಚಿದರೋ ಇಲ್ಲವೋ, ನಮ್ಮ ಸೇವೆಯನ್ನು ಮೆಚ್ಚಿ ಮತಾಂತರವಾದರೋ ಇಲ್ಲವೋ, ಎನ್ನುವ ಯಾವ ಲೆಕ್ಕಾಚಾರವೂ ಇಲ್ಲದೆ ಈ ಅನ್ನದಾನ ಯಜ್ಞಗಳು ನಡೆಯುತ್ತ ಬಂದಿವೆ. ಬಹುಶಃ ಹೀಗೆ ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ಭೂರಿದಾನವನ್ನು ಮಾಡುವುದನ್ನು ಭಾರತದಲ್ಲಿ ಹುಟ್ಟಿ ಬೆಳೆದ ಸಂಸ್ಕೃತಿಗಳಲ್ಲಲ್ಲದೇ ಬೇರೆಲ್ಲಿತಾನೆ ಕಾಣಲು ಸಾಧ್ಯ?!
ಆಶ್ರಯ ಕೋರಿ ಬಂದವರನ್ನು ಹಿಂದಿರುಗಿಸುವಂತಿಲ್ಲ ಎನ್ನುತ್ತವೆ ಶಾಸ್ತ್ರಗಳು. ಅದರಲ್ಲೂರಾಜ, ಕ್ಷತ್ರಿಯ, ಪ್ರಧಾನ ಹುದ್ದೆಗಳಲ್ಲಿರುವವರು ಧನಿಕರಿಗೆ ಈ ನಿಯಮ ಕಡ್ಡಾಯ. ಜನಸಾಮಾನ್ಯರ ಮನೆಯಲ್ಲೂಹಳ್ಳಿಗಳಲ್ಲಿನ ತಮ್ಮ ನೆಂಟರ, ಪರಿಚಿತರ ಮಕ್ಕಳನ್ನು ಕರೆತಂದು ಆಶ್ರಯವಿತ್ತು, ಓದಿಸಿ, ಕೆಲಸ ಕೊಡಿಸಿ, ಮದುವೆ ಮಾಡಿಸಿ ಹರಸುವ ಉದಾರಭಾವ ಇಂದಿಗೂ ಕಾಣಬರುತ್ತದೆ. ವಿದೇಶೀಯ ‘ನಾನು ನನ್ನ ಜೀವನ’ ಎನ್ನುವ ಸ್ವಾರ್ಥವು ನಮ್ಮನ್ನು ಕವಿಯಲಾರಂಭಿಸುವವರೆಗೂ ನಮ್ಮಲ್ಲಿ ಅನಾಥಾಶ್ರಮ- ವೃದ್ಧಾಶ್ರಮಗಳ ಕಲ್ಪನೆಯೇ ಇರಲಿಲ್ಲ! ಅನಾಥರಿಗೆ, ವೃದ್ಧರಿಗೆ, ವಿಧವೆಯರಿಗೆ, ವಿಕಲಾಂಗರಿಗೆ, ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಲ್ಲದಿದ್ದರೆ ನೆಂಟರಿಷ್ಟರ ಮನೆಗಳಲ್ಲಿ ಅಥವಾ ರಾಜಾಶ್ರಯದಲ್ಲಿ, ಮಠಮಂದಿರಗಳಲ್ಲಿ ವ್ಯವಸ್ಥೆಯಾಗುತ್ತಿತ್ತು. ಯಾತ್ರಾರ್ಥಿಗಳಿಗೂ ಸಾಧುಗಳಿಗೂ ಅನ್ನ, ವಸ್ತ್ರ, ದಕ್ಷಿಣೆ, ವಸತಿಗಳನ್ನೂ ಕಂಬಳಿ, ಜಪಮಾಲೆ, ಆಸನ, ಧರ್ಮಗ್ರಂಥಗಳು, ವೈದ್ಯಕೀಯ ಚಿಕಿತ್ಸೆ ಮುಂತಾದ ಹತ್ತು ಹಲವು ಬಗೆಯ ದಾನಗಳನ್ನು ಮಾಡುವ ಅಸಂಖ್ಯ ಉದಾರಿಗಳನ್ನು ಹಿಮಾಲಯದ ತೀರ್ಥಕ್ಷೇತ್ರಗಳಲ್ಲಿ ಇಂದಿಗೂ ಕಾಣಬಹುದು.

ನಮ್ಮ ದುಡಿಮೆಯನ್ನು ಹಂಚಿಕೊಳ್ಳದೆ ತಿಂದರೆ ನಾವು ಕಳ್ಳರು ಎನ್ನುತ್ತದೆ ಗೀತೆ. ಹಾಗಾಗಿ ದಾನ ನೀಡುವುದು ಹೆಚ್ಚುಗಾರಿಕೆ ಅಲ್ಲ, ನಮ್ಮ ಕರ್ತವ್ಯವೆಂದಾಯಿತು! ಜನ್ಮಜನ್ಮಾಂತರಗಳ ಋುಣಮೋಚನಕ್ಕೆ ದಾನವನ್ನೇ ಸೂಚಿಸುತ್ತವೆ ವ್ರತಗಳು. ನಾವು ಪಡೆದ ಉಪಕಾರವು ನಮಗೆ ನೆನಪಿರಲಿ ಇಲ್ಲದಿರಲಿ ಕೃತಜ್ಞತಾಭಾವವನ್ನೂ ಸೂಸುತ್ತಲೇ ಇರಬೇಕು ಎನ್ನುವುದು ನಿರ್ದೇಶ. ದಾನ ಕೊಡುವಾಗ ‘ನಾನು ಕೊಟ್ಟೆ’ ಎನ್ನುವ ಗರ್ವವಿರಬಾರದೆನ್ನುತ್ತಾರೆ ಬಸವೇಶ್ವರರು- ‘ನೀಡಿದೆನೆನ್ನದಿರಾ ಜಂಗಮಕೆ.’ ತೈತ್ತಿರೀಯೋಪನಿಷತ್ತು ದಾನವನ್ನು ಹೇಗೆ ನೀಡಬೇಕೆಂದು ಸೂಚಿಸುತ್ತದೆ- ‘ಶ್ರದ್ಧಯಾ ದೇಯಂ, ಅಶ್ರದ್ಧಯಾ ಅದೇಯಂ, ಶ್ರಿಯಾ ದೇಯಂ, ಭಿಯಾ ದೇಯಂ, ಸಂವಿದಾ ದೇಯಂ?’ (ಶ್ರದ್ಧೆಯಿಂದ ಕೊಡಬೇಕು, ಅಶ್ರದ್ಧೆಯಿಂದಲ್ಲ, ಸಮೃದ್ಧವಾಗಿ ಕೊಡಬೇಕು, ವಿನಯದಿಂದ ಕೊಡಬೇಕು, ಸುಸಂಸ್ಕೃತ ರೀತಿಯಲ್ಲಿಕೊಡಬೇಕು). ತಾತ್ಸಾರ ದ್ವೇಷ ಅನಾಸಕ್ತಿಯಿಂದ ಅಥವಾ ಕುತ್ಸಿತ ವಸ್ತುಗಳನ್ನು ಕೊಡುವ ತಾಮಸಿಕ ದಾನಕ್ಕಿಂತಲೂ, ಢಾಂಬಿಕತೆ ಪೈಪೋಟಿ ತೋರಾಣಿಕೆಗಾಗಿ ನೀಡುವ ರಾಜಸಿಕ ದಾನಕ್ಕಿಂತಲೂ, ಸತ್ಪಾತ್ರರಿಗೆ ಸಮಯೋಚಿತವಾಗಿ, ಸಮೃದ್ಧವಾಗಿ ಸೌಜನ್ಯದಿಂದ ನೀಡುವ ಸಾತ್ವಿಕದಾನವೇ ಶ್ರೇಷ್ಠ ಎನ್ನುತ್ತದೆ ಗೀತೆ. ನಿಷ್ಪ್ರಯೋಜಕ ವಸ್ತುಗಳನ್ನು ಬೇರೆಯವರಿಗೆ ‘ದಾನ’ ಮಾಡಿ ಕೈತೊಳೆದುಕೊಳ್ಳುವ ಲೆಕ್ಕಾಚಾರವು ದಾನವಲ್ಲ, ಅದು ಪಾಪವೆನಿಸುತ್ತದೆ. ನಚಿಕೇತನ ತಂದೆ ವಾಜಶ್ರವಸ್ ಇಂತಹ ಕುತ್ಸಿತದಾನಕ್ಕೆ ಮೊದಲಾದಾಗ, ಮಗನು ತನ್ನ ತಂದೆಗೆ ‘ಅನಂದಾ’ ಎನ್ನುವ ನರಕ ಪ್ರಾಪ್ತಿಯಾದೀತು ಎಂದು ಆತಂಕಪಡುತ್ತಾನೆ. ತಾಮಸಿಕ- ರಾಜಸಿಕ ದಾನಗಳಿಂದಾಗಿ ಸ್ವೀಕರಿಸುವವನಿಗೆ ಅವಮಾನ, ಮುಜುಗರ, ಕೊಡುವವನಿಗೆ ಪಾಪಪ್ರಾಪ್ತಿ. ಹಣ, ಕೀರ್ತಿ, ಬಿರುದು, ಪ್ರತ್ಯುಪಕಾರಗಳ ಲೆಕ್ಕಾಚಾರವಿಟ್ಟುಕೊಂಡೇ ದಾನ ಮಾಡಿದರೆ, ಅದು ವ್ಯವಹಾರವೆನಿಸುತ್ತದೆ.
ದಾನ ಮಾಡುವುದೇ ಒಂದು ಯಜ್ಞವಾದ್ದರಿಂದ ‘ಓಂ’ ಎಂದು ಉಚ್ಚರಿಸುತ್ತ ನೀಡಬೇಕು ಎನ್ನುತ್ತದೆ ಭಗವದ್ಗೀತೆ- ‘ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃ ಕ್ರಿಯಾ.’ ದಾನ ನೀಡದ ಜಿಪುಣನ ಬದುಕು ನಿಂತ ನೀರಿನಂತೆ ಕೊಳೆಯುತ್ತದೆ ಎಂದು ಶಾಸ್ತ್ರ ಕಾವ್ಯಗಳು ಹೀಯಾಳಿಸುತ್ತವೆ. ದಾನ ಪಡೆಯುವವರಿಗೂ ಪರಂಪರೆಯು ನಿಯಮಗಳನ್ನು ಸೂಚಿಸುತ್ತದೆ. ‘ಅಗತ್ಯಕ್ಕಿಂತ ಹೆಚ್ಚನ್ನು ಪಡೆಯಬಾರದು, ಪಡೆಯುವುದನ್ನೇ ಜೀವಿಕೆಯನ್ನಾಗಿಸಿಕೊಳ್ಳಬಾರದು, ದಾನದ ವಸ್ತುಗಳನ್ನು ಸಂಚಯಿಸಬಾರದು, ತನ್ನ ಯೋಗ್ಯತೆಗೆ ಮೀರಿದ ದಾನವನ್ನು ಪಡೆಯಬಾರದು, ದಾನವನ್ನು ಪಡೆದ ಕೂಡಲೆ ಪ್ರಾಯಶ್ಚಿತ್ತ ಮಂತ್ರ ಹೇಳಬೇಕು, ಪ್ರತಿದಾನವನ್ನೂ ಮಾಡಬೇಕು’ ಇತ್ಯಾದಿ. ದಾನದ ಅಗತ್ಯವಿಲ್ಲದಿದ್ದಲ್ಲಿ’ಅಪರಿಗ್ರಹ ವ್ರತ’ವನ್ನು(ಏನನ್ನೂ ದಾನವಾಗಿ ಪಡೆಯುವುದಿಲ್ಲಎನ್ನುವ ವ್ರತ) ಕೈಗೊಳ್ಳಬೇಕು ಎನ್ನುವ ನಿರ್ದೇಶವಿದೆ.

ಒಟ್ಟಿನಲ್ಲಿ ಇಲ್ಲಿ ಪಡೆದದ್ದನ್ನು ಇಲ್ಲೇ ಹಂಚಿ ತೆರಳುವುದರಲ್ಲಿ ಜನ್ಮಸಾರ್ಥಕ್ಯ ಎನ್ನುವುದು ಆರ್ಷದರ್ಶನ. ಅದು ಮಾತ್ರವೇ ಪುಣ್ಯವಾಗಿ ನಮ್ಮೊಡನೆ ಜನ್ಮಾಂತರಗಳಲ್ಲಿ ಬರುತ್ತದೆ. ಕೊಟ್ಟಿದ್ದು ತನಗೆ ಮುಚ್ಚಿಟ್ಟಿದ್ದು ಪರರಿಗೆ ಎನ್ನುವ ಗಾದೆಯೂ ಇದನ್ನೇ ಸ್ಪಷ್ಟೀಕರಿಸುತ್ತದೆ. ಸರ್ವಜ್ಞ ಕವಿಯು ಹೇಳುವಂತೆ –
ಹುಟ್ಟುವಾಗೀಧನವ ಮೊಟ್ಟೆಗಟ್ಟಿಳಿದನೇ
ಕಟ್ಟಕಡೆಯಲಿ ಕೊಂಡೊಯ್ಯ ಇದನರಿತು
ಕೊಟ್ಟುಂಬ ದಾನಿ ಸರ್ವಜ್ಞ
( ಲೇಖಕರು ಆಧ್ಯಾತ್ಮ ಚಿಂತಕರು)
ಕೃಪೆ:ವಿಜಯಕರ್ನಾ‌ಟಕ

Leave a Reply