ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ

ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ
ತನ್ನ ಎಷ್ಟೋ ವೈಯಕ್ತಿಕ ಕನಸುಗಳನ್ನೂ, ಹವ್ಯಾಸಗಳನ್ನೂ, ಆಸೆಗಳನ್ನೂ ಬದಿಗಿಟ್ಟು ನಮ್ಮ ಬಾಲ್ಯದ ಕನಸುಗಳನ್ನೂ, ಭವಿಷ್ಯದ ಸುರಕ್ಷೆಯನ್ನೂಕಟ್ಟಿ ಕೊಡುವವನು ತಂದೆ! ಆದರೆ ತಾನು ಕರ್ತವ್ಯಪರತೆಯಲ್ಲಿಸುಮ್ಮನೆ ಮಾಡುತ್ತ ಸಾಗುತ್ತಾನೆಯೇ ಹೊರತು ಎಲ್ಲವನ್ನೂಹಂಚಿಕೊಳ್ಳುವುದೇ ಇಲ್ಲ. ಇಂಥ ಪ್ರತ್ಯಕ್ಷ ದೇವರಾದ ತಂದೆಗೆ ಉಪನಿಷತ್ತೇ ಪಿತೃ ದೇವೋ ಭವ ಎಂದು ಉದ್ದಂಡ ನಮಸ್ಕಾರ ಹಾಕಿದೆ!
ಆತ ಶ್ರೀಮಂತ ವಕೀಲ. ತುಂಬ ಉದಾರಿ. ಮನೆ ಮಂದಿಗೂ ಉಳಿಸದಷ್ಟು ದಾನವನ್ನು ಮಾಡುತ್ತಲೇ ಇದ್ದ. ಅವನ ಹದಿಹರೆಯದ ಮಗ ಕೇಳಿದ ”ಅಪ್ಪ, ನೀನು ದಾನ ಮಾಡುವುದೇನೋ ಸರಿ. ಆದರೆ ನಮಗಾಗಿ ಏನನ್ನು ಉಳಿಸಿದ್ದೀಯೆ?” ತಂದೆ ತಕ್ಷಣ ಮಗನನ್ನು ನಿಲುಗನ್ನಡಿಯ ಮುಂದೆ ನಿಲ್ಲಿಸಿ ಹೇಳಿದ- ”ನೋಡು. ಇದೇ ನಾನು ನಿನಗಾಗಿ ಉಳಿಸಿರುವುದು- ಭವ್ಯ ಸತ್ವ ಸಂಪನ್ನ ವ್ಯಕ್ತಿತ್ವ” ಎಂದು. ಮಗ ನಿರುತ್ತರನಾದ. ಆ ತಂದೆಯೇ ವಿಶ್ವನಾಥದತ್ತ. ಮಗನೇ ಮುಂದೆ ಸ್ವಾಮಿ ವಿವೇಕಾನಂದರೆನಿಸಿದ ನರೇಂದ್ರ. ಬಾಲ್ಯದಲ್ಲಿವಿವೇಕಾನಂದರ ವ್ಯಕ್ತಿತ್ವದ ಮೇಲೆ ಬಹಳ ಪ್ರಭಾವ ಬೀರಿದ್ದು ಅವರ ತಂದೆ. ಬಾಲ್ಯದಿಂದಲೇ ಮಗನಲ್ಲಿವೈಚಾರಿಕ ಪ್ರಜ್ಞೆಯ ಜೊತೆ ಜೊತೆಗೆ ಸಾಮಾಜಿಕ ಕಾಳಜಿಯನ್ನು ಮೂಡಿಸಿದ ಅದ್ಭುತ ತಂದೆ ಈತ. ಒಮ್ಮೆ ತರುಣ ನರೇಂದ್ರ ಕೇಳಿದ- ”ಅಪ್ಪ, ನೀನೀಕೆ ಸೋಮಾರಿಗಳನ್ನೆಲ್ಲಸಾಕುವುದು?” ವಿಶ್ವನಾಥ ಹೇಳುತ್ತಾನೆ ”ನರೇನ್, ಜೀವನದಲ್ಲಿಎಂತೆಂತಹ ಕಷ್ಟ ನಷ್ಟಗಳು ಇರುತ್ತವೆ ಎಂದು ನಿನಗಿನ್ನೂ ಗೊತ್ತಿಲ್ಲ. ಹೃದಯವಂತಿಕೆ ಎಲ್ಲಕ್ಕಿಂತ ದೊಡ್ಡದ್ದು, ತರ್ಕವಲ್ಲ” ಎಂದು.’ಎಲ್ಲವನ್ನೂ ತರ್ಕದಿಂದಲೇ ಅಳೆಯಬಾರದು; ಹೃದಯವಂತಿಕೆಯು ಅದಕ್ಕಿಂತ ದೊಡ್ಡದ್ದು’ ಎನ್ನುವ ಸಂವೇದನೆಯನ್ನು ನರೇಂದ್ರ ಬೆಳೆಸಿಕೊಂಡಿದ್ದು ಅವನ ತಂದೆಯಿಂದಲೇ ಎನ್ನಬಹುದು. ಈ ಮಹಾಮಾನವ ಪ್ರೇಮ ಅವರ ಜೀವನದುದ್ದಕ್ಕೂ ಧಾರೆಯಾಗಿ ಹರಿಯಿತು. ಸಿರಿತನದಲ್ಲೇ ಹುಟ್ಟಿ ಬೆಳೆದ ಮಗನು ಐಶಾರಾಮಿಯಲ್ಲಿಮೈಮರೆಯದಂತೆ ಅವನಲ್ಲಿಮಾನವೀಯ ಮೌಲ್ಯಗಳನ್ನೂ, ತಾರ್ಕಿಕ ಚಿಂತನೆಯನ್ನೂ ಪ್ರೇರೇಪಿಸಿ ಹತ್ತು ಹಲವು ಹವ್ಯಾಸಗಳಲ್ಲಿತೊಡಗಿಸಿ ತರಬೇತಿಯಿತ್ತವನು ವಿಶ್ವನಾಥದತ್ತ. ನಾಡಿನ ಪ್ರಖ್ಯಾತ ವಿದ್ವಾಂಸರು ನರೇಂದ್ರನಿಗೆ ಶಾಸ್ತ್ರೀಯ ಸಂಗೀತದ ಗಾಯನವನ್ನೂ, ಸಿತಾರ್, ತಬಲಾ ವಾದ್ಯಗಳನ್ನೂ, ನೃತ್ಯ, ಸಂಸ್ಕತ್ರೃತ- ಬಂಗಾಳಿ ಸಾಹಿತ್ಯಗಳನ್ನೂ, ಕಾವ್ಯ ಪುರಾಣೇತಿಹಾಸಗಳನ್ನೂ ಶಾಸ್ತ್ರಗಳನ್ನೂ ಕಲಿಸುವ ಏರ್ಪಾಡನ್ನು ಮಾಡಿಸಿದ. ಇದಲ್ಲದೆ ಕುಸ್ತಿ, ಈಜು, ಓಟ, ಲಾಠೀ ಆಟ, ನೆರಳಾಟ, ಕುದುರೆ ಸವಾರಿ, ಕ್ರಿಕೆಟ್ ಮತ್ತು ವ್ಯಾಯಾಮಗಳಲ್ಲಿತೊಡಗಿಸಿ ಮಗನ ವ್ಯಕ್ತಿತ್ವವನ್ನು ಸರ್ವಾಂಗ ಸುಂದರವನ್ನಾಗಿ ಮೂಡಿಸಿದ ಮಹಾಶಿಲ್ಪಿ ವಿಶ್ವನಾಥದತ್ತ ಎನ್ನಬಹುದು. ವಿವೇಕಾನಂದರು ನೆನೆಯುತ್ತಾರೆ- ”ನನ್ನ ತಂದೆ ಹೇಳುತ್ತಿದ್ದರು, ಮಗು, ಜೀವನದಲ್ಲಿಯಾವುದನ್ನು ಕಂಡೂ ಬೆರಗಾಗ ಬೇಡ” ಎಂದು. ತನ್ನಸಾರ್ವಜನಿಕ ಜೀವನದಲ್ಲಿಬಗೆಬಗೆಯ ಜನರನ್ನೂ ಅಪಾರ ಮನ್ನಣೆಗಳನ್ನೂ ಗಳಿಸಿದ ವಿವೇಕಾನಂದರು ಯಾವುದಕ್ಕೂ ಮನಸೋಲದೆ ವಿರಕ್ತರಾಗಿ ಶಾಂತವಾಗಿ ನಿಲ್ಲಲು ಸಾಧ್ಯವಾದದ್ದು ತಂದೆ ಕಲಿಸಿಕೊಟ್ಟ ಈನೀತಿಯಿಂದಲೇ ಎಂದು ಅವರೇ ಸ್ಮರಿಸುತ್ತಾರೆ. ಒಮ್ಮೆಯಂತೂ ವಿಶ್ವನಾಥದತ್ತನು ಕಾರ್ಯ ನಿಮಿತ್ತ ಒಂದು ವರ್ಷ ಕಾಲ ಪರಿವಾರಸಮೇತ ಬೇರೆ ಊರಲ್ಲಿವಾಸಿಸಬೇಕಾಯಿತು. ಮಗನಿಗೆ ಒಂದುವರೆ ವರ್ಷ ಶಾಲೆ ತಪ್ಪುತ್ತದೆಂದು ತಾನೇ ಅವನ ಶಿಕ್ಷಣವನ್ನು ವಹಿಸಿದ. ಹತ್ತು ವರ್ಷ ವಯಸ್ಸಿನ ನರೇಂದ್ರನಿಗೆ ಬಂಗಾಳಿ, ಆಂಗ್ಲ, ಹಿಂದಿ, ಸಂಸ್ಕತ್ರೃತ ಭಾಷೆಗಳನ್ನೂ, ಪರಿಪರಿಯ ಸಾಹಿತ್ಯವನ್ನೂ ಪರಿಚಯಿಸಿದ.ಪೌರ್ವತ್ಯ ಪಾಶ್ಚಾತ್ಯ ಚಿಂತಕರ ವಿಚಾರಗಳನ್ನು ಪರಿಚಯಿಸಿದ. ಈ ಕಾಲದಲ್ಲಿಬಾಲಕ ನರೇಂದ್ರನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸ್ವಾಧ್ಯಾಯದಲ್ಲಿಅದೆಷ್ಟು ಪಳಗಿದನೆಂದರೆ, ಕಲ್ಕತ್ತೆಗೆ ಹಿಂದಿರುಗಿದಾಗ, ಯಾರ ಸಹಾಯವೂ ಇಲ್ಲದೆ ಒಂದುವರೆ ವರ್ಷದ ಪಾಠವನ್ನೆಲ್ಲತಾನೇ ಓದಿಕೊಂಡೂ ಪರೀಕ್ಷೆಯಲ್ಲೂಉತ್ತೀರ್ಣನಾಗಿಬಿಟ್ಟ! ತಾನು ಮಗನೊಂದಿಗೆ ಸಮಕಾಲೀನ ವಿಚಾರಗಳನ್ನು ಚರ್ಚಿಸುತ್ತಿದ್ದನಲ್ಲದೆ, ತನ್ನ ವಿದ್ವನ್ಮಿತ್ರರ ಜೊತೆಗೂ ಬಾಲಕ ನರೇಂದ್ರನನ್ನುಚರ್ಚೆಗೆ ಹಚ್ಚುತ್ತಿದ್ದ. ಮುಂದೆ ಯುವಕ ನರೇಂದ್ರನು ಕಾಶಿಯ ಹಿರಿಯಸಂಸ್ಕೃತ ಪಂಡಿತರ ಜೊತೆಯಲ್ಲೂಶೈಕ್ಷಣಿಕ ಪತ್ರ ವ್ಯವಹಾರವನ್ನಿಟ್ಟುಕೊಂಡಿದ್ದ. ಒಟ್ಟಿನಲ್ಲಿವಿವೇಕಾನಂದರಂಥ ಮೇಧಾವಿಯನ್ನೂ ಸಮಾಜಸೇವಕನನ್ನೂ ವಿಶ್ವಕ್ಕೆ ಯೋಗದಾನವಿತ್ತ ಮಹಾನ್ ತಂದೆ ವಿಶ್ವನಾಥದತ್ತ.

ವಿವೇಕಾನಂದರ ಗುರು ಪರಮಹಂಸ ರಾಮಕೃಷ್ಣರಿಗೆ ಅವರ ತಂದೆಯ ಪ್ರಭಾವತುಂಬಾ ಇದೆ. ತಂದೆ ಕ್ಷುಧೀರಾಮನ ಅದಮ್ಯ ಸತ್ಯ ನಿಷ್ಠೆ ಬಾಲಕ ರಾಮಕೃಷ್ಣನ ಮೇಲೆ ಬಹಳ ಪ್ರಭಾವವನ್ನು ಮೂಡಿಸಿತು. ತಾನಿನ್ನೂ ಒಂಭತ್ತು ವರ್ಷದ ಬಾಲಕನಾಗಿರುವಾಗಲೇ ತಂದೆ ತೀರಿಕೊಂಡ.ಬಾಲ ರಾಮಕೃಷ್ಣನ ಮನಸ್ಸು ಜೀವನ್ಮರಣಗಳ ಸತ್ಯತೆಯ ಅನ್ವೇಷಣದ ಗಂಭೀರ ಧ್ಯಾನದಲ್ಲಿತೊಡಗಿತು. ಈ ಜಿಜ್ಞಾಸೆಯೇ ರಾಮಕೃಷ್ಣರನ್ನು ಸತ್ಯ ಸಾಕ್ಷಾತ್ಕಾರದ ಹಾದಿಯಲ್ಲಿನಡೆಸಿ, ಮಹೋನ್ನತ ತಪಶ್ಚರ್ಯೆಗಳಲ್ಲಿತೊಡಗಿಸಿ, ಲೋಕೋತ್ತರಆಧ್ಯಾತ್ಮಿಕ ಅನುಭೂತಿಗಳ ನೆಲೆಗೆ ಏರಿಸಿತು ಕೂಡ.

ರಾಮಕೃಷ್ಣರ ಪತ್ನಿ ಶಾರದಾಮಣೀದೇವಿಯವರು ದಯೆಯ ಆಗರ, ಸೇವೆಯ ಸಾಕಾರ. ತನ್ನ ಜೀವನದುದ್ದಕ್ಕೂ ಈಕೆ ಮಾತಿಲ್ಲದೇ ಮಾಡಿದ ತ್ಯಾಗ ಸೇವೆಗಳು ಅಪಾರ. ಇಂತಹ ಸೇವಾ ಪ್ರವೃತ್ತಿಯನ್ನು ಈಕೆಯಲ್ಲಿಮೂಡಿಸಿದ್ದು ಈಕೆಯ ತಂದೆ ರಾಮಚಂದ್ರ ಮುಖರ್ಜಿ. ಸ್ವತಃ ಬಡವನಾದರೂ ರಾಮಚಂದ್ರನ ದೀನ ಜನರ ಸೇವೆಗೆ ಸದಾ ಮುನ್ನುಗ್ಗುತ್ತಿದ್ದ ಉದಾರಿ. ಒಮ್ಮೆ ಹಳ್ಳಿಯಲ್ಲಿಕ್ಷಾಮ. ಎಲ್ಲೆಲ್ಲೂಹಸಿವೆಯ ಹಾಹಾಕಾರ. ರಾಮಚಂದ್ರನು ತನ್ನಮನೆಯ ಉಗ್ರಾಣದ ತಳದಲ್ಲಿಅಳಿದುಳಿದ ಧಾನ್ಯವನ್ನೆಲ್ಲಬಾಚಿ ಬಾಚಿ ತೆಗೆದು ಗಂಜಿ ಮಾಡಿಸಿ, ಜನರಿಗೆ ಬಡಿಸಿ ಬಿಡುತ್ತಿದ್ದ. ಈ ಸೇವಾಯಜ್ಞದಲ್ಲಿಮನೆಯವರೆಲ್ಲತೊಡಗಿದರು. ಇದರಿಂದ ಪ್ರೇರಣೆಗೊಂಡ ಏಳು ವರ್ಷದ ಪುಟ್ಟ ಶಾರದೆ ಬಿಸಿ ಗಂಜಿಯನ್ನು ಉಣ್ಣುವ ಜನರಿಗೆ ಗಾಳಿ ಬೀಸುವ ಸೇವೆಯನ್ನುಮಾಡಿದಳಂತೆ! ಈಕೆಯ ಹೃದಯದಲ್ಲಿಇಂತಹ ಅನುಪಮ ಸೇವಾಪರತೆಯ ಬೀಜವನ್ನು ಬಿತ್ತದ್ದು ಆಕೆಯ ತಂದೆಯೇ.

ಗುರುಕುಲ ಶಿಕ್ಷಣವನ್ನು ಮುಗಿಸಿ ಬಂದ ತನ್ನ ಮಕ್ಕಳ ಜ್ಞಾನವನ್ನು ಪರೀಕ್ಷಿಸಿದ ಆ ಉದ್ಧಾಲಕ ಮಹರ್ಷಿಗಳ ಬಗ್ಗೆ ಉಪನಿಷತ್ತಲ್ಲಿದೆ. ”ತನಗೆ ಎಲ್ಲಅರ್ಥವಾಗಿ ಬಿಟ್ಟಿದೆ” ಎನ್ನುವ ಧೋರಣೆಯ ಮಗನನ್ನು ಮರಳಿ ಶಿಕ್ಷಣಕ್ಕೆ ಕಳುಹಿಸಿ ಬಿಡುತ್ತಾನೆ. ”ಎಷ್ಟು ತಿಳಿದರೂ ತಾನು ತಿಳಿಯದಿರುವುದು ಬಹಳವಿದೆ” ಎನ್ನುವ ವಿನಮ್ರತೆಯಿದ್ದ ಶ್ವೇತಕೇತುವಿಗೆ ಆತ್ಮಜ್ಞಾನವನ್ನು ತಾನೇ ಬೋಧಿಸುತ್ತಾನೆ. ಯೋಗ್ಯತಾ ಪತ್ರಕ್ಕಿಂತ ಯೋಗ್ಯತೆ ದೊಡ್ಡದ್ದು, ಅದನ್ನು ಸಂಪಾದಿಸುವತ್ತ ಗಮನ ಹರಿಸು ಎನ್ನುವ ಇಂತಹ ಮಹೋನ್ನತ ಸಂದೇಶವನ್ನು ಮಕ್ಕಳಿಗೆ ನೀಡುವ ತಂದೆಯರು ಮಕ್ಕಳೆ ತಾನೇ ಉದಾತ್ತ ಋುಷಿಗಳಾಗಲು ಸಾಧ್ಯ?!

ರಾಮಾಯಣದಲ್ಲೊಂದು ಉಪಕಥೆ. ಕುಶಾನಾಭನೆಂಬ ಋುಷಿಯ ತರುಣ ಪುತ್ರಿಯರು ಒಮ್ಮೆ ಬೆಟ್ಟದ ಮೇಲೆ ವಿಹರಿಸುವಾಗ, ವಾಯುವೆಂಬುವನು ಅವರನ್ನು ಕಾಮಿಸಲು ಬರುತ್ತಾನೆ. ಅವರುಗಳು ನಿರಾಕರಿಸಿದಾಗ, ಅವನು ಕೋಪದಲ್ಲಿಅವರ ಅಂಗಾಂಗಗಳನ್ನು ವಿಕಾರಗೊಳಿಸಿಬಿಡುತ್ತಾನೆ. ಆ ತರುಣಿಯರು ತಂದೆಯ ಬಳಿ ಬಂದು ಅಳುತ್ತಾರೆ. ತಂದೆ ಕೇಳುತ್ತಾನೆ ”ನೀವೆಲ್ಲತಪಶ್ಶಕ್ತಿಸಂಪನ್ನೆಯರು. ಆತನಿಗೆ ಶಾಪ ಹಾಕಲಿಲ್ಲವೆ?” ಎಂದು. ಆಗ ಪುತ್ರಿಯರು ಹೇಳುತ್ತಾರೆ ”ಅಪ್ಪ, ನೀನೆ ಕಲಿಸಿದ್ದಲ್ಲವೆ. ಕೋಪ-ಶಾಪಗಳಿಗಿಂತ ಶಾಂತಿ-ಕ್ಷಮೆಗಳೇ ದೊಡ್ಡ ಗುಣಗಳುಎಂದು” ಎಂದು. ”ಇಂತಹ ಪುತ್ರಿಯರನ್ನುಪಡೆದ ತಾನೇ ಧನ್ಯ” ಎಂದು ಹಿಗ್ಗುತ್ತಾನೆ ಕುಶಾನಾಭ. ಮಕ್ಕಳ ದೇಹವಿಕಾರವನ್ನು ತಾನೇ ಹೋಗಲಾಡಿಸುತ್ತಾನೆ. ಮುಂದೆ ಅವರನ್ನುಚೂಲಿ ಎಂಬ ಬ್ರಹ್ಮರ್ಷಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ತಂದೆಯಿತ್ತ ಸಂಸ್ಕಾರವನ್ನು ಮಕ್ಕಳು ಮೈಗೂಡಿಸಿಕೊಂಡು ಕಲಿತ ಪಾಠವನ್ನು ಒಪ್ಪಿಸಿದ ಈ ಪ್ರಸಂಗ ನಿಜಕ್ಕೂ ಮನೋಜ್ಞ.

ಇನ್ಫೋಸಿಸ್ ಚಾರಿಟೆಬಲ್ ಫೌಂಡೇಷನ್ನ ಸುಧಾಮೂರ್ತಿಯವರು ಹೇಳಿಕೊಂಡ ಪ್ರಸಂಗ- ಸುಧಾಮೂರ್ತಿಯವರು ಇನ್ನೂ ಹರೆಯದ ತರುಣಿಯಾಗಿರುವಾಗ ದೇವದಾಸಿಯರ ಪುನರ್ವಸತಿ ಸೇವೆಗೆ ಮುಂದಾದಾಗ, ಅವರಾರೂ ಈಕೆಗೆ ಸ್ಪಂದಿಸಲಿಲ್ಲವಂತೆ. ಎದೆಗುಂದಿದ ಸುಧಾರವರು ತಮ್ಮ ತಂದೆಯ ಬಳಿ ಹೇಳಿಕೊಂಡರಂತೆ. ಆಗ ಅವರ ತಂದೆ ಹೇಳೀದರಂತೆ ”ಮಗು, ನೀನು ಈ ರೀತಿಯ ಪಾಶ್ಚಾತ್ಯ ವೇಷಭೂಷಗಳನ್ನು ಧರಿಸಿ, ತುಂಬ ನಾಗರೀಕ ಹಾವಭಾವಗಳನ್ನು ತೋರಿದರೆ ಆ ಮುಗ್ಧ ಹೆಣ್ಣುಮಕ್ಕಳಿಗೆ ನಿನ್ನನ್ನು ತನ್ನವರು ಎಂದು ಸ್ವೀಕರಿಸಲು ಹೇಗೆಸಾಧ್ಯ? ನೀನು ಅವರಲ್ಲಿಒಬ್ಬಳಂತಾಗಿ ಸರಳವಾಗಿ ಬೆರೆಯಬೇಕು” ಎಂದು. ಎಂತಹ ದೊಡ್ದ ನೀತಿ. ಅಂದಿನಿಂದ ಸುಧಾರವರು ಸೀರೆಯುಟ್ಟು, ತಿಳಿಗನ್ನಡ ಮಾತನಾಡುತ್ತ, ಅಪ್ಪಟ ಭಾರತೀಯ ನಾರಿಯಂತೆ ಅವರೊಡನೆ ಸೋದರಿ ಸ್ನೇಹದಿಂದ ಬೆರೆಯಲಾರಂಭಿಸಿದರಂತೆ. ಅವರನ್ನೆಲ್ಲಮುಖ್ಯವಾಹಿನಿಗೆ ತರುವಲ್ಲಿಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ! ಮಗಳನ್ನುಇಂತಹ ಉದಾತ ಸೇವಾಯಜ್ಞದಲ್ಲಿತೊಡಗಲು ಪ್ರೋತ್ಸಾಹಿಸಿದ್ದಲ್ಲದೆ, ಜನರಲ್ಲಿಒಂದಾಗಿ ಬೆರೆತು, ಸ್ನೇಹದಲ್ಲಿಕಲೆತು, ಅವರನ್ನು ಪರಮ ಗೌರವದಿಂದ ಕಾಣುತ್ತ ಸೇವೆಗೈವ ಮಹೋನ್ನತ ನೀತಿಯನ್ನು ಸುಧಾಮೂರ್ತಿರವರಿಗೆ ಕಲಿಸಿದ ಅವರ ತಂದೆಯವರನ್ನೂ ನಾವು ಅಷ್ಟೇ ಕೃತಜ್ಞತೆಯಿಂದ ಸ್ಮರಿಸಬೇಕು.

ವಿಶ್ವ ಬ್ಯಾಡ್ಮಿಟನ್ ಚಾಂಪಿಯನ್ ಪಿ ವಿ ಸಿಂಧುರವರ ತಂದೆ ಪಿ ವಿ ರಮಣರವರು ಆಕೆಯ ಯಶಸ್ಸಿನ ಹಿಂದೆ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ. ಸಿಂಧು ಇನ್ನೂ ಚಿಕ್ಕಬಾಲೆಯಾಗಿದ್ದಾಗಲೇ ಆಕೆಯ ವಿಶೇಷ ಪ್ರತಿಭೆಯನ್ನು ಗುರುತಿಸಿದ ತಂದೆ ರಮಣರವರು, ಹಲವು ವರ್ಷಗಳಿಂದಲೂ ಆಕೆಯನ್ನು ಪ್ರತಿ ದಿನವೂ ಬ್ಯಾಡ್ಮಿಂಟನ್ ತರಬೇತಿಗಾಗಿ ಸುಮಾರು 64 ಕಿ.ಮೀ ದೂರ ಕರೆದುಕೊಂಡು ಹೋಗಿ ಬರುತ್ತ ಬಂದಿದ್ದಾರೆ! ಮಗಳ ಭವಿಷ್ಯವನ್ನುಕಟ್ಟಿಕೊಡುವುದಕ್ಕಾಗಿ ಅಪಾರ ಶ್ರಮವನ್ನೂ ಸಮಯವನ್ನೂ ಪ್ರಯತ್ನವನ್ನೂ ಹಣವನ್ನೂ ಧಾರೆಯೆರೆದಿರುವ ರಮಣರವರ ಪಾತ್ರವೂ ನಿಜಕ್ಕೂ ಗಣನೀಯವೇ ಅಲ್ಲವೆ?

ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿರುವ ಕೆ ಶಿವನ್ ಅವರ ತಂದೆ ಕೈಲಾಸವಡಿವುರವರು ತಮಿಳುನಾಡಿನ ಹಳ್ಳಿಯ ಬಡ ರೈತರು. ಮಗನು ಉನ್ನತ ವ್ಯಾಸಂಗಕ್ಕಾಗಿ ಹಂಬಲಿಸಿದಾಗ, ತನ್ನ ಆರ್ಥಿಕ ಅಶಕ್ತಿಯನ್ನೂ ಗಣಿಸದೇ, ಜಮೀನೊಂದನ್ನು ಮಾರಿ ಹಣವೊದಗಿಸಿದರು. ತಂದೆಯ ಈ ತ್ಯಾಗ ಮತ್ತು ಅವಿರತ ಬೆಂಬಲವು ಶಿವನ್ ಅವರನ್ನು ಇಸ್ರೋದಂಥ ದೇಶದ ಮುಕುಟಪ್ರಾಯ ಸಂಸ್ಥೆಯ ಮುಖ್ಯಸ್ಥರನ್ನಾಗಿಸಿತು. ಹೀಗೆ, ಅದೆಷ್ಟೋ ಸಾಧಕರ ಹಿಂದೆ ಅವರಿಗಾಗಿ ತನು ಮನ ಧನಗಳನ್ನು ಸವೆಸಿದ ಅವರ ತಂದೆಯರ ಸಡಗರವಿಲ್ಲದ ಯೋಗದಾನದ ಕಥೆಗಳನ್ನು ಹೆಕ್ಕುತ್ತ ಹೋಗಬಹುದು.

ಸಾಮಾನ್ಯವಾಗಿ ಸಾಧಕರ ಜೀವನದಲ್ಲಿಅವರ ತಾಯಂದಿರ ಪಾತ್ರವನ್ನೇ ನಾವು ಮೊದಲು ಮನಸ್ಸಿಗೆ ತಂದುಕೊಳ್ಳುವುದು. ಮೆಚ್ಚುವುದು. ತಂದೆಯ ಹೆಸರೂ ಪಾತ್ರವೂ ಆಬಳಿಕವೇ ಮನಸ್ಸಿಗೆ ಬರುವುದು! ತಾಯಿಯು ಬಾಚಿ ಮುದ್ದಾಡಿ ಉಣಿಸಿ ಮಲಗಿಸಿ ಆಡಿಸಿ ಮುದವೀಯುವುದು ಎದ್ದುಕಾಣುತ್ತದೆ. ಆದರೆ ಅಷ್ಟಾಗಿ ಬಾಹ್ಯದಲ್ಲಿವಾತ್ಸಲ್ಯವನ್ನು ಅಭಿವ್ಯಂಜಿಸದ ತಂದೆಯು ಸದ್ದಿಲ್ಲದೆ ಮಕ್ಕಳ ಭವಿಷ್ಯಕ್ಕಾಗಿ ನಿರ್ಮಿಸುವ ಯೋಜನೆಗಳು ಗಮನಕ್ಕೆ ಬಾರವು. ಪರಿವಾರದವರ ಆರ್ಥಿಕ ಸುಸ್ಥಿತಿಯನ್ನೂ, ಸುರಕ್ಷೆಯನ್ನೂ, ಮರ್ಯಾದೆಯನ್ನೂ, ಸೌಖ ಸವಲತ್ತುಗಳನ್ನೂ ಎಡಬಿಡದೆ ಒದಗಿಸುತ್ತಲೇ ಸಾಗುವ ತಂದೆಯ ಪಾತ್ರವು ಅದೇಕೋ ಥಟ್ಟನೆ ನಮ್ಮ ಗಮನಕ್ಕೆ ಥಟ್ಟನೆ ಬರುವುದೇ ಇಲ್ಲ! ತಂದೆಯ ಕುರಿತಾದ ಆಲಂಕಾರಿಕ ಕವನಗಳೂ, ಬರಹಗಳೂ, ರೂಪಕಗಳೂ ಕಡಿಮೆಯೇ! ಅದೆಷ್ಟೋ ಮಹಾತ್ಮರು ಬಾಳಶಿಲ್ಪಿಯಾಗಿ ಮರೆಯಲ್ಲೇ ಮೆರೆದ ಅವರ ತಂದೆಯಂದಿರ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ!

ತನ್ನ ಎಷ್ಟೋ ವೈಯಕ್ತಿಕ ಕನಸುಗಳನ್ನೂ, ಹವ್ಯಾಸಗಳನ್ನೂ, ಆಸೆಗಳನ್ನೂ ಬದಿಗಿಟ್ಟು ನಮ್ಮ ಬಾಲ್ಯದ ಕನಸುಗಳನ್ನೂ, ಭವಿಷ್ಯದ ಸುರಕ್ಷೆಯನ್ನೂಕಟ್ಟಿ ಕೊಡುವವನು ತಂದೆ! ಆದರೆ ತಾನು ಕರ್ತವ್ಯಪರತೆಯಲ್ಲಿಸುಮ್ಮನೆ ಮಾಡುತ್ತ ಸಾಗುತ್ತಾನೆಯೇ ಹೊರತು ಎಲ್ಲವನ್ನೂಹಂಚಿಕೊಳ್ಳುವುದೇ ಇಲ್ಲ. ಇಂಥ ಪ್ರತ್ಯಕ್ಷ ದೇವರಾದ ತಂದೆಗೆ ಉಪನಿಷತ್ತೇ ಪಿತೃ ದೇವೋ ಭವ ಎಂದು ಉದ್ದಂಡ ನಮಸ್ಕಾರ ಹಾಕಿದೆ!

Leave a Reply