ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು

ಕುಮಾರವ್ಯಾಸ ಕರ್ಣಾಟಭಾರತ ಕಥಾಮಂಜರಿಯನ್ನು ರಚಿಸುವಾಗ ದೇವತೆಗಳ ಸ್ತುತಿ ಮಾಡಿ ತಾನು ರಚಿಸುತ್ತಿರುವ ಕಾವ್ಯದ ಕೆಲಸ ಯಾವ ವಿಘ್ನಗಳಿಲ್ಲದೆ ಸಾಗಿ ಎಲ್ಲ ದೇವರ ಕೃಪೆ ಆಶೀರ್ವಾದ ತನ್ನಮೇಲಿರಲಿ ಎಂದು ಗದುಗಿನ ವೀರನಾರಾಯಣ,ಶಾರದೆ,ಲಕ್ಷ್ಮಿ, ಗಣಪತಿ ಸಹಿತ ಅನೇಕ ದೇವತೆಗಳ ಸ್ತುತಿ ಮಾಡಿದ್ದಾನೆ. ಹಾಗೆಯೇ ತಾನು “ಮಹಾಭಾರತ” ಕಾವ್ಯ ರಚಿಸುತ್ತಿದ್ದು ಬಹಳಷ್ಟು ಸಮಕಾಲೀನ ಕವಿಗಳು “ರಾಮಾಯಣ”ವನ್ನು ಮಾತ್ರ ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡದ್ದನ್ನು ಕವಿ ಅಣುಕಿಸುತ್ತಾನೆ. “ರಾಮಾಯಣದ” ಎಲ್ಲ ಕಥೆ, ಉಪಕಥೆಗಳ ಎಷ್ಟೊಂದು ಕಾವ್ಯಗಳಿವೆಯೆಂದರೆ “ರಘುವರನ” ಚರಿತೆಯಲ್ಲಿ ಕಾಲಿಡಲು ಜಾಗವಿಲ್ಲ ಎಂದು ಕುಮಾರವ್ಯಾಸ ವಿಡಂಬನೆ ಮಾಡುತ್ತಾನೆ.

“ಗದುಗಿನ ಭಾರತ”ದ ಶ್ರವಣ ಕೀರ್ತನೆಗಳು ಮಾನವ ಕುಲದ ಮೇಲೆ ಯಾವ ರೀತಿ ಪ್ರಭಾವ ಬೀರಿವೆಯೆಂದರೆ, ಅರಸರು,ದ್ವಿಜರು,ಯೋಗೀಶ್ವರರು,ಮಂತ್ರಿಗಳು,ವಿರಹಿಗಳು, ವಿದ್ಯಾಪರಿಣಿತರಾದಿ ಎಲ್ಲರೂ ಇದರಲ್ಲಿ ತಮ್ಮ ಸಮಸ್ಯೆಗಳಿಗೆ ಸಮಾಧಾನವನ್ನು ಹುಡುಕುತ್ತಾರೆ ಎನ್ನುತ್ತಾನೆ ಕುಮಾರವ್ಯಾಸ.

ಕುಮಾರವ್ಯಾಸ ಭಾರತ ಗಮಕ ವಾಚನ ವ್ಯಾಖ್ಯಾನ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕರ್ನಾಟಕದ ಒಂದು ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯದಲ್ಲಿ ಗಮಕ ವಾಚನ ಪ್ರಾರಂಭಿಸುವಾಗ “ಮಂಗಳ ಪದ್ಯಗಳಿಂದ” ಪ್ರಾರಂಭಿಸುವ ಪದ್ಧತಿ ಇದೆ. ಮಂಗಳ ಪದ್ಯಗಳಲ್ಲಿ ಹಲವು ದೇವರ ಸ್ತುತಿಗಳಾದರೆ ಹಲವು ಫಲಶ್ರುತಿಗಳಾಗಿವೆ. ಹೀಗಾಗಿ ಕಥಾ ಪ್ರಸಂಗ ಪ್ರಾರಂಭಿಸುವಾಗ ದೇವರ ಸ್ತುತಿಗಳಿಂದ ಪ್ರಾರಂಭಿಸಿ ಕಥಾಪ್ರಸಂಗ ಮುಗಿದಮೇಲೆ ಫಲಶ್ರುತಿ ಪದ್ಯಗಳಿಂದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವ ಪರಿಪಾಠವಿದೆ.

ವೇದವನ್ನು ಪಾರಾಯಣ ಮಾಡಿದ ಫಲ, ಗಂಗಾಸ್ನಾನ/ತೀರ್ಥ ದ ಫಲ, ತಪಸ್ಸು ಮಾಡಿದರೆ ಸಿಗುವ ಫಲ, ವಸ್ತ್ರ ದಾನ, ಕನ್ಯಾದಾನ ಮಾಡಿದರೆ ಸಿಗುವ ಫಲಗಳು ಕುಮಾರವ್ಯಾಸ ರಚಿಸಿದ ಭಾರತವನ್ನು ಓದಿದರೆ ಅಥವಾ ಕೇಳಿದರೆ ಸಿಗಬಲ್ಲವು ಎಂದು ಕವಿ ಫಲಶೃತಿಯಲ್ಲಿ ಹೇಳಿದ್ದಾನೆ.

ಆಯ್ದ “ಮಂಗಳಪದ್ಯಗಳ” ವಾಚನದ ಝಲಕ್ ಲಭ್ಯವಿದೆ. ಆನಂದಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

Leave a Reply