ವಾಹರೇ.. ಬಹದ್ದೂರ

ಜನಿಸಿತೊಂದು ದೇಶದಸ್ವತ್ತು ಭರತಖಂಡದಲಿ
ಸ್ಮರಿಸುತಿಹೆವು ಇಂದು ಹರುಷದಲಿ
ಬೆಳೆದರು ಪ್ರೀತಿಯ ನನ್ಹೆ ಆಗಿ
ಧುಮುಕಿದರು ಸ್ವತಂತ್ರ್ಯ ಚಳುವಳಿ ಸಲುವಾಗಿ
ಸ್ವಾಭಿಮಾನದಲಿ ನದಿಯ ಈಜಿ
ಹೃದಯ ಭೂಮಿಕೆಯಲಿ ಧೈರ್ಯಸಾಹಸ ಬೀರಿ
ಪರಿಹಾಸ್ಯವ ಗೈದಿರೆ ಜನ ಆಕೃತಿ ಕಂಡು
ದೇಶದ ಗತಿ ಅಧೋಗತಿ ಎಂದು
ನಯ ವಿನಯದಲಿ ಸರ್ವರಲಿ ಬೆರೆತು
ಜನಹಿತಕಾಗಿಯೇ ಸೇವೆಯಲಿ ಕಲೆತು
ಶತ್ರುಗಳಿಲ್ಲದ ಅಜಾತ ಶತ್ರು
ಸರಳ ಸಜ್ಜನಿಕೆಯ ನಿಜ ಕರ್ತೃ
ಪುಟ್ಟ ಮೂರುತಿಯ ಅಪ್ಪಟ ಚಿನ್ನ
ದೊಡ್ಡ ಕೀರುತಿಯ ದುಪ್ಪಟ ರನ್ನ
ದೇಶಪ್ರೇಮದ ಚೇತನ ಹರಿಸಿದ ಜನಕ
ವೃತ್ತಿ ನಿಷ್ಠೆಯ ಅಪೂರ್ವ ಸಾಧಕ
ಮೃದು ನುಡಿಯಲಿ ಇತ್ತು ಮಾರ್ದನಿ
ಪ್ರಾಮಾಣಿಕತೆಯ ಮಾದರಿ ಪ್ರಧಾನಿ
ನಿಬ್ಬೆರಗಾಯಿತು ಕೋಟಿ ಜನಸಮುದಾಯ
ಕಾಣುತ ಇವರ ಅಂತರಂಗದ ವಜ್ರಕಾಯ
ಆತ್ಮೀಯತೆ ಮೆರೆದ ಸಾಕಾರ ಮೂರ್ತಿ
ಇವರೇ ನಮ್ಮ ಲಾಲಬಹದ್ದೂರ ಶಾಸ್ತ್ರಿ
– ಉಮಾ ಭಾತಖಂಡೆ

Leave a Reply