ಸಂಪ್ರದಾಯಗಳ ಆಚರಣೆಗಳಿಗಿರುವ ವೈಜ್ಞಾನಿಕ ಹಿನ್ನೆಲೆ

ಸಂಪ್ರದಾಯಗಳ ಆಚರಣೆಗಳಿಗಿರುವ ವೈಜ್ಞಾನಿಕ ಹಿನ್ನೆಲೆ
ನಮ್ಮ ಧರ್ಮದ ತಳಹದಿಯೇ ಸಂಪ್ರದಾಯಗಳು. ಈ ಸಂಪ್ರದಾಯಗಳಲ್ಲಿ ಕೆಲವು ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ತಾಳೆಯಾಗದವೂ ಇದ್ದರೆ, ಇನ್ನೂ ಕೆಲವು ಸಾರ್ವಕಾಲಿಕವಾಗಿರುವಂಥವು. ಕೆಲವು ಮೂಢನಂಬಿಕೆಗಳ ಸಾಲಿಗೆ ಸೇರುವಂಥವಾದರೆ ಇನ್ನೂ ಕೆಲವು ಇಂದಿಗೂ ಪ್ರಸ್ತುತವೆನ್ನಿಸುವಂಥವು. ಆದಿಕಾಲದಿಂದಲೇ ತನ್ನ ಅನೇಕ ವೈಜ್ಞಾನಿಕ, ವೈದ್ಯಕೀಯ, ಖಗೋಲಶಾಸ್ತ್ರೀಯ ಸಂಶೋಧನೆ ಗಳಿಂದಾಗಿ ಜಗತ್ತನ್ನೇ ತಮ್ಮತ್ತ ಸೆಳೆದಿವೆ. ಇಂದು ಮುಂದುವರೆದವರೆನ್ನಿಸಿಕೊಂಡ ದೇಶಗಳೆನ್ನಿಸಿರುವ ಅಮೆರಿಕ ಮುಂತಾದವು ಮೈಮೇಲೆ ಬಟ್ಟೆಗಳನ್ನು ಕೂಡ ಧರಿಸಲು ಬಾರದ ಅನಾಗರಿಕ ಸ್ಥಿತಿಯಲ್ಲಿದ್ದಾಗ ನಾವು ಎಲ್ಲ ಕ್ಷೇತ್ರಗಳಲ್ಲೂ ಮುಂದುವರೆದವರಾಗಿದ್ದೆವು. ಲಿಪಿಯನ್ನು ಕಂಡುಹಿಡಿದಿದ್ದೆವು, ಅಣು-ಪರಮಾಣುಗಳ ಬಗ್ಗೆ ಕೂಡ ಮಾಹಿತಿಯನ್ನು ನಮ್ಮ ಮಹಿಳೆಯರು ದೇವರ ಮುಂದೆ ಹಾಕುವ ರಂಗೋಲಿಯ ಮುಖಾಂತರ ತಿಳಿಸಿದ್ದರು.
ಆದರೂ ನಮ್ಮ ಧರ್ಮಗಳಲ್ಲಿ ನಮ್ಮ ಸಂಪ್ರದಾಯಗಳ ವಿರುದ್ಧ ವೈಜ್ಞಾನಿಕ ಕಾರಣಗಳು ಯಾವಾಗಲೂ ಒಂದು ವಿಧದಲ್ಲಿ ಅಭಿಪ್ರಾಯ ಭೇದಗಳ ಹೋರಾಟವನ್ನೇ ನಡೆಸುತ್ತಿರುತ್ತವೆ. ಅದರಲ್ಲೂ ಈ ಸಂಪ್ರದಾಯಗಳನ್ನು ಯಾವಾಗಲೂ ಮೂಢನಂಬಿಕೆಗಳು ಎಂದು ತೆಗೆದು ಹಾಕುವ ಮನೋಭಾವವೇ ಬಹುತೇಕ ಆಧುನಿಕರಲ್ಲಿದೆ. ಎಲ್ಲರೂ ಈ ನಮ್ಮ ಧರ್ಮದ ಸಂಪ್ರದಾಯಗಳನ್ನು ಹೀಗಳೆಯುತ್ತಾರೆ. ಕೈಕಾಲು ತೊಳೆದು ಊಟ ಮಾಡಲೂ ಒಲ್ಲೆವೆಂದರು. ಟೇಬಲ್-ಕುರ್ಚಿಗಳನ್ನೇ ಬಯಸಿದರು. ಸ್ನಾನ, ಪೂಜೆ, ಉಪವಾಸಗಳನ್ನು ಅಲ್ಲಗಳೆದರು. ಗ್ರಹಣಕಾಲದಲ್ಲಿ ಮಾಂಸಾದಿಗಳನ್ನು ಸೇವಿಸಿದರು! ಬೀಗಿದರು! ಬೆಡ್ ಟೀಯನ್ನು ಬಯಸಿದರು. ಬಿಸಿಲು ದೇಶದಲ್ಲಿ ತೆಳುವಾದ ಧೋತರವನ್ನು ತಿರಸ್ಕರಿಸಿ ದಪ್ಪನಾದ ಜೀನ್ಸ್ ಪ್ಯಾಂಟ್ ಧರಿಸಿದರು. ಅದರಲ್ಲಿಯೇ ಖುಶಿ ಕಂಡರು.
ಆದರೆ ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಸತ್ಯವು ಎಲ್ಲರಿಗೂ ತಿಳಿಯುತ್ತ ಬಂದಿತ್ತು. ಇದರಿಂದ ತಿಳಿದು ಬಂದದ್ದೆಂದರೆ ವೈಜ್ಞಾನಿಕ ಜ್ಞಾನವೇ ಸಂಪ್ರದಾಯಗಳ ಹೆಸರಿನಲ್ಲಿ ತಲೆ ತಲೆಮಾರುಗಳಿಂದ ಬೆಳೆದು ಬಂದಿದೆ ಎಂಬುದು! ಆದರೂ ವಿಚಿತ್ರವೆಂದರೆ ಸಾಮಾನ್ಯ ಜನರಿಗೆ ಮಾತ್ರ ಇದು ವಿಜ್ಞಾನ ಎನ್ನುವ ಮಾಹಿತಿಯೇ ಇಲ್ಲ.ಅವರು ಇದನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಸಂಪ್ರದಾಯವೆಂದೇ ಆಚರಿಸಿಕೊಂಡು ಬರುತ್ತಿದ್ದಾರೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ಅವುಗಳಲ್ಲಿಯ ಜೊಳ್ಳು ಕಾಳುಗಳನ್ನು ಬೇರ್ಪಡಿಸಿ ಗಟ್ಟಿಯಾಗಿರುವುವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ನಮ್ಮಲ್ಲಿ ಅನೇಕ ಅರ್ಥಪೂರ್ಣ ಭಾರತೀಯ ಸಂಪ್ರದಾಯಗಳೂ ಇವೆ. ನಮ್ಮ ಭಾರತೀಯ ಸಂಪ್ರದಾಯಕ್ಕೆ ತನ್ನದೇ ಆದ ಇತಿಹಾಸವಿದೆ.
ಮಹಿಳೆಯರಿಂದಲೇ ಪ್ರಾರಂಭಿಸುವುದಾದರೆ, ಹಣೆಗೆ ಕುಂಕುಮ ಇಡುವ ಪದ್ಧತಿ. ಹಣೆಯಲ್ಲಿ ಏಳು ನರಗಳು ಸೇರುತ್ತಿದ್ದು ಅಲ್ಲಿ ಕುಂಡಲಿನಿ ಶಕ್ತಿಯು ಕುಂಕುಮದಿಂದಾಗಿ ಜಾಗೃತವಾಗುತ್ತದೆ. ಮಹಿಳೆಯರ ಎರಡು ಕೆನ್ನೆಯಲ್ಲಿ ಅರಿಶಿಣ ಇಡುವುದರಿಂದ ಅರಿಶಿಣದಲ್ಲಿರುವ ರೋಗ ನಿರೋಧಕ ಶಕ್ತಿಯು ಚರ್ಮವನ್ನು ಕಾಪಾಡುತ್ತದೆ. ಎರಡೂ ಕೈಗಳಿಗೆ ಬಳೆ ತೊಡುವುದರಿಂದ ಕೈಗಳಲ್ಲಿರುವ ನರಗಳಿಗೆ ಶಕ್ತಿ, ಚೈತನ್ಯ ಬರುತ್ತದೆ. ಅಲ್ಲದೆ ಬಳೆಗಳ ಶಬ್ದದಿಂದ ಉಂಟಾಗುವ ತರಂಗಗಳಿಂದಾಗಿ ಮಾನಸಿಕ ಆರೋಗ್ಯ ಹೆಚ್ಚಿಸುತ್ತದೆ. ಉತ್ತರದ ಕಡೆಗೆ ಮದುವೆಯಾದ ಹೆಂಗಸರು ಬೈತಲೆಯಲ್ಲಿ ಧರಿಸುವ ಸಿಂಧೂರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಸಿಂಧೂರವನ್ನು ಅರಿಶಿಣ-ಸುಣ್ಣ ಮತ್ತು ಪಾದರಸದ ಲೋಹಗಳನ್ನು ಸೇರಿಸಿ ಮಾಡಿರುತ್ತಾರೆ. ಪಾದರಸವು ಸ್ವಾಭಾವಿಕವಾಗಿ ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು ಸಹ ಕೆರಳಿಸುತ್ತದೆ.
ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಕಾಲುಂಗುರ ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಅಲ್ಲದೆ, ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಕೂಡ ಆಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದುಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.
ಕೈಗಳಿಗೆ ಮೆಹಂದಿ/ಹೆನ್ನಾವನ್ನು ಹಚ್ಚಿಕೊಳ್ಳುವುದು ಕೈಗಳಿಗೆ ಅಲಂಕಾರವನ್ನು ನೀಡುವುದರ ಜೊತೆಗೇ ಮೆಹಂದಿಯುಲ್ಲಿರುವ ಔಷಧೀಯ ಗುಣಗಳಿಂದಾಗಿ ಕೂಡ ವಧುವಿಗೆ ಅತ್ಯಗತ್ಯ. ಮದುವೆಯ ದಿನದಂದು ವಧುವಿಗೆ ಉಂಟಾಗುವ ಒತ್ತಡವು ತಲೆನೋವು ಮತ್ತು ಜ್ವರವನ್ನು ತರಬಹುದು. ಆದ್ದರಿಂದ ಮದುವೆ ದಿನ ಹತ್ತಿರ ಬಂದಾಗ ವಧುವಿಗೆ ಮೆಹಂದಿಯನ್ನು ಹಚ್ಚುತ್ತಾರೆ. ಇದರಿಂದ ವಧುವಿನ ಒತ್ತಡವು ಕಡಿಮೆಯಾಗುತ್ತದೆ ಮತ್ತು ಆಕೆಯ ದೇಹಕ್ಕೆ ಇದು ತಂಪನ್ನು ನೀಡಿ, ನರಗಳು ಒತ್ತಡಕ್ಕೆ ಒಳಗಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮೆಹಂದಿಯನ್ನು ನರಗಳು ಕೊನೆಗೊಳ್ಳುವ ಭಾಗದಲ್ಲಿ ಅಂದರೆ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುತ್ತಾರೆ.
ಇನ್ನು ಪುರುಷರ ಬಗ್ಗೆ ಹೇಳುವುದಾದರೆ, ಅವರು ತಲೆಯ ಮೇಲೆ ಶಿಖೆ ಬಿಡುವ ವಿಚಾರ. ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು ಅಧಿಪತಿ ಮರ್ಮ ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವು ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ್ನಾ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.
ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗಬಾರದು
ಇದರ ಹಿಂದೆ ಒಂದು ಕಟ್ಟುಕತೆಯಿದೆ, ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ ಅಥವಾ ಭೂತಗಳನ್ನು ಆಹ್ವಾನಿಸಿದಂತಾಗುತ್ತವೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವು ಇರುತ್ತದೆ (ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು ಸಹ ಕರೆಯುತ್ತಾರೆ. ನಮ್ಮ ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ನಾವು ಉತ್ತರಕ್ಕೆ ತಲೆ ಇಟ್ಟು ಮಲಗಿದಾಗ, ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾಶೂನ್ಯತೆ ( ಅರಿವಿನ ಕೊರತೆ), ಪಾರ್ಕಿನ್‍ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಮಸ್ಕಾರ ಮಾಡಲು ಎರಡು ಅಂಗೈಗಳನ್ನು ಜೋಡಿಸುವುದು ನಮ್ಮ ಸಂಪ್ರದಾಯ. ಅತಿಥಿಗಳನ್ನು ಅಥವಾ ಹಿರಿಯರನ್ನು ಕಂಡಾಗ ಅವರನ್ನು ಸ್ವಾಗತಿಸಲು “ನಮಸ್ಕಾರ” ಮುದ್ರೆ ಎಂದರೆ ಎರಡು ಅಂಗೈಗಳನ್ನು ಜೋಡಿಸುತ್ತೇವೆ. ಇದರ ಹಿಂದಿನ ವೈಜ್ಞಾನಿಕ ಸತ್ಯಾಂಶವೆಂದರೆ, ಎರಡು ಕೈಗಳ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ. ಅಲ್ಲದೆ, ಇದರಿಂದಾಗಿ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಪಾಶ್ಚಾತ್ಯರಂತೆ ನಾವು ಕೈಕುಲುಕುವುದಿಲ್ಲ. ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸುವುದಿಲ್ಲ. ಹೀಗಾಗಿ ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ!
ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈಧ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. .
ಚರಣ ಸ್ಪರ್ಶ ಮಾಡುವುದೂ ನಮ್ಮ ಸಂಪ್ರದಾಯ. ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಆಗಿರುತ್ತಾರೆ. ಅವರು ನಮ್ಮ ನಮಸ್ಕಾರವನ್ನು ಸ್ವೀಕರಿಸಿದಾಗ ಈ ಕ್ರಿಯೆಯು ನಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ ( ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ). ನಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ). ಇದು ನಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ.
ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ
ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗು ಅಪ್ಪಿಕೊಳ್ಳುವ ಮೂಲಕ ಸಹ ಮಾಡಬಹುದು. ಮೆದುಳಿನಿಂದ ಆರಂಭವಾಗುವ ನರಗಳು ನಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನರಗಳು ನಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ. ನಾವು ನಮ್ಮ ಕೈಬೆರಳಿನ ತುದಿಯು ಇತರರ ಪಾದಗಳನ್ನು ಸ್ಪರ್ಶಿಸಿದಾಗ, ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ ” ಧಾರಕಗಳಾಗಿ” ಕಾರ್ಯನಿರ್ವಹಿಸುತ್ತವೆ. ನಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು ” ನೀಡುವ” ಅಂಶವಾಗಿ ಗುರುತಿಸಲ್ಪಡುತ್ತದೆ.
ಋತುಗಳ ಆಧಾರದಲ್ಲಿ ಹಿಂದೂ ಧರ್ಮದಲ್ಲಿ ಹಬ್ಬದ ಆಚರಣೆಗಳು ಕೂಡ ವಿಶೇಷತೆಯನ್ನು ಹೊಂದಿವೆ. ಜತೆಗೆ ಹಬ್ಬಗಳಲ್ಲಿ ರೂಢಿಯಲ್ಲಿರುವ ಆಹಾರ ಪದ್ಧತಿಯೂ ಸಹ ವಿಶೇಷವಾಗಿದೆ.
ಬೆಳಕಿನ ಹಬ್ಬ ದೀಪಾವಳಿ, ಈ ದಿನಗಳಲ್ಲಿ ಕತ್ತಲು ಬೇಗ ಆಗುತ್ತದೆ. ಅಲ್ಲದೆ ಚುಮುಚುಮು ಚಳಿಯೂ ಕೂಡ ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ದೀಪಗಳನ್ನು ಉರಿಸಿ ಬೆಚ್ಚಗೆ ಮಾಡುವ ಉಪಾಯವಿದು. ದೀಪಾವಳಿಯು ಕಾರ್ತೀಕ ಮಾಸದಲ್ಲಿ ಬರುತ್ತದೆ. ಈ ಮಾಸದಲ್ಲಿ ಮೂವತ್ತು ದಿನಗಳ ಕಾಲ ಶಿವನನ್ನು ವಿಶೇಷವಾಗಿ ಪೂಜಿಸುವ ಪರಿಪಾಠವಿದೆ. ಈ ಸಮಯದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಲಕ್ಷ ದೀಪವನ್ನು ಹಚ್ಚುವ ಮೂಲಕ ಶಿವನ ನಾಮಸ್ಮರಣೆ ಮಾಡುವ ಮೂಲಕ ಆರಾಧಿಸಿ ಕೃತಾರ್ಥರಾಗುತ್ತಾರೆ.
ಫಾಲ್ಗುಣ ಮಾಸದಲ್ಲಿ ಹೋಳಿ ಹುಣ್ಣಿಮೆ ಬರುತ್ತದೆ. ಆಗ ಎಲ್ಲೆಡೆಯೂ ಗಿಡ ಮರಗಳು ಚಿಗುರುತ್ತವೆ. ಆದ್ದರಿಂದಲೇ ಹೋಳಿ ಆಡಿ ಸಂಭ್ರಮಿಸಿ ಬರಮಾಡಿಕೊಳ್ಳುತ್ತಾರೆ. ಚೈತ್ರ ಮಾಸದಲ್ಲಿ ಯುಗಾದಿ ಹಬ್ಬದ ಸಂಭ್ರಮ. ಮೈಗೆ ಎಣ್ಣೆ ಒತ್ತಿಕೊಂಡು ಒಣಗಿದ ಚರ್ಮಕ್ಕೆ ವಿದಾಯ ಹೇಳುತ್ತೇವೆ. ಹೀಗೆಯೇ ಶ್ರಾವಣದ ಹಬ್ಬಗಳು. ಮಳೆಗಾಲದಲ್ಲಿ ರೈತರಿಗೆ ಹೊಲಗಳಲ್ಲಿ ಹೋಗಿ ದುಡಿಯಲು ಸಾಧ್ಯವಿಲ್ಲವಾದ್ದರಿಂದ ಈ ಹಬ್ಬಗಳಲ್ಲಿ ಮನೋರಂಜನೆ ದೊರೆಯುತ್ತಿತ್ತು.
ಇನ್ನು ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು ಕೂಡ ನಮ್ಮಲ್ಲಿ ರೂಢಿಯಲ್ಲಿದೆ. ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದಾಗಿ ನಮಗೆ ಅದೃಷ್ಟವು ದೊರೆಯುತ್ತದೆ ಎಂದು ಹೇಳುತ್ತಾರೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹವನ್ನು ಸೇರಬೇಕೆಂಬುದೇ ನಮ್ಮ ಪೂರ್ವಜರ ಸದಿಚ್ಛೆಯಾಗಿತ್ತು.
ಇನ್ನು ದೇವಾಲಯಗಳಲ್ಲಿಯ ಘಂಟೆಗಳನ್ನು ಬಾರಿಸುವ ಪದ್ಧತಿ. ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ಆದರೆ ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಅಲ್ಲದೆ,
ಈ ಘಂಟೆಯನ್ನು ತಯಾರಿಸುವಲ್ಲಿ ಕೂಡ ಒಂದು ವೈಜ್ಞಾನಿಕ ದೃಷ್ಟಿಕೋನವಿದೆ. ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆ.
ಹಿಂದೂ ಧರ್ಮದಲ್ಲಿ “ತುಳಸಿ” ಗಿಡಕ್ಕೆ ಮಾತೃ ಸ್ಥಾನವಿದೆ. ಪವಿತ್ರವೆಂದೆನಿಸಿದ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವಿದೆ. ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯಷ್ಟೇ ಅಲ್ಲ, ಆಯುರ್ವೇದಿಕವಾಗಿಯೂ ಕೂಡ ಮಹತ್ವದ ಸ್ಥಾನವನ್ನು ಪಡೆದಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿದರು. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಕೂಡ ಎಲ್ಲರಿಗೆ ತಿಳಿದ ವಿಚಾರವೇ. ಅಲ್ಲದೆ ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಅಲ್ಲದೆ, ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
ನಾವು ಅರಳಿ ಮರವನ್ನು ಪೂಜಿಸುತ್ತೇವೆ
“ಅರಳಿ ಮರ” ಅಥವಾ “ಅಶ್ವತ್ಥ ವೃಕ್ಷ” ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಸಾಮಾನ್ಯ ಹಳ್ಳಿಯ ಜನರು ಸಹ ಇದನ್ನು ಬೆಳೆಸಿ, ಪೋಷಿಸುತ್ತಾರೆ. ಪೂಜಿಸುತ್ತಾರೆ. ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕ ಎಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿ ನಡೆದುಬಂದಿದೆ.
ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಘ್ಯವಾಗಿ ನೀಡುತ್ತೇವೆ. ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
ನಾವು ಮಾಡುವ ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈಧ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ 80% ರಷ್ಟು ನೀರು ಮತ್ತು ಶೇ.20% ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ.
ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಧ್ಯಾನಕ್ಕೆ ಯಾವುದೇ ಭಂಗ ಬರುವದಿಲ್ಲ ಮತ್ತು ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತದೆ.
ಒಟ್ಟಿನಲ್ಲಿ ವೈಜ್ಞಾನಿಕ ಹಿನ್ನೆಲೆಗಳನ್ನು ಹೊಂದಿರುವ ಸಂಪ್ರದಾಯಗಳು ನಮ್ಮ ಭಾರತೀಯ ಜನಜೀವನದ ಆಧಾರಸ್ತಂಭಗಳೆಂದು ಹೇಳಬಹುದು.

ಮಾಲತಿ ಮುದಕವಿ.

Leave a Reply