ಸಣ್ಣ ಹಕ್ಕಿಗಳ ದೊಡ್ಡ ಕೆಲಸ

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

ಬಹಳ ಹಿಂದಿನ ಕಾಲದ ಕತೆ ಇದು. ಒಂದು ಊರಲ್ಲಿ ಒಬ್ಬ ರಾಜ ಇದ್ದ. ಬಹಳ ಒಳ್ಳೆಯ ರಾಜ. ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅವರ ಸುಖಕ್ಕಾಗಿ ಶ್ರಮಿಸುತ್ತಿದ್ದ.
ಒಂದು ದಿನ ಊರ ರೈತರೆಲ್ಲ ರಾಜನ ಬಳಿಗೆ ಬಂದು, ‘ಮಹಾಸ್ವಾಮಿ, ಊರಲ್ಲಿ ಗುಬ್ಬಿಗಳು ಬಹಳ ಹೆಚ್ಚಾಗಿವೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಅವು ಹೊಲಗಳನ್ನು ಮುತ್ತುತ್ತಿವೆ. ನಮಗೆ ಕಷ್ಟನಷ್ಟ ಉಂಟು ಮಾಡುತ್ತಿವೆ. ಈ ಗುಬ್ಬಿಗಳನ್ನೆಲ್ಲ ಕೊಲ್ಲಿಸಿ ನಮ್ಮ ಸಂಕಟವನ್ನು ಪರಿಹರಿಸಿ’ ಎಂದು ಬೇಡಿಕೊಂಡರು.
ಅರಸನು ಜನರ ಮಾತನ್ನು ಕಿವಿಗೊಟ್ಟು ಕೇಳಿದ. ‘ಗುಬ್ಬಿಗಳು ಕಾಳನ್ನು ತಿನ್ನುವುದೇನೋ ನಿಜ. ಆದರೆ ಅದಕ್ಕಿಂತ ಹೆಚ್ಚು ಹುಳು ಹುಪ್ಪಟೆಗಳನ್ನು ತಿನ್ನುತ್ತವೆ. ನಮ್ಮ ಪೈರನ್ನು ರಕ್ಷಿಸುತ್ತವೆ. ನಮಗೆ ಉಪಕಾರ ಮಾಡುತ್ತವೆ. ಇದು ನಿಮಗೆ ಗೊತ್ತಿಲ್ಲವೇ?’ ಎಂದು ಅವರನ್ನು ಪ್ರಶ್ನಿಸಿದ.
‘ಗೊತ್ತಿದೆ ಮಹಾಸ್ವಾಮಿ. ಆದರೆ ಈಗ ಅವುಗಳ ಸಂಖ್ಯೆ ಮಿತಿ ಮೀರಿದೆ. ಅವು ಮಾಡುವ ಉಪಕಾರಕ್ಕಿಂತ ಅಪಕಾರವೇ ಹೆಚ್ಚಾಗಿದೆ. ಅವುಗಳ ಹಾವಳಿಯನ್ನು ತಡೆಗಟ್ಟಲೇಬೇಕು. ಇಲ್ಲವಾದರೆ ನಾವಿನ್ನು ಕೃಷಿ ಮಾಡುವ ಹಾಗೇ ಇಲ್ಲ’ ಎಂದು ಜನ ಅರಿಕೆ ಮಾಡಿಕೊಂಡರು.
ಅರಸ ಜನರ ಸಂಕಟವನ್ನು ಪರಿಹರಿಸುವ ಭರವಸೆ ನೀಡಿದ. ತಕ್ಷಣ ಅವನು ರಾಜ್ಯದಲ್ಲಿದ್ದ ಬೇಡ ಜನರನ್ನು ತನ್ನಲ್ಲಿಗೆ ಬರಮಾಡಿಕೊಂಡ. ಹಳ್ಳಿ ಹಳ್ಳಿಗಳಿಗೆ ಹೋಗಿ ಗುಬ್ಬಿಗಳನ್ನೆಲ್ಲಾ ಹಿಡಿಯುವಂತೆ ಅವರಿಗೆ ಅಪ್ಪಣೆ ಮಾಡಿದ. ಇತರ ಪ್ರಜೆಗಳು ಸಹ ಈ ಕೆಲಸದಲ್ಲಿ ಸಹಕರಿಸುವಂತೆ ಕರೆಕೊಟ್ಟ. ‘ಗುಬ್ಬಿಗಳನ್ನು ಹಿಡಿದು ಅರಮನೆಗೆ ಒಪ್ಪಿಸಿ, ನಗದು ಬಹುಮಾನ ಪಡೆಯಿರಿ’ ಎಂದು ಅವನು ಊರಲ್ಲಿ ಡಂಗುರ ಸಾರಿಸಿದ.
ಜನ ಡಂಗುರವನ್ನು ಕೇಳಿದರು. ಹಣದ ಆಸೆಗಾಗಿ ಗುಬ್ಬಿಗಳನ್ನು ಹಿಡಿಯತೊಡಗಿದರು. ಹಿಡಿದ ಗುಬ್ಬಿಗಳನ್ನು ರಾಜನಿಗೆ ಒಪ್ಪಿಸಿ ಹಣವನ್ನು ಪಡೆದರು. ಆದರೆ ಕೆಲವರು ಬಾಣ ಬಿಟ್ಟು ಗುಬ್ಬಿಗಳನ್ನು ಕೊಂದರು. ಕೆಲವರು ಕಲ್ಲು ಹೊಡೆದು ಅವುಗಳನ್ನು ಸಾಯಿಸಿದರು. ಕೆಲವರು ವಿಷವಿಟ್ಟು ಅವುಗಳ ಜೀವ ತೆಗೆದರು. ಹೀಗೆ ಕ್ರಮೇಣ ಗುಬ್ಬಿಗಳ ಸಂಖ್ಯೆ ಕಡಿಮೆ ಆಯಿತು. ಅವುಗಳ ಪೀಡೆ ತೊಲಗಿತು ಎಂದು ಜನ ಖುಷಿಪಟ್ಟರು. ಇತ್ತ ರಾಜ ಜನರು ಹಿಡಿದುಕೊಟ್ಟ ಗುಬ್ಬಿಗಳನ್ನು ಅರಮನೆಯ ಉದ್ಯಾನವನದಲ್ಲಿ ಸಾಕತೊಡಗಿದ.
ದಿನಗಳು ಉರುಳಿದವು. ತಿಂಗಳುಗಳು ಕಳೆದು ಹೋದವು. ಊರ ಹೊಲಗದ್ದೆಗಳಲ್ಲಿ ಪೈರು ಪಚ್ಚೆಗಳು ಬೆಳೆದು ನಿಂತವು. ಗುಬ್ಬಿಗಳ ಹಾವಳಿ ಎಲ್ಲೂ ಕಾಣಿಸುತ್ತಿರಲಿಲ್ಲ. ಕೃಷಿಕರೆಲ್ಲ ಉತ್ತಮ ಫಸಲು ಪಡೆಯುವ ಕನಸು ಕಾಣತೊಡಗಿದರು. ಆದರೆ ಅವರ ಕನಸು ಕನಸಾಗಿಯೇ ಉಳಿಯಿತು. ಕಾರಣವೇನು ಗೊತ್ತೇ?’
ಹುಲುಸಾಗಿ ಬೆಳೆದ ಪೈರಲ್ಲಿ ಹುಳುಗಳು, ಮಿಡತೆಗಳು ಎಲ್ಲೆಲ್ಲೂ ಕಂಡುಬಂದವು. ದಿನದಿನಕ್ಕೆ ಅವುಗಳ ಸಂಖ್ಯೆ ಬೆಳೆಯಿತು. ಅರ್ಧಕ್ಕರ್ಧ ಪೈರನ್ನು ಅವು ತಿಂದು ನಾಶ ಮಾಡಿದವು. ಅವುಗಳನ್ನು ಹತೋಟಿಗೆ ತರಲು ಜನಗಳು ಹೆಣಗಾಡಿದರು. ಹೆಚ್ಚು ಕ್ರಿಮಿನಾಶಕಗಳನ್ನೂ ಬಳಸಿದರು. ಆದರೆ ಅವರ ಪ್ರಯತ್ನ ಫಲಿಸಲಿಲ್ಲ. ಬೆಳೆದ ಬೆಳೆಯ ಬಹುಪಾಲು ನಷ್ಟ ಆಯಿತು. ರೈತರು ನಿರಾಶರಾದರು. ಅವರಿಗೆ ದಾರಿ ಕಾಣದಾಯಿತು. ಅವರು ಮತ್ತೆ ರಾಜನಲ್ಲಿಗೆ ಬಂದರು. ತಮ್ಮ ಸಂಕಟವನ್ನು ತೋಡಿಕೊಂಡರು.
‘ಹಿಂದೊಮ್ಮೆ ಗುಬ್ಬಿಗಳ ಮೇಲೆ ನೀವು ದೂರು ತಂದಿದ್ದಿರಿ. ಗುಬ್ಬಿಗಳನ್ನೆಲ್ಲಾ ನಾಶಗೊಳಿಸಬೇಕು ಎಂದೂ ಹೇಳಿದಿರಿ. ಆಗಲೇ ಗುಬ್ಬಿಗಳು ಹುಳು ಹುಪ್ಪಟೆಗಳನ್ನು ತಿನ್ನುತ್ತವೆ. ಬೀಜಗಳನ್ನು ಹರಡಲು ಸಹಕರಿಸುತ್ತವೆ. ನಮ್ಮ ಪೈರನ್ನು ರಕ್ಷಿಸುತ್ತವೆ. ಅವು ನಮಗೆ ಉಪಕಾರಿಗಳು’ ಎಂದು ನಾನು ಹೇಳಿದ್ದೆ. ಆದರೆ ನೀವು ನನ್ನ ಮಾತಿಗೆ ಗಮನ ಕೊಡಲಿಲ್ಲ. ಗುಬ್ಬಿಗಳನ್ನು ನಾಶಗೊಳಿಸಬೇಕು ಎಂದು ಒತ್ತಾಯ ಮಾಡಿದಿರಿ. ಹಾಗಾಗಿಯೇ ಗುಬ್ಬಿಗಳನ್ನು ನಿಯಂತ್ರಿಸಲು ಒಪ್ಪಿಗೆ ಸೂಚಿಸಿದ್ದೆ. ಅದರಂತೆ ನೀವೂ ಮಾಡಿದಿರಿ. ಆದರೆ ಈಗ, ‘ಹೊಸತೊಂದು ಗಂಡಾಂತರ ಎದುರಾಗಿದೆ. ಹೀಗೆ ಆಗುವುದು ಸಹಜವೇ’ ಎಂದನು ರಾಜ.
‘ನಾವೆಲ್ಲ ಒಂದು ಮಾತನ್ನು ನೆನಪಿಡಬೇಕು. ಈ ಪ್ರಕೃತಿಯಲ್ಲಿನ ಜೀವರಾಶಿಗಳ ಇರುವಿಕೆಯಲ್ಲಿ ಒಂದು ವ್ಯವಸ್ಥೆ ಇದೆ. ಸಮತೋಲನ ಇದೆ. ಅದನ್ನು ಕೆಡಿಸಿದರೆ ಅನಾಹುತ ಆಗಿಯೇ ಆಗುತ್ತದೆ. ಗುಬ್ಬಿಗಳನ್ನು ನೀವು ನಾಶಗೊಳಿಸಿದಿರಿ. ಅದರ ಪರಿಣಾಮವಾಗಿಯೇ ಕ್ರಿಮಿಕೀಟಗಳು ಹೆಚ್ಚಿದವು. ಈಗ ಇವುಗಳ ಬಾಧೆ ತೊಲಗಬೇಕಾದರೆ ಖಾಲಿ ಬಿದ್ದ ಗುಬ್ಬಿಗಳ ಸ್ಥಾನ ತುಂಬಿ ಬರಬೇಕು. ಈ ಬಗ್ಗೆ ಯೋಚಿಸಿರಿ, ಕೆಲಸ ಮಾಡಿರಿ. ಆಗ ನಿಮ್ಮ ಸಮಸ್ಯೆ ತಾನಾಗಿಯೇ ಪರಿಹಾರವಾಗುತ್ತದೆ’ ಎಂದು ರಾಜ ವಿವರಿಸಿ ಹೇಳಿದ.
ಜನಕ್ಕೆ ಅರಸನ ಮಾತು ನಿಜ ಎನಿಸಿತು. ‘ನಮ್ಮ ಸಮಸ್ಯೆಯ ಮೂಲ ನಮಗೀಗ ಅರ್ಥವಾಗಿದೆ. ನಾವು ಪರಿಹಾರಕ್ಕಾಗಿ ಪ್ರಯತ್ನಿಸುತ್ತೇವೆ. ತಮ್ಮ ಅರಮನೆಯಲ್ಲಿ ಸಾಕಿರುವ ಗುಬ್ಬಿಗಳನ್ನು ಹೊರಗೆ ಬಿಟ್ಟು ಉಪಕರಿಸಿ. ಮುಂದೆ ಅವುಗಳ ರಕ್ಷಣೆಯ ಹೊಣೆ ನಮ್ಮದು’ ಎಂದು ಜನ ಕೇಳಿದರು. ರಾಜ ಅರಮನೆಯಲ್ಲಿ ಸಾಕಿದ್ದ ಗುಬ್ಬಿಗಳನ್ನೆಲ್ಲ ಹೊರಗೆ ಹಾರಲು ಬಿಟ್ಟ. ಜನರೆಲ್ಲ ಅಲ್ಲಿಂದ ಹೊರಟು ಹೋದರು.
ರೈತರ ಹೊಲಗಳ ಕಡೆ ಗುಬ್ಬಿಗಳು ಹಾರಿದವು. ಅಲ್ಲಿದ್ದ ಹುಳು ಹುಪ್ಪಟೆಗಳನ್ನೆಲ್ಲ ತಿನ್ನತೊಡಗಿದವು. ಕ್ರಮೇಣ ಹುಳುಗಳ ನಿಯಂತ್ರಣ ಆಯಿತು. ರೈತರ ಪೈರು ರಕ್ಷಣೆ ಆಯಿತು. ಜನರೆಲ್ಲ ಈ ಸಣ್ಣ ಹಕ್ಕಿಗಳಾದ ಗುಬ್ಬಿಗಳ ಕಾರ್ಯವನ್ನು ಮೆಚ್ಚಿದರು.

Leave a Reply