ಭವ್ಯ ವೃಕ್ಷಸಂಪತ್ತಿನ ಭೀಮಗಡ ವನ್ಯಧಾಮ

ನೀವು ನಗರ ಜೀವನದ ಜಂಜಾಟದಿಂದ ಬೇಸತ್ತಿದ್ದೀರಾ? ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹೇಳಲು ಇಷ್ಟಪಡುತ್ತೀರಾ? ಪರಿಶುದ್ಧ ಗಾಳಿ, ನೆಮ್ಮದಿ ಅರಸುತ್ತಿದ್ದೀರಾ? ಹಾಗಾದರೆ ತಡವೇಕೆ ಇಂದೇ ಹೊರಡಿ ಗಡಿ ಜಿಲ್ಲೆ ಬೆಳಗಾವಿ ತಾಲೂಕಿನ ಖಾನಾಪೂರದ ಅರಣ್ಯಪ್ರದೇಶಕೆ. ಇಲ್ಲಿ ಭೀಮಗಡ ವನ್ಯಧಾಮ, ಲೊಂಡಾ ಬಳಿ ದೂಧಸಾಗರ್ ಜಲಪಾತ, ಕಾರಂಜಾಳ ಕೆರೆ ಒಂದೇ ಎರಡೇ ಹಲವು ವಿಶೇಷವನ್ನೊಳಗೊಂಡ ವೃಕ್ಷ ಸಂಪತ್ತಿನ ಜತೆಗೆ ಹವಾಮಾನದ ಹಲವು ಮುಖಗಳ ವಿರಾಟದರ್ಶನ ಇಲ್ಲಿದೆ.

ಮಳೆಗಾಲ ಆರಂಭವಾಗಿದೆ. ದಟ್ಟ ಕಾಡು ಹಸಿರು ತೊಟ್ಟು ನಿಂತಿದೆ. ಮಳೆ ಇಲ್ಲಿನ ಸೌಂದರ್ಯವನ್ನು ಇಮ್ಮಡಿಸಿದೆ. ಮುಂಗಾರಿನ ಆಗಮನಕೆ ಕಾಯುತ್ತಿದ್ದ ಈ ಕಾಡು ರಮಣೀಯ ಪರಿಸರ ಸೃಷ್ಟಿಸಿದೆ. ಪಶ್ಚಿಮಘಟ್ಟದ ಶ್ರೇಣಿಯ ಸೆರಗಿನಲ್ಲಿ ಬರುವ ಈ ಕಾಡು ತನ್ನ ಮಡಿಲಲ್ಲಿ ಅಪಾರ ನಿಸರ್ಗ ಭಂಡಾರವನ್ನೇ ತುಂಬಿಕೊಂಡಿದೆ. ಗಡಿ ಜಿಲ್ಲೆ ಬೆಳಗಾವಿಯ ಖಾನಾಪೂರ ತಾಲೂಕಿನ ಈ ಕಾಡಿನ ಮಧ್ಯೆ ಪಯಣಿಸುವ ಯಾರೇ ಇರಲಿ ಭಾವಪರವಶರಾಗುವುದರಲ್ಲಿ ಸಂಶಯವೇಇಲ್ಲ.
ಗೋವಾ ರಾಜ್ಯಕ್ಕೆ ಸಂಪರ್ಕಕೊಂಡಿಯಂತಿರುವ ಈ ಪ್ರದೇಶದ ಪ್ರಕೃತಿ ಸೌಂದರ್ಯ ವರ್ಣನೆ ಪದಗಳ ಮಿತಿಗೆ ನಿಲುಕದ್ದು. ಕಣ್ಣು ಹಾಯಿಸಿದುದ್ದಕ್ಕೂ ಹಚ್ಚ ಹಸಿರು , ರಸ್ತೆಯ ಇಕ್ಕೆಲಗಳಲ್ಲಿ ಆಕಾಶದೆತ್ತರಕ್ಕೆ ಬೆಳೆದುನಿಂತಿರುವ ಬೃಹತ್ ಮರಗಳು, ಅಲ್ಲಲ್ಲಿ ನೀರಿನ ಝುಝುಳು ನಿನಾದ, ಮಳೆಯಾದರೇನು? ಬಿಸಿಲಾದರೇನು? ಎನ್ನುತ್ತಾ ತಲೆ ಮೇಲೆ ಹೊರೆಹೊತ್ತ ಗವಳಿ ಜನಾಂಗದ ಮಹಿಳೆಯರು. ರಸ್ತೆ ಬದಿ ಹಲಸಿನ ಹಣ್ಣು ಮಾರುತ್ತ ಕುಳಿತವರು ಕಾಣಸಿಗುತ್ತಾರೆ. ಅದೃಷ್ಟವಿದ್ದಲ್ಲಿ ನಿಮ್ಮ ದಾರಿ ಮಧ್ಯೆಯೇ ಸಾರಂಗ ಬಂದರೂ ಬರಬಹುದು.ಕಾರಣವಿಷ್ಟೇ ಇಲ್ಲೇ ಸಮೀಪದಲ್ಲೇ ಭಿಮಗಡ ವನ್ಯಧಾಮವಿದೆ. ಅರಣ್ಯಸಮೂದ ಮಧ್ಯೆ ತೆರೆದ ವಾಹನದಲ್ಲಿ ಹೊರಟರಂತೂ ಅದರ ಮಜಾನೇ ಬೇರೆ!
ಏನಿದು ಭೀಮಗಡ ವನ್ಯಧಾಮ?
ನಿತ್ಯಹರಿದ್ವರ್ಣ ಅರಣ್ಯ ಸಾಲಿನ ನೂತನ ವನ್ಯಧಾಮ ಭೀಮಗಡದ ಹೆಬ್ಬಾಗಿಲಿನಲ್ಲಿ ಅಪರೂಪದ ರೋಟನ್ ಫ್ರೀ ಟೇಲ್ಡ್ ಬ್ಯಾಟ್ ಸಂತತಿ ಇದೆ. ಅರಣ್ಯ ಇಲಾಖೆ ಇತ್ತೀಚೆಗೆ ನಿಸರ್ಗ ಪ್ರಿಯರಿಗಾಗಿ ನೇಚರ್ ಕ್ಯಾಂಪ್ ಸಿದ್ಧಪಡಿಸಿದ್ದು ಮಳೆಗಾಲದ ನಂತರ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಅಂದಾಜು 27ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕ್ಯಾಂಪ್ ಏಳು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು ಇಲ್ಲಿ ಒಂದು ಸುಂದರ ಪರಗೋಲ, 2ಡಿಲಕ್ಸ್, 2ಸಾಮಾನ್ಯ, 5 ಮಕ್ಕಳ ಕಾಟೇಜ್ ಟೆಂಟ್‍ಗಳು ಸಿದ್ಧಗೊಂಡಿವೆ. ಶುದ್ಧವಾದ ಕಾಡಿನ ಝರಿ ನೀರು ಈ ಕ್ಯಾಂಪ್‍ಗೆ ಆಧಾರವಾಗಿದೆ. ಸೋಲಾರ್ ವಿದ್ಯುತ್ ವ್ಯವಸ್ಥೆ ಇದ್ದು ನೇರ ವಿದ್ಯುತ್ ಪಡೆಯಲು ಇಲಾಖೆ ಪ್ರಯತ್ನ ನಡೆಸಿದೆ. ಕ್ಯಾಂಪ್‍ನಲ್ಲಿ ತಂಗಿರುವ ಪ್ರವಾಸಿ ರಸಿಕರು ಈ ಧಾಮದ ದಟ್ಟನೆಯ ತಳೇವಾಡಿ, ಗವಾಳಿ, ಭೀಮಗಡ ಕೃಷ್ಣಾಪುರ, ಹೆಮ್ಮಡಗಾ ಅರಣ್ಯ ಪ್ರದೇಶಗಳ ಮಧ್ಯೆ ಅರಣ್ಯ ಸಿಬ್ಬಂದಿ ಹಾಗೂ ಮಾರ್ಗದರ್ಶಕರ ನೆರವಿನಿಂದ ಟ್ರೆಕಿಂಗ್ ಹಾಗೂ ಪಕ್ಷಿಗಳ ವೀಕ್ಷಣೆ ಜತೆಗೆ ಅಪರೂಪದ ಬಾರಾಪೆಡಾ ಬಾವಲಿ ವೀಕ್ಷಿಸಬಹುದಾಗಿದೆ. ಡೈನಿಂಗ್ ಹಾಲ್ ವ್ಯವಸ್ಥೆಯೂ ಇದ್ದು ಪ್ರವಾಸಿಗರು ನಿಮ್ಮಿಷ್ಟದ ಅಡುಗೆಗೆ ತಯಾರಿಗೆ ಆದೇಶ ನೀಡಬಹುದಾಗಿದೆ.
ಜಗತ್ತಿನಲ್ಲೇ ಅಪರೂಪ…
ಜಗತ್ತಿನಲ್ಲೇ ಮೇಘಾಲಯ ಹಾಗೂ ಕಾಂಬೋಡಿಯಾ ದೇಶ ಹೊರತುಪಡಿಸಿ ಈ ವನ್ಯಧಾಮದ ತಳೇವಾಡಿ ಅರಣ್ಯ ಪ್ರದೇಶದ ಒಂದು ಮಹಾಗುಹೆ ಒಳಗೊಂಡು ಸುತ್ತಲಿನ 12 ಶೀತ ಗುಹೆಗಳ(ಬಾರಾಪೆಡ) ಕಗ್ಗತ್ತಲ ಬಿರುಕುಗಳಲ್ಲಿ ತಲೆಕೆಳಗಾಗಿ ನೇತಾಡುವ ಸಣ್ಣ ಬಾವಲಿಗಳು ಕಂಡುಬರುತ್ತವೆ. 1912ರಲ್ಲಿ ಬ್ರಿಟೀಷ್ ಅಧಿಕಾರಿ ವೃಟನ್ ಎಂಬುವವರು ಸಂಶೋಧಿಸಿದ್ದರಿಂದ ಇವುಗಳಿಗೆ ರೋಟನ್ ಫ್ರೀ ಟೇಲ್ಡ್ ಬ್ಯಾಟ್ ಎಂಬ ಹೆಸರು ಬಂದಿದೆ. ಈ ಗುಹೆಗಳಲ್ಲಿ ಕರಡಿಯಂಥ ಅಪಾಯಕಾರಿ ಪ್ರಾಣಿಗಳ ವಾಸವೂ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಬರೋದು ಹೇಗೆ?
ಭೀಮಗಡ ನೇಚರ್ ಕ್ಯಾಂಪ್ ಬೆಳಗಾವಿ ಹಾಗೂ ಗೋವಾ ಗಡಿಯಿಂದ 50 ಹಾಗೂ ಧಾರವಾಡ ಹುಬ್ಬಳ್ಳಿಯಿಂದ ಆಗಮಿಸುವವರಿಗೆ 80ರಿಂದ 100 ಕಿ.ಮೀ. ಅಂತರವಿದೆ. ದೂರದ ಊರುಗಳಿಂದ ಆಗಮಿಸುವವರಿಗೆ ಖಾನಾಪುರವರೆಗೆ ಸಾಕಷ್ಟು ರೈಲಿನ ಸೌಲಭ್ಯವಿದ್ದು ಖಾನಾಪುರ ರೈಲು ನಿಲ್ದಾಣದಿಂದ ಕ್ಯಾಂಪ್‍ಗೆ ಬರೀ 18ಕಿ.ಮೀ. ಅಂತರವಿದೆ.
ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಪತ್ತಿನ ಆಗರ…..
ಅಪರೂಪದ ಬಾವಲಿಗಳು ಹಾಗೂ ಪ್ರಾಣಿ ವೈವಿಧ್ಯದ ರಕ್ಷಣೆಗಾಗಿ ಲೋಂಡಾ ಅರಣ್ಯ ವಲಯದಿಂದ ಬೇರ್ಪಡಿಸಿ ಭೀಮ್‍ಗಡ ವನ್ಯಧಾಮ ಸೃಷ್ಟಿಸಲಾಗಿದೆ. ಇಲ್ಲಿ ಸಮೃದ್ಧ ನೆಲ್ಲಿ, ಮತ್ತಿ, ಗೇರು, ಮುರಕಲು, ನೇರಳೆ, ಹಲಸು, ಗೋಡಂಬಿ ಇನ್ನಿತರ ಬೃಹತ್ ಮರಗಳಿದ್ದು ಆನೆ ಹೊರತು 5ಕ್ಕೂ ಹೆಚ್ಚು ಹುಲಿ, ಚಿರತೆ, ಜಿಂಕೆ, ಚುಕ್ಕೆ ಜಿಂಕೆ, ಕಾಡು ಬೆಕ್ಕು, ಸಾಂಬಾರ್, ಸೀಳು ನಾಯಿ, ನಾಗರಹಾವು, ಕಾಡೆಮ್ಮೆ, ಹಂದಿ ಹಾಗೂ ಅಪಾರ ಪ್ರಮಾಣದಲ್ಲಿ ಕರಡಿಗಳಿದ್ದು ಆನೆ ಹೊರತುಪಡಿಸಿ ಎಲ್ಲ್ಲ ಬಗೆಯ ಪ್ರಾಣಿ ಸಂಪತ್ತು, ಚೆಂದದ ನವಿಲು, ಕಡುಕೋಳಿ ರಸ್ತೆಯ ಇಕ್ಕೆಲಗಳಲ್ಲಿ ಸಾಮಾನ್ಯ ದೃಷ್ಟಿಗೇ ಗೊಚರಿಸಿದರೆ ಗ್ರೇ ಹಾರ್ನ್‍ಬಿಲ್, ಕಿಂಗ್‍ಫಿಶರ್ ಹೆಚ್ಚಾಗಿದ್ದು ಇನ್ನಿತರ ಪಕ್ಷಿಗಳ ವಿಕಟನಾದ ಕೇಳಿಬರುತ್ತದೆ. ಜತೆಗೆ ಇವುಗಳ ಚಲನವಲನಗಳ ಛಾಯಾ ಹಾಗೂ ವಿಡಿಯೋ ದೃಷ್ಯಗಳು ಇಲಾಖೆಯ ಕಾಡಿನಲ್ಲಿ ಅಳವಡಿಸಿರುವ ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಬಂಧಿಯಾಗಿವೆ.
ಸೊಬಗಿನ ಪಾಂಚಾರಾ…..
ಈ ಧಾಮದ ಮಧ್ಯೆ ಹರಿಯುವ ಮಹದಾಯಿ ನದಿಯ ಉಪನದಿ ಪಂಚಾರಿ ತಿಳಿನೀರಿನ ಸೊಬಗು ಬಣ್ಣಿಸಲಸಾಧ್ಯ. ಬಿಳಿನೊರೆಯೊಂದಿಗೆ ಸದ್ದು ಮಾಡುತ್ತ ಕಪ್ಪು ಶಿಲೆಗಳ ಮೇಲೆ ಹರಿಯುವ ನದಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೃಷ್ಣಾಪುರ ತಳೇವಾಡಿ ಮಾರ್ಗಮಧ್ಯೆ ಸಿಗುವ ನದಿಗೆ ಕಲ್ಲು ಮಣ್ಣು ಹಾಕಿ ದಾರಿ ಮಾಡಿಕೊಂಡಿದ್ದು ಇದರಿಂದ ತಳೇವಾಡಿ ಸಂಪರ್ಕಿಸಬಹುದು.
ದಂಗುಬಡಿಸುವ ದೂಧ್‍ಸಾಗರ್
ಲೋಂಡಾದಿಂದ 40 ಕಿ.ಮೀ ಅಂತರದಲ್ಲಿರುವ ದೂಧ್‍ಸಾಗರ್ ಜಲಪಾತದ ವರ್ಣನೆಗೆ ಪದಗಳೇ ಸಾಲದು. ಬಳಕುತ್ತ ಧುಮ್ಮುಕ್ಕಿ ಬೀಳುವ ನೀರನ್ನು ನೋಡುತ್ತಿದ್ದರೆ ಜಗತ್ತಿನ ಅರಿವೇ ಬಾರದು. ಗಿರಿಯಿಂದ ಹಾಲಿನ ನೊರೆಯಂತೆ ಝುಳುಝುಳು ಎನ್ನುವ ಝರಿ ಮೈಗೆ ಸಿಂಪರಣೆಯಾದಾಗ ಸಿಗುವ ಸುಖ, ಸಂತಸಕ್ಕೆ ಪಾರವೇ ಇಲ್ಲ. ಮಂಜಿನ ಜತೆಗೆ ತುಂತುರು ಮಳೆ, ಕಣ್ಣೆದುರಿಗೆ ಹಾದುಹೋಗುವ ಮೋಡಗಳು ಮೈ ಮನ ಪುಳಕಿತಗೊಳಿಸುವುದಂತೂ ಸತ್ಯ. ಪ್ರವಾಸಿಗರ ಪಾಲಿಗೆ ಇದು ನೈಸರ್ಗಿಕ ಎಸಿ ಕಲ್ಪಿಸುತ್ತದೆ.

Leave a Reply