ಚಂದ್ರಶೇಖರ ಕಂಬಾರರ ಕಾವ್ಯಭಾಷೆ
ಕಂಬಾರರ ಕಾವ್ಯಗಳ ಧ್ವನಿಶಕ್ತಿಯಿರುವುದೇ ಅವರು ಬಳಸುವ ಭಾಷೆಯಲ್ಲಿ. ಕನ್ನಡದಲ್ಲಿ ಬೇಂದ್ರೆಯವರನ್ನು ಬಿಟ್ಟರೆ ಭಾಷೆಯ ಗ್ರಾಮೀಣ ಸೊಗಡನ್ನು ಕಾವ್ಯಕ್ರಿಯೆಯಲ್ಲಿ ದುಡಿಸಿಕೊಂಡವರಲ್ಲಿ ಕಂಬಾರರೇ ಮುಖ್ಯರು. ಭಾಷೆ ಮತ್ತು ಪ್ರತಿಮೆಗಳು ಪರಸ್ಪರ ಎಡತಾಕುತ್ತಲೇ ಧ್ವನಿಪೂರ್ಣಗೊಳ್ಳುವ ಶಕ್ತಿ ಕಂಬಾರರ ಕವಿತೆಗಳಿಗಿವೆ. ಇವುಗಳನ್ನು ಕುರಿತು ತಲಸ್ಪರ್ಶಿಯಾಗಿ ಪರಿಶೀಲಿಸಿ ಬರೆದ ಡಾ ಎಸ್ ಎಸ್ ಅಂಗಡಿಯವರ ಈ ಪುಸ್ತಕ ಕಂಬಾರರ ಕಾವ್ಯಾಭ್ಯಾಸಿಗಳಿಗೆ ಉಪಯುಕ್ತವಾಗಲಿದೆ.
ಸಾಹಿತ್ಯದಲ್ಲಿ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ. ಭಾಷೆಯನ್ನು ಸಾಹಿತ್ಯದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅದು ಅಭಿನ್ನ. ಏಕೆಂದರೆ ಸಾಹಿತ್ಯ ಸಂಭವಿಸುವುದು ಭಾಷೆಯ ಮೂಲಕವೇ. ಸಹೃದಯರು ಗ್ರಹಿಸುವ ವಸ್ತು, ಭಾಷೆಯ ಮೂಲಕವೇ ವಿಶಿಷ್ಟವಾದ ಅರ್ಥವನ್ನು ಪಡೆದುಕೊಂಡು ಸೃಷ್ಟಿಯಾಗುತ್ತದೆ. ಭಾಷೆಯ ಮೂಲಕವೇ ಕಾವ್ಯ ವಸ್ತುವಿನ ಸೂಕ್ಷ್ಮವಿನ್ಯಾಸಗಳು, ಪದರುಗಳು, ಭಾವಗಳು, ಸೂಕ್ಷ್ಮಕಂಪನಗಳು, ವೈವಿಧ್ಯ ಪೂರ್ಣವಾಗಿ ಪ್ರಕಟವಾಗುತ್ತವೆ. ಕಾವ್ಯಭಾಷೆ ಎನ್ನುವುದು ವ್ಯಾವಹಾರಿಕ ಭಾಷೆಗಿಂತ ಭಿನ್ನವಾದುದು. ಕಾವ್ಯಭಾಷೆಗಿರುವ ಸೂಕ್ಷ್ಮಸ್ತರಗಳು ವ್ಯಾವಹಾರಿಕ ಭಾಷೆಯಲ್ಲಿ ಕಾಣಿಸುವುದಿಲ್ಲ. ಕಾವ್ಯಭಾಷೆ ಖಾಸಗಿಯಾಗುತ್ತ ಅದು ಕವಿಯ ಒಳಜಗತ್ತಿಗೆ ಸಹೃದಯರನ್ನು ಒಯ್ದುಬಿಡುತ್ತದೆ. ಕನ್ನಡ ಕಾವ್ಯಲೋಕದಲ್ಲಿ ಭಾಷೆಯನ್ನು ಸಮರ್ಥವಾಗಿ ಬಳಸಿದ ಕವಿಗಳಲ್ಲಿ ಕಂಬಾರರು ಪ್ರಮುಖರು.
ಕಂಬಾರರು, ಬೇಂದ್ರೆ, ಬೆಟಗೇರಿ ಅವರ ಪ್ರಭಾವವನ್ನು ಪಡೆದುಕೊಳ್ಳುತ್ತಲೇ ಕ್ರಮೇಣ ಆ ಪ್ರಭಾವದಿಂದ ಮುಕ್ತರಾಗಿ ಭಿನ್ನಮಾರ್ಗ ಹಿಡಿದರು; ಬೆಳೆದರು. ಭಾಷೆ, ಛಂದಸ್ಸು, ವಸ್ತು, ಪ್ರತಿಮೆ ಎಲ್ಲವೂ ಕಂಬಾರರ ಕಾವ್ಯದಲ್ಲಿ ಭಿನ್ನವಾಯಿತು.
Reviews
There are no reviews yet.