ಗುರುದೇವ ರವೀಂದ್ರನಾಥ ಠಾಕೂರ್ (೧೮೬೧-೧೯೪೧) ಮನುಕುಲ ಕಂಡ ಮಹಾನ್ ಪ್ರತಿಭೆಗಳಲ್ಲಿ ಒಂದು. ತಂದೆ ದೇವೇಂದ್ರನಾಥ್ ಠಾಕೂರ್. ತಾಯಿ ಶಾರದಾ ದೇವಿ. ಅವರ ಹದಿನಾಲ್ಕನೆಯ ಹಾಗೂ ಕೊನೆಯ ಮಗ. ರವೀಂದ್ರರು ಶಾಲೆಯಲ್ಲಿ ಓದಿದ್ದು ಕಡಿಮೆ. ಮನೆಯಲ್ಲಿಯೇ ಸಂಸ್ಕೃತ, ಬಂಗಾಳಿಗಳ ಜೊತೆಯಲ್ಲಿ ಇಂಗ್ಲಿಷನ್ನು ಕಲಿತರು. ಇಂಗ್ಲೆಂಡಿಗೆ ಹೋದರೂ ಯಾವುದೇ ಪದವಿಯನ್ನು ಗಳಿಸಲಿಲ್ಲ. ಹೀಗೆ ಸ್ವಶಿಕ್ಷಿತ ರವೀಂದ್ರರು, ೧೯ನೆಯ ಶತಮಾನದಲ್ಲಿ ಉಪನಿಷತ್ತುಗಳು ಬೋಧಿಸುವ ಪರಬ್ರಹ್ಮನ ಸ್ವರೂಪವನ್ನು ತಿಳಿಸಲೆತ್ನಿಸುವ ಬ್ರಹ್ಮಸಮಾಜದ ಪ್ರವರ್ತಕರಲ್ಲಿ ಒಬ್ಬರು. ರವೀಂದ್ರರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದರೂ, ಅವರು ಮೂಲತಃ ಕವಿ. ಅವರದ್ದು ಬಹುಮುಖ ಪ್ರತಿಭೆ. ಗಮಕಿ, ಗಾಯಕ, ಸಂಗೀತ ಸಂಯೋಜಕ, ನಟ, ನಿರ್ದೇಶಕ, ಚಿತ್ರ ಕಲಾವಿದ, ಸಂಘಟಕ ಹಾಗೂ ಮಹಾನ್ ಕನಸುಗಾರ. ರವೀಂದ್ರರು ತಮ್ಮ ಜೀವಮಾನದಲ್ಲಿ ಸುಮಾರು ೫೦೦೦ ಕವನಗಳನ್ನು ರಚಿಸಿದರೆಂದು ಪ್ರತೀತಿ. ಹಾಗೆಯೇ ಸುಮಾರು ೨೦೦೦ ಗೀತೆಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದು, ಅವು ಇಂದು ರವೀಂದ್ರ ಸಂಗೀತ ಎಂದು -ಹಿಂದುಸ್ಥಾನಿ, ಕರ್ನಾಟಕ ಹಾಗೂ ಪಾಶ್ಚಾತ್ಯ ಸಂಗೀತಗಳ ಹದ ಮಿಶ್ರಣ – ಹೆಸರಾಗಿದೆ. ಇವರು ತಮ್ಮ ೮ನೆಯ ವರ್ಷದಲ್ಲಿ ಮೊದಲ ಕವನವನ್ನು ಬರೆದರೆ, ತಮ್ಮ ೧೩ನೆಯ ವಯಸ್ಸಿಗೆ ಶೇಕ್ಸ್‌ಪಿಯರನ ‘ಮ್ಯಾಕ್‌ಬೆತ್’ ನಾಟಕವನ್ನು ಬಂಗಾಳಿ ಭಾಷೆಗೆ ಅನುವಾದಿಸಿದ ಪ್ರತಿಭಾಶಾಲಿ. ೧೮೯೦ರಲ್ಲಿ ತಮ್ಮ ‘ಮಾನಸಿ’ ಕವನಸಂಕಲನವನ್ನು ಬಿಡುಗಡೆ ಮಾಡಿದರು. ರವೀಂದ್ರರಿಗೆ ಪಾಶ್ಚಾತ್ಯ ಶೈಲಿಯ ಶಿಕ್ಷಣ ಸರಿಯೆನಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಉಪನಿಷತ್ಕಾಲದ ಶಿಕ್ಷಣವನ್ನು ನೆನಪಿಸುವ ಶಾಂತಿನಿಕೇತನವನ್ನು ಸ್ಥಾಪಿಸಿದ್ದು, ಮುಂದೆ ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಪರಿಣಮಿಸಿದ್ದು ಒಂದು ಇತಿಹಾಸ. ೧೯೧೩ರಲ್ಲಿ ರವೀಂದ್ರರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿಯು ದೊರೆಯಿತು. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಯೂರೋಪೇತರ ವ್ಯಕ್ತಿಯಾಗಿ ದಾಖಲೆಯನ್ನು ಮಾಡಿದರು.

Additional information

Category

Author

Publisher

Book Format

Ebook

Language

Kannada

Pages

48

Reviews

There are no reviews yet.

Only logged in customers who have purchased this product may leave a review.