ಶ್ರೀ ಡಿ.ಆರ್‌. ನಾಗರಾಜರವರು ಬರೆದ ‘ಆಧುನಿಕ ಕನ್ನಡ ಕಾವ್ಯದ ನಾಲ್ಕು ವಸ್ತುಗಳು: ಒಂದು ಪರಿಶೀಲನೆ’ ಎಂಬ ಮಹಾಪ್ರಬಂಧ ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್‌.ಡಿ. ಪದವಿಗೆ ಅರ್ಹವಾಗಿದೆ ಮಾತ್ರವಲ್ಲದೆ, ಪ್ರಬಂಧವು ಹಲವು ದೃಷ್ಟಿಗಳಿಂದ ಕನ್ನಡದಲ್ಲಿ ಒಂದು ಅನನ್ಯವೂ ಶ್ರೇಷ್ಠವೂ ಆದ ಕೃತಿಯಾಗಿದೆ. ಪ್ರಬಂಧದ ವ್ಯಾಪ್ತಿ ದೊಡ್ಡದು : ‘ಭೂಮಿ ಮತ್ತ ಮನುಷ್ಯ’, ‘ಕಾಲ ಮತ್ತು ಮನುಷ್ಯ’, ‘ಕಾಮ ಮತ್ತು ಮನುಷ್ಯ’, ‘ಸಮಾಜ ಮತ್ತು ಮನುಷ್ಯ’ ಹೀಗೆ ನಾಲ್ಕು ಭಾಗಗಳಲ್ಲಿರುವ ಪ್ರಬಂಧ, ಕನ್ನಡ ಕಾವ್ಯದ ಮುಖ್ಯ ಕಾಳಜಿಗಳನ್ನು ಪರೀಕ್ಷಿಸುವುದರ ಜೊತೆಯಲ್ಲೆ, ಕನ್ನಡದ ಎಲ್ಲ ಮುಖ್ಯ ಆಧುನಿಕ ಕವಿಗಳ ಮೇಜರ್ ಎನ್ನಬಹುದಾದ ಕೃತಿಗಳೆಲ್ಲವನ್ನೂ ಆಳವಾಗಿ, ಸೂಕ್ಷ್ಮವಾಗಿ, ಒಂದು ಕೇಂದ್ರ ದೃಷ್ಟಿಕೋನದ ಪ್ರವೇಶಕ್ಕೆ ಸಿಕ್ಕುವಂತೆ ಚರ್ಚಿಸಲು ಪ್ರಬಂಧದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಎಲ್ಲೂ ಪ್ರಬಂಧದ ವ್ಯಾಪ್ತಿ ಕೃತಕವೆನ್ನಿಸುವುದಿಲ್ಲ. ಲೇಖಕನ ದೃಷ್ಟಿಕೋನಕ್ಕೆ ಅಧೀನವಾಗಿ ಇಡೀ ಚರ್ಚೆ ಮೊದಲಿಂದ ಕೊನೆಯವರೆಗೆ ಹಲವು ಕವಿಗಳ ಹಲವು ಕವನಗಳನ್ನು ಸಹಜವಾಗಿ ಒಳಗೊಳ್ಳುತ್ತ ಬೆಳೆಯುತ್ತ ಹೋಗಿದೆ.
ಲೇಖಕರ ದೃಷ್ಟಿಕೋನ ಮೇಲೆ ಹೇಳಿದ ಬೀಸಿನಲ್ಲಿ ಇಡಿಯಾಗಿ ಆಧುನಿಕ ಕನ್ನಡ ಕಾವ್ಯವನ್ನು ಪರೀಕ್ಷಿಸುವಾಗ ತಾರತಮ್ಯ ವಿವೇಚನೆಯನ್ನು ಕಳೆದುಕೊಳ್ಳದ ಸಾಹಿತ್ಯ ವಿಮರ್ಶೆಯ ಎಚ್ಚರವನ್ನೂ, ತಾತ್ವಿಕ ವ್ಯಾಖ್ಯಾನಕ್ಕೆ ಅಗತ್ಯವಾದ ವೈವಿಧ್ಯದ ಉದಾರ ಗ್ರಹಿಕೆಯನ್ನೂ ಒಂದಕ್ಕೊಂದು ವಿರೋಧವಾಗದಂತೆ ಒಳಗೊಂಡಿರುವುದು ಈ ಪ್ರಬಂಧದ ಇನ್ನೊಂದು ವಿಶೇಷವಾಗಿದೆ. ಲೇಖಕರ ‘ಮಾರ್ಕ್ಸಿಸ್ಟ್‌’ ಎನ್ನಬಹುದಾದ ದೃಷ್ಟಿಕೋನ ಎಲ್ಲೂ ಒರಟಾಗಿ ಕೆಲಸ ಮಾಡಿಲ್ಲ. ಕಾವ್ಯದ ಆತ್ಮನಿಷ್ಠ ಅನುಭವದ ವಿಶ್ಲೇಷಣೆಯನ್ನು ಸೂಕ್ಷ್ಮವಾದ ವೈಜ್ಞಾನಿಕ ಮಾರ್ಕ್ಸ್‌ವಾದೀ ದೃಷ್ಟಿ ಓದುಗನ ರಸಗ್ರಹಣದ ಶಕ್ತಿಗೆ ಕುಂದು ಬಾರದಂತೆ ಮಾಡಬಲ್ಲುದೆಂಬುದನ್ನೂ, ಹಾಗೆ ಮಾಡಿದಾಗ ಮಾತ್ರ ಮಾರ್ಕ್ಸ್‌ವಾದವೂ ಸಾಹಿತ್ಯದಿಂದ ಕಲಿಯಬಲ್ಲು ದೆಂಬುದನ್ನೂ ಶ್ರೀ ಡಿ.ಆರ್ ನಾಗರಾಜರು ಈ ಪ್ರಬಂಧದಲ್ಲಿ ರುಜುವಾತು ಪಡಿಸಿದ್ದಾರೆ. ಇದಕ್ಕೆ ಪ್ರಬಂಧದ ಕೆಲವು ಕಡೆಗಳಲ್ಲಿ ಅಪವಾದವಿಲ್ಲವೆಂದಲ್ಲ. ಉದಾಹರಣೆಗೆ ‘ಹೂವು-ದೇವರು’ (ಪು. 68-69) ಎಂಬ ಸಾಮಾನ್ಯ ಪದ್ಯದಲ್ಲಿನ ಅನುಭವ ಎಷ್ಟು ಸಾಚವೆನ್ನುವಂತೆ ಮೂಡಿದೆ ಎಂದು ನಮಗೆ ಅನುಮಾನವಾಗುತ್ತದೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.