ಇದೊಂದು ಪ್ರಾದೇಶಿಕ ಕಾದಂಬರಿ. ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬಹುದಾದ (ನಡೆದಿಲ್ಲದ) ವಸ್ತುವುಳ್ಳ ಕೃತಿ. ಈ ಕಾರಣದಿಂದ ಈ ವಸ್ತು ಕರಾವಳಿಯನ್ನು ಹೊರತುಪಡಿಸಿದವರಿಗೆ ಖಂಡಿತ ಹೊಸತು.
ಧರ್ಮ ಎನ್ನುವುದು ಮನುಷ್ಯನ ಆತ್ಮೋದ್ಧಾರಕ್ಕೆ ಅಂದರೆ ಅವನನ್ನು ಅವನೇ ಮೇಲೆತ್ತಿಕೊಳ್ಳಲಿಕ್ಕೆ (ಧಾರಯತೀತಿ ಧರ್ಮಃ) ಎನ್ನುವ ಅರ್ಥವುಳ್ಳದ್ದು. ಇಲ್ಲಿ ಮೇಲೆತ್ತಿಕೊಳ್ಳುವುದು ಅಂದರೆ ಪ್ರಾಣಿಸಹಜವಾದ ಗುಣವುಳ್ಳ ಮನುಷ್ಯನು ಆ ಗುಣಗಳಿಂದ ಹೊರಬಂದು ಮನುಷ್ಯತ್ವ ಎಂಬ ಪರಿಕಲ್ಪನೆಗೆ ಅಥವಾ ಮೌಲ್ಯಕ್ಕೆ ಸರಿಯಾಗಿ ಪರಿವರ್ತನೆಗೊಳ್ಳುವುದು ಎಂದು ಅರ್ಥ. ಆದರೆ ಅದೂ ಪೂರ್ತಿಯಾಗಿ ‘ಧರ್ಮ’ವನ್ನು ವ್ಯಾಖ್ಯಾನಿಸಿದ ಹಾಗಾಗದು. ಯಾಕೆಂದರೆ ಧರ್ಮದ ವ್ಯಾಪ್ತಿ ವಿಸ್ತಾರವಾದದ್ದು ಮತ್ತು ಅದು ಬಹುತ್ವದಿಂದ ಕೂಡಿದ್ದು. (ರಾಷ್ಟ್ರಧರ್ಮ, ರಾಜಧರ್ಮ, ಪಿತೃಧರ್ಮ, ಮಾತೃಧರ್ಮ ಇನ್ನೂ ಹೀಗೆ ಅನೇಕವಾಗಿ ಉಳ್ಳದ್ದು). ಹಾಗಾಗಿ ‘ಇದುವೇ ಇದು’ ಎಂದು ಹೇಳುವ ಹಾಗೆ ಧರ್ಮವನ್ನು ಕೈಯಲ್ಲಿ ಹಿಡಿಯಲು ಬರುವುದಿಲ್ಲ. ಆದರೆ ನಡೆನುಡಿಯಲ್ಲಿ ಹಿಡಿಯಬಹುದು ಎಂದು ನಮ್ಮ ಹಿರಿಯರು ತೋರಿಸಿಕೊಟ್ಟಿದ್ದರು. ಅದನ್ನು ಜೀವನಪ್ರೀತಿ, ಜೀವನ ಮೌಲ್ಯ ಅಥವಾ ಮನುಷ್ಯಧರ್ಮ ಎಂದು ಟಂಕಿಸಬಹುದು.
ಹೀಗೆ ಮನುಷ್ಯ ಪ್ರೀತಿಗೆ, ಭೂತ ದಯೆಗೆ ಕಾರಣವಾಗಬೇಕಾದ ಧರ್ಮವು ತನ್ನ ಅಂತಃಸತ್ವವನ್ನೂ, ಪರಿಕಲ್ಪನೆಯನ್ನೂ ಈಚೀಚೆಗೆ ಅಂದರೆ ಶತಮಾನಗಳಿಂದ ಕಳೆದುಕೊಳ್ಳುತ್ತಾ ಬಂದಿದೆ. ಈಗ ಧರ್ಮ ಅಂದರೆ ದೇವರನ್ನು ನಂಬುವುದು, ದೇವರನ್ನು ಆರಾಧಿಸುವುದು, ಹರಕೆಗಳನ್ನು ಹೊರುವುದು ಇಲ್ಲವೇ ದಾನಧರ್ಮಗಳನ್ನು (ಅದು ಯಾವ ಮೂಲದಿಂದ ಸಂಗ್ರಹಿಸಲ್ಪಟ್ಟದಾದರೂ ಸರಿಯೇ) ಮಾಡುವುದು ಎಂಬಲ್ಲಿಗೆ ಬಂದು ನಿಂತಿದೆ. ಜೊತೆಗೆ ಧರ್ಮದೊಂದಿಗೆ ರಾಜಕೀಯವು ಬೆರೆತು ಧರ್ಮ ಎನ್ನುವುದು ಜಾತಿ ಮತಗಳಿಗೆ ಮೀಸಲಾದಂತೆಯೂ ಆಗಿದೆ. ಹಾಗೆಯೇ ಅದು ಶ್ರೇಷ್ಠತೆಯ ವ್ಯಸನಕ್ಕೆ ತನ್ಮೂಲಕ ಜೀವವಿರೋಧಿ ಭಾವನೆಗೆ ಅಥವಾ ಅಧಿಕಾರ ಗ್ರಹಣಕ್ಕೆ ಕಾರಣವಾಗುವುದೂ ಇದೆ.

Additional information

Category

Author

Publisher

Book Format

Ebook

Pages

232

Language

Kannada

Year Published

2021

ISBN

978-81-949940-9-1

Reviews

There are no reviews yet.

Only logged in customers who have purchased this product may leave a review.