ಮೂರನೆಯ ಮಂತ್ರ:
ಹಿಂದಿ ಸಾಹಿತ್ಯದ ಬಹುಮುಖ್ಯ ನಾಟಕಕಾರರಾಗಿರುವ ಯೋಗೇಶ್ ತ್ರಿಪಾಠಿಯವರ ‘ತೀಸ್ರಿ ಮಂತ್ರ’ ನಾಟಕವನ್ನು ‘ಮೂರನೆಯ ಮಂತ್ರ’ ಎಂದು ಕನ್ನಡಕ್ಕೆ ತಂದಿದ್ದೇನೆ. ಈ ನಾಟಕವನ್ನು ಕನ್ನಡಕ್ಕೆ ತರಲು ಒತ್ತಾಸೆಪಡಿಸಿದವರು ಮೈಸೂರು ರಂಗಾಯಣದ ನಿರ್ದೇಶಕರಾಗಿರುವ ಭಾಗೀರಥಿಬಾಯಿ ಕದಂ ಹಾಗೂ ರಂಗಾಯಣದ ಖ್ಯಾತ ನಟರಾದ ಸಂತೋಷ ಕುಸನೂರು ಅವರುಗಳು. ಅವರು ಈ ನಾಟಕವನ್ನು ಮೈಸೂರು ರಂಗಾಯಣದ ತಿರುಗಾಟಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಪ್ರೀತಿಯ ಒತ್ತಾಯವು ಇಲ್ಲಿ ನಾಟಕವಾಗಿ ಅರಳಿದೆ. ಇವರಿಬ್ಬರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ನಾಟಕದ ಕಥಾವಸ್ತು ಬುದ್ಧನಿಗೆ ಸಂಬಂಧಿಸಿದ್ದು. ಆತನ ಪೂರ್ವ ಜನ್ಮದ ಕಥೆಗಳನ್ನು ಜಾತಕ ಕಥೆಗಳೆಂದು ಕರೆಯುತ್ತಾರೆ. ಆಗ ಬುದ್ಧ, ಭಗವಾನ ಬುದ್ಧನಾಗಿರಲಿಲ್ಲ. ಅವನನ್ನು ಬೋಧಿಸತ್ವನೆಂದು ಕರೆಯುತ್ತಿದ್ದರು. ಬೋಧಿಸತ್ವನ ೫೪೭ ಜನ್ಮಾಂತರದ ಕಥೆಗಳಿವೆ. ಬೋಧಿಸತ್ವನು ತನ್ನ ಕೊನೆಯ ಜನ್ಮದಲ್ಲಿ ಬುದ್ಧನಾದ. ಬೋಧಿಸತ್ವನೆಂದರೆ ಯಾವನು ಜ್ಞಾನದಿಂದ, ಸತ್ಯದಿಂದ ಮತ್ತು ದಯೆ ಕರುಣೆಯಿಂದ ಬುದ್ಧನಾಗುವನೋ ಅವನು ಬೋಧಿಸತ್ವ. ಕಥೆಗಳಲ್ಲಿ ಬೋಧಿಸತ್ವ ನಾಯಕನಾಗಿ ಕಾಣಿಸುವುದಿಲ್ಲ. ಆತ ಅನೇಕಸಲ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಬೋಧಿಸತ್ವ ತನ್ನ ಕಥೆಗಳಲ್ಲಿ ನಾಯಕತ್ವದ ಸ್ವರೂಪವನ್ನೇ ಮುರಿದು ಹಾಕುತ್ತಾನೆ. ಸಣ್ಣ ಪುಟ್ಟ ಜನಸಾಮಾನ್ಯರನ್ನು ನಾಯಕರನ್ನಾಗಿ ರೂಪಿಸುತ್ತಾನೆ.
Reviews
There are no reviews yet.