‘ಇದು ವಿಜ್ಞಾನದ ಬಾಗಿಲನ್ನು ಜನಸಾಮಾನ್ಯರಿಗೂ ತೆರೆಯುವ ಹೊತ್ತು’

‘ಇದು ವಿಜ್ಞಾನದ ಬಾಗಿಲನ್ನು ಜನಸಾಮಾನ್ಯರಿಗೂ ತೆರೆಯುವ ಹೊತ್ತು’

– ಟಿ. ಜಿ. ಶ್ರೀನಿಧಿ

ಜ್ಞಾನ-ತಂತ್ರಜ್ಞಾನಗಳು ಹಲವು ಶತಮಾನಗಳಿಂದ ಸಾಗಿಬಂದಿರುವ ಹಾದಿಯಲ್ಲಿ ದಾಟಿರುವ ಮೈಲಿಗಲ್ಲುಗಳು ಹಲವು. ಇಂತಹ ಪ್ರತಿಯೊಂದು ಮೈಲಿಗಲ್ಲನ್ನು ದಾಟಿದಾಗಲೂ ಮನುಷ್ಯನ ಬದುಕಿನ ಮೇಲೆ ವಿಜ್ಞಾನದ, ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಲೇ ಹೋಗಿದೆ. ಇದು ವಿಜ್ಞಾನದ ಯುಗ.

ಅಂದಹಾಗೆ ಈ ಪ್ರಯಾಣದಲ್ಲಿ ಎದುರಾದವು ಬರಿಯ ಮೈಲಿಗಲ್ಲುಗಳಷ್ಟೇ ಅಲ್ಲ, ಕೆಲ ಬೆಳವಣಿಗೆಗಳಿಂದಾಗಿ ಮಹಾತಿರುವುಗಳೂ ಸೃಷ್ಟಿಯಾಗಿವೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನಗಳಿಂದ ಪ್ರಾರಂಭಿಸಿ ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನಗಳವರೆಗೆ ವಿಜ್ಞಾನ- ತಂತ್ರಜ್ಞಾನದ ಎಲ್ಲ ಶಾಖೆಗಳೂ ಇಂತಹ ಮಹಾತಿರುವುಗಳನ್ನು ಕಂಡಿವೆ. ಒಂದೊಂದೂ ವಟವೃಕ್ಷವಾಗಿ ಬೆಳೆದಿವೆ.

ವಿಜ್ಞಾನದ ಹೆದ್ದಾರಿಯ ಪಥ ಬದಲಿಸಿದ ಇಂತಹ ಅನೇಕ ಮಹಾತಿರುವುಗಳನ್ನು ಕನ್ನಡದಲ್ಲಿ ಪರಿಚಯಿಸುವ ವಿಶಿಷ್ಟ ಕೃತಿಯೊಂದು ಇಂದು (ಸೆ.3) ಬೆಳಿಗ್ಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ, ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಎಂಬ ಹೆಸರಿನ ಈ ಪುಸ್ತಕದ ಸಂಪಾದಕರು ಡಾ. ಟಿ. ಆರ್. ಅನಂತರಾಮು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆ ಮಾಡುತ್ತಿರುವ ಅನಂತರಾಮುರವರ ಸಾಧನೆಗಳ ಪಟ್ಟಿಗೆ ಈ ಕೃತಿ ಮತ್ತೊಂದು ಮಹತ್ವದ ಸೇರ್ಪಡೆ.

ಭಾರತೀಯ ಭಾಷೆಗಳಲ್ಲಷ್ಟೇ ಏಕೆ, ಇಂಗ್ಲಿಷಿನ ಮಟ್ಟಿಗೂ ಅಪರೂಪದ್ದೆಂದೇ ಹೇಳಬಹುದಾದಂತಹ ಪರಿಕಲ್ಪನೆ ಇದು. ಪುಸ್ತಕ ಲೋಕಾರ್ಪಣೆಯ ಸಂದರ್ಭದಲ್ಲಿ ಅದರ ಸಂಪಾದಕರೊಡನೆ ಸಂವಾದ ನಡೆಸಲು ದೊರೆತ ಅವಕಾಶದಲ್ಲಿ ನಮ್ಮ ಮಾತುಕತೆ ಸಾಗಿದ್ದು ಹೀಗೆ…

ಕನ್ನಡದ ಓದುಗರಿಗೆ ಮತ್ತೊಂದು ವಿಶಿಷ್ಟ ಪುಸ್ತಕವನ್ನು ನೀಡುತ್ತಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆಗಳು. ಈ ಮಹಾತಿರುವುಗಳ ಬಗ್ಗೆ ಕೊಂಚ ವಿವರಿಸುತ್ತೀರಾ?

ನಮಸ್ಕಾರ. ಜಗತ್ತಿನಲ್ಲಿ ಸದಾಕಾಲವೂ ಸಾವಿರಾರು ಸಂಗತಿಗಳು ಘಟಿಸುತ್ತಲೇ ಇರುತ್ತವೆ, ಹಾಗೆಯೇ ಹಿಂದಕ್ಕೂ ಸರಿಯುತ್ತಿರುತ್ತವೆ. ಆದರೆ ಅವೆಲ್ಲವೂ ನಮ್ಮ ಬದುಕನ್ನು ತಟ್ಟುವುದಿಲ್ಲ. ಹಾಗಾಗಿ ನಮ್ಮ ಯೋಚನೆಗಳು ಅವುಗಳತ್ತ ಹರಿಯುವುದೂ ಇಲ್ಲ. ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗಿದ್ದರೂ ನಾವು ‘ಅದೇ ಕ್ರಮ’ ಎಂದು ಒಪ್ಪಿಕೊಂಡುಬಿಡುತ್ತಿದ್ದೆವು. ನಮ್ಮ ಭೂಮಿಗೆ ತೀರ ಹತ್ತಿರವಿರುವ ‘ಪ್ರಾಕ್ಸಿಮಾ ಸೆಂಟಾರಿ’ ನಕ್ಷತ್ರ ಇನ್ನೂ ನೂರು ಜ್ಯೋತಿರ್ವರ್ಷ ದೂರವಿದ್ದರೂ ನಮ್ಮ ಬದುಕಿನಲ್ಲಿ ಅದರಿಂದ ಏನೂ ವ್ಯತ್ಯಯವಾಗುತ್ತಿರಲಿಲ್ಲ. ಆದರೆ ವಿಜ್ಞಾನದ ಆವಿಷ್ಕಾರಗಳು, ಅದರ ಪರಿಣಾಮವಾಗಿ ಮೂಡಿಬಂದ ತಂತ್ರಜ್ಞಾನಗಳು ನಮ್ಮನ್ನು ಬಲವಾಗಿ ಬಂಧಿಸಿವೆ, ನಾವೀಗ ನಿಸ್ಸಂಶಯವಾಗಿ ಅವುಗಳ ದಾಸರಾಗಿದ್ದೇವೆ. ವಿದ್ಯುತ್ತಿಲ್ಲದೆ, ಮೋಟಾರು ವಾಹನಗಳಿಲ್ಲದೆ, ಅಷ್ಟೇ ಏಕೆ ಮೊಬೈಲ್ ಇಲ್ಲದೆ ನಾವು ನಿತ್ಯ ಬದುಕನ್ನು ನಡೆಸುವಂತೆಯೇ ಇಲ್ಲ ಎನ್ನುವ ಹಂತಕ್ಕೆ ಬಂದಿದ್ದೇವೆ.

ಇವೆಲ್ಲ ಒಂದೆರಡು ದಿನಗಳಲ್ಲಿ ಆದ ಬೆಳವಣಿಗೆಗಳೇನೂ ಅಲ್ಲ. ಬೆಣಚುಕಲ್ಲು ಉಜ್ಜಿದಾಗ ಬೆಂಕಿ ಕಂಡು ವಿಸ್ಮಯಪಟ್ಟ ಮಾನವ, ಕವಣೆ ಬೀಸಿ ಹಣ್ಣು ಉದುರಿಸಿದ. ಈಗ ಚಂದ್ರನ ಮೇಲೆ ಕಾಲಿಟ್ಟು, ಮಂಗಳಗ್ರಹದಲ್ಲಿ ನೆಲೆಯೂರಲು ಸಾಧ್ಯವೇ ಎಂದು ಯೋಚಿಸುತ್ತಿರುವುದು ವಿಜ್ಞಾನ ತಂತ್ರಜ್ಞಾನಗಳ ಮಹಾಜಿಗಿತ ಅಲ್ಲವೆ? ರಸಾಯನ ವಿಜ್ಞಾನ ಪ್ರಾರಂಭವಾದ್ದೇ ರಸದ ಬೆನ್ನುಹತ್ತಿ, ಅಂದರೆ ಚಿನ್ನಮಾಡುವ ಆಸೆಯಿಂದ. ಅದರಲ್ಲಿ ಸಫಲವಾಗದಿದ್ದರೂ ಮುಂದಿನ ಪ್ರಯತ್ನಗಳು ಜೀವ ಉಳಿಸುವ ಔಷಧಿಗಳ ಉತ್ಪಾದನೆಗೆ ನೆರವಾದವು. ಇದಲ್ಲವೆ ಮಹಾತಿರುವು? ಇಂಥ ತಿರುವುಗಳನ್ನು ವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಬಹುದು.

ಹಾಗಾದರೆ ಈ ಹೊಸ ಪುಸ್ತಕ ಓದುಗರಿಗೆ ಇಂತಹ ಮಹಾತಿರುವುಗಳನ್ನು ಪರಿಚಯಿಸಲಿದೆಯೇ?

ಹೌದು. ವಿಜ್ಞಾನದ ದೀರ್ಘ ಇತಿಹಾಸದಲ್ಲಿ ಯಾವ ಯಾವ ಹಂತಗಳಲ್ಲಿ ವಿಜ್ಞಾನವು ಆಯಾ ಕ್ಷೇತ್ರದಲ್ಲಿ ತಿರುವು ಪಡೆಯಿತು ಎನ್ನುವುದನ್ನು ಪರಿಚಯಿಸುವ ಪುಸ್ತಕ ಇದು.

ಈ ಕೃತಿಯ ಬಗ್ಗೆ ಪರಿಕಲ್ಪನೆ ಮೂಡಲು ವಿಜ್ಞಾನದಲ್ಲಾದ ಇಂತಹ ಅಸಾಧಾರಣ ಬೆಳವಣಿಗೆಗಳೇ ಕಾರಣ. ಎಲ್ಲಿ ಇಡೀ ವಿಜ್ಞಾನ ಮಾರ್ಗವೇ ಬದಲಾಗಿ ಬೇರೊಂದು ಕಡೆಗೆ ಹೊರಳಿತು, ಅದರ ಹಿಂದಿನ ಅಪಾರ ಶ್ರಮ ಯಾರದು ಎಂಬ ಸ್ಥೂಲ ವಿವರಗಳು ಓದುಗರಿಗೆ ಲಭ್ಯವಾಗಬೇಕು. ವಿಜ್ಞಾನದ ಸಂಗತಿಗಳೂ ಕೂಡ ಸಾಹಿತ್ಯದಂತೆಯೇ ಮನಸ್ಸಿಗೆ ಮುದ ನೀಡುವಂತಿರಬೇಕು. ವಿಜ್ಞಾನದ ಅರಿವಿನ ಕ್ಷಿತಿಜ ವಿಸ್ತರಿಸುತ್ತ ಹೋಗಬೇಕು. ಇದು ಸಂಪುಟದ ಪ್ರಧಾನ ಆಶಯ. ಹಲವು ಕ್ಷೇತ್ರಗಳ ವಿಷಯ ಪರಿಣತರೇ ಇಲ್ಲಿನ ಲೇಖನಗಳನ್ನು ಬರೆದಿದ್ದಾರೆ. ಆದ್ದರಿಂದ ಖಚಿತತೆ ತಂತಾನೇ ಲಭಿಸಿದೆ.

ಈ ಕೃತಿಯ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತೀರಾ?

ವಿಜ್ಞಾನ-ತಂತ್ರಜ್ಞಾನದ ಹದಿನಾಲ್ಕು ಶಾಖೆಗಳ ಬಗ್ಗೆ ಒಂದೇ ಪುಸ್ತಕದಲ್ಲಿ ಬರಹಗಳಿರುವುದೇ ಒಂದು ವೈಶಿಷ್ಟ್ಯ. ಇದರ ಜೊತೆಗೆ ಈ ಸಂಪುಟದಲ್ಲಿ ಇನ್ನೂ ಕೆಲವು ವಿಶೇಷ ಸೇರ್ಪಡೆಗಳಿವೆ. ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದ ಬಗ್ಗೆ ಹೇಳುವಾಗ ಹಲವು ಸಂದರ್ಭಗಳಲ್ಲಿ ಔಷಧಿವಿಜ್ಞಾನ ಕಣ್ಣು ತಪ್ಪಿಸುತ್ತದೆ. ಆದರೆ ಈ ಪುಸ್ತಕದಲ್ಲಿ ಹಾಗಾಗಿಲ್ಲ. ಅದೇ ರೀತಿ ವಿಧಿವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕುರಿತ ಲೇಖನವೂ ಇದೆ. ಈ ವಿಜ್ಞಾನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದರ ಅರಿವು ಈ ಮೂಲಕ ಸಾಮಾನ್ಯ ಓದುಗರಿಗೂ ಮೊದಲ ಬಾರಿಗೆ ಲಭ್ಯವಾಗುತ್ತಿದೆ. ವಿಜ್ಞಾನವು ಪ್ರತಿಬಾರಿಯೂ ಸಮಾಜಮುಖಿಯಾಗಿಲ್ಲ. ಮೊದಲನೇ ಮಹಾಯುದ್ಧದಲ್ಲಿ ವಿಷಾನಿಲಗಳ ಪ್ರಯೋಗವಾಯಿತು, ಎರಡನೇ ಮಹಾ ಯುದ್ಧದಲ್ಲಿ ಮನುಕುಲಕ್ಕೆ ಕಳಂಕ ಎನ್ನುವಂತೆ ಜಪಾನಿನ ಎರಡು ನಗರಗಳ ಮೇಲೆ ಬಾಂಬ್ ದಾಳಿಯಾಯಿತು. ವಿಜ್ಞಾನದ ದುರುಪಯೋಗ ಹೇಗಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಇದರ ಜೊತೆಗೆ ಪ್ರಗತಿಯ ಹೆಸರಿನಲ್ಲಿ ನಮ್ಮ ಇಡೀ ಪರಿಸರಕ್ಕೇ ಧಕ್ಕೆ ತಂದು ನಾವೂ ಸೇರಿದಂತೆ ಜೀವಿ ಸಂಕುಲಗಳ ಉಳಿವಿಗಾಗಿ ಹೋರಾಟಮಾಡಬೇಕಾದ ಸ್ಥಿತಿ ಎದುರಾಗಿದೆ. ಆ ಕುರಿತು ಎಚ್ಚರಿಕೆ ನೀಡುವ ಲೇಖನಗಳೂ ಈ ಸಂಪುಟದಲ್ಲಿವೆ.

ಇದಲ್ಲದೆ ವಿಜ್ಞಾನದ ಅನ್ವಯದಿಂದಲೇ ಮೂಡಿಬಂದ ತಂತ್ರಜ್ಞಾನ ಕುರಿತು ಹಲವು ಅಧ್ಯಾಯಗಳನ್ನು ಈ ಸಂಪುಟದಲ್ಲಿ ಸೇರಿಸಿದೆ. ಇಲ್ಲೂ ಕೂಡ ಅವು ಪಡೆದ ತಿರುವುಗಳನ್ನು ಗುರುತಿಸುವ ಪ್ರಯತ್ನವಿದೆ. ರೋಬಾಟ್ಸ್ ಬಳಕೆಯಿಲ್ಲದೆ ಮಂಗಳಗ್ರಹದ ಶೋಧ ಸಾಧ್ಯವಿಲ್ಲ. ವಿಜ್ಞಾನದ ತಿರುವುಗಳ ಕಥೆಯ ಓದು ಸುಲಭವಾಗಬೇಕು ಎಂಬ ಕಾರಣಕ್ಕಾಗಿ ಈ ಸಂಪುಟದಲ್ಲಿ ತಾಂತ್ರಿಕ ಪದಗಳ ಬಳಕೆ ಬಂದಾಗ ಆವರಣದಲ್ಲಿ ಅದಕ್ಕೆ ಸಂವಾದಿಯಾದ ಇಂಗ್ಲಿಷ್ ಪದಗಳನ್ನು ಕೊಟ್ಟಿದೆ. ಪರಿಕಲ್ಪನೆಗಳನ್ನು ಸರಳವಾಗಿ ಹೇಳಲು ಪ್ರಯತ್ನಿಸಿದೆ.

ಒಟ್ಟು ಇಪ್ಪತ್ತೈದು ಮಂದಿ ಲೇಖಕರು ಈ ಪುಸ್ತಕ ರಚನೆಯ ಕೆಲಸದಲ್ಲಿ ನಿಮ್ಮೊಡನೆ ಕೈಜೋಡಿಸಿದ್ದಾರೆ. ಇಷ್ಟು ದೊಡ್ಡ ತಂಡದೊಡನೆ ಕೆಲಸಮಾಡಿದ ಅನುಭವ ಹೇಗಿತ್ತು?

ಕನ್ನಡದಲ್ಲಿ ಪ್ರಬುದ್ಧ ವಿಜ್ಞಾನ ಬರಹಗಾರರ ಪಡೆಯೇ ಇದೆ. ಆಯಾ ವಿಜ್ಞಾನ ವಿಭಾಗದಲ್ಲಿ ಬೋಧಿಸಿದವರ, ಸಂಶೋಧನೆ ಮಾಡಿದವರ, ಲೇಖಕರಾಗಿ ಬರೆದವರ ಪಟ್ಟಿ ದೊಡ್ಡದು. ಹೀಗಾಗಿ ಈ ಪುಸ್ತಕಕ್ಕಾಗಿ ತಜ್ಞ ಲೇಖಕರನ್ನು ಸಂಪರ್ಕಿಸಿದಾಗ ಅದರಲ್ಲಿ ವಿಜ್ಞಾನದ ಪ್ರಮುಖ ಕ್ಷೇತ್ರಗಳಾದ ಭೌತವಿಜ್ಞಾನ, ಖಭೌತವಿಜ್ಞಾನ, ಅಂತರಿಕ್ಷವಿಜ್ಞಾನ, ರಸಾಯನವಿಜ್ಞಾನ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯವಿಜ್ಞಾನ, ಔಷಧಿವಿಜ್ಞಾನ, ವಿಧಿವಿಜ್ಞಾನ, ಕೃಷಿವಿಜ್ಞಾನ, ಭೂವಿಜ್ಞಾನ, ಪರಿಸರವಿಜ್ಞಾನ, ಗಣಿತ, ಎಂಜಿನಿಯರಿಂಗ್, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ-ಇಲ್ಲಿನ ಚಾರಿತ್ರಿಕ ಬೆಳವಣಿಗೆಗಳು ಮತ್ತು ಬದಲಾದ ಮಾರ್ಗಗಳನ್ನು ಕುರಿತು ಬರೆಯಲು ಅವರೆಲ್ಲ ಅತ್ಯಂತ ಪ್ರೀತಿಯಿಂದ ತೊಡಗಿಕೊಂಡರು. ಪ್ರತಿಯೊಬ್ಬರಲ್ಲೂ ಬರೆಯುವ ಉತ್ಸಾಹವಿತ್ತು. ಅವರೆಲ್ಲರ ಜೊತೆಯಲ್ಲಿ ಕೆಲಸಮಾಡಿದ ಅನುಭವ ನಿಜಕ್ಕೂ ಚೆನ್ನಾಗಿತ್ತು.

ಇಷ್ಟೆಲ್ಲ ದೊಡ್ಡ ಪುಸ್ತಕ ಎಂದಮೇಲೆ ಅದರ ಪ್ರಕಟಣೆಯೂ ಸಾಕಷ್ಟು ದೊಡ್ಡ ಕೆಲಸವೇ ಆಗಬಹುದು ಅಲ್ಲವೇ?

ಹೌದು. ವಿಷಯದ ವ್ಯಾಪ್ತಿ ಹೆಚ್ಚಿರುವುದರಿಂದ ಪುಟಗಳ ಸಂಖ್ಯೆ ಹೆಚ್ಚು. ವಿಜ್ಞಾನದ ಪುಸ್ತಕವಾದ್ದರಿಂದ ಬಣ್ಣದ ಚಿತ್ರಗಳು ಬೇಕು. ಬಣ್ಣದ ಚಿತ್ರ ಎಂದಮೇಲೆ ಕಾಗದದ ಗುಣಮಟ್ಟ, ಪುಸ್ತಕದ ಒಟ��ಟಾರೆ ವಿನ್ಯಾಸಗಳೂ ಚೆನ್ನಾಗಿರಬೇಕು. ಇವೆಲ್ಲದರ ಹಿನ್ನೆಲೆಯಲ್ಲಿ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು’ ಪುಸ್ತಕವನ್ನು ಯಾರು ಪ್ರಕಟಿಸುತ್ತಾರೆ ಎಂಬ ಪ್ರಶ್ನೆ ಏಳಬೇಕಾಗಿತ್ತು. ಆದರೆ ಹೆಸರಾಂತ ನವಕರ್ನಾಟಕ ಪ್ರಕಾಶನ ಸಂಸ್ಥೆ ಜೊತೆ ನನಗೆ ಹೆಚ್ಚು ಕಡಿಮೆ 25 ವರ್ಷಗಳ ಆತ್ಮೀಯ ಸಂಬಂಧವಿದ್ದುದರಿಂದ ಆ ಪ್ರಶ್ನೆ ಏಳಲಿಲ್ಲ. ನವಕರ್ನಾಟಕ ಪ್ರಕಾಶನ ಸಂಸ್ಥೆ ಮೊದಲಿನಿಂದಲೂ ಬೇರೆ ಬೇರೆ ಹಂತಕ್ಕೆ ಬೇಕಾದ ವಿಜ್ಞಾನ ಕೃತಿಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಿದೆ. ಈ ಸಂಸ್ಥೆಯೊಂದೇ ಸುಮಾರು 1,500 ವಿಜ್ಞಾನ ಕೃತಿಗಳನ್ನು ಪ್ರಕಟಿಸಿದೆ. ವಿಜ್ಞಾನ ಪ್ರಕಾಶನಕ್ಕೆ ಇಷ್ಟೊಂದು ಮಹತ್ವ ಕೊಟ್ಟ ಬೇರೆ ಪ್ರಕಾಶನ ಸಂಸ್ಥೆಗಳು ವಿರಳ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಆರ್.ಎಸ್. ರಾಜಾರಾಮ್ ಮತ್ತು ಪ್ರಧಾನ ವ್ಯವಸ್ಥಾಪಕರಾಗಿದ್ದ ಶ್ರೀ ಎ. ರಮೇಶ ಉಡುಪ ಅವರ ಬಳಿ ಈ ವಿಷಯ ಪ್ರಸ್ತಾಪಿಸಿದಾಗ, ಕ್ಷಣವೂ ಯೋಚಿಸದೆ ‘ಆಗಬಹುದು’ ಎಂದರು. ಈಗಿನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಸಿದ್ಧನಗೌಡ ಪಾಟೀಲರೂ ಇಂಥ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಧಾತು ಸೇರ್ಪಡೆಯಾಗುತ್ತದೆ ಎಂದು ಬೆಂಬಲಿಸಿದ್ದಾರೆ. ಯೋಜನೆಯಿಂದ ಮುದ್ರಣದವರೆಗೆ ಪ್ರತಿ ಹಂತದಲ್ಲೂ ನವಕರ್ನಾಟಕದ ಮಿತ್ರರು ಅಪಾರ ಆಸಕ್ತಿಯಿಂದ ಕೆಲಸಮಾಡಿದ್ದಾರೆ. ಪುಸ್ತಕ ಈ ಗುಣಮಟ್ಟದಲ್ಲಿ ಹೊರಬಂದಿರುವುದರ ಹಿನ್ನೆಲೆಯಲ್ಲಿ ಈ ಆಸಕ್ತಿಯ ಪ್ರಭಾವ ಬಹಳ ದೊಡ್ಡದು.

ವಿಜ್ಞಾನ ಬರವಣಿಗೆ ಸವಾಲಿನ ಕೆಲಸ. ಇಲ್ಲಿ ಎಷ್ಟು ಕೆಲಸ ಆದರೂ ಅದು ಸಾಕಾಗುವುದೇ ಇಲ್ಲ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ವಿಜ್ಞಾನಕ್ಕೆಂದೇ ಪ್ರತ್ಯೇಕ ಭಾಷೆ ಇರುವುದಿಲ್ಲ. ಒಂದು ಶಕ್ತ ಭಾಷೆ ವಿಜ್ಞಾನದ ಅಭಿವ್ಯಕ್ತಿಗೂ ಸೂಕ್ತವಾಗಿರಬೇಕು. ಕನ್ನಡದಲ್ಲಿ ಇದು ಸಾಧ್ಯವಾಗಿದೆ. ವಿಜ್ಞಾನದ ನೆಲ ಶುಷ್ಕ ಎನಿಸಿದ್ದ ಸಂದರ್ಭದಲ್ಲೇ ಬೆಳ್ಳಾವೆ ವೆಂಕಟನಾರಣಪ್ಪನವರು, ಶಿವರಾಮ ಕಾರಂತರು, ರೊದ್ದಂ ಲಕ್ಷ್ಮೀನರಸಿಂಹಯ್ಯನವರು ನೇಗಿಲಿಟ್ಟು ವಿಜ್ಞಾನ ಸಾಹಿತ್ಯದ ಬೆಳೆ ತೆಗೆದಿದ್ದರು.

ಅವರೆಲ್ಲ ಆ ಮಾರ್ಗದಲ್ಲಿ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಿದರು, ಪಾರಿಭಾಷಿಕ ಪದಗಳಿಗೆ ಸಮಾನ ಕನ್ನಡ ಪದ ಇಲ್ಲದಾಗ ತಾವೇ ಸೃಷ್ಟಿಸಿದರು. ಹಠತೊಟ್ಟು ಮುಂದುವರೆದರು. ಈ ಪೈಕಿ ಶಿವರಾಮ ಕಾರಂತರು ಒಂಟಿಸಲಗ. ವಿಜ್ಞಾನ ವಿಶ್ವಕೋಶ ರಚನೆಗೂ ಕೈಹಾಕಿದರು. ಈ ಪರಂಪರೆಯನ್ನು ಜೆ.ಆರ್. ಲಕ್ಷ್ಮಣರಾವ್, ಜಿ.ಟಿ. ನಾರಾಯಣರಾವ್, ಅಡ್ಯನಡ್ಕ ಕೃಷ್ಣಭಟ್ ಅವರು ಮುಂದುವರಿಸಿದರು; ಕನ್ನಡದಲ್ಲಿ ವಿಜ್ಞಾನ ಮಾರ್ಗವನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಕನ್ನಡವನ್ನು ವಿಜ್ಞಾನದ ಭಾಷೆಯಾಗಿ ಬೆಳೆಸಿದ ಶ್ರೇಯ ಇವರೆಲ್ಲರಿಗೆ ಸಲ್ಲಬೇಕು.

ಈಗ ಪರಿಸ್ಥಿತಿ ಬದಲಾಗಿದೆ, ವಿಜ್ಞಾನ ಕೈಗೆಟುಕದೆ ಎತ್ತರೆತ್ತರಕ್ಕೆ ಸಾಗುತ್ತಿದೆ. ಯಾವೊಬ್ಬ ಅನುಭವಿಯೂ ವಿಜ್ಞಾನದ ಹಲವು ಆಯಾಮಗಳನ್ನು ತೆರೆದಿಡಲು ಸಾಧ್ಯವಿಲ್ಲ. ಈಗ ಯುಗ ಎಂಬುದು ಹ್ರಸ್ವವಾಗಿದೆ. ಇದು ಯಾವ ಯುಗ? ಆಕಾಶಯುಗವೋ ಕಂಪ್ಯೂಟರ್‌ಯುಗವೋ ಮೊಬೈಲ್‌ಯುಗವೋ ಹೊಸ ಸಾಮಗ್ರಿಗಳ ಯುಗವೋ ಅರ್ಥೈಸಲು ಹೋದರೆ ತಬ್ಬಿಬ್ಬಾಗುತ್ತದೆ. ಈ ಕಾರಣದಿಂದಲೇ ಆಯಾ ಕ್ಷೇತ್ರದ ಪರಿಣತರೇ ಬರೆಯಬೇಕಾಗುತ್ತದೆ; ಜೊತೆಗೆ ಅಂಥವರು ಕನ್ನಡದಲ್ಲಿ ಬರೆಯುವ ಕಸುವು ರೂಢಿಸಿಕೊಂಡಿರಬೇಕಾಗುತ್ತದೆ. ಪಾರಿಭಾಷಿಕ ಪದಗಳ ಬಗ್ಗೆಯೇ ಯೋಚಿಸುತ್ತ ಕೂರುವ ಕಾಲ ಹಿಂದೆ ಸರಿದಿದೆ; ವಿಜ್ಞಾನದ ಬಾಗಿಲನ್ನು ಜನಸಾಮಾನ್ಯರಿಗೂ ಈಗ ತೆರೆಯುವ ಹೊತ್ತು ಬಂದಿದೆ. ’ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಇದನ್ನು ಪ್ರಾಯೋಗಿಕವಾಗಿ ಮಾಡಿತೋರಿಸುವ ಪ್ರಯತ್ನ.

***

ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು

ವಿಜ್ಞಾನದ ವಿವಿಧ ಕ್ಷೇತ್ರಗಳ ಚಾರಿತ್ರಿಕ ಬೆಳವಣಿಗೆಯ ಹಾಗೂ ಆ ಹಾದಿಯಲ್ಲಿ ಅದು ಪಡೆದುಕೊಂಡ ಮಹಾತಿರುವುಗಳ ದಾಖಲೆಯಾದ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಎಂಬ ವಿಶಿಷ್ಟ ಕೃತಿ ಇಂದು ಲೋಕಾರ್ಪಣೆಯಾಗುತ್ತಿದೆ.

ಭೌತ ವಿಜ್ಞಾನ, ಖಭೌತ ವಿಜ್ಞಾನ, ಅಂತರಿಕ್ಷ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ವೈದ್ಯ ವಿಜ್ಞಾನ, ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ಕೃಷಿ ವಿಜ್ಞಾನ, ಭೂವಿಜ್ಞಾನ, ಪರಿಸರ ವಿಜ್ಞಾನ, ಗಣಿತ, ಎಂಜಿನಿಯರಿಂಗ್ ತಂತ್ರಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಒಟ್ಟು 35 ಲೇಖನಗಳಿರುವ ಈ ಕೃತಿಯ ಸಂಪಾದಕರು ಡಾ. ಟಿ. ಆರ್. ಅನಂತರಾಮು. ಡಾ. ನಾ. ಸೋಮೇಶ್ವರ, ಶ್ರೀ ನಾಗೇಶ ಹೆಗಡೆ, ಪ್ರೊ. ಎಂ. ಆರ್. ನಾಗರಾಜು, ಡಾ. ಎಚ್. ಆರ್. ಕೃಷ್ಣಮೂರ್ತಿ, ಡಾ. ಬಿ. ಎಸ್. ಶೈಲಜಾ, ಡಾ. ಪಾಲಹಳ್ಳಿ ವಿಶ್ವನಾಥ್ ಸೇರಿದಂತೆ ಹಲವು ಕ್ಷೇತ್ರಗಳ ಒಟ್ಟು 25 ವಿಷಯ ಪರಿಣತರು – ವಿಜ್ಞಾನ ಬರಹಗಾರರು ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯ ಲೇಖಕರ ಸಾಲಿನಲ್ಲಿದ್ದಾರೆ.

ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರಿರುವ ಅಪೂರ್ವ ಸಂಶೋಧನೆಗಳ ಮತ್ತು ಅನ್ವೇಷಣೆಗಳ ಸರಳ ನಿರೂಪಣೆ ನೀಡುವ 568 ಪುಟಗಳ ಈ ಕೃತಿಯಲ್ಲಿ ಒಟ್ಟು 835 ಚಿತ್ರಗಳೂ, ಆರ್ಟ್ ಕಾಗದದಲ್ಲಿ ಮುದ್ರಣವಾಗಿರುವ 108 ಬಹುವರ್ಣದ ಪುಟಗಳೂ ಇವೆ. 1/4 ಕ್ರೌನ್ ಗಾತ್ರದಲ್ಲಿ ಮುದ್ರಣವಾಗಿರುವ ರೂ. 800 ಮುಖಬೆಲೆಯ ಈ ಪುಸ್ತಕವನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಡಾ. ಎ. ಎಸ್. ಕಿರಣ್‌ಕುಮಾರ್ ಲೋಕಾರ್ಪಣೆಗೊಳಿಸಲಿದ್ದಾರೆ. ಕತೆಗಾರ ಶ್ರೀ ವಸುಧೇಂದ್ರ ಪುಸ್ತಕದ ಪರಿಚಯ ಮಾಡಿಕೊಡುತ್ತಾರೆ.

Courtesy : Prajavani.net

http://www.prajavani.net/news/article/2017/09/03/517388.html

Leave a Reply