“ನಮಸ್ಕಾರ ಶ್ರೀಕೃಷ್ಣನಿಗೆ…”,

ಗುಡಿಸಲಲ್ಲೂ ಮಹಲಿನಲ್ಲೂ ಅಮ್ಮಂದಿರಿಗೆ ತಮ್ಮ ಕಂದರಲ್ಲಿ ಇಂದಿಗೂ ಕಾಣುವ ಏಕೈಕ ಬಿಂಬ ಮುದ್ದು ಗೋವಿಂದನೆಂಬ ಕಣ್ಣಗೊಂಬೆಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಎರೆಮಣ್ಣಿನ ಬಣ್ಣದಲ್ಲೂ ಸೌಂದರ್ಯದ ಸೂಜಿಗಲ್ಲು ಉಂಟು ಎಂದು ತೋರಿದ ಅನ್ವರ್ಥನಾಮನಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಪಿಳ್ಳಂಗೋವಿಯ ಸ್ವಚ್ಛಂದ ಸಮ್ಮೋಹಕ ನುಡಿತದಿಂದ ಗೋಕುಲದೆದೆ ಸೂರೆಗೊಂಡ ಜನಪದ ಕಲೆಗಾರನಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಅಡೆತಡೆಗಳ ಪರಿವೆಯಿರದ ಪ್ರೇಮವೆಂಬ ಹುಚ್ಚುಹೊಳೆಗೆ ಸ್ಫೂರ್ತಿಯ ಸೆಲೆ ತಾನಾದ ರಾಧಾಮಾಧವನಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಹಳ್ಳಿಹೈದರಿಗೆ ದಿಲ್ಲಿಯನ್ನೂ ಗೆಲ್ಲಬಲ್ಲೆವೆಂಬ ಹುಮ್ಮಸ್ಸು ನೀಡಿದ ಪೋರ ಕಂಸಾರಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಬೇಕಾದವರ ಎತ್ತರಿಸಿದ, ಬೇಡದವರ ಒತ್ತರಿಸಿದ, ನಿಗುರಿದವರ ಕತ್ತರಿಸಿದ ಚತುರ ತಂತ್ರಗಾರನಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಉಪದೇಶದ ಕೊನೆಗೆ, ತನ್ನ ಆಯ್ಕೆಯ ಸ್ವಾತಂತ್ರ್ಯವನ್ನು ಶಿಷ್ಯನಿಗೇ ಬಿಟ್ಟುಕೊಟ್ಟ ಅನನ್ಯ ಗೀತಾಚಾರ್ಯನಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ತಾನು ಕಟ್ಟಿದ್ದೆಲ್ಲವೂ ತನ್ನ ಕಣ್ಣ ಮುಂದೆಯೇ ಕುಸಿದು ಬಿದ್ದದ್ದನ್ನು ಕಂಡು ಕೈಚೆಲ್ಲಿದ, ಕಣ್ಮುಚ್ಚಿದ ವೃದ್ಧ ಮುತ್ಸದ್ದಿಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಎಲ್ಲರಿಗೂ ಸಲ್ಲಬಲ್ಲ, ಎಲ್ಲರ ಮನ ಗೆಲ್ಲಬಲ್ಲ, ಎಲ್ಲರಲ್ಲೂ ಕೊಂಚ ಉಳ್ಳ ವಿಶ್ವರೂಪಿಗೆ-ನಮಸ್ಕಾರ ನರೋತ್ತಮನಿಗೆ.

courtsey:prajavani.net

“author”: “ಬಿ.ಆರ್.ಲಕ್ಷ್ಮಣರಾವ್”,

https://www.prajavani.net/artculture/poetry/namskara-krishna-650914.html

Leave a Reply