‘ಅಮೃತವರ್ಷಿಣಿ’ಯಲ್ಲಿ ಗ್ರಂಥಗಳ ಕಲರವ

‘ಅಮೃತವರ್ಷಿಣಿ’ಯಲ್ಲಿ ಗ್ರಂಥಗಳ ಕಲರವ

ಮಂಗಳ ಗಂಗೋತ್ರಿಯ ಹತ್ತಿರದಲ್ಲೇ ಇರುವ ಅಸೈಗೋಳಿಯ ಈ ನಿವಾಸಕ್ಕೆ ನೀವು ಬಂದಿದ್ದಾದರೆ 15 ಸಾವಿರ ಪುಸ್ತಕಗಳು ನಿಮ್ಮನ್ನು ಸ್ವಾಗತಿಸುತ್ತವೆ.

ರಾಷ್ಟ್ರಕವಿ ಗೋವಿಂದ ಪೈಗಳ ಪುಸ್ತಕ ಸಂಗ್ರಹದ ಹವ್ಯಾಸ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತು. ಅವರ ಎಲ್ಲಾ ಪುಸ್ತಕಗಳನ್ನು ಕು.ಶಿ. ಹರಿದಾಸ ಭಟ್ಟರು ಉಡುಪಿಯ ಎಂಜಿಎಂ ಕಾಲೇಜಿಗೆ ಸಾಗಿಸಿ, ಅಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಿ, ಪೈಗಳ ಎಲ್ಲಾ ಪುಸ್ತಕಗಳಿರುವ ಗ್ರಂಥಾಲಯದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಹಾ.ಮಾ.ನಾಯಕರ ಪುಸ್ತಕಗಳು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಹಾಮಾನಾ ಗ್ರಂಥಾಲಯದಲ್ಲಿ ಇವೆ. ತತ್ವಜ್ಞಾನ, ಪುರಾಣ ಮತ್ತು ವೇದಗಳಿಗೆ ಸಂಬಂಧಪಟ್ಟ ಅಪೂರ್ವ ಗ್ರಂಥಗಳನ್ನು ಸಂಗ್ರಹಿಸಿ, ಅವುಗಳನ್ನು ಸಂರಕ್ಷಿಸಲು ಹೆಣಗುತ್ತಿರುವವರು ಗೋಕರ್ಣದ ಗಣಪತಿ ಎಂ. ವೇದೇಶ್ವರರು.

ಗ್ರಂಥಾಲಯ ಪರಂಪರೆಯ ಮತ್ತೊಂದು ಹೆಸರು ಮಂಗಳೂರಿನ ಬಿ. ಸುರೇಂದ್ರರಾವ್.

ಗೋವಿಂದ ಪೈಗಳ ಸಂಗ್ರಹದಲ್ಲಿರುವ ಪುಸ್ತಕಗಳ ಸಂಖ್ಯೆ ಸುಮಾರು ಐದು ಸಾವಿರ; ಅವುಗಳು 15 ಭಾಷೆಗಳಲ್ಲಿವೆ. ವೇದೇಶ್ವರರ ಸಂಗ್ರಹದಲ್ಲಿ ನಾಲ್ಕು ಸಾವಿರ ಪುಸ್ತಕಗಳಿದ್ದರೆ, ಹಾಮಾನಾ ಗ್ರಂಥಾಲಯದಲ್ಲಿ ಇರುವುದು ಇಪ್ಪತ್ತೇಳು ಸಾವಿರ ಪುಸ್ತಕಗಳು. ಸುರೇಂದ್ರರಾವ್ ಸಂಗ್ರಹದಲ್ಲಿ ಹದಿನೈದು ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿವೆ. ಶೇ 90ರಷ್ಟು ಪುಸ್ತಕಗಳನ್ನು ಅವರು ಸ್ವಂತ ದುಡ್ಡು ಕೊಟ್ಟು ಖರೀದಿಸಿದ್ದಾರೆ.

ರಾವ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ. ಪ್ರಸ್ತುತ ಮಂಗಳಗಂಗೋತ್ರಿಯ ಸಮೀಪ ಅಸೈಗೋಳಿಯಲ್ಲಿ ವಾಸ. ಅವರ ಮನೆಯ ಹೆಸರು ಅಮೃತವರ್ಷಿಣಿ. ಈ ಮನೆಯ ಮಾಳಿಗೆ ಪೂರ್ತಿ ಪುಸ್ತಕಗಳಿಗೆ ಮೀಸಲು. ಸಂಗೀತದ ಒಂದು ರಾಗದ ಹೆಸರು ಅಮೃತವರ್ಷಿಣಿ. ಪುಸ್ತಕಗಳ ಜೊತೆಗೆ ಒಂದು ಸಾವಿರ ಗಂಟೆಗಳ ಕಾಲ ಆಲಿಸಬಹುದಾದ ಸಂಗೀತದ ಧ್ವನಿ ಮುದ್ರಿಕೆಗಳು ಅವರಲ್ಲಿವೆ; ಎಷ್ಟೆಂದರೂ ಅಮೃತವರ್ಷಿಣಿ ತಾನೆ!

ರಾವ್‌ ಅವರ ಪುಸ್ತಕ ಸಂಗ್ರಹದ ಇತಿಹಾಸ ರೋಚಕವಾಗಿದೆ. ಅವರ ತಂದೆ ಬಂದಾರು ಶ್ರೀಪತಿ ರಾಯರು. ವೃತ್ತಿಯಲ್ಲಿ ವಕೀಲರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಅವರಿಗೆ ಭೂಗೋಳಶಾಸ್ತ್ರದ ಮೇಲೆ ವಿಶೇಷ ಒಲವಿತ್ತು. ಹಾಗೆಯೇ ಅವರ ಇಂಗ್ಲಿಷ್ ಕೂಡ ಬಹಳ ಗಟ್ಟಿ. ಆ ಭಾಷೆಯ ಕೆಲವು ಕೃತಿಗಳನ್ನು ಮತ್ತು ಮುಖ್ಯವಾಗಿ ನಿಘಂಟುಗಳನ್ನು ಖರೀದಿಸುತ್ತಿದ್ದರು. ಒಂದು ಪದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ಬೇರೆ ಬೇರೆ ನಿಘಂಟುಗಳಲ್ಲಿ ನೋಡಿ ಯಾವ ಅರ್ಥ ಸಮರ್ಪಕವಾಗಿದೆ ಎಂಬುದನ್ನು ಮಗ ‘ಬಬ್ಬ’ನಲ್ಲಿ (ಸುರೇಂದ್ರರಾವ್, ಕುಟುಂಬದಲ್ಲಿ ಬಬ್ಬನೆಂದೇ ಪ್ರಸಿದ್ದ!) ಹೇಳುತ್ತಿದ್ದರು.

ಶ್ರೀಪತಿ ರಾಯರಲ್ಲಿ ಅಪೂರ್ವವಾದ ಅಟ್ಲಾಸ್‌ಗಳ ಸಂಗ್ರಹವಿತ್ತು. ಈ ಅಟ್ಲಾಸ್‌ಗಳನ್ನು ನೋಡಿಯೇ ಕೆಲವು ದೇಶಗಳ ಭೌಗೋಳಿಕ ವಿವರಗಳನ್ನು ನೀಡುವಷ್ಟು ಅವರು ಸಮರ್ಥರಾಗಿದ್ದರು. ಇಂಗ್ಲೆಂಡ್‌ ಸುತ್ತಿ ಬಂದವರಲ್ಲಿ ಅಲ್ಲಿನ ರಸ್ತೆಗಳು ಮತ್ತು ಕಟ್ಟಡಗಳ ವಿವರಗಳನ್ನು ನಿಖರವಾಗಿ ಚರ್ಚಿಸುತ್ತಿದ್ದರು. ಅಟ್ಲಾಸ್ ನೋಡಿಯೇ ಆಸ್ಟ್ರೇಲಿಯಾದಲ್ಲಿ ಮಂಗಳೂರು ಮತ್ತು ಉಳ್ಳಾಲ ಇರುವುದನ್ನು ಅವರು ಗುರುತಿಸಿದ್ದರು!

ನಿಘಂಟುಗಳ ಸಂಗ್ರಹಕ್ಕೆ ಮತ್ತು ಇಂಗ್ಲಿಷ್ ಪುಸ್ತಕಗಳ ಓದಿಗೆ ತಮ್ಮ ತಂದೆಯೇ ಪ್ರೇರಣೆ ಎನ್ನುತ್ತಾರೆ ಸುರೇಂದ್ರರಾವ್. ಈಗ ಅವರ ಸಂಗ್ರಹದಲ್ಲಿ ತಂದೆಯಿಂದ ಸಿಕ್ಕ ಬಳುವಳಿಗಳು ಸೇರಿದಂತೆ ಐವತ್ತಕ್ಕಿಂತ ಹೆಚ್ಚು ಕನ್ನಡ–ಇಂಗ್ಲಿಷ್‌ ನಿಘಂಟುಗಳು ಇವೆ. ಹೆಸರಿಸಬಹುದಾದ ಸಂಪುಟವೆಂದರೆ ಆಕ್ಸ್‌ಫರ್ಡ್ ಡಿಕ್ಷನರಿ(ಕಾಂಪ್ರಹೆನ್ಸಿವ್ ಎರಡು ಸಂಪುಟಗಳು). ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೇರೆ ಬೇರೆ ಪ್ರಕಾಶಕರು ಪ್ರಕಟಿಸಿದ ಹಳೆಯದರಿಂದ ಹಿಡಿದು ಇವತ್ತಿನವರೆಗಿನ ತುಳು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ನಿಘಂಟುಗಳು ಇವರ ಸಂಗ್ರಹದಲ್ಲಿವೆ. ಈ ನಿಘಂಟುಗಳನ್ನು, ಅವರೇ ಹೇಳುವಂತೆ, ಶಬ್ದಗಳ ಅರ್ಥಕ್ಕಾಗಿ ಮಾತ್ರ ನೋಡುವುದಲ್ಲ. ಅವುಗಳನ್ನು ಅವರು ಪುಸ್ತಕದಂತೆ ಓದುತ್ತಾರೆ. ನಿಘಂಟುಗಳನ್ನು ಓದುವುದೇ ಒಂದು ಅಪೂರ್ವ ಅನುಭವ ಎನ್ನುತ್ತಾರೆ. ಕೆಲವು ನಿಘಂಟುಗಳ ಪುಟ ಪುಟಗಳಲ್ಲಿ ಇರುವ ತಿದ್ದುಪಡಿ ಮತ್ತು ಇತರ ಗುರುತುಗಳನ್ನು ನೋಡಿದರೆ ಅವರ ಮಾತಿನ ಯಥಾರ್ಥ ಅರಿವಾಗುತ್ತದೆ.

ಅಮೃತವರ್ಷಿಣಿ ಸಂಗ್ರಹದಲ್ಲಿ ಸಹಜವಾಗಿಯೇ ಇತಿಹಾಸದ ಗ್ರಂಥಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಸಂಗ್ರಹದ ವಿಶೇಷವೆಂದರೆ ಇತಿಹಾಸದ ಮೂಲ ಗ್ರಂಥಗಳನ್ನು ಅಲ್ಲಿ ಕಾಣಬಹುದು. ಯಾವುದೇ ರೀತಿಯ ಬಜಾರ್ ಗೈಡ್‌ಗಳಿಗೆ ಇವರ ಸಂಗ್ರಹದಲ್ಲಿ ಅವಕಾಶವಿಲ್ಲ. ನಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹಾಳಾದದ್ದೇ ಗೈಡ್‌ಗಳ ಹಾವಳಿಯಿಂದ ಎಂಬುದು ರಾವ್ ಅವರ ಖಚಿತ ಅಭಿಪ್ರಾಯ.

ಅಮೆರಿಕನ್, ಯುರೋಪಿಯನ್ ಹಾಗೂ ಏಷ್ಯನ್ ದೇಶಗಳ ಇತಿಹಾಸಗಳ ಕುರಿತಂತೆ ಹಲವು ಮಹತ್ವದ ಸಂಪುಟಗಳು, ಮೂಲಗ್ರಂಥಗಳು ಇವರ ಸಂಗ್ರಹದಲ್ಲಿವೆ. ಕೆಲವು ಇತಿಹಾಸ ಸಂಪುಟಗಳ ಸಮಗ್ರ ಸೆಟ್‌ಗಳಿವೆ. ಭಾರತದ ಚಾರಿತ್ರಿಕ ಅಧ್ಯಯನಕ್ಕೆ ಸಂಬಂಧಪಟ್ಟ ಮಹತ್ವದ ಲೇಖನಗಳು ಇರುವ ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ (ಐಸಿಎಚ್‍ಆರ್), ಸೋಶಿಯಲ್ ಸೈಂಟಿಸ್ಟ್, ಇತಿಹಾಸ ದರ್ಪಣ, ಎಫಿಗ್ರಫಿಕ್‌ ಕರ್ನಾಟಕ ಸಂಚಿಕೆಯ ಎಲ್ಲಾ ಸಂಪುಟಗಳು, ರಾಮಾಯಣ, ಮಹಾಭಾರತದ ಸಂಸ್ಕೃತ ಸಂಪುಟಗಳು, ಫ್ರೆಂಚ್ ರೆವಲ್ಯೂಷನ್, ನೆಪೋಲಿಯನ್ ರೆವಲ್ಯೂಷನ್ (ಸುಮಾರು ಐವತ್ತಕ್ಕಿಂತ ಹೆಚ್ಚು ಗ್ರಂಥಗಳಿವೆ), ಚಾರಿತ್ರಿಕ ಪರಿಕಲ್ಪನೆಗಳ ಕೃತಿ ಮಾಲಿಕೆ (ಪೆಂಗ್ವಿನ್ ಎಡಿಶನ್), ಅವರ್ ಓರಿಯಂಟಲ್ ಹೆರಿಟೇಜ್, ಆಕ್ಸ್‌ಫರ್ಡ್ ಪ್ರಕಟಗೊಳಿಸಿದ ರೂಲರ್ಸ್ ಆಫ್ ಇಂಡಿಯನ್ ಸರಣಿ ಮೊದಲಾದ ಅಮೂಲ್ಯ ಗ್ರಂಥಗಳ ಸಂಗ್ರಹ ಅವರಲ್ಲಿರುವುದು ವಿಶೇಷವೇ ಹೌದು. ರಾವ್‌ ಅವರ ಸಂಗ್ರಹದಲ್ಲಿ ತುಳು, ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ – ಹೀಗೆ ಐದು ಭಾಷೆಗಳಿಗೆ ಸಂಬಂಧಿಸಿದ ಗ್ರಂಥಗಳಿವೆ. ಕಾರಂತರ ಸಮಗ್ರ ಸಂಪುಟ, ಕುವೆಂಪು ಸಾಹಿತ್ಯ ಸಂಪುಟ, ಎ.ಎನ್.ಮೂರ್ತಿರಾವ್, ಡಿವಿಜಿ, ಬೀಚಿ ಮೊದಲಾದ ಲೇಖಕರ ಕೃತಿಗಳು, ಕನ್ನಡದ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದ ಅಧ್ಯಯನಪೂರ್ಣ ಗ್ರಂಥಗಳು, ಎಸ್‌.ಎಲ್‌.ಭೈರಪ್ಪನವರ ಎಲ್ಲಾ ಕಾದಂಬರಿಗಳು ಇವರ ಸಂಗ್ರಹದಲ್ಲಿವೆ.

ಇಂಗ್ಲಿಷ್ ಓದು ಅವರಿಗೆ ಬಹಳ ಪ್ರಿಯ. ‘ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಮಟ್ಟದಲ್ಲಿ ಓದುವಾಗ ಸಿಕ್ಕ ಫಾ.ಕ್ಯಾಸ್ಟಲಿನೊ ಮತ್ತು ಯು.ಎಲ್.ಭಟ್ ಅವರಂತಹ ಗುರುಗಳು ನನ್ನ ಇಂಗ್ಲಿಷ್ ಪ್ರೇಮಕ್ಕೆ ಮೂಲ’ ಎಂದು ಸ್ಮರಿಸಿಕೊಳ್ಳುತ್ತಾರೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಶೇಕ್ಸ್‌ಪಿಯರ್‌ನ ಎಲ್ಲಾ ನಾಟಕಗಳನ್ನು ಮೂಲದಲ್ಲಿಯೇ ಓದಿದ್ದರಂತೆ. ‘ಎಲ್ಲಾ ಅರ್ಥವಾಗಿತ್ತೋ’ ಎಂದು ಕೇಳಿದರೆ, ‘ಅರೆಬರೆ ಅಷ್ಟೇ’ ಎನ್ನುತ್ತಾರೆ.

ಇತಿಹಾಸಕ್ಕೆ ಸಂಬಂಧಿಸಿದಂತೆ ತತ್ವಶಾಸ್ತ್ರ (ಫಿಲಾಸಫಿ ಆಫ್ ಹಿಸ್ಟರಿ), ಚರಿತ್ರೆಯ ಚರಿತ್ರೆ (ಹಿಸ್ಟರಿಯೋಗ್ರಫಿ), ಇತಿಹಾಸ ಸಿದ್ಧಾಂತಗಳು (ಥಿಯರಿಸ್ ಆಫ್ ಹಿಸ್ಟರಿ), ಇತಿಹಾಸ ಸಂಶೋಧನೆಯ ವಿಧಾನ (ರಿಸರ್ಚ್ ಮೆಥಡಾಲಜಿ)- ಇವು ರಾವ್ ಅವರ ಆಸಕ್ತಿಯ ಕ್ಷೇತ್ರಗಳು. ಅವರ ಗ್ರಂಥಾಲಯದ ಸುಮಾರು ಹತ್ತು ಸಾವಿರ ಪುಸ್ತಕಗಳು ಈ ವಿಷಯಕ್ಕೆ ಮೀಸಲು. ಲಭ್ಯವಿಲ್ಲದ ಎಷ್ಟೋ ಪುಸ್ತಕಗಳನ್ನು ನೆರಳಚ್ಚು ಮಾಡಿ ಇಟ್ಟುಕೊಂಡಿದ್ದಾರೆ.

ಭೌತಿಕ ರೂಪದಲ್ಲಿ ಮಾತ್ರವಲ್ಲ; ಧ್ವನಿರೂಪದಲ್ಲೂ ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ‘ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡೇ ಓದಬೇಕು. ಬದಲಾಗಿ ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಸ್ತಕಗಳಿಂದ ಸಿಗುವ ಮೂರಿ (ಪರಿಮಳ, ವಾಸನೆ) ಸಿಗಲಾರದು’ ಎನ್ನುತ್ತಾರೆ ಸುರೇಂದ್ರರಾವ್.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದ ದಿನಗಳಿಂದಲೇ ಪುಸ್ತಕ ಸಂಗ್ರಹದ ಗೀಳು ಅವರಿಗೆ ಹತ್ತಿಕೊಂಡಿತ್ತು. ಸಮಯ ಸಿಕ್ಕಾಗಲೆಲ್ಲ ಗೀತಾ ಬುಕ್ ಹೌಸ್‌ಗೆ ಹೋಗುತ್ತಿದ್ದರು. ರಸ್ತೆ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ಎರಡನೇ ಕೈ ಪುಸ್ತಕಗಳನ್ನು ಸಾಕಷ್ಟು ಖರೀದಿಸಿದ್ದರು. 40 ವರ್ಷಗಳಿಂದ ಪುಸ್ತಕ ಖರೀದಿಯನ್ನು ಒಂದು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ. ಈಗಲೂ ತಿಂಗಳಿಗೆ ಕಡಿಮೆಯೆಂದರೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಕೊಂಡುಕೊಳ್ಳುತ್ತಾರೆ. ಅಮೆಜಾನ್ ಈಗ ಅವರ ಹತ್ತಿರದ ಅಂಗಡಿ!

ಅಮೃತವರ್ಷಿಣಿಯಲ್ಲಿ ಏಕಾಂಗಿಯಾಗಿರುವ ಸುರೇಂದ್ರರಾವ್ ಅವರಿಗೆ ಈಗಿನ ಸಂಗಾತಿಗಳೆಂದರೆ ಪುಸ್ತಕಗಳು ಮಾತ್ರ. ವಿದ್ಯಾರ್ಥಿಗಳು ಮತ್ತು ಯಾರಾದರೂ ಸಂಶೋಧಾನಾಸಕ್ತರು ಬಂದರೆ ಗಂಟೆಗಟ್ಟಲೆ ಹರಟುತ್ತಾರೆ, ಕೇಳಿದರೆ ಪುಸ್ತಕಗಳನ್ನು ಕೊಡುತ್ತಾರೆ.

ಸಂಗೀತ ಮತ್ತು ಕ್ರಿಕೆಟ್ ಇವರಿಗೆ ಅತ್ಯಂತ ಪ್ರಿಯ. ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತದ ಪ್ರಮುಖ ಪ್ರಸಿದ್ಧ ಸಂಗೀತಗಾರರ ಹಾಡುಗಳ ಧ್ವನಿಮುದ್ರಿಕೆಗಳು ಇವರಲ್ಲಿವೆ. ರಶೀದ್‌ ಖಾನ್, ಭೀಮಸೇನ ಜೋಶಿ, ಎಂ.ಎಸ್‌.ಸುಬ್ಬುಲಕ್ಷ್ಮೀ, ಅಖಿಲ್ ಬ್ಯಾನರ್ಜಿ, ಗಂಗೂಬಾಯಿ ಹಾನಗಲ್ ಮೊದಲಾದ ಸಂಗೀತ ದಿಗ್ಗಜರ ಹಾಡುಗಳ ಕ್ಯಾಸೆಟ್‌ಗಳ ಸಮಗ್ರ ಸಂಗ್ರಹ ಇವರಲ್ಲಿದೆ. ಕ್ರೀಡಾಜಗತ್ತಿನ ದಾಖಲೆಗಳು ಇವರಿಗೆ ಬಾಯಿಪಾಠ. ಕ್ರಿಕೆಟ್ ಇವರ ಜೀವ. ಇದಕ್ಕೆ ಸಾಕ್ಷಿ ಎಂಬಂತೆ ಕ್ರಿಕೆಟ್‌ಗೆ ಸಂಬಂಧಿಸಿದ ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿವೆ. ಕ್ರಿಕೆಟ್ ಮತ್ತು ಸಂಗೀತದ ಪುಸ್ತಕಗಳ ಇಂಗ್ಲಿಷ್ ಬರವಣಿಗೆ ಇವರಿಗೆ ಇಷ್ಟ. ಅವುಗಳ ಭಾಷಾ ಸೊಗಸು ಯಾವುದೇ ಸೃಜನಶೀಲ ಸಾಹಿತ್ಯಕೃತಿಗಳಿಗಿಂತ ಕಡಿಮೆಯಿಲ್ಲ ಎನ್ನುತ್ತಾರೆ.

ಬಂಟ್ಸ್ ಇನ್ ಹಿಸ್ಟರಿ ಅಂಡ್ ಕಲ್ಚರ್, ವೇಸ್ ಆಂಡ್ ಬೈ ವೇಸ್ ಆಫ್ ಹಿಸ್ಟರಿ ಸೇರಿದಂತೆ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ಕೃತಿಗಳನ್ನು ಸುರೇಂದ್ರರಾವ್ ಅವರು ಪ್ರಕಟಿಸಿದ್ದಾರೆ. ಅವರ ಈ ಸಾಹಿತ್ಯ ಸೇವೆಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಒಲಿದುಬಂದಿವೆ.
ಚಿತ್ರಗಳು: ಸತೀಶ್ ಕೊಣಾಜೆ

Courtesy : Prajavani.net

http://www.prajavani.net/news/article/2018/03/27/561904.html

Leave a Reply