“‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ”,

ಇಂದು ಅಪ್ಪಂದಿರ ದಿನ. ಅಪ್ಪ ಅಂದರೆ ಮಕ್ಕಳ ಪಾಲಿಗೆ ಯಾವತ್ತೂ ಹೀರೊ. ಅಪ್ಪನ ಪ್ರೀತಿ ಅಮ್ಮನ ಪ್ರೀತಿಯಷ್ಟು ಗಾಢವಾಗಿ ಕಾಣಿಸದಿರಬಹುದು. ಆದರೆ, ಆ ಪ್ರೀತಿ ಯಾವುದಕ್ಕೂ ಕಡಿಮೆಯಲ್ಲ. ಇನ್ಫೋಸಿಸ್‌ ಲಿಮಿಟೆಡ್‌ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ‘ಅಪ್ಪನ ಸಿಹಿ ನೆನಪು’ಗಳನ್ನು ಇಲ್ಲಿ ವಿವರಿಸಿದ್ದಾರೆ. ಇದು ಒಬ್ಬ ಅಪ್ಪನ ಚಿತ್ರಣ; ಐ.ಟಿ. ದಿಗ್ಗಜನದ್ದಲ್ಲ! ‘ಅಕ್ಷತಾ ಮನಸ್ಸಿನಲ್ಲಿ ಮೊದಲ ಸ್ಥಾನ ಇರುವುದು ಅವಳ ಅಪ್ಪನಿಗೆ. ನಂತರದ ಸ್ಥಾನ ಇರುವುದು ನನಗೆ’ ಎಂದು ನನ್ನ ಪತಿ ರಿಷಿ ಯಾವಾಗಲೂ ಹೇಳುವುದುಂಟು. ಅಲ್ಲವೆ ಮತ್ತೆ, ನನ್ನ ಅಪ್ಪನ ಮೇಲಿನ ಗಾಢ ಪ್ರೀತಿಯನ್ನು ಕಂಡು ಅವರು ಹಾಗೆ ಹೇಳಿರುವುದರಲ್ಲಿ ಅತಿಶಯೋಕ್ತಿ ಏನಿದೆ? ಅಪ್ಪನ ಬಗೆಗೆ ನಾನು ಆಲೋಚಿಸಿದಾಗಲೆಲ್ಲ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರಣ- ಅವರೊಬ್ಬ ‘ಹೀರೊ’ ಎನ್ನುವುದು.ನನಗೆ ಆಗಿನ್ನೂ ಚಿಕ್ಕ ವಯಸ್ಸು. ಅಪ್ಪ ಮತ್ತು ಅಮ್ಮ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಹುಬ್ಬಳ್ಳಿಯಲ್ಲಿ ನಾನು ಅಜ್ಜ– ಅಜ್ಜಿಯ ಜೊತೆಯಲ್ಲಿದ್ದೆ. ಬಾಲ್ಯಕ್ಕೆ ಸಂಬಂಧಿಸಿದಂತೆ ನನ್ನ ನೆನಪಿನಲ್ಲಿ ಸದಾ ನೆಲೆ ನಿಂತಿರುವುದು ಅಮ್ಮನಿಗಿಂತ ಹೆಚ್ಚಾಗಿ ಅಪ್ಪನೇ. ಆ ಹೊತ್ತಿನಲ್ಲಿ ಅವರು ಇನ್ಫೊಸಿಸ್‌ ಸಹ ಸಂಸ್ಥಾಪಕರೇನೂ ಆಗಿರಲಿಲ್ಲ. ಅಷ್ಟಕ್ಕೂ, ಚಿಕ್ಕ ಬಾಲಕಿಗೆ ಇನ್ಫೊಸಿಸ್‌ ಬಗ್ಗೆ ಏನು ಗೊತ್ತಿರುತ್ತದೆ?! ಅಪ್ಪ ನನಗೆ ಬೈದ ಯಾವ ಪ್ರಸಂಗವೂ ನನ್ನ ಸ್ಮೃತಿಪಟಲದಲ್ಲಿ ದಾಖಲಾಗಿಲ್ಲ. ಅವರು ನನಗೆ ಯಾವಾಗಲೂ ಕನಸುಗಳನ್ನು ಕಾಣಲಿಕ್ಕೆ ಅವಕಾಶ ಮಾಡಿಕೊಟ್ಟರು. ಹೊಸ ಆಲೋಚನೆಗಳನ್ನು ಮಾಡಲು, ನನ್ನ ಕಲ್ಪನಾಶಕ್ತಿಯನ್ನು ವಿಸ್ತರಿಸಲು ಕುಸುವು ತುಂಬಿದರು. ಅಂತಹ ಅಪ್ಪನನ್ನು ನಾನು ಯಾವಾಗಲೂ ಖುಷಿಪಡಿಸಬೇಕು ಎಂದು ಅನಿಸುತ್ತಿತ್ತು. ಹದಿನೆಂಟನೆಯ ವಯಸ್ಸಿನಲ್ಲಿ ಅಧ್ಯಯನಕ್ಕಾಗಿ ನಾನು ಅಮೆರಿಕಕ್ಕೆ ತೆರಳುವಾಗ ನನ್ನ ಜೊತೆ ಬಂದಿದ್ದು ಅಪ್ಪನೇ. ಅಷ್ಟೇ ಅಲ್ಲ, ನಾನು ಅಲ್ಲಿದ್ದಷ್ಟು ಕಾಲ ಅವರು ಪ್ರತಿ ತಿಂಗಳೂ ಬೆಂಗಳೂರಿನಿಂದ ಲಾಸ್‌ ಏಂಜಲೀಸ್‌ಗೆ ತಪ್ಪದೆ ಬರುತ್ತಿದ್ದರು. ಬಂದಾಗಲೆಲ್ಲ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರು ಹಣ ಉಳಿತಾಯ ಮಾಡಿ, ನನಗಾಗಿ ಒಂದಿಷ್ಟು ಉಡುಗೊರೆಗಳನ್ನೂ ಖರೀದಿಸಿ ಕೊಡುತ್ತಿದ್ದರು. ‘ನಿನ್ನೆಲ್ಲ ಕನಸುಗಳು ನನಸಾಗುವಂತೆ ಮಾಡುತ್ತೇನೆ’ ಎಂದೂ ಹೇಳುತ್ತಿದ್ದರು. ನಾನೇ ನೋಡಿದ್ದೇನಲ್ಲ; ನನ್ನ ಸ್ನೇಹಿತರ ಅಪ್ಪ–ಅಮ್ಮ ತಮ್ಮ ಮಕ್ಕಳ ಜೊತೆ ಇಷ್ಟೊಂದೇನೂ ಒಡನಾಡುತ್ತಿರಲಿಲ್ಲ. ನಾನು ಅಪ್ಪನ ಜೊತೆ ಯಾವತ್ತೂ ಜಗಳವಾಡಿದ್ದಿಲ್ಲ. ಈಗ ನನಗೆ ಮದುವೆ ಆಗಿ, ಇಬ್ಬರು ಮಕ್ಕಳಿದ್ದಾರೆ. ನಾನು ಇಂದು ನನ್ನ ವೃತ್ತಿಯಲ್ಲಿ ಮೇಲೆ ಬಂದಿದ್ದರೆ, ಅಮ್ಮನಾಗಿ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುತ್ತಿದ್ದರೆ, ಅದಕ್ಕೆ ಅಪ್ಪನಿಗೆ ಕೃತಜ್ಞತೆ ಹೇಳಬೇಕು. ‘ಅಪ್ಪ ನನ್ನ ಹೀರೊ’ ಎಂಬುದು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿದ್ದು ಅವರು ಇನ್ಫೊಸಿಸ್‌ ಸ್ಥಾಪಿಸುವುದಕ್ಕೂ ಮೊದಲೇ ಅಂದೆನಲ್ಲ? ಅಪ್ಪನ ಮೇಲಿನ ನನ್ನ ಅನೂಹ್ಯವಾದ ಪ್ರೀತಿ ಅಷ್ಟು ಚಿಕ್ಕ ವಯಸ್ಸಿನಲ್ಲೇ ಹರಳುಗಟ್ಟಿತ್ತು.ಅಪ್ಪನ ವ್ಯಕ್ತಿತ್ವ ಬಹಳ ಗಟ್ಟಿ. ಅವರ ಮನಸ್ಸಿಗೆ ಏನು ಬರುತ್ತದೆಯೋ ಅದನ್ನು ಮಾಡದೆ ಬಿಡುವುದಿಲ್ಲ. ಆದರೆ, ಅವರು ನನ್ನ ಮಾತುಗಳಿಗೆ ಕಿವಿಗೊಡುತ್ತಾರೆ. ಹಿಂದೆ, ಅವರಿಗೆ ಮಧುಮೇಹ ಇರುವುದು ಗೊತ್ತಾಯಿತು. ಆಹಾರದ ಮೇಲೆ ನಿಯಂತ್ರಣ ಇರಲಿ ಎಂದು ಬೇರೆಯವರು ಹೇಳಿದರೆ ಅವರು ಕೇಳುತ್ತಿರಲಿಲ್ಲವೇನೋ. ಆದರೆ, ನನ್ನ ಮಾತನ್ನು ಪ್ರೀತಿಯಿಂದ ಕೇಳುತ್ತಾರೆ. ಎಷ್ಟೇ ಅಂದರೂ ನಾನವರ ಪ್ರೀತಿಯ ಮಗಳಲ್ಲವೇ? ಸವಿ ನೆನಪುಗಳು ಹುಬ್ಬಳ್ಳಿಯಲ್ಲಿ ನಾನಿದ್ದಷ್ಟು ದಿನ ಅಪ್ಪ ನನ್ನನ್ನು ಕಾಣಲು ಬರುತ್ತಿದ್ದರು. ನನಗೆ ಹೊಸ ಬಟ್ಟೆ ಅಥವಾ ಚಾಕೊಲೇಟ್‌ ತರುತ್ತಿದ್ದರು. ಇವನ್ನು ನನಗೆ ಬೇರೆಯವರೂ ತಂದುಕೊಡುತ್ತಿದ್ದರು. ಆದರೆ, ಅಪ್ಪ ತಂದುಕೊಡುತ್ತಿದ್ದ ಬಟ್ಟೆ ಅಥವಾ ಚಾಕೊಲೇಟ್‌ಗಳು ನನ್ನ ಪಾಲಿಗೆ ಬಹಳ ವಿಶೇಷ. ಅವರು ನನ್ನ ಕೋಣೆಯ ಒಳಗೆ ಬರುತ್ತಿದ್ದ ಆ ದೃಶ್ಯ ನನ್ನ ಪಾಲಿಗೆ ಅದೆಷ್ಟೊಂದು ಆಪ್ಯಾಯಮಾನ. ಆ ನೆನಪುಗಳು ನನ್ನ ಮನದಂಗಳದಲ್ಲಿ ಈಗಲೂ ಮೆರವಣಿಗೆ ಹೊರಡುತ್ತಿವೆ. ಹೌದು, ಅಪ್ಪ ಬಂದ ದಿನ ನನ್ನ ಪಾಲಿಗೆ ಹಬ್ಬವಾಗಿರುತ್ತಿತ್ತು.ನಾನು ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿನ ಗಾಯನ ಕ್ಲಬ್‌ಗೆ ಆಯ್ಕೆಯಾಗಿದ್ದೆ. ಆ ಸಂದರ್ಭದಲ್ಲಿ ನನ್ನ ಅಪ್ಪ– ಅಮ್ಮನ ಬಳಿ ಹೆಚ್ಚು ಹಣ ಇರಲಿಲ್ಲ. ಅವರು ತಮ್ಮ ಬಳಿಯಿದ್ದ ಹಣವನ್ನೆಲ್ಲ ಇನ್ಫೊಸಿಸ್‌ಗಾಗಿ ಅಥವಾ ಕುಟುಂಬದ ನಿರ್ವಹಣೆಗಾಗಿ ಬಳಸಿಕೊಳ್ಳುತ್ತಿದ್ದರು. ಈ ಕ್ಲಬ್‌ಗೆ ಕೊಡಬೇಕಿರುವ ಹಣ ಹೊಂದಿಸುವುದು ಆಗದ ಕೆಲಸ ಎಂದು ಅಮ್ಮ ಹೇಳಿದ್ದರು. ಹಣವನ್ನು ಹೇಗಾದರೂ ಮಾಡಿ ಹೊಂದಿಸಬಹುದು ಎಂದು ಅಪ್ಪ ಅಂದಿದ್ದರು. ಆದರೆ ಅಮ್ಮ ನನ್ನ ಬಳಿ, ‘ನೀನು ಪ್ರಬುದ್ಧಳಾಗಿದ್ದೀಯಾ. ಅಪ್ಪನಿಗೆ ಹಣದ ತಾಪತ್ರಯ ಇದೆ. ಅವರು ಬೇರೊಬ್ಬರ ಬಳಿ ಹಣ ಪಡೆಯಬಹುದು. ಆದರೆ, ಅದು ಕಷ್ಟದ ಕೆಲಸ. ಹಾಗಾಗಿ, ಆ ಕ್ಲಬ್‌ ಸೇರುವ ವಿಚಾರವಾಗಿ ಒಮ್ಮೆ ಆಲೋಚನೆ ಮಾಡು’ ಎಂದು ಹೇಳಿದ್ದರು. ಅಪ್ಪ ಬೇಡ ಎಂದು ಹೇಳದಿದ್ದರೂ ನಾನು ಕ್ಲಬ್ ಸೇರುವುದು ಬೇಡ ಎಂದು ತೀರ್ಮಾನಿಸಿದೆ.ಅಪ್ಪ ವಿದೇಶಗಳಿಗೆ ಭೇಟಿ ನೀಡುತ್ತಿದ್ದರು. ಆಗೆಲ್ಲ ಅವರು ಒಂಚೂರು ಹಣ ಉಳಿತಾಯ ಮಾಡಿ ನಮಗೆ ಏನಾದರೂ ತಂದುಕೊಡುತ್ತಿದ್ದರು. ಏನಾದರೂ ತಾರದೆ ಅವರು ಮನೆಗೆ ಬಂದಿದ್ದೇ ಇಲ್ಲ. ಈಗ ನಾನೂ ಆ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ನನ್ನ ಮಕ್ಕಳಿಗಾಗಿ ನಾನು ಕೂಡ ಏನಾದರೂ ತರುತ್ತೇನೆ. ಇದನ್ನು ನನಗೆ ಕಲಿಸಿದ್ದು ಅಪ್ಪ.ಅಪ್ಪ–ಅಮ್ಮ ಬೇರೆಲ್ಲ ವಿಚಾರಗಳಿಗಿಂತಲೂ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಫಲಿತಾಂಶ ಏನಿರುತ್ತದೆ ಎಂಬುದರ ಮೇಲೆ ಗಮನ ಹರಿಸುವುದಕ್ಕಿಂತ, ಕರ್ತವ್ಯವನ್ನು ಸರಿಯಾಗಿ ಮಾಡು ಎಂದು ಭಗವದ್ಗೀತೆ ಹೇಳುತ್ತದೆಯಲ್ಲ, ಆ ರೀತಿ ಇತ್ತು ಅವರ ಮನೋಭಾವ. ಶಿಕ್ಷಣವೆಂಬುದು ಜ್ಞಾನದ ಹುಡುಕಾಟವೇ ವಿನಾ, ಅದೇ ಗಮ್ಯವಲ್ಲ ಎಂದು ನನಗೆ ಹೇಳುತ್ತಿದ್ದರು. ಹಾಗಾಗಿ ನಾನು ಮತ್ತು ರೋಹನ್ (ಸಹೋದರ) ಮನೆಯಲ್ಲಿ ಭೌತವಿಜ್ಞಾನ, ಇತಿಹಾಸ ಸೇರಿದಂತೆ ಹಲವು ವಿಷಯಗಳ ಪುಸ್ತಕಗಳನ್ನು ಓದುತ್ತಿದ್ದೆವು. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತವನ್ನು ನಾನು ಕಲಿತಿದ್ದಕ್ಕೆ ಕಾರಣ ಅಪ್ಪನಲ್ಲಿದ್ದ ಆಸಕ್ತಿ. ಅಪ್ಪ ನನಗೆ ಈಗಲೂ ಕೆಲವು ಹಳೆಯ ಕನ್ನಡ ಸಿನಿಮಾಗಳ ಹಾಡುಗಳನ್ನು ಕಳುಹಿಸುತ್ತಿರುತ್ತಾರೆ.ನಮಗೆ ನಿರ್ದಿಷ್ಟವಾಗಿ ಇಂಥದ್ದನ್ನೇ ಮಾಡಬೇಕು ಎಂದು ಅಪ್ಪ ಅಥವಾ ಅಮ್ಮ ನಮಗೆ ಹೇಳಿದ್ದೇ ಇಲ್ಲ. ಅವರು ನಮಗೆ ಸಲಹೆ ನೀಡುತ್ತಿದ್ದರಷ್ಟೇ. ಹೋಂವರ್ಕ್‌ ಮಾಡಿ, ಶಾಲೆಯಲ್ಲಿ ರ‍್ಯಾಂಕ್‌ ಗಿಟ್ಟಿಸಿ ಅಥವಾ ನಿರ್ದಿಷ್ಟವಾಗಿ ಇಂಥ ವಿಷಯವನ್ನೇ ಓದಿ ಎಂದು ಯಾವತ್ತೂ ಹೇಳಲಿಲ್ಲ. ನಮಗೆ ನಮ್ಮದೇ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಮುಕ್ತ ಸ್ವಾತಂತ್ರ್ಯ ನೀಡಿದ್ದರು.ನಾರಾಯಣಮೂರ್ತಿ, ಅಕ್ಷತಾ ಮತ್ತು ಸುಧಾ ಮೂರ್ತಿ ಪುಸ್ತಕ ಓದುವುದೆಂದರೆ ಅಪ್ಪನಿಗೆ ಯೌವ್ವನದ ದಿನಗಳಿಂದಲೂ ಬಹಳ ಪ್ರೀತಿ. ಐಪ್ಯಾಡ್‌, ಕಿಂಡಲ್‌ ಎಂದು ಎಷ್ಟೆಲ್ಲ ಆಧುನಿಕ ಸಲಕರಣೆಗಳು ಬಂದಿದ್ದರೂ, ಮುದ್ರಿತ ಪುಸ್ತಕವೇ ಅಪ್ಪನಿಗೆ ಇಷ್ಟ. ಅಪ್ಪ ಮತ್ತು ಅಮ್ಮ ತಾವು ಖರೀದಿಸಿದ ಪುಸ್ತಕಗಳ ಮೇಲೆ ತಮ್ಮಿಬ್ಬರ ಹೆಸರುಗಳನ್ನು ಬರೆದಿಡುತ್ತಿದ್ದರು. ನಾನು ಮತ್ತು ರೋಹನ್ ಹುಟ್ಟಿದ ನಂತರ, ಅವರು ಪುಸ್ತಕಗಳ ಮೇಲೆ ನಮ್ಮಿಬ್ಬರ ಹೆಸರುಗಳನ್ನೂ ಬರೆಯಲು ಆರಂಭಿಸಿದರು. ಅವರು ನಮಗೂ ಬೇರೆ ಬೇರೆ ಕಡೆಗಳಿಂದ ಪುಸ್ತಕ ತಂದುಕೊಡುತ್ತಿದ್ದರು. ಈಗ ನಾನೂ ಅದೇ ರೀತಿ ಮಾಡುತ್ತಿದ್ದೇನೆ. ಅಪ್ಪನಿಗೆ ಜ್ಞಾನದ ಹುಡುಕಾಟ ಬಹಳ ಮುಖ್ಯ; ರ‍್ಯಾಂಕ್‌ ಪಡೆಯುವುದಲ್ಲ.ಅಪ್ಪ ನನಗೆ ರೋಲ್‌ ಮಾಡೆಲ್. ಅವರಿಗೆ ನನ್ನ ಜೊತೆ ಕುಳಿತು, ‘ನೀನು ಪಿಯುಸಿಯಲ್ಲಿ ಪಿಸಿಎಂಬಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಇಂಥದ್ದನ್ನೇ ಓದಬೇಕು’ ಎಂದು ಹೇಳುವಷ್ಟು ಸಮಯ ಇರುತ್ತಿರಲಿಲ್ಲ. ಇದಕ್ಕೆ ಒಂದು ಕಾರಣ, ಅವರಿಗೆ ಸಿಗುತ್ತಿದ್ದ ಅಲ್ಪ ಸಮಯ. ಇನ್ನೊಂದು ಕಾರಣ, ಶಿಕ್ಷಣದ ಬಗ್ಗೆ ಅವರು ಹೊಂದಿದ್ದ ಮುಕ್ತ ಮನಸ್ಸು. ನಾನು ಎಂಜಿನಿಯರಿಂಗ್ ಓದುವ ವ್ಯಕ್ತಿ ಅಲ್ಲ ಎಂಬುದು ನಾನು ದೊಡ್ಡವಳಾದಂತೆ ನನಗೆ ಗೊತ್ತಾಯಿತು. ಆ ಹೊತ್ತಿಗೆ ಅಪ್ಪ ಅಮೆರಿಕದ ಕೆಲವು ಕಾಲೇಜುಗಳಿಗೆ ಭೇಟಿ ನೀಡಿ, ಅವುಗಳ ಕುರಿತು ವಿವರ ಸಂಗ್ರಹಿಸಿದ್ದರು. ನಾನು ಯಾವೆಲ್ಲ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿದರು. ನಾನು ಪಿಯುಸಿನಲ್ಲಿ ಫ್ರೆಂಚ್ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ಏಕೆಂದರೆ, ಅಪ್ಪ ಅವರ ವೃತ್ತಿ ಆರಂಭಿಸಿದ್ದು ಫ್ರಾನ್ಸ್‌ನಲ್ಲಿ. ಇದು ನನ್ನ ಮೇಲೆ ಅವರು ಬೀರಿರುವ ಪ್ರಭಾವದ ದ್ಯೋತಕ.ವೃತ್ತಿಯ ಬಗ್ಗೆಯೂ ಅವರು ನನಗೆ ಯಾವಾಗಲೂ ಮಾರ್ಗದರ್ಶನ ಮಾಡಿದ್ದಾರೆ. ಯಾವ ವೃತ್ತಿ ಹೇಗೆ ಎಂಬುದನ್ನು ಹೇಳಿದ್ದಾರೆ. ಆದರೆ ವೃತ್ತಿಯ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ನನಗೇ ಬಿಟ್ಟಿದ್ದಾರೆ. ಅವರ ಈ ಧೋರಣೆಯನ್ನು ನನ್ನ ಮದುವೆಯ ವಿಚಾರದಲ್ಲೂ ಕಂಡಿದ್ದೇನೆ.ಅಪ್ಪ ಪ್ರತಿ ಭಾನುವಾರ ನಮ್ಮ ಜೊತೆ ಕಾಲ ಕಳೆಯುತ್ತಿದ್ದರು. ಆಗ ನಾವು ಒಟ್ಟಿಗೇ ಕುಳಿತು ಓದುತ್ತಿದ್ದೆವು. ಮನೆ ಹತ್ತಿರದ ರೆಸ್ಟೊರೆಂಟ್‌ ಒಂದರಿಂದ ಕಾಫಿ ತರುತ್ತಿದ್ದೆವು. ಈಗ ನಾನು ಮತ್ತು ನನ್ನ ಪತಿ ನಮ್ಮ ಕೆಲಸಗಳಲ್ಲಿ ಮುಳುಗಿದ್ದೇವೆ. ಆದರೆ, ನಮ್ಮ ಮಕ್ಕಳ ಜೊತೆ ಕಾಲ ಕಳೆಯುವಾಗ ನಮ್ಮ ಸಂಪೂರ್ಣ ಗಮನ ಅವರ ಮೇಲೇ ಇರುವಂತೆ ನೋಡಿಕೊಳ್ಳುತ್ತೇವೆ. ಹೀಗೆ ಆಗಲಿಕ್ಕೆ ಕಾರಣ ಅಪ್ಪ ನನ್ನ ಮೇಲೆ ಬೀರಿರುವ ಪ್ರಭಾವ. ಅಪ್ಪನ ಪ್ರವಾಸಗಳ ಕಾರಣದಿಂದಾಗಿ ಎಲ್ಲ ಭಾನುವಾರಗಳಂದೂ ಅವರು ನನಗೆ ಸಿಗುತ್ತಿರಲಿಲ್ಲ. ಹೀಗಿದ್ದರೂ, ಅವರು ನಮ್ಮ ಕೈಗೆ ಸಿಗುತ್ತಿಲ್ಲ ಎಂಬ ಭಾವನೆ ನಮ್ಮಲ್ಲಿ ಯಾವತ್ತೂ ಬರಲಿಲ್ಲ.ಅಪ್ಪ ನನ್ನ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಿದವರು. ಇದರಲ್ಲಿ ಅಮ್ಮನ ಪಾಲೂ ಸಮ ಪ್ರಮಾಣದಲ್ಲಿ ಇದೆ. ನಾವು ಚಿಕ್ಕವರಾಗಿದ್ದಾಗ, ನಮ್ಮ ಜನ್ಮದಿನವನ್ನು ಮನೆಯಲ್ಲಿ ಆಚರಿಸುತ್ತಿರಲಿಲ್ಲ. ಹುಟ್ಟುಹಬ್ಬ ಆಚರಿಸಲು ಖರ್ಚು ಮಾಡುವ ಹಣವನ್ನು ದಾನವಾಗಿ ಕೊಟ್ಟುಬಿಡೋಣ ಎಂಬುದು ಅಪ್ಪ‍– ಅಮ್ಮನ ನಿಲುವಾಗಿತ್ತು. ನಮಗೆ ಲಭ್ಯವಿರುವ ಎಲ್ಲವನ್ನೂ ಬಳಸಿಕೊಂಡು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಯತ್ನಿಸಬೇಕು ಎಂಬುದು ಅವರ ಧೋರಣೆ. ಇದು ನನ್ನ ಜೀವನ ದೃಷ್ಟಿಕೋನವನ್ನು ಬದಲಿಸಿತು. ಇಂತಹ ವಿಚಾರದಲ್ಲಿ ನಾನು ನನ್ನ ಅಪ್ಪ– ಅಮ್ಮನಿಗೆ ಸಮನಾದ ವ್ಯಕ್ತಿಯಲ್ಲ. ಆದರೆ, ಅವರಲ್ಲಿನ ಆದರ್ಶಗಳನ್ನು ನನ್ನ ಮಕ್ಕಳಲ್ಲಿ ತರಲು ಯತ್ನಿಸುತ್ತಿದ್ದೇನೆ.ಹಣ ಎಂಬುದು ನನ್ನ ಅಪ್ಪನ ವ್ಯಕ್ತಿತ್ವವನ್ನು ಯಾವ ಸಂದರ್ಭದಲ್ಲೂ ನಿರ್ಧರಿಸಲಿಲ್ಲ. ಆದರೆ, ಇನ್ಫೊಸಿಸ್‌ನ ಯಶಸ್ಸು ಅವರಿಗೆ ಬಹುಮುಖ್ಯವಾಗಿತ್ತು. ಹೀಗಿದ್ದರೂ, ಹಣವು ಅವರ ಜೀವನದ ಮೇಲೆ ಯಾವತ್ತೂ ಯಾವ ರೀತಿಯ ಪರಿಣಾಮವನ್ನೂ ಬೀರಲಿಲ್ಲ.

courtsey:prajavani.net

“ಅಕ್ಷತಾ ಮೂರ್ತಿ”,

https://www.prajavani.net/artculture/art/akshatha-murthy-n-r-narayana-643905.html

Leave a Reply