ಮಕ್ಕಳ ಕಥೆ- ಅಮ್ಮನೆಂದರೆ ಅಮ್ಮನೇ

ಒಂದು ಹಳ್ಳಿಯಲ್ಲಿ ಮೇಕೆಯೊಂದು ತನ್ನ ನಾಲ್ಕು ಮರಿಗಳೊಂದಿಗೆ ವಾಸವಾಗಿತ್ತು. ಮರಿಗಳ ಮೇಲೆ ಅದಕ್ಕೆ ತುಂಬ ಮಮತೆ ಇತ್ತು. ಒಂದು ಸಲ ಹಳ್ಳಿಯಲ್ಲಿ ಮಳೆ ಬರಲಿಲ್ಲ. ಸೂರ್ಯನ ಬಿಸಿಲಿನ ಝಳಕ್ಕೆ ಹಸಿರೆಲ್ಲವೂ ಸುಟ್ಟುಹೋಯಿತು. ಮರಿಗಳಿಗೆ ಹೊಟ್ಟೆ ತುಂಬ ಹಾಲು ಕೊಡಲು ಮೇಕೆಗೆ ಕಷ್ಟವಾಯಿತು. ಅದು ಮರಿಗಳ ಬಳಿ, ‘ನಾಳೆಯಿಂದ ನಾನು ಮೇವು ಹುಡುಕಿಕೊಂಡು ತುಂಬ ದೂರ ಹೋಗಬೇಕು. ನೀವು ಭದ್ರವಾಗಿ ಬಾಗಿಲು ಹಾಕಿಕೊಂಡು ಮನೆಯೊಳಗೇ ಕುಳಿತುಕೊಳ್ಳಬೇಕು. ಹೊರಗಿನಿಂದ ನಾನು ಬಂದು ಕರೆದರೆ ಮಾತ್ರ ಬಾಗಿಲು ತೆರೆಯಬೇಕು. ಇಲ್ಲವಾದರೆ ನಿಮಗೆ ಪ್ರಾಣಾಪಾಯ ಎದುರಾಗಬಹುದು’ ಎಂದು ಹೇಳಿತು.ಮಕ್ಕಳು, ‘ನೀನು ಹೇಳಿದ ಮಾತನ್ನು ಮರೆಯುವುದಿಲ್ಲ ಅಮ್ಮ. ಜಾಗರೂಕತೆಯಿಂದ ಇರುತ್ತೇವೆ’ ಎಂದು ಒಪ್ಪಿಕೊಂಡವು. ಮೇಕೆ ಮೇವು ಹುಡುಕುತ್ತ ದೂರದ ಹುಲ್ಲುಗಾವಲಿಗೆ ಹೋಯಿತು. ಅಲ್ಲಿ ಒಂದು ತೋಳ ಅದನ್ನು ಕಂಡು ಬಾಯಲ್ಲಿ ನೀರೂರಿಸಿಕೊಂಡು, ‘ಮೇಕೆಯಕ್ಕಾ ಹೇಗಿದ್ದೀಯಾ’ ಎಂದು ಕೇಳಿತು. ‘ಹೇಗಪ್ಪ ಇರುವುದು, ಬರಗಾಲದಿಂದಾಗಿ ಹೊಟ್ಟೆಗೆ ಊಟ ಇಲ್ಲ. ನನ್ನ ಮರಿಗಳಿಗೆ ಹಾಲು ಕೊಡಬೇಕಲ್ಲವೆ? ಅದಕ್ಕಾಗಿ ಮೇವು ಹುಡುಕಿಕೊಂಡು ಹೊರಟಿದ್ದೇನೆ’ ಎಂದು ಹೇಳಿತು ಮೇಕೆ.‘ಅಯ್ಯೋ ಪಾಪ, ಮರಿಗಳು ಉಪವಾಸ ಇವೆಯೆ? ಎಲ್ಲಮ್ಮ ನಿನ್ನ ಮನೆ? ಹಸಿದ ಮರಿಗಳಿಗೆ ನಾನೇ ಹೋಗಿ ತಾಜಾ ಹಾಲು ಕೊಟ್ಟು ಬರುತ್ತೇನೆ. ನನ್ನ ಒಡೆತನದಲ್ಲಿ ಯಾರೂ ಉಪವಾಸವಿರುವುದು ನನಗೆ ಇಷ್ಟವಿಲ್ಲ. ನೀನು ಒಳ್ಳೆಯ ಮೇವು ತಿಂದು ನಿಧಾನವಾಗಿ ಮನೆಗೆ ಹೋಗು. ನಿನಗೆ ಮಕ್ಕಳ ಕುರಿತು ಒಂದಿಷ್ಟೂ ಕಳವಳ ಬೇಡ’ ಎಂದು ಸಿಹಿಸಿಹಿಯಾಗಿ ತೋಳ ಹೇಳಿತು.ಮೇಕೆಯು ತೋಳದ ಕಪಟತನವನ್ನು ಶಂಕಿಸದಂತೆ ನಟಿಸಿತು. ತನ್ನ ಮರಿಗಳಿರುವ ಮನೆ ಎಲ್ಲಿದೆ ಎಂಬುದನ್ನು ಹೇಳಿಯೇಬಿಟ್ಟಿತು. ತೋಳದ ಕೈಯಿಂದ ಪಾರಾಗಲು ಬೇರೆ ದಾರಿಯಿರಲಿಲ್ಲ. ಮರಿಗಳು ಬೇರೆ ಯಾರಿಗೂ ಬಾಗಿಲು ತೆರೆಯುವುದಿಲ್ಲ ಎಂಬ ಭರವಸೆ ಮೇಕೆಗೆ ಇತ್ತು. ತೋಳವು ಮೇಕೆಯ ಮನೆಗೆ ಹೋಯಿತು. ಹೊರಗೆ ನಿಂತು, ‘ಮಕ್ಕಳೇ, ನಾನು ನಿಮ್ಮ ಅಮ್ಮ ಬಂದಿದ್ದೇನೆ. ಬಾಗಿಲು ತೆರೆಯಿರಿ’ ಎಂದು ಕೂಗಿತು. ಮರಿಗಳು ಬಾಗಿಲು ತೆರೆಯಲಿಲ್ಲ. ಒಳಗಿನಿಂದಲೇ, ‘ನೀನು ನಮ್ಮ ಅಮ್ಮ ಆಗಿರಲಾರೆ. ಅಮ್ಮ ಯಾವತ್ತೂ ಬರಿಗೈಯಲ್ಲಿ ಬಂದಿಲ್ಲ. ಚೆಂಬು ತುಂಬ ಹಾಲು ತಂದಿಟ್ಟು ಕರೆಯುತ್ತಾಳೆ’ ಎಂದು ಹೇಳಿದವು.rತೋಳ ಸುಮ್ಮನಿರಲಿಲ್ಲ. ಹಳ್ಳಿಯತ್ತ ಓಡಿತು. ಅಲ್ಲೊಬ್ಬ ಕಮ್ಮಾರ ಕಬ್ಬಿಣ ಕಾಯಿಸುತ್ತ ಕುಳಿತಿದ್ದ. ಅವನ ಮುಂದೆ ಹೋಗಿ ಗಕ್ಕನೆ ಬಾಯ್ತೆರೆದು ನಿಂತಿತು. ಕಮ್ಮಾರ ಭಯದಿಂದ ನಡುಗಿಬಿಟ್ಟ. ‘ನನಗೇನೂ ತೊಂದರೆ ಮಾಡಬೇಡ’ ಎಂದು ಬೇಡಿಕೊಂಡ. ‘ನಿನಗೆ ಸುಮ್ಮನೆ ತೊಂದರೆ ಕೊಡುವ ಬಯಕೆ ನನಗಿಲ್ಲ ನನಗೀಗ ಒಂದು ಚೆಂಬು ತುಂಬ ಹಾಲು ಬೇಕು, ತಂದುಕೊಡು’ ಎಂದು ಹೇಳಿತು ತೋಳ.‘ಹಾಗೆಯೇ ಆಗಲಿ’ ಎಂದು ಕಮ್ಮಾರ ಹಾಲು ತಂದುಕೊಟ್ಟ. ತೋಳ ಹಾಲಿನ ಚೆಂಬು ತಂದು ಮೇಕೆಯ ಮನೆ ಬಾಗಿಲಿನ ಬಳಿ ಇರಿಸಿ, ‘ಮಕ್ಕಳೇ, ಹಾಲು ತಂದಿದ್ದೇನೆ, ಕುಡಿಯಿರಿ’ ಎಂದು ಕೂಗಿತು. ‘ಆಗಲಮ್ಮ’ ಎನ್ನುತ್ತ ಮರಿಗಳು ಬಾಗಿಲನ್ನು ಸ್ವಲ್ಪ ಮಾತ್ರ ಸರಿಸಿ ಚೆಂಬನ್ನು ಒಳಗೆಳೆದುಕೊಂಡು ಮತ್ತೆ ಭದ್ರವಾಗಿ ಮುಚ್ಚಿಬಿಟ್ಟವು. ಹಾಲನ್ನು ಕುಡಿದು ಹಸಿವು ನೀಗಿಸಿಕೊಂಡವು. ಮರಿಗಳು ಬಾಗಿಲು ತೆರೆಯುತ್ತವೆ, ಒಳಗೆ ಹೋಗಿ ಮೃಷ್ಟಾನ್ನ ಭೋಜನ ಸವಿಯಬಹುದು ಎಂದು ಭಾವಿಸಿದ್ದ ತೋಳ ನಿರಾಶೆಗೊಂಡಿತು. ಮತ್ತೆ, ‘ಮರಿಗಳೇ, ಏನು ಮಾಡುತ್ತಿದ್ದೀರಿ? ಬಾಗಿಲು ತೆರೆಯಿರಿ, ಇಲ್ಲಿ ತುಂಬ ಚಳಿಯಾಗುತ್ತಿದೆ. ತೋಳ ಗೀಳ ಬಂದರೆ ಅಂತ ಭಯವೂ ಆಗುತ್ತಿದೆ’ ಎಂದಿತು. ಮರಿಗಳು ಬಾಗಿಲು ತೆರೆಯದೆ ಒಳಗಿನಿಂದಲೇ, ‘ಇದು ನಮ್ಮ ಅಮ್ಮನ ಧ್ವನಿಯ ಹಾಗೆ ಇಲ್ಲ. ಅಮ್ಮನ ಧ್ವನಿಯಲ್ಲಿ ಕರೆದರೆ ಮಾತ್ರ ಬಾಗಿಲು ತೆರೆದೇವು’ ಎಂದು ಹೇಳಿದವು.ಇದೊಳ್ಳೆ ಪೇಚಾಟವಾಯಿತಲ್ಲ ಎಂದು ತೋಳ ಚಿಂತೆ ಮಾಡಿತು. ಸನಿಹದಲ್ಲೇ ಜಾಣ ನರಿಯ ಮನೆ ಇತ್ತು. ಇಕ್ಕಟ್ಟಿನ ಸಮಯದಲ್ಲಿ ಅದು ಒಳ್ಳೆಯ ಸಲಹೆ ಕೊಡುತ್ತದೆ ಎಂಬುದು ಅದಕ್ಕೆ ಗೊತ್ತಿತ್ತು. ನರಿಯ ಮನೆಗೆ ಹೋಗಿ ಕದ ತಟ್ಟಿತು. ಒಳಗಿದ್ದ ನರಿ, ‘ಯಾರದು ಕದ ಬಡಿಯುತ್ತಿರುವುದು? ಉಚಿತ ಸಲಹೆಗೆ ಬಂದವರಾದರೆ ಹಾಗೆಯೇ ಮುಂದೆ ಹೋಗಿ. ಒಂದು ಹೆಬ್ಬಾತನ್ನೋ ಹುಂಜವನ್ನೋ ನನ್ನ ಸಲಹೆಯ ಶುಲ್ಕವೆಂದು ತಂದರೆ ಮಾತ್ರ ಮನೆಯೊಳಗೆ ಅಡಿಯಿಡಬಹುದು’ ಎಂದು ಸ್ಪಷ್ಟವಾಗಿ ಹೇಳಿತು. ತೋಳ ಒಂದು ಕೆರೆಯ ಬಳಿಗೆ ಹೋಗಿ ಹೊಂಚು ಹಾಕಿತು. ಹೇಗೋ ಕಷ್ಟದಲ್ಲಿ ಒಂದು ಹೆಬ್ಬಾತನ್ನು ಹಿಡಿದುಕೊಂಡು ನರಿಯ ಮನೆ ತಲುಪಿತು. ‘ತಾತಯ್ಯ, ನಿನಗೆ ಇಷ್ಟವಾದ ಹೆಬ್ಬಾತನ್ನು ಹಿಡಿದು ತಂದಿದ್ದೇನೆ. ಬಾಗಿಲು ತೆರೆದು ನನ್ನನ್ನು ಒಳಗೆ ಕರೆಸಿಕೋ. ನನಗೆ ನಿನ್ನಿಂದ ಒಂದು ಸಲಹೆ ಬೇಕಾಗಿದೆ’ ಎಂದು ಕೂಗಿತು.ನರಿ ಬಾಗಿಲು ತೆರೆಯಿತು. ಹೆಬ್ಬಾತನ್ನು ಕಂಡು ಭರ್ಜರಿ ಊಟ ಎಂದುಕೊಂಡಿತು. ನಿಧಾನವಾಗಿ ಅದನ್ನು ತಿಂದು ಮುಗಿಸಿ, ‘ಈಗ ಹೇಳು, ನಿನಗೆ ಯಾವ ಸಲಹೆ ಬೇಕು?’ ಎಂದು ವಿಚಾರಿಸಿತು. ತೋಳವು ಮೇಕೆಯ ಮರಿಗಳ ವಿಷಯ ತಿಳಿಸಿ, ‘ನನಗೀಗ ಮೇಕೆಯಂತೆ ಮಾತನಾಡುವ ಶಕ್ತಿ ಬರಬೇಕು. ಹೊರಗಿನಿಂದ ನಾನು ಕರೆದರೆ ತಾಯಿ ಬಂದಿದ್ದಾಳೆಂದು ಭಾವಿಸಿ ಮರಿಗಳು ಬಾಗಿಲು ತೆರೆದರೆ ಸಾಕು. ಇದಕ್ಕೇನಾದರೂ ಉಪಾಯವಿದ್ದರೆ ಹೇಳು ತಾತಾ’ ಎಂದು ಕೋರಿತು. ಮೇಕೆಯ ಹಾಗೆ ಧ್ವನಿ ಬದಲಾಯಿಸುವ ದಾರಿ ಏನೆಂಬುದು ನರಿಗೆ ಗೊತ್ತಿರಲಿಲ್ಲ. ಆದರೆ ಹಾಗೆ ಹೇಳಿದರೆ ತೋಳಕ್ಕೆ ಹೆಬ್ಬಾತನ್ನು ಮರಳಿ ಕೊಡಬೇಕಾಗುತ್ತದೆ. ಹಾಗಾಗಿ ಅದು ಒಂದು ಉಪಾಯ ಹುಡುಕಿತು. ‘ನನಗೂ ಒಮ್ಮೆ ಇಂಥದ್ದೇ ಸಮಸ್ಯೆ ಎದುರಾಗಿತ್ತು. ಕೋಳಿಮರಿಗಳನ್ನು ಹಿಡಿಯಲು ಹೇಂಟೆಯ ಹಾಗೆ ಕೂಗಬೇಕಿತ್ತು. ಹಳ್ಳಿಯಲ್ಲಿರುವ ಕಮ್ಮಾರ ಯಾವ ರೀತಿಯ ಧ್ವನಿ ಬೇಕಿದ್ದರೂ ಬರುವ ಹಾಗೆ ಮಾಡುತ್ತಾನೆ. ಅವನೇ ಅದನ್ನು ಮಾಡಿಕೊಟ್ಟ. ಅಲ್ಲಿಗೆ ಹೋಗು’ ಎಂದಿತು ನರಿ. ತೋಳ ಕಮ್ಮಾರನ ಬಳಿಗೆ ಹೋಗಿ ತನ್ನ ಧ್ವನಿ ಬದಲಾಯಿಸುವಂತೆ ಹೇಳಿತು. ತಪ್ಪಿದರೆ ಕೊಲ್ಲುವುದಾಗಿ ಎಚ್ಚರಿಸಿತು. ಅವನು ಒಂದು ಕಬ್ಬಿಣದ ಗುಳವನ್ನು ಕಾಯಿಸಿ ಕೆಂಪು ಮಾಡಿ ಗುದ್ದಲು ಸಿದ್ಧನಾಗಿದ್ದ. ‘ಸರಿ, ಕಣ್ಮುಚ್ಚು, ಬಾಯಿ ತೆರೆ. ನಿನಗೆ ಮೇಕೆಯ ಧ್ವನಿ ಬರುವಂತೆ ಮಾಡುತ್ತೇನೆ’ ಎಂದು ಹೇಳಿದ. ತೋಳ ಬಾಯ್ದೆರೆದು ಕುಳಿತ ಕೂಡಲೇ ಕಾದ ಗುಳವನ್ನು ಅದರ ಬಾಯೊಳಗೆ ತೂರಿಸಿಬಿಟ್ಟ. ಉರಿ ತಾಳಲಾಗದೆ ವಿಕಾರ ಧ್ವನಿಯಿಂದ ಕೂಗುತ್ತ ತೋಳವು ಊರು ಬಿಟ್ಟು ಓಡಿತು. ಇತ್ತ, ಮೇಕೆಯು ಹೊಟ್ಟೆ ತುಂಬ ಮೇದು ಮನೆಗೆ ಮರಳಿತು. ಮಕ್ಕಳನ್ನು ಕೂಗಿ ಕರೆಯಿತು. ಮರಿಗಳು ಬಾಗಿಲು ತೆರೆದವು. ಒಳಗೆ ಬಂದ ತಾಯಿಯಲ್ಲಿ, ತೋಳವು ಬಂದು ಕರೆದ ಕತೆ ಹೇಳಿದವು. ‘ಮಕ್ಕಳೇ, ಈಗ ನಾನು ಬಂದು ಕರೆದ ಕೂಡಲೇ ನೀವು ಬಾಗಿಲು ತೆರೆದಿರಲ್ಲವೆ? ನಿಮಗೆ ನಾನೇ ಬಂದಿರುವುದು ಹೇಗೆ ಅರಿವಾಯಿತು’ ಎಂದು ಕೇಳಿತು ಮೇಕೆ. ಮಕ್ಕಳು ಪ್ರೀತಿಯಿಂದ ಅಮ್ಮನನ್ನು ತಬ್ಬಿಕೊಂಡವು. ‘ಅಮ್ಮಾ, ನಿನ್ನ ದನಿಯಲ್ಲಿರುವ ಪ್ರೀತಿಯ ಸಿಹಿ, ನಿನ್ನ ಮೈಯಲ್ಲಿರುವ ಪರಿಮಳ ಇವೆಲ್ಲವೂ ನಮಗೆ ಅರ್ಥವಾಗುತ್ತದೆ. ಇದನ್ನು ಅನುಕರಿಸಿ ಮೋಸ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಮ್ಮ ಎಂದರೆ ಅಮ್ಮನೇ’ ಎಂದವು.

author- ಪ. ರಾಮಕೃಷ್ಣ ಶಾಸ್ತ್ರಿ

courtsey:prajavani

https://www.prajavani.net/artculture/short-story/makkala-kathe-ramakrishna-666482.html

Leave a Reply