ತಮಿಳು ಕನ್ನಡದ ಸೇತುವೆ

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕುವೆಂಪು ಹೇಳಿದ್ದನ್ನು ನಿಜವಾಗಿಸಿದವರು ಕನ್ನಡ ಸಾಹಿತ್ಯ ಹಾಗೂ ವಿದ್ವತ್ ಲೋಕದಲ್ಲಿ ಖ್ಯಾತರಾಗಿದ್ದ ಪಾ.ಶ. ಶ್ರೀನಿವಾಸ ಅವರು. ತಮ್ಮ 85ರ ಇಳಿ ವಯಸ್ಸಿನಲ್ಲಿ ಇನ್ನಿಲ್ಲವಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದರೂ ಬಾಲ್ಯ ಕಳೆದಿದ್ದು ಹಾಗೂ ವಿದ್ಯಾಭ್ಯಾಸ ನಡೆಸಿದ್ದು ಸಕ್ಕರೆ ನಾಡಾದ ಮಂಡ್ಯದಲ್ಲಿ. ಆದರೆ, ಕಾಯಕದ ಕ್ಷೇತ್ರವಾಗಿ ಇವರಿಗೆ ಒಲಿದು ಬಂದದ್ದು ತಮಿಳರ ಸಾಂಸ್ಕೃತಿಕ ನಗರಿ ಮದುರೆ. ಹೊರನಾಡಿನಲ್ಲಿ ಕನ್ನಡ ಕಟ್ಟಬೇಕೆಂಬ ಮನಸ್ಸುಳ್ಳವರಿಗೆ ಐದು ದಶಕಗಳ ಕಾಲ ತಮಿಳುನಾಡಿನಲ್ಲಿ ನೆಲೆ ನಿಂತ ಇವರು ಮಾದರಿ. ಕನ್ನಡ ಸಾಹಿತ್ಯಕ್ಕೆ, ಅದರಲ್ಲೂ ಅನುವಾದ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಅನನ್ಯ. ಅವರ ಅಗಲಿಕೆಯಿಂದ ತಮಿಳು–ಕನ್ನಡ ಸಾಹಿತ್ಯ ಕೊಂಡಿಯೊಂದು ಕಳಚಿದಂತಾಗಿದೆ. ಪಾ.ಶ. ಶ್ರೀನಿವಾಸರು ವಿದ್ಯಾರ್ಥಿ ಜೀವನದಲ್ಲೇ ಮಂಡ್ಯದ ‘ಕಿರಣ ಸಾಹಿತ್ಯ ಸಂಘ’ದ ಸಕ್ರಿಯ ಸದಸ್ಯರಾಗಿದ್ದು, ‘ಜನ್ಮಭೂಮಿ’ ಎಂಬ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ಮೈಸೂರಿನ ಮಾನಸ ಗಂಗೋತ್ರಿಯ ಕನ್ನಡ ಎಂ.ಎ. ತರಗತಿಗಳಲ್ಲಿರುವಾಗಲೇ ವಿದ್ವತ್‍ಪೂರ್ಣ ಲೇಖನಗಳನ್ನು ಬರೆದು ಅಂದಿನ ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದಿದ್ದರು. ಅ.ರಾ. ಮಿತ್ರ, ಹಂಪ ನಾಗರಾಜಯ್ಯ, ಎಂ.ಎಚ್. ಕೃಷ್ಣಯ್ಯ, ಲಕ್ಷ್ಮೀನಾರಾಯಣ ಭಟ್ಟ, ಕಮಲಾ ಹಂಪನಾ ಮುಂತಾದವರು ಇವರ ಸಹಪಾಠಿಗಳಾಗಿದ್ದರು. ಅರವತ್ತು ವರ್ಷಗಳ ಹಿಂದೆ ವೃತ್ತಿ ಬದುಕಿನ ನೆವದಿಂದ ಮದ್ರಾಸ್ ಸೇರಿ ಅಲ್ಲಿನ ‘ದಕ್ಷಿಣ ಭಾಷಾ ಪುಸ್ತಕ ಸಂಸ್ಥೆ’ಯ ಸಂಪಾದಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿದರು. ಇದರಿಂದ ಸೋದರ ಭಾಷೆಗಳ ಸಂಪರ್ಕ ಲಭಿಸಿ ತೌಲನಿಕ ಅಧ್ಯಯನಕ್ಕೆ ಒಗ್ಗಿ ಹೋದರು. 1964ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಾರಾಗಿ ಆಯ್ಕೆಯಾಗಿ ಎಂಟು ವರ್ಷಗಳ ಕಾಲ ಮದ್ರಾಸ್‍ನ ಕನ್ನಡ ಪರ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. ಶರಣ ಹಾಗೂ ದಾಸ ಸಾಹಿತ್ಯದ ತೌಲನಿಕ ಅಧ್ಯಯನವನ್ನು ಇಂಗ್ಲಿಷ್‍ನಲ್ಲಿ ಬರೆದು ಪಿಎಚ್.ಡಿ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಿಂದ ಗಳಿಸಿದರು. 1972ರಲ್ಲಿ ಮಧುರೆ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭವಾದಾಗ ಅದರ ಮುಖ್ಯಸ್ಥರಾಗಿ ನೇಮಕಗೊಂಡ ಶ್ರೀನಿವಾಸ ಅವರು ಮೂರು ದಶಕಗಳ ಕಾಲ ಮಧುರೆಯಲ್ಲಿ ನೆಲೆಸಿ ಕನ್ನಡ ಹಾಗೂ ತಮಿಳು ಸಾಹಿತ್ಯ ಸೇತುವೆಯಾಗಿ ನಿರಂತರ ಸಾಹಿತ್ಯ ಸೇವೆ ಸಲ್ಲಿಸಿದರು. ಶ್ರೀನಿವಾಸರ ಕಾರ್ಯನಿಷ್ಠೆ, ಅಧ್ಯಯನಾಸಕ್ತಿ, ಹೊರನಾಡಿನಲ್ಲಿ ಕನ್ನಡವನ್ನು ಬೆಳೆಸಬೇಕೆಂಬ ಸಂಕಲ್ಪ, ಬೇರೆ ಭಾಷೆಗಳ ವಿದ್ವಾಂಸರೊಂದಿಗಿನ ಸುಮಧುರ ಸಂಬಂಧ ಮುಂತಾದವುಗಳಿಂದಾಗಿ ಮಧುರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸದೃಢವಾಗಿ ಬೆಳೆಯಿತು. ತಮಿಳುನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ಮೀನಾಕ್ಷಿ ಸುಂದರಂ, ಡಾ.ಟಿ.ಬಿ. ಸಿದ್ದಲಿಂಗಯ್ಯ, ಮುದಮಾರಿ ಜಗನ್ನಾಥರಾಜು, ಟಿ. ಕೋದಂಡರಾಮಯ್ಯ ಮುಂತಾದವರು ಇವರ ಒಡನಾಡಿಗಳಾಗಿದ್ದು ತೌಲನಿಕ ಅಧ್ಯಯನ ಹಾಗೂ ಅನುವಾದ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳು ನಡೆದವು. ಇವರಿಂದ ಆದ ‘ತಿರುಕ್ಕುರುಳ್’ನ ಸಮಗ್ರ ಅನುವಾದವು ಕನ್ನಡ ಭಾಷಾಂತರ ಕ್ಷೇತ್ರದಲ್ಲಿ ಅದ್ವೀತಿಯವಾದದ್ದು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಕೃತಿಗೆ ಲಭಿಸಿದೆ. ಹೊರನಾಡಿನ ವಿಶ್ವವಿದ್ಯಾಲಯವೊಂದು ಈ ಕನ್ನಡ ಕೃತಿಯನ್ನು ಪ್ರಕಟಿಸಿರುವುದು ಈ ಪುಸ್ತಕದ ಹೆಚ್ಚುಗಾರಿಕೆ. ಇವತ್ತಿಗೂ ತಮಿಳರು ಶ್ರೀನಿವಾಸರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ತಮಿಳರ ಪಾಲಿಗೆ ತಿರುವಳ್ಳುವರ್ ದೇವರ ಸಮಾನ. ಶ್ರೀನಿವಾಸರು ಕನ್ನಡದಲ್ಲಿ ಅವರ ಬಗ್ಗೆ ಕೃತಿ ರಚಿಸಿದ್ದಾರೆ. ಅಸಂಖ್ಯ ಶಿಷ್ಯರಿಗೆ ಮಾರ್ಗದರ್ಶಕರಾಗಿ ಕನ್ನಡದಲ್ಲಿ ಉತ್ತಮ ಪ್ರೌಢ ಪ್ರಬಂಧಗಳು ರಚನೆಯಾಗಲು ಕಾರಣರಾಗಿದ್ದಾರೆ. ಇವರ ‘ಸಾಹಿತ್ಯ ಕಾವೇರಿ’ಯು ಕನ್ನಡ–ತಮಿಳು ಸಾಹಿತ್ಯ ಸಂಬಂಧದ ಕುರಿತಾದ ವಿದ್ವತ್‍ಪೂರ್ಣ ಲೇಖನಗಳ ಸಂಕಲನವಾಗಿದ್ದು ಪ್ರೌಢ ಅಧ್ಯಯಶೀಲ ಕೃತಿ. ಶ್ರೀನಿವಾಸ ಅವರ ಇನ್ನೊಂದು ಸಾಧನೆ ಮಧುರೆಯಲ್ಲಿ ‘ಕರ್ನಾಟಕ ಸಂಘ’ವನ್ನು ಬೆಳೆಸಿದ್ದು. ಬಹಳ ಕಾಲ ಆ ಸಂಘಕ್ಕೆ ಇವರೇ ಅಧ್ಯಕ್ಷರಾಗಿದ್ದರು. ಶಿವರಾಮ ಕಾರಂತ, ಜಿ.ಎಸ್. ಶಿವರುದ್ರಪ್ಪ, ಎಂ. ಚಿದಾನಂದಮೂರ್ತಿ, ಹಂಪನಾ, ಕೆ.ಎಂ. ಕೃಷ್ಣರಾವ್ ಮುಂತಾದ ಶ್ರೇಷ್ಠ ಸಾಹಿತಿಗಳನ್ನು, ವಿದ್ವಾಂಸರನ್ನು ಮಧುರೆಗೆ ಕರೆಸಿ ಅಲ್ಲಿನವರಿಗೆ ಕನ್ನಡ ಸಂಸ್ಕೃತಿಯ ಸವಿ ಪರಿಚಯಿಸಿದರು. 1986ರಲ್ಲಿ ಕರ್ನಾಟಕ ಸಂಘದ ಬೆಳ್ಳಿ ಹಬ್ಬವನ್ನು ಮೂರು ದಿನ ಆಚರಿಸಿ ತಮಿಳು–ಕನ್ನಡ ಬಾಂಧವ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳನ್ನು ಏರ್ಪಡಿಸಿದರು. ನಿವೃತ್ತಿಯ ನಂತರವೂ ತಮಿಳುನಾಡಿನಲ್ಲೇ ಇದ್ದು ಕನ್ನಡ-ತಮಿಳು ದ್ವಿಭಾಷಾ ನಿಘಂಟನ್ನು ರಚಿಸುವಲ್ಲಿ ಸಕ್ರಿಯರಾದರು. ಇದರಲ್ಲಿ 40 ಸಾವಿರಕ್ಕೂ ಹೆಚ್ಚು ಪದಗಳ ಸಂಗ್ರಹವಿದ್ದು, ತಮಿಳು–ಕನ್ನಡ ಅನುವಾದಕರಿಗೆ ಉತ್ಕೃಷ್ಟ ಆಧಾರ ಗ್ರಂಥ. ಆದ್ದರಿಂದಿಲೇ ತಮಿಳು ಶಾಸ್ತ್ರೀಯ ಭಾಷಾ ಪ್ರಾಧಿಕಾರದ ಯೋಜನೆಯಾದ ‘ಸಂಗಂ ಸಾಹಿತ್ಯ’ದ ಕನ್ನಡ ಅನುವಾದ ಕಾರ್ಯಗಳಿಗೆ ಇವರು ಮಾರ್ಗದರ್ಶಕ ಆಗುವಂತಾಯಿತು. ‘ಕಾವ್ಯಾನುಶೀಲನ’ ಎಂಬ ವಿಮರ್ಶಾ ಕೃತಿ, ‘ಹೆಜ್ಜೆ ಗುರುತು’ ಎಂಬ ಲೇಖನಗಳ ಸಂಕಲನ, ‘ಚಿತ್ತಾರ’ ಎಂಬ ಸಣ್ಣಕತೆಗಳ ಸಂಗ್ರಹ, ‘ಸಾರೂಪ್ಯ’ ಎಂಬ ಅಧ್ಯಯನಪೂರ್ಣ ಪ್ರಬಂಧಗಳ ಸಂಕಲನ, ಅನೇಕ ತಮಿಳು ಅನುವಾದ ಕೃತಿಗಳು… ಹೀಗೆ ಒಟ್ಟು 27ಕ್ಕೂ ಹೆಚ್ಚು ಕೃತಿಗಳನ್ನು ಶ್ರೀನಿವಾಸ ಅವರು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀನಿವಾಸ ಹಾಗೂ ಸುಶೀಲ ದಂಪತಿಗಳದ್ದು ಅನುರೂಪ ದಾಂಪತ್ಯ. ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿದ ಕುಟುಂಬ ಅವರದ್ದು. ಕನ್ನಡದ ಹಿರಿಯ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಚೆನ್ನೈ ಹಾಗೂ ಮಧುರೆಗೆ ಬರುವ ಕರ್ನಾಟಕದ ಅತಿಥಿಗಳು ಅವರ ಆಪ್ತ ಹಾಗೂ ಪ್ರೀತಿಯ ಸತ್ಕಾರ ಸವಿದಿದ್ದಾರೆ. ಈಚೆಗೆ ಮಂಡ್ಯಕ್ಕೆ ಬಂದು ನೆಲೆಸಿದ್ದ ಅವರು ಸ್ವಲ್ಪಕಾಲ ಅನಾರೋಗ್ಯಕ್ಕೆ ಗುರಿಯಾಗಿದ್ದರೂ, ಸಾಹಿತ್ಯದ ಹಾಗೂ ಅನುವಾದದ ಕೆಲಸಗಳಲ್ಲಿ ಹಿಂದೆ ಬಿದ್ದಿರಲಿಲ್ಲ. ಎಂಟು ತಿಂಗಳ ಹಿಂದೆ ಪತ್ನಿಯನ್ನು ಕಳೆದುಕೊಂಡ ಅವರು, ಏಕಾಂಗಿತನ ಹಾಗೂ ಅನಾರೋಗ್ಯದಿಂದ ಜರ್ಜರಿತಗೊಂಡು ಅಕ್ಟೋಬರ್‌ 14ರಂದು ಇಹಲೋಕ ತ್ಯಜಿಸಿದರು.

author- ಡಾ. ಆನಂದರಾಮ ಉಪಾಧ್ಯ

courtsey:prajavani.net

https://www.prajavani.net/artculture/article-features/bridge-between-kannada-and-tamil-language-678178.html

Leave a Reply