ನವರಾತ್ರಿ ರಂಗೋತ್ಸವ–2019 ನಾಳೆಯಿಂದ

ಮೈಸೂರು: ರಂಗಾಯಣ ಈ ಬಾರಿಯೂ ನವರಾತ್ರಿ ರಂಗೋತ್ಸವ–2019 ಆಯೋಜಿಸಿದ್ದು, ಸೆ.29ರಿಂದ ಅ.7ರವರೆಗೂ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಸಲಿದೆ ಎಂದು ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು. ರಂಗಾಯಣದ ಶೂದ್ರ ತಪಸ್ವಿ ನಾಟಕದೊಂದಿಗೆ ರಂಗೋತ್ಸವ ಆರಂಭವಾಗಲಿದೆ. ಇದೇ ದಿನ ಬೆಂಗಳೂರಿನ ಎಚ್‌.ವಿ.ವೆಂಕಟಸುಬ್ಬಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹೈದರ್‌, ವಿದಿಶಾ ಪ್ರಹಸನ, ಕಂಚುಗನ್ನಡಿ, ಮಧುವನದಲ್ಲಿ ನಾಲ್ವಡಿ, ಯುದ್ಧ ಮುಗಿವುದಾದರೆ?, ಬಕಾವಲಿಯ ಹೂ, ಆರ್ಕೇಡಿಯಾದಲ್ಲಿ ಪಕ್‌, ದಿ ಹೌಸ್‌ ಆಫ್ ಬರ್ನಾಡಾ ಅಲ್ಬಾ ನಾಟಕಗಳು ಕ್ರಮವಾಗಿ ಪ್ರದರ್ಶನಗೊಳ್ಳಲಿದ್ದು, ಇದೇ ಸಂದರ್ಭ ಎಂ.ಎಸ್.ವೆಂಕಟರಾಮ್‌, ಪುರುಷೋತ್ತಮ ತಲವಾಟ, ಬಸಯ್ಯಸ್ವಾಮಿ ಹೆಬ್ಬಾಳಮಠ, ಹುಸೇನ್‌ಸಾಬ್‌ ಹ.ಶರೀಫ್‌ನವರ, ಚಂಡೆ ನಾಗರಾಜ್, ನೀಲಮ್ಮ, ನಾಗವೇಣಿ ಶಂಕರ್, ಏಕಪ್ಪ ಆರ್.ಚಿತ್ರಗಾರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಒಂದೂವರೆ ದಶಕದಿಂದ ರಂಗೋತ್ಸವ ನಡೆದಿದೆ. ಕಾಲೇಜು ರಂಗೋತ್ಸವದಲ್ಲಿ ಮೆಚ್ಚುಗೆ ಪಡೆದ ನಾಟಕಗಳು ಸಹ ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭ ಮೈಸೂರಿನ 40 ಪಾರಂಪರಿಕ ಕಟ್ಟಡಗಳ ಪ್ರದರ್ಶನ ನಡೆಸಲಾಗುವುದು. ರಂಗಾಯಣದ ಆವರಣದಲ್ಲೇ ಅಶೋಕ್‌ ಮನ್ಸೂರ್, ಪ್ರಮೋದ್‌ ಸ್ಟೀಫನ್‌, ನವೀನ್‌ಕುಮಾರ್ ಕಲಾಕೃತಿಗಳ ಪ್ರದರ್ಶನ, ‘ಚೈತನ್ಯ ಕ್ಷಣ’ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ ಎಂದರು.

courtsey:prajavani.net

https://www.prajavani.net/entertainment/theater/navarathri-rangothsava-667992.html

Leave a Reply