ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.
ಹಗಲು ಇರುಳು, ಸೂರ್ಯ ಚಂದ್ರ, ಭೂಮಿ-ಆಕಾಶ, ಹಕ್ಕಿಗಾನ, ಹರಿವ ನದಿಗಳೇ ಮುಂತಾದ ಚೆಲುವಿನ ಕಿರಣಗಳು ಮೊದಲ ಹದಿನೆಂಟು ಭಾವಗೀತಗಳಲ್ಲಿ ಅರಳಿ ನಿಂತಿವೆ. ‘ನಿನ್ನ ಕ್ಷಣಿಕ ಸುಖಕ್ಕಾಗಿ ಇನ್ನೊಬ್ಬರ ಬಾಳನ್ನು ಕಸಿಯಬೇಡ’ ಎಂಬ ಸಂದೇಶ ‘‘ಹಾಡು ಹೂವಾಗಿ ಬಾಳಿನಲ್ಲಿ’’ ಎಂಬ ಕವನದಲ್ಲಿದ್ದರೆ ಸಾವು-ನೋವು, ಸ್ವರ್ಗ-ನರಕಗಳ ಸಮನ್ವಯ ‘ಪ್ರಕೃತಿ’ ಕವನದ ತಿರುಳಾಗಿದೆ. ಈ ಚೈತನ್ಯಶಾಲೀ ಜಗದಲ್ಲಿ ಜನನ ಮರಣ ಚಿತ್ರದಲ್ಲಿ ಇರುವಷ್ಟು ಕಾಲ ಮನದಲ್ಲಿ ಆನಂದ ತುಂಬಿರಲಿ, ಬಾಳು ಚೆಲುವಾಗಿರಲಿ ಎಂಬುದು ‘ಆತ್ಮೋದಯ’ದ ಹಾರೈಕೆಯಾಗಿದೆ. ‘ಸನ್ಮಾರ್ಗ’ ಕವಿತೆಯಲ್ಲಿ ಬೇಂದ್ರೆಯವರ ಗಂಗಾವತರಣದ ಪ್ರಾರ್ಥನಾ ಗೀತೆ ‘‘ಲೇಸೆ ಕೇಳಿಸಲಿ ಕಿವಿಗೆ’’ ಅನುರಣಗೊಂಡಂತಿದೆ. ಹಿಂಸೆ, ಅಹಂಕಾರ, ಕ್ರೋಧ, ದ್ವೇಷ ಮೊದಲಾದ ವಿಕಾರಗಳೆಲ್ಲ ನಾಶವಾಗಿ ದಯೆ, ಧರ್ಮ, ಕ್ಷಮೆ, ಒಳಿತುಗಳ ಮೊತ್ತದೊಂದಿಗೆ ನೊಂದವರ ಸಂತೈಸುವ ಚಿಂತಕನಾಗಿ ಬಾಳುವ ಬಾಳೊಂದರ ಹಾರೈಕೆಯ ಕವನ ‘‘ದೇವಮಾನವನಾಗು’’. ಇಲ್ಲಿಯ ಬಹುತೇಕ ಕವನಗಳು ಪ್ರಕೃತಿ ಸೌಂದರ್ಯಾರಾಧನೆಯ ಕವಿತೆಗಳಾಗಿದ್ದು ಪುನರುಕ್ತಿ ಮತ್ತು ಪ್ರಾಸದ ಹೆಚ್ಚಳ ಅಲ್ಲಲ್ಲಿ ರಸಾಸ್ವಾದನೆಗೆ ತೊಡಕಾಗುತ್ತವೆ. ಆಳವಾದ ಆಲೋಚನೆಗಳನ್ನು ಬಯಸುತ್ತವೆ.
ಭಕ್ತಿ ಗೀತೆಗಳ ಮತ್ತೊಂದು ವಿಭಾಗದಲ್ಲಿ ಭಗವಂತನ ಅದ್ಭುತ ಸೃಷ್ಟಿಯ ಮಹಿಮೆ, ಹಿರಿಮೆಗಳು ಮತ್ತು ಸುಂದರ ಬದುಕಿನ ಕಾಮನೆಗಳು ‘‘ದೇವ ನಿನ್ನ ಸೃಷ್ಟಿಯಲ್ಲಿ’’ ಮತ್ತು ‘‘ಕೋರಿಕೆ’’ ಎಂಬ ಕವನಗಳಲ್ಲಿ ಸುಂದರವಾಗಿ ಮೂಡಿ ಬಂದಿವೆ. ತಾಯಿ ರೇಣುಕಾಂಬೆಯ ಕುರಿತಾದ ಅನೇಕ ಕವನಗಳದ್ದೇ ಇಲ್ಲಿ ಸಿಂಹಪಾಲು. ಈ ನಭೋವಾಣಿಗಳು ನಿಜಕ್ಕೂ ಭಕ್ತರ ಪಾಲಿನ ಅರ್ಥಪೂರ್ಣ ಗೀತೆಗಳಾಗಿವೆ.
ಪ್ರೇಮಗೀತೆ ಬರೆಯದ ಕವಿಯೇ ಇಲ್ಲ ಅನ್ನುವ ಮಾತಿಗೆ ಸಾಕ್ಷಿಯಾಗಿ ಈ ಸಂಕಲದಲ್ಲಿ ಅನೇಕ ಪ್ರೇಮಗೀತೆಗಳಿವೆ. ಸೃಷ್ಟಿಯಲ್ಲಿಯ ಗಾಳಿ, ಬೆಳಕು, ಬಣ್ಣಗಳ ಗೆಲುವಿನ ಬಾವುಟದಡಿಯ ಜೀವನಕ್ಕೆ ಮತ್ತೇನುಸಿರಿಬೇಕೆಂಬ ಆಶಯ ಹೊತ್ತು ‘ಪ್ರೇಮಗೀತೆ’ ಕವನ ಒಂದು ಉತ್ತಮ ರಚನೆಯಾಗಿದೆ. ನಿತ್ಯದ ಸುಖ ದುಃಖದ ನಡುವೆಯೂ ಕೈ ಹಿಡಿದ ಚೆಲುವೆಯ ಸ್ನೇಹದಿಂದ ತನ್ನ ಬಾಳುವೆಯು ಸಂತೃಪ್ತವಾಗಿದೆ ಎಂಬ ಧನ್ಯತಾಭಾವದ ಕವನ ‘‘ನಾನು-ನೀನು’’. ಯುವತಿಯೊಬ್ಬಳು ಜಾತ್ರೆಯಲ್ಲಿ ಚೆಲುವನೊಬ್ಬನನ್ನು ಕಂಡಾಗಿನ ಇಲ್ಲಿಯ ‘ಆತ’ ಎಂಬ ಪ್ರೇಮಗೀತೆಯನ್ನೋದಿದಾಗ ‘‘ನನ ಕೈಯ ಹಿಡಿದಾಕೆ’’ ಕವಿತೆಯ ಬೇಂದ್ರೆ ಮತ್ತು ‘‘ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ’’ ರಚನೆಯ ಕೆ. ಎಸ್. ನರಸಿಂಹಸ್ವಾಮಿ ನೆನಪಾಗುತ್ತಾರೆ.

ಕಾವ್ಯಸಿಂಧು
ಕಾವ್ಯಸಿಂಧು
$0.00
ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.
- Category: Poetry
- Publisher: Manohara Granthamala
- Language: Kannada
- Book Format: Ebook
- Pages: 82
- Year Published: 2012
Only logged in customers who have purchased this product may leave a review.
Reviews
There are no reviews yet.