೩೦ ಪದ್ಯಗಳಿರುವ ಈ ಪ್ರಬಂಧ ಸಕಲ ವೇದಾಂತ ಪ್ರಮೇಯಗಳ ಸಾರವಾಗಿ ರಸಘನವಾದ ಕಾವ್ಯಶೈಲಿಯಲ್ಲಿ ಮೂಡಿಬಂದಿದೆ. ಭಾರತಾದ್ಯಂತ ಧನರ್ಮಾಸದಲ್ಲಿ ದಿನಕ್ಕೊಂದು ಪದ್ಯದಂತೆ ಇದನ್ನು ಪಂಡಿತೋತ್ತಮರು ಪ್ರವಚನ ಮಾಡಿ ಸಹಸ್ರಾರು ಭಕ್ತರಿಗೆ ಈ ಕೃಷ್ಣಲೀಲಾಮೃತವನ್ನುಣಿಸುವುದನ್ನು ಈಗಲೂ ಕಾಣಬಹುದು. ಪರಾಚಿನ ಆಚಾರ್ಯರು ಅನೇಕ ವ್ಯಾಖ್ಯಾನಗಳನ್ನು ಇದಕ್ಕೆ ತಮಿಳು-ಸಂಸ್ಕೃತಗಳಲ್ಲಿ ಬರೆದಿರುವುದಲ್ಲದೆ, ಬೇರೆ ಬೇರೆ ಭಾಷೆಗಳಲ್ಲಿಯೂ ಇಂದಿಗೂ ಸುಂದರ ವಿವರಣ ಗ್ರಂಥಗಳೂ ಹೊರಬರುತ್ತಿವೆ.
ಪ್ರಕೃತ ವ್ಯಾಖ್ಯಾನವು ಈ ಗ್ರಂಥಗಳಲ್ಲಿ ಮುಖ್ಯವಾದವುಗಳ ರಸಂಶಗಳನ್ನೂ, ಅಲ್ಲಿ ಬಿಟ್ಟ ವಿಶೇಷಾಂಶಗಳನ್ನೂ, ತಿಳಿಗನ್ನಡದಲ್ಲಿ ರಸಿಕರಿಗೂ, ವಿದ್ವಾಂಸರಿಗೂ, ಸಾಮಾನ್ಯರಿಗೂ ರೋಚಕವಾಗುವಂತೆ ಯತ್ನಿಸಿ ಬರೆದ ಪುಟ್ಟ ಪುಸ್ತಕ. ಶ್ರೀಕೃಷ್ಣ ಎಲ್ಲರ ದೇವರು. ಶ್ರೀವೈಷ್ಣವ ಮತದಲ್ಲಿ ಬ್ರಾಹ್ಮಣರೂ, ಅಲ್ಲದೆ ಎಲ್ಲರೂ ಇದ್ದಾರೆ. ಆಳ್ವಾರರುಗಳ ದರ್ಶನ ಯಾವ ಜಾತಿಯೊಂದಕ್ಕೂ ಸೀಮಿತವಾದುದಲ್ಲ. ಶ್ರೀಭಾಷ್ಯವೆಂಬ ಉದ್ದಾಮ ವೇದಾಂತಾಭಾಷ್ಯಗ್ರಂಥ ಬರೆದ ಶ್ರೀ ರಾಮಾನುಜರು ಆ ನಂತರ ತಮ್ಮ ಉಳಿದಾಯುಷ್ಯವನ್ನೆಲ್ಲ ಈ ಪ್ರಬಂಧದ ಪ್ರವಚನಕ್ಕೇ ಮೀಸಲಿಟ್ಟರೆಂದು ಪ್ರಸಿದ್ಧ! ಇದು “ತಿರುಪ್ಪಾವೈ” ಪ್ರಬಂಧಕ್ಕೊಂದು ಪ್ರಶಸ್ತಿ; ಪ್ರವೇಶ ಸಹ! ಕನ್ನಡ ಓದಬಲ್ಲ ಎಲ್ಲರಿಗೂ ಈ ದೇವಿ ಪಡೆದ ಶ್ರೀಕೃಷ್ಣಾನುಭವ ದೊರಕಲೆಂಬ ಪ್ರಯತ್ನ ಈ ‘ಸುಬೋಧಿನೀ’ ವ್ಯಾಖ್ಯಾನದಲ್ಲಿ ನಡೆದಿದೆ.
Reviews
There are no reviews yet.