ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೯: ಲಾವಣಿಯ ಲಾವಣ್ಯ

ಗೋಷ್ಠಿ 9

ವೇಳೆ : 3.30-4.30
ಲಾವಣಿಯ ಲಾವಣ್ಯ
ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಇನ್ನೂ ಕ್ರಿಯಾಶೀಲವಾಗಿರುವ ಜಾನಪದ ಹಾಡುಗಾರಿಕೆಯ ಒಂದು ಮುಖ್ಯ ಪ್ರಕಾರ ಲಾವಣಿ. ಒಂದು ಕಾಲಕ್ಕೆ, ಈ ಭಾಗದಲ್ಲಿ ಸಂಸ್ಕøತಿ ಪ್ರಸಾರದಲ್ಲಿ ಲಾವಣಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಕಾಲಕಾಲಕ್ಕೆ ಬದಲಾವಣೆ ಪಡೆದು ತನ್ನ ಸೃಜನಶೀಲತೆಯನ್ನು ಜೀವಂತವಾಗಿ ಇರಿಸಿಕೊಂಡಿತ್ತು. ಇಂಗ್ಲೀಷಿನ ‘ಬ್ಯಾಲಡ್’ಗೆ ಸಂವಾದಿಯಾದದ್ದು, ಕಥೆ ಹೇಳುವ ಒಂದು ಕಾವ್ಯಪ್ರಕಾರ ಎಂದು ತಪ್ಪು ಗ್ರಹಿಕೆಗೆ ಒಳಗಾಗಿರುವ ಲಾವಣಿಗೆ ಅದರದೇ ಆದ ದೇಸೀ ರಾಚನಿಕ ವಿನ್ಯಾಸ, ವಸ್ತು, ವೈವಿಧ್ಯ, ಧಾಟಿ, ವಾದ್ಯ, ಪರಿಭಾಷೆಗಳಿವೆ. ನೂರಾರು ಜನ ಲಾವಣಿಕಾರರು ಹಾಡುಗಳನ್ನು ರಚಿಸಿ, ಹಾಡಿ ಅದನ್ನು ಜನಪ್ರಿಯಗೊಳಿಸಿದ್ದಾರೆ. ನವೋದಯದ ಕಾಲದಲ್ಲಿ ಬೇಂದ್ರೆಯವರನ್ನು ಒಳಗೊಂಡು ಉತ್ತರ ಕರ್ನಾಟಕದ ಕೆಲವು ಕವಿಗಳು ಲಾವಣಿಗೆ ಆಧುನಿಕ ಕಾವ್ಯದ ರೂಪ ಕೊಡಲು ಪ್ರಯತ್ನಿಸಿದ್ದಾರೆ. ಈಗ ಸ್ವಲ್ಪ ಮಟ್ಟಿಗೆ ಹಿನ್ನೆಲೆಗೆ ಸರಿದಿರುವ ಈ ಜಾನಪದ ಹಾಡುಗಾರಿಕೆಯ ಪ್ರಕಾರ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವ ಒಂದು ಪ್ರಯತ್ನ ಈ ಲಾವಣಿ ಹಾಡುಗಾರಿಕೆ.
ಲಾವಣಿಯ ಸಾಂಪ್ರದಾಯಿಕ ಹಾಡುಗಾರಿಕೆಯಿಂದ ಪ್ರಸಿದ್ಧಿ ಪಡೆದಿರುವ ಲಕ್ಕುಂಡಿಯ ಶ್ರೀ ಬಸವರಾಜ ನೀಲಪ್ಪ ಹಡಗಲಿ ಹಾಗೂ ತಂಡ ಮತ್ತು ರಾಮದುರ್ಗದ ಯಲ್ಲವ್ವ ಮಾದರ ಅವರು ಲಾವಣಿಯ ಸ್ವರೂಪದ ಮುಖ್ಯ ಪ್ರಭೇದಗಳನ್ನು ಪ್ರಸ್ತುತ ಪಡಿಸುತ್ತಾರೆ.
ಧಾರವಾಡ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿರುವ ಅನಿಲ ದೇಸಾಯಿ ಅವರು ಲಾವಣಿಯ ಸ್ವರೂಪದ ಬಗ್ಗೆ ವ್ಯಾಖ್ಯಾನ, ವಿವರಣೆ ಒದಗಿಸುತ್ತಾರೆ.

Leave a Reply