ಬೇಂದ್ರೆ ಕಾವ್ಯ ತಾಯ ಎದೆಹಾಲ ಚಿಲುಮೆಯಂತೆ. ಕಾವ್ಯದ ಮಾಯೆ, ಮೋಡಿ ಸುಮ್ಮನೆ ಮಂತ್ರ ಹಾಕಿದರೆ ಬರುವುದಿಲ್ಲ. ಬೇಂದ್ರೆ ಕಾವ್ಯದ ಶಬ್ದಶಿಲ್ಪ ಅತ್ಯುನ್ನತವಾದದ್ದು.
ಅದು ಸಾಧ್ಯವಾದದ್ದು ನಾದಲೀಲೆಯ ಶಬ್ದಬ್ರಹ್ಮನ ಧ್ಯಾನದಿಂದ. ಶಬ್ದವೂ ಬ್ರಹ್ಮವೇ… ಅದರ ನಾದವೂ ಲೀಲೆಯೇ… ಇವುಗಳಿಂದಲೇ ಒಂದು ಭಾವದ ತೊಟ್ಟಿಲ ಜೀವ
ನಮ್ಮ ಮನದಲ್ಲಿ ಜೋಗುಳದಂತೆ ತೂಗಾಡುವುದು. ಇಂತಹ ಒಬ್ಬ ಶ್ರೇಷ್ಠ ಕವಿಯ ಬಗ್ಗೆ ನನ್ನ ಹಳೆಯ ತಕರಾರುಗಳನ್ನು ಅತ್ತ ಇಟ್ಟು, ಬೇಂದ್ರೆ ಕಾವ್ಯದ ಶಬ್ದ ಚಮತ್ಕಾರದ
ಲಯ ವಿನ್ಯಾಸಗಳ ಸೌಂದರ್ಯ ಮೀಮಾಂಸೆಯನ್ನು ಅರ್ಥಬದ್ಧವಾಗಿ ಡಾ. ಜಿ. ಕೃಷ್ಣಪ್ಪ ಅವರು ವಿವರಿಸಿರುವರು.